Advertisement

ಕುಂಭಮೇಳಕ್ಕೆ 4 ತಾತ್ಕಾಲಿಕ ಬಸ್‌ ನಿಲ್ದಾಣ

07:33 AM Feb 15, 2019 | |

ಮೈಸೂರು: ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಫೆ.17ರಿಂದ ಮೂರು ದಿನ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಲು ಆಗಮಿಸುತ್ತಿದ್ದು, ಸುಗಮ ಸಂಚಾರಕ್ಕಾಗಿ ನಾಲ್ಕು ತಾತ್ಕಾಲಿಕ ನಿಲುಗಡೆ ತಾಣಗಳನ್ನು ಸ್ಥಾಪಿಸಲಾಗಿದೆ. ನಿಲ್ದಾಣಗಳಿಂದ ಭಕ್ತರು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಂಚರಿಸಲು ಉಚಿತ ಮಿನಿಬಸ್‌ ವ್ಯವಸ್ಥೆ ಮಾಡಲಾಗಿದೆ.

Advertisement

ಮೈಸೂರು ಕಡೆಯಿಂದ ಬರುವ ಭಕ್ತರು ಗಗೇಶ್ವರಿಯಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸೇತುವೆ ಪಕ್ಕದ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ವಾಪಸ್‌ ಅಲ್ಲಿಂದ ಮೈಸೂರು ಕಡೆಗೆ ಸಂಚರಿಸುವುದು. ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗದಲ್ಲಿ ವಾಪಸ್ಸಾಗುವುದು.

ಹಳೇ ಸೇತುವೆ ಬಳಿ ನಿಲ್ದಾಣ: ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರುನಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಕಾವೇರಿ ನದಿ ಹಳೇ ಸೇತುವೆ ಬಳಿ ತಾತ್ಕಾಲಿಕ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ನಂತರ ಬನ್ನೂರು ಕಡೆಗೆ ವಾಪಸ್ಸಾಗುವುದು.

ತಾತ್ಕಾಲಿಕ ಸೇತುವೆ: ನಂಜನಗೂಡು, ತಿ.ನರಸೀಪುರ ಪಟ್ಟಣದ ಕಡೆಯಿಂದ ಬರುವ ಭಕ್ತರು ಉತ್ತಮ ವಾಹನಗಳನ್ನು ತಿರುಮಕೂಡಲು ಸೇತುವೆ ಬಳಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ಸಂಚರಿಸುವುದು. ಭಕ್ತರ ಅನುಕೂಲಕ್ಕಾಗಿ ಗುಂಜಾನರಸಿಂಹಸ್ವಾಮಿ ದೇಗುಲದಿಂದ ಸಂಗಮ ಸ್ಥಳಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದ್ದು, ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಈ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ. 

ಮೈಸೂರಿನಿಂದ ತಿ.ನರಸೀಪುರ, ಕೊಳ್ಳೇಗಾಲ, ಚಾಮರಾಜ ನಗರಕ್ಕೆ ಬರುವ ವಾಹನಗಳು ಮೈಸೂರು-ಮೇಗಳಾಪುರ-ಮೇಗಳಾಪುರದಿಂದ ಬಲಕ್ಕೆ ತಿರುಗಿ ಹೊಸಹಳ್ಳಿ, ಕುಪ್ಪೇಗಾಲ ಸೇತುವೆ ಮಾರ್ಗವಾಗಿ ತಿರುಮಕೂಡಲು ವೃತ್ತದಲ್ಲಿ ಬಲಕ್ಕೆ ತಿರುಗಿ ಖಾಸಗಿ ಬಸ್‌ ನಿಲ್ದಾಣ ನಂತರ ಲಿಂಕ್‌ ರಸ್ತೆ ಮಾರ್ಗ ಕೊಳ್ಳೇಗಾಲ ಮುಖ್ಯರಸ್ತೆ ಮಾರ್ಗವಾಗಿ ತೆರಳುವುದು.

Advertisement

ಕೊಳ್ಳೇಗಾಲ, ಚಾಮರಾಜ ನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಮೈಸೂರಿಗೆ ಹೋಗುವ ವಾಹನಗಳು ಚಿಕ್ಕಮ್ಮ ತಾಯಿ ಛತ್ರದ ಬಳಿ ಎಡಕ್ಕೆ ತಿರುಗಿ ತಾಲೂಕು ಕಚೇರಿ ರಸ್ತೆ ವಿದ್ಯೋದಯ ವೃತ್ತದ ಮುಖಾಂತರ ಸುತ್ತೂರು, ವರುಣಾ ಮಾರ್ಗವಾಗಿ ಮೈಸೂರಿಗೆ ತೆರಳುವುದು.

ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರಿನಿಂದ ಚಾಮರಾಜ ನಗರ, ಕೊಳ್ಳೇಗಾಲಕ್ಕೆ ಹೋಗುವ ವಾಹನಗಳು ಸೋಸಲೆ ಬಳಿ ಎಡಕ್ಕೆ ತಿರುಗಿ ದೊಡ್ಡೇಬಾಗಿಲು, ಪೂರಿಗಾಲಿ, ತಲಕಾಡು, ಮಾದಾಪುರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚರಿಸುವುದು.

ಮಕ್ಕಳ ಜೇಬಲ್ಲಿ ಮಾಹಿತಿ ಚೀಟಿ ಇಡಿ: ಕುಂಭಮೇಳಕ್ಕೆ ಆಗಮಿಸುವ ಭಕ್ತರು ಜೊತೆಯಲ್ಲಿ ಚಿಕ್ಕಮಕ್ಕಳನ್ನು ಕರೆತಂದಲ್ಲಿ ಅವರ ಜೇಬಿನಲ್ಲಿ ಹೆಸರು, ವಿಳಾಸ ಮತ್ತು ಪೋಷಕರ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಇರಿಸುವುದು. ಪುಣ್ಯಸ್ನಾನ ಮಾಡುವ ಸಂದರ್ಭದಲ್ಲಿ ಪೋಷಕರು ಚಿಕ್ಕ ಮಕ್ಕಳು, ವೃದ್ಧರ ಬಗ್ಗೆ ಜಾಗೃತಿವಹಿಸಬೇಕು.

ಸ್ನಾನಘಟ್ಟಗಳ ಬಳಿ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ದಾಟದಂತೆ ಸೂಚಿಸಿದೆ. ಮಹಿಳೆಯರು ತಮ್ಮ ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next