Advertisement

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಅಬ್ಬರ

07:43 AM Sep 26, 2017 | Team Udayavani |

ಬೆಂಗಳೂರು: ಕೇರಳ ಮತ್ತು ತಮಿಳುನಾಡು ಮಧ್ಯೆ ಗಾಳಿಯ ಒತ್ತಡದಲ್ಲಾದ ಬದಲಾವಣೆಯಿಂದ ಸೋಮವಾರ ರಾಜ್ಯಾದ್ಯಂತ ಮಳೆ ಅಬ್ಬರಿಸಿದ್ದು, ಇನ್ನೂ ಎರಡು-ಮೂರು ದಿನ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ. ಈ ಮಧ್ಯೆ, ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ದಾವಣಗೆರೆಯಲ್ಲಿ ರಾಜ್ಯದಲ್ಲಿಯೇ ಅಧಿಕ, 13 ಸೆಂ.ಮೀ. ಮಳೆಯಾಗಿದೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಕ್ರಮವಾಗಿ 102.9 ಮಿ.ಮೀ. ಹಾಗೂ 90 ಮಿ.ಮೀ.ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಒಟ್ಟಾರೆ ಮಳೆ ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕ ಮಳೆಯಾಗಿದೆ. ಧಾರವಾಡದಲ್ಲಿ 85 ಮಿ.ಮೀ., ಹಾವೇರಿಯಲ್ಲಿ 43, ಚಿತ್ರದುರ್ಗದಲ್ಲಿ 55.4, ಕೊಪ್ಪಳದಲ್ಲಿ 40.4, ಗದಗ 35.4, ಬೆಳಗಾವಿ 46.5, ಬಳ್ಳಾರಿ 29.2, ಕಲಬುರಗಿ 29, ರಾಯಚೂರು 20, ಬಾಗಲಕೋಟೆ 25.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮಂಡ್ಯದಲ್ಲಿ 83, ದಕ್ಷಿಣ ಕನ್ನಡ 43, ಹಾಸನ 35.4, ಮೈಸೂರು 59, ಬೆಂಗಳೂರು ನಗರ ಮತ್ತು ಕೋಲಾರ 14.5, ಚಿಕ್ಕಮಗಳೂರು 32 ಮಿ.ಮೀ. ಮಳೆ ದಾಖಲಾಗಿದೆ. 

ಸೆ.26-30ರವರೆಗೆ ಭಾರಿ ಮಳೆ: ಗಾಳಿಯ ಒತ್ತಡದಲ್ಲಾದ ಬದಲಾವಣೆಯಿಂದ ಈ ಮಳೆ ಆಗುತ್ತಿದೆ. ಮುಂಗಾರು ಮಾರುತಗಳ ನಿರ್ಗಮನ ಹಾಗೂ ಹಿಂಗಾರು ಮಾರುತಗಳ ಆಗಮನದ ಸಂದರ್ಭಗಳಲ್ಲಿ ಈ ರೀತಿಯ ಬದಲಾವಣೆ ಸಾಮಾನ್ಯವಾಗಿ ಆಗುತ್ತದೆ. ಈ ವಾತಾವರಣ ಇನ್ನೂ ಎರಡು-ಮೂರು ದಿನ ಮುಂದುವರಿಯುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಸೆ.26ರಿಂದ 30ರವರೆಗೆ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿಯಲ್ಲಿ 26ರಿಂದ 28ರವರೆಗೆ ಭಾರಿ ಮಳೆ ಹಾಗೂ ಧಾರವಾಡ, ಕೊಪ್ಪಳ, ಗದಗದಲ್ಲಿ ಮಂಗಳವಾರ ಗುಡುಗುಸಹಿತ ಮಳೆಯಾಗಲಿದೆ. 

ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ ಮತ್ತು ಕೊಡಗಿನಲ್ಲಿ ಭಾರಿ ಮಳೆ ಹಾಗೂ ಮುಂದಿನ 24 ಗಂಟೆ ಚಿತ್ರದುರ್ಗ, ದಾವಣಗೆರೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ಸಿಡಿಲಿಗೆ ಮೂರು ಬಲಿ
ಶಿವಮೊಗ್ಗ/ನರಗುಂದ: ಸಿಡಿಲಬ್ಬರದ ಮಳೆಗೆ ರಾಜ್ಯದಲ್ಲಿ ಮೂವರು ಅಸುನೀಗಿದ್ದಾರೆ. ಶಿವಮೊಗ್ಗ ತಾಲೂಕಿನ ಬಸವಾಪುರದಲ್ಲಿ ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ಸಣ್ಣತಿಮ್ಮಾಭೋಮಿ (55) ಎಂಬುವರು ಮೃತಪಟ್ಟಿದ್ದಾರೆ. ಇವರ ಜೊತೆಗಿದ್ದ ಗಾಂಧಿನಗರ ನಿವಾಸಿಗಳಾದ ಪರಮೇಶಿ, ಯೋಗೀಶ್‌ ಹಾಗೂ ನಾಗಪ್ಪ ಎಂಬುವರು ಗಾಯಗೊಂಡಿದ್ದಾರೆ. ಹಸು ಹಾಗೂ ಕುರಿಗಳನ್ನು
ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿಯಿತು. ಈ ಮಧ್ಯೆ, ನರಗುಂದದ ವರ್ತಿ ಹಳ್ಳದ ಬಳಿ ಭಾನುವಾರ ಸ್ಥಳೀಯ ಸೋಮಾಪೂರ ಓಣಿಯ  ನಿವಾಸಿ ದೇವೇಂದ್ರಗೌಡ ರಾಜೇಂದ್ರಗೌಡ ಗೌಡ್ರ(64) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.

Advertisement

ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಂಗಲಗಿ ಗ್ರಾಪಂ ಮಾಜಿ ಅಧ್ಯಕ್ಷ ಸೂರ್ಯಕಾಂತ ರೇವಣಸಿದ್ದಪ್ಪ ಹೂಗಾರ (50) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದೇ ವೇಳೆ, ಅವಿನಾಶ ಶಿವಪುತ್ರಪ್ಪ ಹೂಗಾರ(18) ಎಂಬುವರು ಗಾಯಗೊಂಡಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು.

ದಾವಣಗೆರೆ ಜಲಾವೃತ
ದಾವಣಗೆರೆ: ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವ 3 ಗಂಟೆ ವರೆಗೆ ಸುರಿದ ಮಳೆಗೆ ನಗರದ ತಗ್ಗು
ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದು, 1000ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಎರಡು ಕಡೆಗಳಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಸಂತ್ರಸ್ತರಿಗೆ ನೆರವು ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next