Advertisement

ಅಂಗವಿಕಲರಿಗೆ ಬಳಕೆಯಾಗಿಲ್ಲ ಶೇ.5 ಅನುದಾನ

04:37 PM Dec 03, 2020 | Suhan S |

ವಿಜಯಪುರ: ಸಾಮಾನ್ಯರಾಗಿದ್ದರೂ ಬದುಕು ರೂಪಿಸಿಕೊಳ್ಳಲು ಹೆಣಗುವ ದುಸ್ಥಿತಿಯಲ್ಲಿ ಅಂಗವಿಕಲರು ಜೀವನ ನಿರ್ವಹಣೆಗೆ ಹೆಣಗುತ್ತಿದ್ದಾರೆ. ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ಎಲ್ಲ ವ್ಯವಸ್ಥೆ-ಯೋಜನೆಗಳಲ್ಲಿ ಶೇ. 5 ಮೀಸಲು ಹಾಗೂ ಅನುದಾನ ಬಳಕೆಗೆ ಕಾಯ್ದೆ ಜಾರಿಗೆ ತಂದಿದೆ. ಆದರೆ ನೈಜ ಅನುಷ್ಠಾನ ಮೀಸಲು ಜಾರಿ ಕಾಯ್ದೆಯನ್ನು ಅಣಕಿಸುವಂತಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ 2011ರ ಜನಗಣತಿ  ಪ್ರಕಾರ 43,533 ವಿವಿಧ ರೀತಿಯ ಅಂಗವಿಕಲರಿದ್ದು ಇದರಲ್ಲಿ 24,038 ಪುರುಷ ಹಾಗೂ 19,495 ಮಹಿಳೆಯರು ಸೇರಿದ್ದಾರೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ. ಜನಗಣತಿಗೆ ದಶಕ ಕಳೆದಿದ್ದು ಈ ಹಂತದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಈ ಸಂಖ್ಯೆ 50 ಸಾವಿರ ಮೀರಿದೆ ಎಂಬುದು ವಿಕಲಚೇತನ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಭಿಮತ.

ಜಿಲ್ಲೆಯಲ್ಲಿ ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಹೊಂದಿದೆ. ಇದಲ್ಲದೇ ಕೇಂದ್ರ ಸರ್ಕಾರ 2019ರಲ್ಲಿ ಅನುಷ್ಠಾನಕ್ಕೆ ತಂದಿರುವ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನು ಕರ್ನಾಟಕದಲ್ಲಿ ಕಳೆದವರ್ಷಷ್ಟೇ ಅಳವಡಿಸಿಕೊಳ್ಳಲಾಗಿದೆ. ಕಾಯ್ದೆಯಲ್ಲಿಅಂಗವಿಕಲರಿಗೆ ಸರ್ಕಾರ ಎಲ್ಲ ಯೋಜನೆಗಳಲ್ಲಿ ಮೀಸಲು ಜೊತೆಗೆ, ಒಟ್ಟು ಬಜೆಟ್‌ನಲ್ಲಿ ಶೇ. 5 ಅನುದಾನ ಬಳಕೆಯನ್ನು ಕಡ್ಡಾಯಗೊಳಿಸಿದೆ.

ಸರ್ಕಾರ ವಿವಿಧ 33 ಇಲಾಖೆಗಳಲ್ಲಿ ಈ ಕಾಯ್ದೆ ಅನುಷ್ಠಾನ ಕಡ್ಡಾಯವಾಗಿದ್ದರೂ ಬಹುತೇಕ ಇಲಾಖೆಗಳಲ್ಲಿ ಇದು ಜಾರಿಗೆ ಬಂದಿಲ್ಲ.ಇದಲ್ಲದೇ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ ಹಳ್ಳಿ-ನಗರ ಪ್ರದೇಶಗಳಲ್ಲಿ ಅಂಗವಿಕಲರ ಹಕ್ಕುಗಳರಕ್ಷಣಗಾಗಿಯೇ ಹಲವು ಸ್ಥರಗಳಲ್ಲಿ ಅಧಿಕಾರಿ-ಸಿಬ್ಬಂದಿ, ಸರ್ಕಾರೇತರ ವ್ಯವಸ್ಥೆಯ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಗ್ರಾಪಂ, ನಗರ-ಪಟ್ಟಣ ಪಂಚಾಯತ್‌, ಪಾಲಿಕೆಯಂಥ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಅಂಗವಿಕಲರ ಪುನಶ್ಚೇತನ ಅಧಿಕಾರಿಗಳಿದ್ದಾರೆ. ಇವರ ಮೇಲೆ ಉಸ್ತುವಾರಿಗೆ ಪ್ರತಿ ತಾಲೂಕಿಗೆ ಒಬ್ಬರಂತೆ ವಿವಿಧೋದ್ದೇಶ ಪುನಶ್ಚೇತನ ಅಧಿಕಾರಿಗಳಿದ್ದು ಈ ಎಲ್ಲ ವ್ಯವಸ್ಥೆ ಮೇಲೆ ಈಚೆಗಷ್ಟೇ ಸರ್ಕಾರ ನೋಡಲ್‌ ಅಧಿಕಾರಿಗಳನ್ನೂ ನೇಮಿಸಿದೆ. ಇಷ್ಟಿದ್ದರೂ ಕೂಡ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ.

ಸರ್ಕಾರ ಅಂಗವಿಕಲರ ಸ್ವಾವಲಂಬಿ ಜೀವನ ನಿರ್ವಹಣೆಗೆ ಸ್ವಯಂ ಉದ್ಯೋಗಕ್ಕಾಗಿ ಆಧಾರ್‌ ಯೋಜನೆ ರೂಪಿಸಿದ್ದು, ಶೇ. 50 ರಿಯಾಯ್ತಿ ಸಾಲ ಯೋಜನೆಗೆ ವಿಜಯಪುರ ಜಿಲ್ಲೆಯ 18 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ತಲಾ 50 ಸಾವಿರ ರೂ. ರಿಯಾಯ್ತಿ ಸಿಗಬೇಕಿದ್ದ ಈ ಯೋಜನೆಗೆ ಬ್ಯಾಂಕ್‌ಗಳಿಂದ ಒಪ್ಪಿಗೆ ಪತ್ರ ತರಬೇಕಿತ್ತು. ಆದರೆ ಬ್ಯಾಂಕ್‌ಗಳು ಕೃಪೆ ತೋರದ ಕಾರಣ ಯೋಜನೆಅನುಷ್ಠಾನವಾಗದೇ ಸರ್ಕಾರಕ್ಕೆ 9 ಲಕ್ಷ ಲಕ್ಷ ರೂ. ಮರಳಿ ಹೋಗಿದೆ. ಇನ್ನು ಕೃಷಿ, ತೋಟಗಾರಿಕೆ, ಕೈಗಾರಿಕೆ ಹೀಗೆ ವಿವಿಧ ಇಲಾಖೆಗಳಲ್ಲೂ ಶೇ. 5 ಅನುದಾನ ಬಳಕೆಗೆ ಅವಕಾಶ ಇದ್ದರೂ ಬಹುತೇಕ ಅಂಗವಿಕಲರಿಗೆ ಈ ಸೌಲಭ್ಯ ಸಿಕ್ಕಿಲ್ಲ. ಇನ್ನು ಬ್ಯಾಂಕ್‌ಗಳು ಕೂಡ ಸಾಲ ನೀಡಿಕೆಗೆ ಹಿಂಜರಿಯಲು ಸರ್ಕಾರಿ ಯೋಜನೆಗಳ ಮರು ಪಾವತಿ ಆಗದ ಸಮಸ್ಯೆ ಪ್ರಮುಖ ಕಾರಣ.

Advertisement

ಸರ್ಕಾರ ಕಳೆದ 25 ವರ್ಷಗಳಿಂದ ಅಂಗವಿಕಲರಿಗೆ ನೀಡಿದ ರಿಯಾಯ್ತಿ ದರ ಹಾಗೂ ಕಲ್ಯಾಣ ಯೋಜನೆಗಳ ಸಾಲ ನೀಡಿಕೆಯಲ್ಲಿ ಶೇ. 90ಕ್ಕಿಂತಹೆಚ್ಚು ಪ್ರಕರಣಗಳಲ್ಲಿ ಸಾಲ ಮರು ಪಾವತಿ ಆಗಿಲ್ಲ. ಫಲಾನುಭವಿಗಳು ಸಾಲ ಮರು ಪಾವತಿಗೆ ಆಸಕ್ತಿ ತೋರಿಲ್ಲ. ಯೋಜನೆ ರೂಪಿಸಿದ ಸರ್ಕಾರಗಳೂ ಇದರ ಸದ್ಬಳಕೆ ಏನಾಯಿತು, ಫಲಾನುಭವಿಹೊಣೆಗಾರಿಕೆ ನಿಭಾಯಿಸಿದನೆ ಎಂದು ಪರಿಶೀಲನೆ, ಪರಾಮರ್ಶೆಗೂ ಹೋಗಿಲ್ಲ. ಹೀಗಾಗಿ ಬ್ಯಾಂಕರ್‌ಗಳು ಇಂಥ ಯೋಜನೆಗಳಿಗೆ ಸಾಲ ನೀಡಲು ಆಸಕ್ತಿತೋರುತ್ತಿಲ್ಲ. ಪರಿಣಾಮ ಹಿಂದಿನವರು ಮಾಡಿದ ತಪ್ಪಿಗೆ ಇಂದಿನವರು ಶಿಕ್ಷೆ ಅನುಭವಿಸುವಂತಾಗಿದ್ದು ಶೇ. 5 ಮೀಸಲು ಕಾಯ್ದೆ ಇದ್ದರೂ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ಪ್ರಾಮಾಣಿಕ ಕೆಲಸವಾಗಿಲ್ಲ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಅಂಗವಿಕಲರಿಗೆ ಇಂಧನ ಆಧಾರಿತ ತ್ರಿಚಕ್ರವಾಹನ ನೀಡಿದ್ದು, ಅದರಲ್ಲಿ ಹಲವು ಫಲಾನುಭವಿಗಳು ಬೈಕ್‌ ಮಾರಿಕೊಂಡಿರುವ ದೂರುಗಳೂ ಇವೆ.ಹೀಗೆ ಸರ್ಕಾರದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾದ ಬಳಿಕ ಅದರ ಸ್ಥಿತಿಗತಿ ಅರಿಯಲು ಮುಂದಾಗಿಲ್ಲ. ಇದಲ್ಲದೇ ಸರ್ಕಾರ ಬಹುತೇಕಯೋಜನೆಗಳ ಕುರಿತು ಅಂಗವಿಕಲರು ಹಾಗೂ ಅವರಅವಲಂಬಿತ-ಪಾಲಕರಿಗೆ ಮಾಹಿತಿಯೇ ಇರುವುದಿಲ್ಲ. ಜಾಗೃತಿಯ ಕೊರತೆಯಿಂದಾಗಿ ಕೆಲವೇ ಕೆಲವರಿಗೆ ಯೋಜನೆ ತಲುಪುತ್ತಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಇಂಥ ಲೋಪಗಳ ಕುರಿತು ಸರ್ಕಾರ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿಶೇಷ ಕಾಳಜಿವಹಿಸಬೇಕದೆ. ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳು ಅರ್ಹರನ್ನುತಲುಪುವಲ್ಲಿ ವಿಫಲವಾಗಿವೆ. ಯೋಜನೆಗಳು ಜಾರಿಯಾಗಿ, ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಆದರೂ ಮೇಲುಸ್ತವಾರಿ ವೈಫಲ್ಯದಿಂದಾಗಿ ಯೋಜನೆಗಳು ಕಾಯ್ದೆ-ಕಡತದಲ್ಲೇ ನಿಂತಿದೆ. ಇನ್ನಾದರೂ ಅರ್ಹ ಅಸಹಾಯಕರನ್ನು ತಲುಪುವಲ್ಲಿ ಸರ್ಕಾರದ ಯೋಜನೆಗಳು ಶ್ರಮಿಸಲಿ ಎಂಬ ಆಗ್ರಹ ಕೇಳಿ ಬಂದಿದೆ.

ಸರ್ಕಾರ ರೂಪಿಸಿರುವ ಯೋಜನೆಗಳ ಅನುಷ್ಠಾನದಲ್ಲಿ ವಿಕಲಚೇತನರ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಸಿಬ್ಬಂದಿ ಕೊರತೆ ಮಧ್ಯೆಯೂ ಅವರ ಹಕ್ಕುಗಳನ್ನು ಕಲ್ಪಿಸಲುಶ್ರಮಿಸುತ್ತಿದೆ. ವಿಕಲಚೇತನರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ನನ್ನನ್ನು ಮೊ. 9900960233 ಸಂಪರ್ಕಿಸಲಿ. ವಿ.ಜಿ. ಉಪಾಧ್ಯೆ, ಜಿಲ್ಲಾ ಅಧಿಕಾರಿ, ವಿಕಚೇತನರು-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಜಯಪುರ

ಸರ್ಕಾರದ ವಿಕಲಚೇತನರ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆ ಜಾರಿಗೆ ತಂದು, ವಿವಿಧ ಹಂತದಲ್ಲಿ ಅನುಷ್ಠಾನ ಅಧಿಕಾರಿಗಳನ್ನು ನೇಮಿಸಿದ್ದರೂಜಾಗೃತಿ ಮೂಡಿಲ್ಲ. ಸರ್ಕಾರ ತನಗಾಗಿ ರೂಪಿಸಿರುವಕಾನೂನುಗಳ ಅರಿವು ಇಲ್ಲದ ವಿಕಲಚೇತನರು ಸ್ವಾವಲಂಬಿ ಬದುಕಿಗಾಗಿ ಪರದಾಡುತ್ತಿದ್ದಾರೆ. ತಳಮಟ್ಟದಲ್ಲಿ ಜಾಗೃತಿ ಅಗತ್ಯವಿದೆ. ಸ್ಥಳೀಯ ಸಂಸ್ಥೆಯಶೇ. 5 ಅನುದಾನ ಬಳಕೆ ಆದಲ್ಲಿ ಬಹುತೇಕ ಸಮಸ್ಯೆ ಪರಿಹಾರ ಸಿಗಲಿದೆ. ಈರಣ್ಣ ಬಿರಾದಾರ, ರಮೇಶ ಮಾನೆ, ಶಿಕ್ಷಣ ಸಂಯೋಜಕರು, ಎಪಿಡಿ ಸಂಸ್ಥೆ, ವಿಜಯಪುರ

 

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next