Advertisement

12 ಕೋ.ರೂ.ವೆಚ್ಚದ ಕೆಎಸ್‌ಆರ್‌ಟಿಸಿ ತಂಗುದಾಣ;ನವ ಬೆಳ್ತಂಗಡಿ ಕಲ್ಪನೆಗೆ ಸಾರಿಗೆ ಸುವ್ಯವಸ್ಥೆ

03:13 PM Oct 21, 2022 | Team Udayavani |

ಬೆಳ್ತಂಗಡಿ: ಧಾರ್ಮಿಕ ಕ್ಷೇತ್ರ ಸಹಿತ ಪ್ರವಾಸಿ ತಾಣಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ದೂರದೃಷ್ಟಿ ಯೋಜನೆಯಾಗಿ ಇದೀಗ ಮತ್ತೂಂದು ಮೈಲಿಗಲ್ಲನ್ನೇ ಸಾಧಿಸಿದ್ದು, ಬೆಳ್ತಂಗಡಿ ಹೃದಯಭಾಗವಾದ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರಕಾರ ಈಗಾಗಲೇ 12 ಕೋ. ರೂ. ಅನುದಾನ ಮಂಜೂರುಗೊಳಿಸಿದೆ.

Advertisement

ಬೆಳ್ತಂಗಡಿ ಪಟ್ಟಣಕ್ಕೆ ಒಳಪಟ್ಟಂತೆ ಈಗಾಗಲೇ ಇರುವ ಬಸ್‌ ತಂಗುದಾಣ ಬಹಳಷ್ಟು ಕಿರಿದಾಗಿದೆ. ಪ್ರಸ್ತುತ ಇರುವ ಬಸ್‌ ನಿಲ್ದಾಣದ ಹಿಂದಿನ ಭಾಗ ಸೇರಿಸಿ ಒಟ್ಟು 1.20 ಎಕ್ರೆ ಜಾಗದಲ್ಲಿ ಬಸ್‌ ತಂಗುದಾಣ ನಿರ್ಮಾಣ ವಾಗಲಿದೆ. ಬೆಳ್ತಂಗಡಿ ತಾಲೂಕಿನ 81 ಗ್ರಾ.ಪಂ. ಗೆ ಒಳಪಟ್ಟಂತೆ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಳಪಟ್ಟ ಧರ್ಮಸ್ಥಳ ಕೇಂದ್ರವಾಗಿಸಿ ಕೆಎಸ್‌ಆರ್‌ಟಿಸಿ ಡಿಪೋ ಸಹಿತ ಬಸ್‌ ನಿಲ್ದಾಣ ವ್ಯವಸ್ಥೆ ಈ ಹಿಂದೆಯೇ ನಿರ್ಮಾಣವಾಗಿದೆ. ರಾಜ್ಯದ ಮೂಲೆ ಮೂಲೆಗೂ ಇಲ್ಲಿಂದ ಬಸ್‌ ಸಂಚರಿಸುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗ ನಿರತರು, ಜನಸಾಮಾನ್ಯರು ನಿತ್ಯ ಸಂಚರಿಸುವ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಯಾವುದೇ ಅಗತ್ಯ ಸೌಲಭ್ಯಗಳಿಲ್ಲ. ಈ ಎಲ್ಲ ಯೋಜನೆಗಳೊಂದಿಗೆ ಭವಿಷ್ಯದ ಬಸ್‌ ನಿಲ್ದಾಣವಾಗಿ 12 ಕೋ. ರೂ. ವೆಚ್ಚದ ಆಧುನಿಕ ಶೈಲಿಯ ಕಟ್ಟಡ ಮುಕುಟಪ್ರಾಯವಾಗಲಿದೆ.

ಕಂದಾಯ, ಪ.ಪಂ. ಜಮೀನು ಬಳಕೆ

ರಾಜ್ಯದಲ್ಲೇ ಪ್ರಥಮ ಬಾರಿಗೆ ಕಂದಾಯ, ಪ.ಪಂ. ಜಮೀನು ಬಳಸಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣಕ್ಕೆ ಜಾಗ ಹಸ್ತಾಂತರಿಸಿದ್ದು, ಇಲ್ಲಿವರೆಗೆ ಈ ಉದಾಹರಣೆಯಿಲ್ಲ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಎರಡು ಇಲಾಖೆಗೆ ಒಳಪಟ್ಟಂತೆ ಜಮೀನು ಒಟ್ಟುಗೂಡಿಸಿ 1.20 ಎಕ್ರೆ ಭೂಮಿ ಈಗಾಗಲೇ ಕೆ.ಎಸ್‌.ಆರ್‌.ಟಿ.ಸಿ.ಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೇನು ಅನುದಾನವೂ ಸರಕಾರ ಮಂಜೂರುಗೊಳಿಸಿದ್ದರಿಂದ ಕಾಮಗಾರಿಗೆ ಶೀಘ್ರವೇ ಶಿಲಾನ್ಯಾಸದ ಭಾಗ್ಯವೂ ದೊರೆಯಲಿದೆ.

ಜಿಲ್ಲೆ, ಹೊರ ಜಿಲ್ಲೆಗೆ ಬಸ್‌ ಸಂಚಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಲವಾರು ಭಾಗಗಳಿಂದ ಲಕ್ಷಾಂತರ ಭಕ್ತರು ಸಂದರ್ಶಿಸುತ್ತಾರೆ. ಹಾಗಾಗಿ ಜಿಲ್ಲೆ, ಹೊರ ಜಿಲ್ಲೆ, ರಾಜ್ಯದ ನಾನಾ ಊರುಗಳಿಗೆ ಸಂಪರ್ಕಿಸುವ ಬಸ್‌ಗಳು ಬೆಳ್ತಂಗಡಿಯಾಗಿ ಹಾದು ಹೋಗುತ್ತವೆ. ಇಲ್ಲಿನ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳಾದ ಮಹಿಳಾ ವಿಶ್ರಾಂತಿ ಕೊಠಡಿ, ತುರ್ತು ಚಿಕಿತ್ಸಾ ಸೌಲಭ್ಯ, ಪೊಲೀಸ್‌ ರಕ್ಷಣ ವ್ಯವಸ್ಥೆ, ಫೈರ್‌ ಸೇಫ್ಟಿ, ಸುಸಜ್ಜಿತ ಶೌಚಾಲಯ ಇವೆಲ್ಲದರ ಆವಶ್ಯಕತೆ ಮನಗಂಡು ನೂತನ ನಿಲ್ದಾಣ ರಚನೆಯಾಗಲಿದೆ.

Advertisement

ಪ್ರಸಕ್ತ ಬಸ್‌ ನಿಲ್ದಾಣದ ಜಾಗವು ಪ.ಪಂ. ಸೇರಿದ್ದಾಗಿದ್ದು ಇಲ್ಲಿ ಹಲವು ಬಾಡಿಗೆ ಅಂಗಡಿಕೋಣೆಗಳಿವೆ. ಅವುಗಳ ಸ್ಥಳಾಂತರಕ್ಕೆ ಮಾಲಕರಿಗೆ ನೋಟಿಸ್‌ ನೀಡಲಾಗಿದೆ. ಇವರಿಗೂ ಅಗತ್ಯ ಸೌಲಭ್ಯ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

ಸುಸಜ್ಜಿತ ನಿಲ್ದಾಣ: ಬೆಳ್ತಂಗಡಿಯ ದೂರದೃಷ್ಟಿ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ನೂತನ ಬಸ್‌ ನಿಲ್ದಾಣ ರಚನೆಗೆ ಸರಕಾರದ ಮುಂದೆ ಪ್ರಸ್ತಾವನೆ ಇಡಲಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರು 12 ಕೋ.ರೂ. ಅನುದಾನ ಒದಗಿಸಿದ್ದಾರೆ. ನವ ಬೆಳ್ತಂಗಡಿ ಕಲ್ಪನೆಗೆ ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತ ಹಾಗೂ ಭವ್ಯ ಬಸ್‌ ನಿಲ್ದಾಣ ಮುಕುಟಪ್ರಾಯವಾಗಲಿದೆ. –ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next