Advertisement

ಬೀದರ್‌ನಲ್ಲಿಂದು 45 ಜನರಿಗೆ ಕೋವಿಡ್-19 ಸೋಂಕು ದೃಢ

07:29 PM Jun 08, 2020 | Sriram |

ಬೀದರ್‌: ಮಹಾರಾಷ್ಟ್ರದ ಕಂಟಕದಿಂದ ಬೀದರನಲ್ಲಿ ಆರ್ಭಟಿಸುತ್ತಿರುವ ಕೋವಿಡ್‌-19 ಸೋಂಕು ಬರುವ ದಿನಗಳಲ್ಲಿ ಗಂಡಾಂತರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಅತಿ ಹೆಚ್ಚು 45 ಪ್ರಕರಣಗಳು ವರದಿಯಾಗಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ ತ್ರಿಶತಕದತ್ತ ದಾಪುಗಾಲು ಹಾಕುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

Advertisement

ಸೋಮವಾರ ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ ಒಂದು ಕೇಸ್ ಪಿ 2968ರ ಸಂಪರ್ಕ ಹೊರತುಪಡಿಸಿದರೆ ಉಳಿದ 47 ಸೋಂಕಿತರೆಲ್ಲರೂ ಮಹಾರಾಷ್ಟ್ರದ ಸಂಪರ್ಕವನ್ನೇ ಹೊಂದಿದ್ದಾರೆ. ದಿನ ಕಳೆದಂತೆ ಮಹಾ ನಂಟಿನಿಂದ ಜಿಲ್ಲೆಗೆ ಹಾನಿ ಹೆಚ್ಚಾಗುತ್ತಿದ್ದು, ಮುಖ್ಯವಾಗಿ ಗ್ರಾಮೀಣ ಭಾಗದ ಹಳ್ಳಿ ಹಳ್ಳಿಗಳಿಗೆ ವ್ಯಾಪಿಸುತ್ತಿರುವುದು ಆತಂಕವನ್ನುಂಟು ಮಾಡುತ್ತಿದೆ. ಮುಂಬೈ, ಪುಣೆಯಿಂದ ವಾಪಸ್ ಬಂದು ಕ್ವಾರಂಟೈನ್‌ನಲ್ಲಿರುವ ವಲಸೆ ಕಾರ್ಮಿಕರಲ್ಲಿ ಪಾಸಿಟಿವ್ ಪತ್ತೆಯಾಗುತ್ತಿವೆ. ಇದಲ್ಲದೇ ಕೆಲವರದ್ದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ವಾಪಸ್ಸಾದ ಬಳಿಕ ಟೆಸ್ಟಿಂಗ್ ವರದಿ ಬರುತ್ತಿರುವುದು ಸೋಂಕು ವ್ಯಾಪಿಸುವ ಆತಂಕ ಹೆಚ್ಚುತ್ತಿದೆ.

ಜಿಲ್ಲೆಯ ಬಸವಕಲ್ಯಾಣ ತಾಲೂಕಿಗೆ ಹೆಚ್ಚು ಕೋವಿಡ್‌-19 ವೈರಾಣು ಬಾಧಿಸಿದ್ದು, ತಾಲೂಕಿನ ದೇವಿತಾಂಡಾ ಒಂದರಲ್ಲೇ 17 ಪಾಸಿಟಿವ್ ಪತ್ತೆಯಾಗಿರುವುದು ಆ ಪ್ರದೇಶದಲ್ಲಿ ಭೀತಿ ಆವರಿಸುವಂತೆ ಮಾಡಿದೆ. ಬಸವಕಲ್ಯಾಣ ತಾಲೂಕಿನ ದೇವಿ ತಾಂಡಾ 17, ಹಿಪ್ಪಳಗಾಂವ 4, ತಮಗ್ಯಾಳ್ 2, ಜಾನಾಪುರ, ಹಿರಣಗಾಂವ್, ಓತಗಿ, ಲಾಡವಂತಿ, ಶಿರುರಿ ಮತ್ತು ಕೋಹಿನೂರನಲ್ಲಿ ತಲಾ 1 ಕೇಸ್‌ನಂತೆ ಒಟ್ಟು 29 ಪ್ರಕರಣಗಳು ವರದಿಯಾಗಿವೆ.

ಹುಮನಾಬಾದ ಪಟ್ಟಣದ ಜನತಾ ನಗರದ 3, ತಾಲೂಕಿನ ಬೆನಚಿಂಚೋಳಿ 2, ಧುಮ್ಮನಸೂರ, ಸಿಂದಬಂದಗಿ, ಜಾಮನಗರದಲ್ಲಿ ತಲಾ ೧ ಕೇಸ್ ಸೇರಿ ೮ ಸೋಂಕಿತರು, ಕಮಲನಗರ ಪಟ್ಟಣದ ೨, ತಾಲೂಕಿನ ಕೋಟಗ್ಯಾಳ, ಗಣೇಶಪೂರ ಮತ್ತು ಬಸನಾಳ ಗ್ರಾಮದಲ್ಲಿ ತಲಾ 1 ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. ಭಾಲ್ಕಿ ತಾಲೂಕಿನ ಕೇರೂರ 2, ಮಳಚಾಪೂರದಲ್ಲಿ 1 ಸೇರಿ 3 ಕೇಸ್ ಹಾಗೂ ಚಿಟಗುಪ್ಪ ಪಟ್ಟಣದಲ್ಲಿ 3 ಪಾಸಿಟಿವ್ ಕಂಡು ಬಂದಿವೆ.

ಹೊಸದಾಗಿ ಪತ್ತೆಯಾಗಿರುವ ಸೋಂಕಿತರಲ್ಲಿ 9 ಜನ ಮಕ್ಕಳು ಸೇರಿದ್ದಾರೆ. 31 ಪುರುಷರಿದ್ದರೆ, 17 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 270 ಪ್ರಕರಣಗಳು ವರದಿಯಾದಂತೆ ಆಗಿದ್ದು, 97 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ 167 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆಯ ಹೇಲ್ತ್ ಬುಲೇಟಿನ್ ದೃಡಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next