ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಸ್ಥಾಪಿತವಾಗಿರುವ ಅದಾನಿ ಒಡೆತನದ ಯುಪಿಸಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕೆಲಸಗಳನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಪಲಿಮಾರು ಸರಕಾರಿ ಪ್ರೌಢಶಾಲೆಯಲ್ಲಿ 4.50 ಲ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶೌಚಾಲಯವನ್ನು ಅದಾನಿ ಕಂಪೆನಿಯ ಅಧ್ಯಕ್ಷ/ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಜಂಟಿಯಾಗಿ ಉದ್ಘಾಟಿಸಿದರು.
ಅದಾನಿ ಫೌಂಡೇಶನ್ ತನ್ನ ಸಿ.ಎಸ್.ಆರ್. ಯೋಜನೆಯಡಿ ಸ್ವಚ್ಛಾಗ್ರಹ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದು, ಇದರ ಅಂಗವಾಗಿ ಹಸಿರು ಪೋಷಣ ಕಾರ್ಯಕ್ರಮದಡಿಯಲ್ಲಿ ಪಲಿಮಾರು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.
ಅದಾನಿ ಸಮೂಹವು ಯುಪಿಸಿಲ್ ಸ್ಥಾವರದ ಆಸುಪಾಸಿನ 7 ಗ್ರಾ.ಪಂ.ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಅನುದಾನ ವಿನಿಯೋಗಿಸಿದೆ. ಅದರೊಂದಿಗೆ ಶಿಕ್ಷಣ, ಆರೋಗ್ಯ, ಪರಿಸರ, ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲೂ ಹಲವು ಸಾಮಾಜಿಕ ಬೆಳವಣಿಗೆ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು ಗ್ರಾಮಸ್ಥರಿಗೆ ಸಿಎಸ್ಆರ್ ಯೋಜನೆಯ ಪ್ರಯೋಜನ ತಲುಪಿಸುತ್ತಿದೆ ಎಂದರು. ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಮಾತನಾಡಿದರು. ಅದಾನಿ ಫೌಂಡೇಷನ್ನ ಸ್ವಚ್ಛಾಗ್ರಹ ಕಾರ್ಯಕ್ರಮದ ಅಂಗವಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಡುಪಿ ತಾ| ಎಪಿಎಂಸಿ ಸದಸ್ಯ ನವೀನ್ಚಂದ್ರ ಸುವರ್ಣ, ಪಲಿಮಾರು ಗ್ರಾ.ಪಂ. ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ಪಲಿಮಾರು ಗ್ರಾ.ಪಂ. ಸದಸ್ಯರಾದ ಗಾಯತ್ರಿ ಪ್ರಭು, ಸತೀಶ್, ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಗ್ರೇಟಾ ಮೋರೀಸ್, ಬಿಜೆಪಿ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಸಾದ್ ಪಲಿಮಾರು, ಎಸ್.ಡಿ.ಎಂ.ಸಿ. ಸದಸ್ಯ ಸುರೇಶ ಆಚಾರ್ಯ, ಸ್ವಚ್ಛಾಗೃಹ ಪ್ರೇರಕ ಕಲ್ಲಪ್ಪ, ಯುಪಿಸಿಎಲ್ ಸಂಸ್ಥೆಯ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೀರೆ, ಅದಾನಿ ಫೌಂಡೇಶನ್ನ ಸ್ವಚ್ಛಾ ಗೃಹ ಯೋಜನಾಧಿಕಾರಿಗಳಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪಲಿಮಾರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಸ್ವಾಗತಿಸಿ, ವಂದಿಸಿದರು.