Advertisement

ಪಂಚಸಮರ ಫ‌ಲಿತಾಂಶ: ರಾಜಕೀಯ ಧ್ರುವೀಕರಣ?

12:29 AM Apr 12, 2021 | Team Udayavani |

ಪಂಚ ರಾಜ್ಯಗಳ ಫ‌ಲಿತಾಂಶದ ಅನಂತರ ದೇಶ ಹಾಗೂ ರಾಜ್ಯ ರಾಜಕಾರಣದಲ್ಲೂ ಬದಲಾವಣೆಗಳಾ ಗಲಿವೆ ಎಂಬ ವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇದೀಗ ಅತ್ತ ನೆಟ್ಟಿದೆ. ಅದರಲ್ಲೂ ಒಂದೇ ಹಂತದಲ್ಲಿ ಮತದಾನ ಮುಗಿದಿರುವ ನೆರೆಹೊರೆಯ ತಮಿ ಳುನಾಡು, ಕೇರಳ, ಪುದುಚೇರಿ ವಿಧಾನಸಭೆ ಚುನಾ ವಣೆಗಳ ಫ‌ಲಿತಾಂಶದತ್ತ ವಿಶೇಷವಾಗಿ ಕರ್ನಾ ಟಕದ ಮೂರೂ ಪಕ್ಷಗಳ ನಾಯಕರೂ ದೃಷ್ಟಿ ನೆಟ್ಟಿದ್ದಾರೆ.

Advertisement

ತಮಿಳುನಾಡಿನಲ್ಲಿ ತಾನು ಭಾಗಿಯಾಗಿರುವ ಎಐಎಡಿಎಂಕೆ ಮೈತ್ರಿಕೂಟ, ಪುದುಚೇರಿಯಲ್ಲಿ ಎನ್‌ಆರ್‌ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕ ಹಾಗೂ ತೆಲಂಗಾಣ, ಆಂಧ್ರದಲ್ಲಿ ಬಿಜೆಪಿಯ ರಾಜಕೀಯ ಸಮೀಕರಣ ಬದಲಾಗಲಿದೆ. ಶಾಶ್ವತವಾಗಿ ನೆಲೆಯೂರಲು ಸ್ಥಳೀಯವಾಗಿ ಗಟ್ಟಿಯಾ ಗಿರುವ ಪ್ರಾದೇಶಿಕ ಪಕ್ಷದ ನೆರವು ಬಯಸುವ ವಿದ್ಯಮಾನಗಳು ನಡೆದರೂ ಅಚ್ಚರಿಯಿಲ್ಲ ಎಂಬ ಚರ್ಚೆಗಳು ಪ್ರಾರಂಭವಾಗಿವೆ.

ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ, ಪುದುಚೇರಿಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಸಹಜವಾಗಿ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ಗೆ ಆತ್ಮವಿಶ್ವಾಸ ಹೆಚ್ಚಲಿದೆ. ಪಶ್ಚಿಮ ಬಂಗಾಲ ದಲ್ಲಿ ಮೊದಲ ಬಾರಿಗೆ ಹಾಗೂ ಅಸ್ಸಾಂನಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರ ಹಿಡಿದರೆ ಕರ್ನಾಟಕದಲ್ಲಿ ಅವಧಿಗೆ ಮುನ್ನ ಚುನಾವಣೆಯೂ ಆಗುವ ಸಾಧ್ಯತೆ ಯೂ ಬರಬಹುದು. ಪ್ರಸಕ್ತ ವಿದ್ಯಮಾನಗಳಿಂದ ಬೇಸರ ಗೊಂಡಿರುವ ಕೇಂದ್ರ ಬಿಜೆಪಿ ನಾಯಕರು ಅಂಥ ಯೋಚನೆಯಲ್ಲಿದ್ದಾರೆ ಎಂಬ ವ್ಯಾಖ್ಯಾನಗಳು ಇವೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಮತ್ತೂಬ್ಬರಿಗೆ ಅವಕಾಶ ನೀಡಿದರೆ ಎದುರಾಗಬಹುದಾದ ಸವಾಲಿಗಿಂತ ಹೊಸದಾಗಿ ಜನಾದೇಶಕ್ಕೆ ಹೋಗುವ ಬಗ್ಗೆಯೂ ಆಂತರಿಕ ಚರ್ಚೆಗಳು ನಡೆಯುತ್ತಿವೆ. ಅದೇನೇ ಇದ್ದರೂ ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಫ‌ಲಿತಾಂಶ ಇಲ್ಲಿನ ರಾಜಕೀಯದ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗೆಳೆಯುವಂತಿಲ್ಲ.

ಮೂರೂ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಉಸ್ತುವಾರಿಗಳಾಗಿ ಹಾಗೂ ಸಹ ಉಸ್ತುವಾರಿಗಳಾಗಿ ಕರ್ನಾಟಕದ ಮುಖಂಡರೇ ಹೆಚ್ಚು ಹೊಣೆಗಾರಿಕೆ ವಹಿಸಿಕೊಂಡಿದ್ದು ವಿಶೆಷ. ಹೀಗಾಗಿ, ಅಲ್ಲಿನ ಫ‌ಲಿತಾಂಶ ಉಸ್ತುವಾರಿ ವಹಿಸಿದ್ದವರ ರಾಜಕೀಯ ಮಹತ್ವಾಕಾಂಕ್ಷೆಗೂ ಮೆಟ್ಟಿಲಾಗಬಹುದು.

Advertisement

ತಮಿಳುನಾಡಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇರಳಕ್ಕೆ ಉಪ ಮುಖ್ಯ ಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನಿಲ್‌ಕುಮಾರ್‌, ಪುದುಚೇರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ಉಸ್ತುವಾರಿಗಳಾಗಿ ದ್ದರು. ಮೂರೂ ರಾಜ್ಯಗಳ ಚುನಾವಣೆಗೆ ಬಿಜೆಪಿ ಕಾರ್ಯತಂತ್ರದ ಸ್ವರೂಪವೇ ಬೇರೆಯಾಗಿತ್ತು.
ಕಾಂಗ್ರೆಸ್‌ನಲ್ಲಿ ದಿನೇಶ್‌ ಗುಂಡೂರಾವ್‌ ತಮಿಳುನಾಡು ಮತ್ತು ಪುದುಚೇರಿ, ಐವನ್‌ ಡಿ’ಸೋಜಾ ಕೇರಳಕ್ಕೆ ಉಸ್ತುವಾರಿ ಯಾಗಿದ್ದರು. ತಮಿಳು ನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಕೇರಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಚಾರ ನಡೆಸಿ ದ್ದರು. ಇವರೆಲ್ಲರೂ ಫ‌ಲಿತಾಂಶ ಎದುರು ನೋಡುತ್ತಿದ್ದಾರೆ.

ಸಾಮ್ರಾಜ್ಯ ವಿಸ್ತರಣೆ ಬಯಕೆ
ದಕ್ಷಿಣ ಭಾರತದ ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಅಕ್ಕಪಕ್ಕದ ರಾಜ್ಯಗಳಲ್ಲೂ ಸಾಮ್ರಾಜ್ಯ ವಿಸ್ತ ರಿ ಸುವ ಬಯಕೆ. ಇದೇ ಕಾರಣಕ್ಕೆ ಕಳೆದ ಐದು ವರ್ಷಗಳಿಂ ದಲೂ ಸಾಕಷ್ಟು ಶ್ರಮ ಹಾಕಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಮೂರೂ ರಾಜ್ಯಗಳ ರಾಜಕೀಯ ಚಿತ್ರಣವೇ ಬದಲಾಗಿದೆ. ಬಿಜೆಪಿಯ ಅಸ್ತಿತ್ವವೂ ಇಲ್ಲಿ ಕಾಣಿಸಲಾರಂಭಿಸಿದೆ.

ತಮಿಳುನಾಡಿನಲ್ಲಿ 2016ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಒಂದೇ ಒಂದು ಕ್ಷೇತ್ರ ಗೆಲ್ಲದಿದ್ದರೂ 2011ಕ್ಕೆ ಹೋಲಿಸಿದರೆ ಮತಗಳಿಕೆ ಪ್ರಮಾಣ ಶೇ.2.2 ರಿಂದ 2.8ಕ್ಕೆ ಏರಿಸಿಕೊಂಡಿತ್ತು.

ಕೇರಳದಲ್ಲಿ 2016ರಲ್ಲಿ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಕಂಡು 2011ಕ್ಕೆ ಹೋಲಿಸಿದರೆ ಮತಗಳಿಕೆ ಪ್ರಮಾಣ ಶೇ.6.3ರಿಂದ 16ಕ್ಕೆ ಹೆಚ್ಚಿಸಿಕೊಂಡಿತ್ತು. ಇನ್ನು ಪುದುಚೇರಿಯಲ್ಲಿ 2016ರಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಈ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

ಆದರೆ ಈಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ರಾಜ್ಯಗಳಲ್ಲಿ ಬಿಜೆಪಿಯ ಸ್ವರೂಪವೇ ಬದಲಾಗಿದೆ. ಶಕ್ತಿ ವೃದ್ಧಿ ಎಷ್ಟು ಎಂಬುದು ಮೇ 2ರ ಫ‌ಲಿತಾಂಶದ ಅನಂತರ ಗೊತ್ತಾಗಲಿದೆಯಾದರೂ ಮತದಾನದ ಅನಂತರ ಬಿಜೆಪಿ ಆತ್ಮವಿಶ್ವಾಸ ಹೆಚ್ಚಾಗಿರುವುದಂತೂ ಹೌದು.

ಪುದುಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ನೇತೃತ್ವದ ಎನ್‌ಆರ್‌ ಕಾಂಗ್ರೆಸ್‌ನ ಮೈತ್ರಿಕೂಟದ ಎರಡನೇ ಅತೀ ದೊಡ್ಡ ಪಕ್ಷ ಬಿಜೆಪಿ. 30 ಕ್ಷೇತ್ರಗಳಲ್ಲಿ ಎನ್‌ಆರ್‌ ಕಾಂಗ್ರೆಸ್‌ 16 ಕಡೆ ಸ್ಪರ್ಧೆ ಮಾಡಿದ್ದರೆ ಬಿಜೆಪಿ 9 ಕಡೆ, ಎಐಎಡಿಎಂಕೆ 5 ಕಡೆ ಸ್ಪರ್ಧೆ ಮಾಡಿತ್ತು. ಸಮೀಕ್ಷೆಗಳ ಪ್ರಕಾರ ಎನ್‌ಆರ್‌ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚು. ಹಾಗೇನಾದರೂ ನೆರೆಯ ತಮಿಳುನಾಡಿನಲ್ಲಿ ಮತ್ತಷ್ಟು ಶಕ್ತಿ ವೃದ್ಧಿಸಿಕೊಳ್ಳಲು ಸಹಕಾರಿಯಾಗುವ ನಿರೀಕ್ಷೆ ಬಿಜೆಪಿಯದು.

ಇಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ 15, ಡಿಎಂಕೆ 13 ಕಡೆ ಸ್ಪರ್ಧೆ ಮಾಡಿದೆ. ಎರಡು ಕಡೆ ಇತರೆ ಸಣ್ಣ ಪಕ್ಷಗಳಿಗೆ ಬಿಟ್ಟುಕೊಟ್ಟಿತ್ತು.

ತಮಿಳುನಾಡಿನಲ್ಲೂ ಎಐಎಡಿ ಎಂಕೆ ಮೈತ್ರಿಕೂಟದಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಇಲ್ಲಿ ಹೋರಾಟ ಇದ್ದದ್ದೇ ಡಿಎಂಕೆ ಮೈತ್ರಿಕೂಟ ಹಾಗೂ ಎಐಎಡಿಎಂಕೆ ಮೈತ್ರಿಕೂಟ ನಡುವೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಿರುವುದು 25 ಕ್ಷೇತ್ರಗಳಲ್ಲಿ. ಉಪ ಚುನಾ ವಣೆ ನಡೆಯುತ್ತಿರುವ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರ ವನ್ನು ಡಿಎಂಕೆ ಕಾಂಗ್ರೆಸ್‌ಗೆ, ಎಐಎಡಿಎಂಕೆ ಬಿಜೆಪಿಗೆ ಬಿಟ್ಟುಕೊಟ್ಟಿತ್ತು.

ತಮಿಳುನಾಡಿನ 232 ಕ್ಷೇತ್ರಗಳಲ್ಲಿ ಡಿಎಂಕೆ 173 ಕ್ಷೇತ್ರಗಳಲ್ಲಿ ಎಐಎಡಿಎಂಕೆ 171 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಎಂಡಿಎಂಕೆ, ವಿಸಿಕೆ ಡಿಎಂಕೆ ಮೈತ್ರಿಕೂಟದ ಪ್ರಮುಖ ಪಕ್ಷಗಳಾದರೆ, ಪಿಎಂಕೆ, ಬಿಜೆಪಿ ಎಐಎಡಿಎಂಕೆ ಮೈತ್ರಿಕೂಟದ ಪ್ರಮುಖ ಪಕ್ಷಗಳು. ಉಳಿದಂತೆ ಟಿಟಿವಿ ದಿನಕರ್‌ ಅವರ ಎಐಎಐಎ, ಕಮಲ ಹಾಸನ್‌ ಅವರ ಎಂಎನ್‌ಎಂ ಯಾರ ಮತಬುಟ್ಟಿಗೆ ಕೈ ಹಾಕಿದೆಯೋ ಕಾದು ನೋಡಬೇಕಾಗಿದೆ.

140 ಕ್ಷೇತ್ರಗಳ ಕೇರಳದಲ್ಲಿ ಬಿಜೆಪಿ 115 ಕಡೆ ಸ್ಪರ್ಧೆ ಮಾಡಿ ಮಿತ್ರಪಕ್ಷಗಳಿಗೆ 25 ಸೀಟು ಬಿಟ್ಟುಕೊಟ್ಟಿದೆ. ಇಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಜತೆ ಸೆಣಸಾಟಕ್ಕೆ ಇಳಿದು ಮೆಟ್ರೋಮ್ಯಾನ್‌ ಖ್ಯಾತಿಯ ಶ್ರೀಧರನ್‌ ಅವರನ್ನು ಪಾಲ ಕ್ಕಾಡ್‌ನಿಂದ ಇಳಿಸಿ ಅದೃಷ್ಟ ಪರೀಕ್ಷೆ ಮಾಡುತ್ತಿದೆ. ತಮಿಳುನಾಡು, ಕೇರಳ, ಪುದುಚೇರಿ ನಂತರ ಬಿಜೆಪಿ ಕಣ್ಣು ತೆಲಂಗಾಣದತ್ತ. ಅನಂತರ ಆಂಧ್ರದತ್ತ ಹೀಗೆ ದಕ್ಷಿಣ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ನೆಲೆಯೂರಲು ಎಲ್ಲ ಪ್ರಯತ್ನಗಳನ್ನೂ ಹಾಕಿದೆ.

ಒಂದೊಂದು ಕ್ಷೇತ್ರದ ಭೌಗೋಳಿಕ, ಜಾತಿ, ಸಮುದಾಯವಾರು, ಸ್ಥಳೀಯವಾಗಿ ಪ್ರಮುಖವಾಗಿ ಜನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ತನ್ನದೇ ಆದ ರೀತಿಯಲ್ಲಿ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿ ಟ್ಟುಕೊಂಡಿರುವ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಅಸ್ತ್ರವಾಗಿ ಬಳಸಿಕೊಂಡಿದೆ.

ಕೇರಳ ವಿಧಾನಸಭೆ ಚುನಾವಣೆ ವಿಶೇಷ ಎಂದರೆ ಜೆಡಿಎಸ್‌ ಎಲ್‌ಡಿಎಫ್ ಮೈತ್ರಿಕೂಟದಲ್ಲಿದ್ದು ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಕೋವಲಂ, ತಿರುವಲ್ಲ, ಚಿತ್ತೂರು, ಅಂಗಮಾಲಿ ಈ ನಾಲ್ಕೂ ಕ್ಷೇತ್ರಗಳಲ್ಲಿ ಮಾಜಿ ಸಚಿವರೇ ಸ್ಪರ್ಧೆ ಮಾಡಿದ್ದಾರೆ. 2016 ರಲ್ಲಿ ಜೆಡಿಎಸ್‌ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕೇರಳದಲ್ಲಿ ಜೆಡಿಎಸ್‌ ಮೊದಲಿನಿಂದಲೂ ಅಸ್ತಿತ್ವ ಉಳಿಸಿಕೊಂಡಿದ್ದು ಎಲ್‌ಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಸರಕಾರದಲ್ಲೂ ಭಾಗಿಯಾಗಿದೆ. ಅನಾರೋಗ್ಯ ಕಾರಣದಿಂದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಪ್ರಚಾರದಲ್ಲಿ ಹೆಚ್ಚು ಭಾಗಿಯಾಗಲು ಸಾಧ್ಯವಾಗದಿದ್ದರೂ ಸ್ಥಳೀಯವಾಗಿ ಪ್ರಬಲ ರಾಗಿರುವ ಮ್ಯಾಥ್ಯೂ ಥಾಮಸ್‌, ಕೃಷ್ಣನ್‌ ಕುಟ್ಟಿ ಅವರಂತ ನಾಯಕರೇ ಚುನಾವಣೆ ಉಸ್ತುವಾರಿ ವಹಿಸಿದ್ದಾರೆ. ಅಲ್ಲಿನ ಫ‌ಲಿತಾಂಶದ ಬಗ್ಗೆ ಕರ್ನಾಟಕದ ಜೆಡಿಎಸ್‌ ನಾಯಕರಿಗೂ ಕುತೂಹಲವಿದೆ.

– ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next