Advertisement

ದಾಂಪತ್ಯ ಜೀವನಕ್ಕೆ ಕಾಲಿರಿಸಿದ 178 ಜೋಡಿ

09:09 PM Jan 22, 2020 | Lakshmi GovindaRaj |

ಮೈಸೂರು: ಜಾತಿ, ಧರ್ಮವನ್ನೂ ಮೀರಿ, ಬಡವ-ಬಲ್ಲಿದ, ಮೇಲು-ಕೀಳು ಎಂಬ ಭಾವನೆಗಳಿಲ್ಲದೆ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 178 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೂತನ ವಧು-ವರರನ್ನು ಹರಸಿದರು.

ಸಾಮೂಹಿಕ ವಿವಾಹದಲ್ಲಿ ಶ್ರೀಕ್ಷೇತ್ರ ಸುತ್ತೂರು ಮಠದಿಂದ ವಧುವಿಗೆ ಸೀರೆ, ಕುಪ್ಪಸ, ಮಾಂಗ್ಯ ಹಾಗೂ ಕಾಲುಂಗುರ, ವರನಿಗೆ ಪಂಚೆ, ವಲ್ಲಿ, ಶರ್ಟ್‌ ನೀಡಲಾಯಿತು. ನೂತನ ವಧು-ವರರಿಗೆ ಮಾಂಗಲ್ಯ, ವಸ್ತ್ರವನ್ನು ನೀಡುವುದರೊಂದಿಗೆ ಬಾಗಿನ ನೀಡುವುದರೊಂದಿಗೆ ಸ್ವಾಮೀಜಿಗಳು ಮತ್ತು ಗಣ್ಯರು ಮಾಂಗಲ್ಯವಿದ್ದ ತಟ್ಟೆಯನ್ನು ತಮ್ಮ ಅಮೃತ ಹಸ್ತದಿಂದ ಸ್ವಯಂಸೇವಕರಿಗೆ ನೀಡಿದರು.

ಬಳಿಕ ಗಣ್ಯರು ನೂತನ ವಧು- ವರರರಿಗೆ ಮಾಂಗಲ್ಯ ನೀಡಿ ಶುಭ ಹಾರೈಸಿದರು. ಶಾಸಕ ಅಲ್ಲಂ ವೀರಭದ್ರಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರೆ, ಸಾಮೂಹಿಕ ವಿವಾಹವಾದ ವಧು-ವರರನ್ನು ನಂಜನಗೂಡು ಉಪ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ನೋಂದಾಯಿಸಿ, ವಿವಾಹ ದೃಢೀಕರಣ ಪತ್ರ ಹಾಗೂ ನೋಂದಣಿ ಪತ್ರ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್‌ ನೂತನ ವಧು-ವರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. “ಬದುಕಿನ ಸುಖ-ದುಃಖಗಳನ್ನು ನಾವಿಬ್ಬರೂ ಒಂದಾಗಿ ಪರಸ್ಪರ ಅರಿತುಕೊಂಡು, ಪ್ರೀತಿ, ವಿಶ್ವಾಸ ಮತ್ತು ಗೌರವಾದರಗಳಿಂದ ಸಮ ಜೀವನ ನಡೆಸುತ್ತೇವೆ… ಹೀಗೆ ಪರಿಶುದ್ದ ಜೀವನವೇ ನಮ್ಮ ಪರಮ ಧ್ಯೇಯವೆಂದು ಮನಃಪೂರ್ವಕವಾಗಿ ನಡೆ-ನುಡಿಗಳಿಂದ ಅನುಸರಿಸುತ್ತೇವೆ ಎಂದು ನೂತನ ವಧು- ವರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Advertisement

ಬಾಗಿನ: ನೂತನ ವಧು- ವರರಿಗೆ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಸೆಮಣೆ ಏರಿದ ಎಲ್ಲಾ ಜೋಡಿಗಳಿಗೂ ಬಾಗಿನ ನೀಡಿ ಸತ್ಕರಿಸಲಾಯಿತು. ವಸ್ತ್ರ, ಬಳೆ,ಅಕ್ಕಿ,ಅರಿಶಿಣಿ-ಕುಂಕುಮ, ಬಟ್ಟಲು ಇನ್ನಿತರ ವಸ್ತುಗಳಿದ್ದ ಬಾಗಿನವನ್ನು ಶ್ರೀಮಠದಿಂದ ನೀಡಲಾಯಿತು. ಬಾಗಿನ ಸ್ವೀಕರಿಸಿ ಹೊರ ಬಂದ ನವಜೋಡಿಗಳಿಗೆ ಸಂಬಂಧಿಕರು ಉಡುಗೊರೆ ಕೊಟ್ಟು ಶುಭ ಹಾರೈಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಶೇಷ ಜೋಡಿಗಳು: ಪರಿಶಿಷ್ಟ ಜಾತಿ-106, ಪರಿಶಿಷ್ಟ ಪಂಗಡ-10, ಹಿಂದುಳಿದ ವರ್ಗ-33, ವೀರಶೈವ ಲಿಂಗಾಯುತ-11,ಅಂತರಜಾತಿ 18 ಜೋಡಿ ಸೇರಿದಂತೆ 178 ಜೋಡಿಗಳು ಬಾಳ ಸಂಗಾತಿಗಳಾದರು. ಈ ಪೈಕಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಕ್ಕಾಂಜಿ ನಗರದ ಎಸ್‌.ತೇಜಶ್ರೀ ಹಾಗೂ ಕೆ.ಆರ್‌.ನಗರ ತಾಲೂಕು ಮಧುವನಹಳ್ಳಿ ಬಡಾವಣೆಯ ಎಂ.ಸಿ.ಶೇಖರ್‌, ಪೊಯಿಕಪುರಂ ಗ್ರಾಮದ ಸುಗನ್ಯ ಹಾಗೂ ಎಚ್‌.ಡಿ.ಕೋಟೆ ತಾಲೂಕಿನ ಮೊತ್ತ ಗ್ರಾಮದ ಬಿ.ವರುಣ್‌ ಕುಮಾರ್‌ ಬಾಳ ಸಂಗಾತಿಗಳಾದರು.

ವಿಧುರ-ವಿಧವೆಯರಾದ ಚಾಮರಾಜನಗರ ತಾಲೂಕು ಆಲೂರು ಗ್ರಾಮದ ಎ.ಎಸ್‌.ಶಿವಮ್ಮ ಹಾಗೂ ಮಂಡ್ಯ ತಾಲೂಕು ತಗ್ಗಹಳ್ಳಿ ಗ್ರಾಮದ ರಾಜು, ನಂಜನಗೂಡು ತಾಲೂಕು ಶಿರಮಳ್ಳಿ ಗ್ರಾಮದ ಎನ್‌.ರೋಜಾ ಹಾಗೂ ಬಿ.ದೇವರಾಜು ಮತ್ತೂಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಿಬ್ಬಣದ ಮೆರವಣಿಗೆ: ದಾಂಪತ್ಯ ಜೀವನಕ್ಕೆ ಕಾಲಿರಿಸಲು ಬೇರೆ ಬೇರೆ ಊರುಗಳಿಂದ ಬಂದು ಶ್ರೀಮಠದಲ್ಲಿ ವಾಸ್ತವ್ಯ ಹೂಡಿದ್ದ ವಧು-ವರರು ಬುಧವಾರ ಬೆಳಗ್ಗೆ ಶ್ರೀಮಠದವತಿಯಿಂದ ನೀಡಲಾದ ಹೊಸ ವಸ್ತ್ರ ಧರಿಸಿ, ಹಣೆಗೆ ಬಾಸಿಂಗ ಕಟ್ಟಿಕೊಂಡು ಸಜ್ಜಾಗಿದ್ದರು. ಕತೃ ಗದ್ದುಗೆಯಿಂದ ವಧು-ವರರನ್ನು ಸಾಂಸ್ಕೃತಿಕ ಕಲಾತಂಡಗಳು, ಜಾನಪದ ತಂಡಗಳ ಕಲಾವಿದರು,

ಛತ್ರಿ-ಚಾಮರಗಳೊಂದಿಗೆ ಮೆರವಣಿಗೆ ಮೂಲಕ ಸಾಮೂಹಿಕ ವಿವಾಹ ಜರುಗಲಿದ್ದ ಮುಖ್ಯವೇದಿಕೆಗೆ ಕರೆತರಲಾಯಿತು. ವಧು-ವರರು ಪರಸ್ಪರ ಕೈ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಬಂದರೆ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಹಿಂಬಾಲಿಸಿದರು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಗಟ್ಟಿಮೇಳ ಬಾರಿಸಿದಾಗ ತಮ್ಮ ಬಾಳ ಸಂಗಾತಿಗಳಿಗೆ ಮಾಂಗಲ್ಯಧಾರಣೆ ಮಾಡಿದರು.

ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ: ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ. ಪ್ರೇರಣೆ ಜತೆ ಮೋಹವೂ ಒಂದು. ಶರಣ ಸತಿ-ಲಿಂಗ ಪತಿಯ ಕಲ್ಪನೆ ಮೋಹ ಭಕ್ತಿಯನ್ನು ತೋರಿಸುತ್ತದೆ. ಜಾತಿ ಮತ, ಸಂಪ್ರದಾಯ ಮೀರಿ ಎಲ್ಲವನ್ನೂ ಒಳಗೊಂಡಂತೆ ಸಾಮಾಜಿಕ ನೆಲೆಯಲ್ಲಿ ವಿವಾಹ ನಡೆಯುವುದು ಮುಖ್ಯ, ಪವಿತ್ರ ಕ್ಷೇತ್ರದಲ್ಲಿ ನಡೆಯುವುದು ಅನಿವಾರ್ಯ ಮತ್ತು ಶ್ರೇಷ್ಠ ಕೆಲಸವಾಗಲಿದೆ ಎಂದು ಆರೆಸ್ಸೆಸ್‌ ಸಹ ಸರಕಾರ್ಯವಾಹ ಮುಕುಂದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next