Advertisement

ಹುಣಸೂರು ಉಪ ವಿಭಾಗದಲ್ಲಿ 3 ಟ್ರೀಪಾರ್ಕ್‌

02:45 PM May 25, 2018 | |

ಹುಣಸೂರು: ಸರ್ಕಾರದ ನಿರ್ದೇಶನದಂತೆ ಹುಣಸೂರು ಉಪ ವಿಭಾಗದ ಮೂರು ಕಡೆಗಳಲ್ಲಿ ಟ್ರೀಪಾರ್ಕ್‌ ನಿರ್ಮಿಸಲಾಗಿದ್ದು, ಹುಣಸೂರಿನ ಕಲ್‌ಬೆಟ್ಟ, ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ರಾಗಿಗುಡ್ಡಗಳಲ್ಲಿ ಪ್ರೀ ಪಾರ್ಕ್‌ ಹಾಗೂ ಬೆಟ್ಟದಪುರದಲ್ಲಿ ದೈವಿವನ ನಿರ್ಮಿಸಲಾಗಿದೆ.

Advertisement

ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಹುಣಸೂರು ನಗರಕ್ಕೆ ಸಮೀಪದ ಕಲ್‌ಬೆಟ್ಟ ಸರಕಾರಿ ನಾಟಾ ಸಂಗ್ರಹಾಲಯದ  30 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪ್ರಥಮ ಹಂತದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೊàದ್ಯಾನವನ (ಟ್ರೀಪಾರ್ಕ್‌) ನಿರ್ಮಿಸಲಾಗಿದೆ.

ಹುಣಸೂರು ನಗರಕ್ಕೆ ಸಮೀಪದ ಕಲ್‌ಬೆಟ್ಟ ನಾಟಾ ಸಂಗ್ರಹಾಲಯದ ಅರಣ್ಯ ಪ್ರದೇಶದಲ್ಲಿ ಇಲ್ಲೀಗ ವಾಯುವಿಹಾರ ಹಾಗೂ ವಿಶ್ರಾಂತಿ ತಾಣ, ಪರಿಸರ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ನಿಸರ್ಗ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಲಿದೆ.

ಏನಿದು ಟ್ರೀ ಪಾರ್ಕ್‌: ಮೊದಲ ಹಂತದಲ್ಲಿ ಕಲ್‌ಬೆಟ್ಟದ ನಾಲ್ಕು ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿದ್ದ ಲಾಂಟಾನಾ ಮತ್ತಿತರ ಗಿಡಗಳನ್ನು ತೆರವುಗೊಳಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನ ವೃಕ್ಷೊದ್ಯಾನದ ಮುಖ್ಯದ್ವಾರವನ್ನು ಅರಣ್ಯ-ವನ್ಯಜೀವಿಯನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಆಕರ್ಷಣೀಯವಾಗಿ ನಿರ್ಮಿಸಲಾಗಿದೆ.

ಅಲ್ಲಿರುವ ಶ್ರೀಗಂಧ, ಹೊನ್ನೆ, ತಬಸಿ, ಹುಣಸೆ, ಶಿವನೆ, ಕಕ್ಕೆ, ಗುಲ್‌ಮೊಹರ್‌, ಸೀಮೆತಂಗಡಿ ಮತ್ತಿತರ ಗಿಡಮರಗಳಿರುವ ಆವರಣದ ಸುತ್ತ ಸುಮಾರು 3 ಕಿ.ಮೀ ವಾಕಿಂಗ್‌ ಪಾತ್‌ ನಿರ್ಮಿಸಲಾಗಿದೆ. ಪ್ರವಾಸಿಗರು ಹಾಗೂ ವಾಯುವಿಹಾರಿಗಳು ವಿರಮಿಸಲು ಅಲ್ಲಲ್ಲಿ ಕಲ್ಲು ಬೆಂಚುಗಳನ್ನು ಹಾಕಲಾಗಿದೆ.

Advertisement

ಸೌರಶಕ್ತಿಯ ದೀಪಗಳನ್ನು ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಡಸ್ಟ್‌ಬಿನ್‌, ಟಿಕೆಟ್‌ ಕೌಂಟರ್‌, ವಾಚ್‌ಮನ್‌ ವಸತಿಗೃಹ ನಿರ್ಮಿಸಲಾಗಿದೆ. ಅರಣ್ಯ-ಪ್ರಾಣಿಗಳ ಸಂರಕ್ಷಣೆ ಕುರಿತ ಮಹತ್ವ ಸಾರುವ ಘೊಷಣಾ ಫ‌ಲಕಗಳನ್ನು ಅಳವಡಿಸಲಾಗಿದೆ. ಆವರಣದಲ್ಲಿ ಸಿಕ್ಕ ಕಲ್ಲುಬಂಡೆಗಳನ್ನು ಶೃಂಗರಿಸಲಾಗುತ್ತಿದೆ.

ವೀಕ್ಷಣಾ ಗೋಪುರ ನಿರ್ಮಾಣ: ವೃಕ್ಷೊದ್ಯಾನದ ಮಧ್ಯಭಾಗದ ಎತ್ತರ ಪ್ರದೇಶದಲ್ಲಿ ಪರಗೋಲ (ವಿಶ್ರಾಂತಿಗೋಪುರ ) ನಿರ್ಮಿಸಲಾಗಿದೆ. ಇಲ್ಲಿ ವಿಶ್ರಾಂತಿ ಜೊತೆಗೆ ಸುತ್ತಲಿನ ಬೆಟ್ಟಗುಡ್ಡಗಳ ಸೌಂದರ್ಯ ಸವಿಯಲು ಪ್ರಶಸ್ತವಾಗಿದೆ. ಇದರೊಂದಿಗೆ ನಾಟಾ ಸಂಗ್ರಹಾಲಯವನ್ನು ಪ್ರತ್ಯೇಕಿಸಲು ಸರಪಳಿ ಮಾದರಿ ಬೇಲಿ ನಿರ್ಮಿಸಲಾಗಿದೆ.

ಚಾರಣಕ್ಕೂ ಯೋಜನೆ: ಟ್ರೀ ಪಾರ್ಕ್‌ಗೆ ಹೊಂದಿಕೊಂಡಿರುವ ಕಲ್‌ಬೆಟ್ಟದಲ್ಲಿ ಸುಮಾರು ಮೂರು ಕಿ.ಮೀ. ಟ್ರಕ್ಕಿಂಗ್‌ ಪಾತ್‌ ನಿರ್ಮಾಣ ಹಾಗೂ ಉದ್ದಕ್ಕೂ ವನ್ಯಜೀವಿಗಳ ರಕ್ಷಣೆಗಾಗಿ ಬೇಲಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಬೆಟ್ಟದ ಮೇಲೊಂದು ವಿಶ್ರಾಂತಿ ಗೋಪುರ ನಿರ್ಮಿಸಲಾಗುವುದು. ಇಲ್ಲಿ ಐದು ವರ್ಷಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಅವರಲ್ಲಿ ಪರಿಸರ ಪ್ರೀತಿ, ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ.

ಇದೇ ಮಾದರಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ$ ಮತ್ತು ಕೊಪ್ಪ ವಲಯದ ರಾಗಿಪಾರಂನಲ್ಲೂ ಟ್ರೀ ಪಾರ್ಕ್‌ ನಿರ್ಮಿಸಲಾಗಿದೆಯಲ್ಲದೆ ಬೆಟ್ಟದ ಪುರದ ಸಿಡ್ಲುಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ದೈವಿವನ ನಿರ್ಮಿಸಲಾಗಿದೆ.

ಮುಂದಿನ ವರ್ಷದಲ್ಲಿ ಯೋಗಾ ಪ್ಲಾಟ್‌, ಶ್ರೀಗಂಧದ ಮತ್ತು ರಕ್ತಚಂದನ ಪಾರ್ಕ್‌, ಮಾಹಿತಿ ಕೇಂದ್ರ, ಅಲ್ಲಲ್ಲಿ ಲಾನ್‌ಗಳ ನಿರ್ಮಾಣ, ಮುಖ್ಯ ದ್ವಾರದ ಬಳಿ ವಾಹನ ನಿಲ್ದಾಣ ನಿರ್ಮಾಣ ಸೇರಿದಂತೆ ಪ್ರವಾಸಿಗರಿಗೆ ಪೂರಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಈಗಿನ ಗಿಡಮರಗಳ ಜೊತೆಗೆ ಬಸವನ ಪಾದ, ಬೇವು, ನೇರಳೆ, ಹಲಸು ಹಾಗೂ ವರ್ಷವಿಡೀ ಬಿಡುವ ಬಗೆಬಗೆಯ ಹೂವಿನ ಗಿಡ ನೆಡುವುದು, ಪ್ರತಿವರ್ಷ 4 ಹೆಕ್ಟೇರ್‌ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುವುದು. 
-ಶಾಂತಕುಮಾರಸ್ವಾಮಿ. ಆರ್‌ಎಫ್ಒ, ಹುಣಸೂರು

ಹುಣಸೂರಿನ ಕಲ್‌ಬೆಟ್ಟ ನಾಟಾ ಸಂಗ್ರಹಾಲಯ 178 ಹೆಕ್ಟೇರ್‌ ವಿಸ್ತೀರ್ಣವಿದೆ. ಇದೂ ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ರಾಗಿಗುಡ್ಡದಲ್ಲಿ ಟ್ರೀ ಪಾರ್ಕ್‌ ಹಾಗೂ ಬಿದಿರು ವನ, ಬೆಟ್ಟದಪುರದ ಸಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ದೈವಿವನ ನಿರ್ಮಿಸಲಾಗುತ್ತಿದೆ. ಐದು ವರ್ಷದ ಯೋಜನೆ ಇದಾಗಿದ್ದು, ಮುಂದೆ ಕಲ್‌ಬೆಟ್ಟದಲ್ಲಿ ಚಾರಣ, ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು. ಜಿಮ್‌ ಪಾರ್ಕ್‌, ಗಿಡಮೂಲಿಕೆ ಪಾರ್ಕ್‌, ಮಕ್ಕಳ ಆಟಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ಪ್ರದೇಶಕ್ಕನುಗುಣವಾಗಿ ಮುಂದಿನ ದಿನಗಳಲ್ಲಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗುವುದು.
-ವಿಜಯಕುಮಾರ್‌, ಡಿಸಿಎಫ್, ಹುಣಸೂರು ವಿಭಾಗ

* ಸಂಪತ್‌ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next