Advertisement

ಮಂತ್ರಾಲಯದಲ್ಲಿ ರಾಯರ ವೈಭವದ ಮಧ್ಯಾರಾಧನೆ : ಹರಿದು ಬಂದ ಭಕ್ತ ಸಾಗರ 

11:54 AM Aug 28, 2018 | |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ. 

Advertisement

ಆರಾಧನೆ ನಿಮಿತ್ತ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ವಿವಿಧ ದೃವ್ಯಗಳಿಂದ ಮಹಾ ಪಂಚಾಮೃತಾಭಿಷೇಕ ನಡೆಸಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಅಭಿಷೇಕಗಳನ್ನು ನಡೆಸಿದರು.  ಬೆಳಗಿನ ಜಾವ ದಿಂದಲೆ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದ್ದು, ಸಹಸ್ರಾರು ಭಕ್ತರ ಮಧ್ಯೆ ನವರತ್ನ ಖಚಿತ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 

ಪ್ರಾತಃಕಾಲದಲ್ಲಿ ನಿರ್ಮಾಲ್ಯ ವಿಸರ್ಜನೆ ನಡೆಸಿದ ನಂತರ ಶ್ರೀ ಉತ್ಸವ ರಾಯರ ಪಾದಪೂಜೆ ನೆರವೇರಿಸಲಾಯಿತು.  

ವೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಿರುಪತಿ ತಿರುಮಲದಿಂದ ತರಲಾದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಶ್ರೀಮಠದ ಪ್ರಾಂಗಣದಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ಆನಂತರ ಅವುಗಳನ್ನು ಶ್ರೀ ಸುಬುಧೇಂದ್ರ ತೀರ್ಥರು ತಲೆ ಮೇಲೆ ಹೊತ್ತು ಸಾಗಿ ಶ್ರೀ ರಾಯರ ವೃಂದಾವನಕ್ಕೆ ಸಮರ್ಪಿಸಿದರು. ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

Advertisement

ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ರಾಯರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ರಾಯರ ಮೂಲ ವೃಂದಾವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. 

 ಈ ಬಾರಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಚನ್ನಾಗಿರುವ ಕಾರಣ ಭಕ್ತರ ಪುಣ್ಯಸ್ನಾನಕ್ಕೆ ಅನುಕೂಲವಾಗಿದೆ. ಸ್ನಾನಘಟ್ಟದಲ್ಲಿ ಮಠದಿಂದ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಸೋಮವಾರ ಪೂರ್ವಾಧನೆ ನಡೆದಿದ್ದು ,ಬುಧವಾರ ಉತ್ತರಾರಾಧನೆ ಜರುಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next