Advertisement

110 ಕೆ.ವಿ. ಸಬ್‌ಸ್ಟೇಷನ್‌ ಮಂಜೂರು

02:40 AM Jul 14, 2018 | Karthik A |

ಪುತ್ತೂರು: ಪುತ್ತೂರು ತಾಲೂಕಿಗೆ ಮತ್ತೂಂದು 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ ಮಂಜೂರಾತಿಗೊಂಡಿದೆ. ಕೈಕಾರ ಅಥವಾ ಒಳಮೊಗ್ರು ಗ್ರಾಮದ ಪುಂಡಿಕಾಯಿಯಲ್ಲಿ ನೋಡಿರುವ ಸರಕಾರಿ ಜಾಗಕ್ಕೆ ಕಂದಾಯ ಇಲಾಖೆ ಅನುಮತಿ ನೀಡಿದರೆ ಸಬ್‌ಸ್ಟೇಷನ್‌ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು  ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿ. (ಕವಿಪ್ರನಿನಿ) ಇದರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ್‌ ಪೈ ಅವರು ಹೇಳಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾ.ಪಂ. ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

Advertisement

ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಕೈಕಾರದಲ್ಲಿ ಬೇರೆ ಉದ್ದೇಶಕ್ಕೆ ಇರಿಸಲಾದ ಸರಕಾರಿ ಜಾಗವಿದೆ. ಈ ಕುರಿತು ಸರ್ವೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಎಂಜಿನಿಯರ್‌ ತಿಳಿಸಿದರು. ತಹಶೀಲ್ದಾರ್‌ ಅನಂತಶಂಕರ್‌ ಮಾತ ನಾಡಿ, ಕೈಕಾರದಲ್ಲಿ ಅಂತಹ ಜಾಗವಿರುವ ಕುರಿತು ಮಾಹಿತಿ ಇಲ್ಲ. ಇರುವುದು ಹೌದಾದಲ್ಲಿ ಕಂದಾಯ, ಸರ್ವೆ ಇಲಾಖೆ ಹಾಗೂ ಮೆಸ್ಕಾಂನವರು ತೆರಳಿ ಪರಿಶೀಲನೆ ನಡೆಸೋಣ ಎಂದರು.

ಶೀಘ್ರ ನಡೆದರೆ ಉತ್ತಮ
ಕೈಕಾರದಲ್ಲಿ ಜಾಗವಿಲ್ಲದಿದ್ದಲ್ಲಿ ಒಳಮೊಗ್ರು ಗ್ರಾಮದ ಪುಂಡಿಕೈಯಲ್ಲಿ ಮತ್ತೂಂದು ಜಾಗವಿದೆ. ಅದನ್ನೂ ಪರಿಶೀಲನೆ ನಡೆಸಬಹುದು. ಒಟ್ಟಿನಲ್ಲಿ ಈ ಪ್ರಕ್ರಿಯೆ ಶೀಘ್ರದಲ್ಲಿ ಆಗಬೇಕು. ಈಗಾಗಲೇ ವಿದ್ಯುತ್‌ ಎಚ್‌.ಟಿ. ಲೈನ್‌ ಹಾದುಹೋಗಿರುವ ಪ್ರದೇಶಲ್ಲಾದರೆ 12 ಕೋ.ರೂ. ವೆಚ್ಚದಲ್ಲಿ, ಇಲ್ಲದಿದ್ದರೆ ಸುಮಾರು 20 ಕೋ.ರೂ. ವೆಚ್ಚದಲ್ಲಿ ಸಬ್‌ ಸ್ಟೇಷನ್‌ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಪ್ರಶಾಂತ್‌ ಪೈ ಮಾಹಿತಿ ನೀಡಿದರು.

ಮಾಣಿ-ಮೈಸೂರು: ಹೆದ್ದಾರಿ ಸಮಸ್ಯೆ
ಮಾಣಿ -ಮೈಸೂರು ಹೆದ್ದಾರಿ ಹಸ್ತಾಂತರ ಪ್ರಕ್ರಿಯೆ ಏನಾಗಿದೆ? ಎಂದು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಪ್ರಶ್ನಿಸಿದರು. ಪುತ್ತೂರಿನಿಂದ ಅಮಿcನಡ್ಕ ತನಕ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಸಂಚಾರಕ್ಕೆ ಅಪಾಯಕಾರಿಯಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ಕೆ.ಆರ್‌.ಡಿ.ಸಿ.ಎಲ್‌. ಸಂಸ್ಥೆಯ ಅಧಿಕಾರಿ ಮಾತನಾಡಿ, ಶೀಘ್ರ ಹೆದ್ದಾರಿಯನ್ನು ಹಸ್ತಾಂತರ ಮಾಡಬೇಕಿರುವುದರಿಂದ ಕೊನೆಯ ಹಂತದ ಕಾಮಗಾರಿ ನಡೆಸುತ್ತಿದ್ದೇವೆ. ಮಳೆ ಕಡಿಮೆಯಾದ ಕೂಡಲೇ ಹೊಂಡ ಮುಚ್ಚುವ ಕಾರ್ಯ ನಡೆಸಲಾಗುವುದು ಎಂದರು.

ನಿಲ್ದಾಣದಲ್ಲಿ ಸಿಸಿ ಕೆಮರಾ ಅಳವಡಿಸಲು ಸೂಚನೆ
ಕೆ.ಎಸ್ಸಾ.ರ್ಟಿ.ಸಿ. ಬಸ್‌ ನಿಲ್ದಾಣದ ದೇವರ ಕಟ್ಟೆ ಸಮೀಪ  ಪಾರ್ಕಿಂಗ್‌ ಜಾಗದಲ್ಲಿ ಉಗುಳಿ ಗಲೀಜು ಮಾಡಲಾಗಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧ್ಯಕ್ಷರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಕುರಿತು ಗಮನಹರಿಸುತ್ತೇವೆ. ಎಚ್ಚರಿಕೆ ಬೋರ್ಡ್‌ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿ ಭರವಸೆ ನೀಡಿದರು. ಸಿ.ಸಿ. ಕೆಮರಾ ಅಳವ ಡಿಸಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು.

Advertisement

ತಾಲೂಕಿನಲ್ಲಿ 185 ಶಿಕ್ಷಕರ ಕೊರತೆ
ಪುತ್ತೂರು ಶಿಕ್ಷಣ ಇಲಾಖೆ ವ್ಯಾಪ್ತಿಯ ಶಾಲೆಗಳಲ್ಲಿ 1ರಿಂದ 10ನೇ ತರಗತಿ ತನಕ ಒಟ್ಟು 47,616 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ತಾಲೂಕಿ ನಲ್ಲಿ 185 ಶಿಕ್ಷಕರ ಕೊರತೆಯಿದ್ದು, 116 ಗೌರವ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಈಗಾಗಲೇ 100 ಶಿಕ್ಷಕರು ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ವಿಷ್ಣುಪ್ರಸಾದ್‌ ಮಾಹಿತಿ ನೀಡಿದರು.

ಸಮವಸ್ತ್ರದ ಕಥೆ ಏನು?
ಮಕ್ಕಳ ಸಮವಸ್ತ್ರ ಯಾವಾಗ ವಿತರಣೆಯಾಗುತ್ತದೆ ಎಂದು ಅಧ್ಯಕ್ಷರು ಪ್ರಶ್ನಿಸಿದರು. 2ನೇ ಹಂತದ ಸಮವಸ್ತ್ರ ಇನ್ನೂ ಬಂದಿಲ್ಲ. ಇಷ್ಟು ವರ್ಷಗಳಲ್ಲಿ ಮೇ ತಿಂಗಳಿನಲ್ಲೇ ಸಮವಸ್ತ್ರ ಪೂರೈಕೆಯಾಗುತ್ತಿತ್ತು. ಈ ಬಾರಿ ರಾಜ್ಯದ 10 ಜಿಲ್ಲೆಗಳಿಗೆ ಮಾತ್ರ ಪೂರೈಕೆಯಾಗಿದೆ. ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿ ಹೇಳಿದರು.

ಕೈತೋಟಕ್ಕೆ ಶಾಲೆಗಳಿಗೆ ಗಿಡ
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಮಾತನಾಡಿ, ಶಾಲೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಅಕ್ಷರ ಕೈತೋಟಕ್ಕೆ ಯಾವ ಶಾಲೆಗಳಿಗೆ ಯಾವ ಗಿಡಗಳು ಬೇಕು ಎನ್ನುವ ಪಟ್ಟಿಯನ್ನು ಸೋಮವಾರದೊಳಗೆ ನೀಡಲು ಶಿಕ್ಷಕರಿಗೆ ಸೂಚಿಸಲಾಗಿದೆ. ಅದನ್ನು ಪೂರೈಕೆ ಮಾಡಲು ಕೃಷಿ ಇಲಾಖೆ ಮುಂದಾಗಬೇಕು. ಗಿಡಗಳು ಇಲ್ಲದಿದ್ದಲ್ಲಿ ನರ್ಸರಿಗಳಿಂದ ತೆಗೆದುಕೊಂಡು ನೀಡಬೇಕು ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.

ಪ್ರಮುಖಾಂಶ ಇಂತಿದೆ…
– ಸಾಲ ಮನ್ನಾ ಎಷ್ಟು ಮಂದಿಗೆ ಪ್ರಯೋಜನವಾಗಿದೆ ಎನ್ನುವ ಕುರಿತು ಮಾಹಿತಿಯನ್ನು ಮುಂದಿನ ಸಭೆಗೆ ನೀಡುವಂತೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಇ.ಒ. ಸೂಚಿಸಿದರು.

– ನಗರಸಭೆ ಎಪಿಎಂಸಿ ರಸ್ತೆಯಿಂದ ಬಸ್‌ ನಿಲ್ದಾಣಕ್ಕೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ತಡೆಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಅಧ್ಯಕ್ಷರು ಸೂಚಿಸಿದರು.

– ತಾಲೂಕಿನಲ್ಲಿ 339 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next