Advertisement

12 ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

06:06 AM Jan 18, 2019 | |

ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಕಣದಿಂದ ಬಿಜೆಪಿ ಹಿಂದೆ ಸರಿದ ಪರಿಣಾಮ 12 ಸ್ಥಾಯಿ ಸಮಿತಿಗಳಿಗೂ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು. 

Advertisement

ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್‌ನ ಇಬ್ಬರು ಬಂಡಾಯ ಸದಸ್ಯರ ಮನವೊಲಿಸುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ನಾಯಕರು ಯಶಸ್ವಿಯಾದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯಿಂದ ಬಿಜೆಪಿ ದೂರ ಉಳಿಯಿತು. ಹೀಗಾಗಿ ಯಾವುದೇ ಗೊಂದಲವಿಲ್ಲದೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಮೇಯರ್‌ ಕೊಠಡಿಯಲ್ಲಿ ಚುನಾವಣೆ ನಡೆಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ ಬಿಜೆಪಿ, ಮೇಯರ್‌ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಪಡೆದು ಅಧ್ಯಕ್ಷರಾಗುವ ಯೋಜನೆಯಲ್ಲಿದ್ದ ಜೆಡಿಎಸ್‌ ಸದಸ್ಯರು ಕೈಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯಿಂದ ಬಿಜೆಪಿ ದೂರ ಉಳಿಯಿತು.

ಆ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಅವರು ಮೊದಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಚುನಾವಣೆ, ಬಳಿಕ ಉಳಿದ 11 ಸಮಿತಿಗಳ ಚುನಾವಣೆ ನಡೆಸಿದರು. ಈ ವೇಳೆ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರು ಮಾತ್ರ ಸಭಾಂಗಣದಲ್ಲಿದ್ದರು. ಜತೆಗೆ ಕಳೆದ ಚುನಾವಣೆಯಲ್ಲಿ ಬಂಡಾಯವೆದ್ದ ಜೆಡಿಎಸ್‌ನ ಮಂಜುಳಾ ನಾರಾಯಸ್ವಾಮಿ ಹಾಗೂ ದೇವದಾಸ್‌ ಸಹ ಗೈರಾಗಿದ್ದರು.

ಮೇಯರ್‌ ಆದೇಶಕ್ಕೆ ಬೆಲೆಯಿಲ್ಲ: ಚುನಾವಣೆಯಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದೆಂಬ ಉದ್ದೇಶದಿಂದ ಮೇಯರ್‌ ಸ್ಥಾಯಿ ಸಮಿತಿ ಸದಸ್ಯರು, ಚುನಾವಣಾ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾವ ಜನಪ್ರತಿನಿಧಿಗಳೂ ಚುನಾವಣೆ ಪ್ರಕ್ರಿಯೆ ನಡೆಯುವ ಕೊಠಡಿ ಪ್ರವೇಶಿಸಬಾರದು ಎಂದು ಆದೇಶಿಸಿದ್ದರು. ಆದರೆ, ಗುರುವಾರ ಚುನಾವಣೆ ನಡೆಯುವ ವೇಳೆ ಕಾಂಗ್ರೆಸ್‌ ಶಾಸಕರು, ಸದಸ್ಯರ ಬೆಂಬಲಿಗರು ಚುನಾವಣೆ ನಡೆಯುವ ಸ್ಥಳ ಪ್ರವೇಶಿಸಿದ್ದು ಕಂಡುಬಂತು. 

Advertisement

ಬಯಸದೆ ಬಂದ ಭಾಗ್ಯ: ಮೇಯರ್‌ ಚುನಾವಣೆ ಸಂದರ್ಭದಲ್ಲಿ ನಡೆದ ಮಾತುಕತೆಯಂತೆ ಜೆಡಿಎಸ್‌ಗೆ 4, ಕಾಂಗ್ರೆಸ್‌ಗೆ 5 ಹಾಗೂ ಪಕ್ಷೇತರರಿಗೆ 3 ಸ್ಥಾಯಿ ಸಮಿತಿ ನೀಡುವ ಕುರಿತು ಒಪ್ಪಂದವಾಗಿತ್ತು. ಆದರೆ, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ನಡೆದ ನಾಟಕೀಯ ಬೆಳವಣಿಗಳಿಂದ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ನಾಮಪತ್ರ ವಾಪಸ್‌ ಪಡೆದ ಕಾರಣ ವಿಜ್ಞಾನನಗರ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ನಾಗರಾಜ್‌ ಅವರಿಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಒಲಿಯಿತು. ಆ ಮೂಲಕ ಈ ಬಾರಿ 6 ಸ್ಥಾಯಿ ಸಮಿತಿಗಳು ಕಾಂಗ್ರೆಸ್‌ ಪಾಲಾದವು.

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ನಿರೀಕ್ಷೆಯಂತೆ, ಯಾವುದೇ ಗೊಂದಲಗಳಿಲ್ಲದೆ ಸರಾಗವಾಗಿ ನಡೆದಿದೆ. 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಅವಿರೋಧ ಆಯ್ಕೆಯಾಗಿದೆ. 
-ಗಂಗಾಂಬಿಕೆ, ಮೇಯರ್‌

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಕಳೆದ 30 ವರ್ಷಗಳಲ್ಲಿ ಒಮ್ಮೆ ಕೂಡ ಚುನಾವಣೆ ನಡೆದಿಲ್ಲ. ಆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ಜತೆ ಚರ್ಚಿಸಿ ಚುನಾವಣೆ ಸರಾಗವಾಗಿ ನಡೆಯುವಂತೆ ಮಾಡಲಾಯಿತು.
-ರಾಮಲಿಂಗಾರೆಡ್ಡಿ, ಶಾಸಕ

ಪಕ್ಷದ ವರಿಷ್ಠರ ತೀರ್ಮಾನದಂತೆ ಚುನಾವಣೆಯಿಂದ ದೂರ ಉಳಿದಿದ್ದು, ಕಾಂಗ್ರೆಸ್‌-ಜೆಡಿಎಸ್‌ ಆಡಳಿತದ ಲೋಪವನ್ನು ಎತ್ತಿ ತೋರಿಸುವ ಉದ್ದೇಶದಿಂದ ಚುನಾವಣೆ ಬಹಿಷ್ಕರಿಸಿದ್ದೇವೆ.
-ಪದ್ಮನಾಭರೆಡ್ಡಿ, ಪ್ರತಿಪಕ್ಷ ನಾಯಕ 

ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರು
ಸಮಿತಿ    ಅಧ್ಯಕ್ಷರು

-ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ    ಎಸ್‌.ಪಿ.ಹೇಮಲತಾ (ಜೆಡಿಎಸ್‌)
-ಶಿಕ್ಷಣ    ಇಮ್ರಾನ್‌ ಪಾಷ (ಜೆಡಿಎಸ್‌)
-ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ    ಉಮೇಸಲ್ಮಾ (ಜೆಡಿಎಸ್‌)
-ತೋಟಗಾರಿಕೆ    ಬಿ.ಎನ್‌.ಐಶ್ವರ್ಯ (ಜೆಡಿಎಸ್‌)
-ನಗರ ಯೋಜನೆ ಮತ್ತು ಅಭಿವೃದ್ಧಿ    ಎಸ್‌.ಜಿ.ನಾಗರಾಜ್‌ (ಕಾಂಗ್ರೆಸ್‌)
-ಬೃಹತ್‌ ಸಾರ್ವಜನಿಕ ಕಾಮಗಾರಿ    ಲಾವಣ್ಯ ಗಣೇಶ್‌ರೆಡ್ಡಿ (ಕಾಂಗ್ರೆಸ್‌)
-ಲೆಕ್ಕಪತ್ರ    ಎಂ.ವೇಲುನಾಯಕರ್‌ (ಕಾಂಗ್ರೆಸ್‌)
-ಸಾಮಾಜಿಕ ನ್ಯಾಯ    ಪಿ.ಸೌಮ್ಯಾ (ಕಾಂಗ್ರೆಸ್‌)
-ಅಪೀಲು    ಸುಜಾತಾ ಡಿ.ಸಿ.ರಮೇಶ್‌ (ಕಾಂಗ್ರೆಸ್‌)
-ಮಾರುಕಟ್ಟೆ    ಫರೀದಾ ಇಸ್ತಿಯಾಕ್‌ (ಕಾಂಗ್ರೆಸ್‌)
-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ    ಎಸ್‌.ಆನಂದ್‌ (ಪಕ್ಷೇತರ)
-ಸಾರ್ವಜನಿಕ ಆರೋಗ್ಯ    ಎ.ಮುಜಾಹಿದ್‌ಪಾಷ (ಪಕ್ಷೇತರ)

Advertisement

Udayavani is now on Telegram. Click here to join our channel and stay updated with the latest news.

Next