Advertisement

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

01:13 AM Jun 15, 2024 | Team Udayavani |

ಬೆಂಗಳೂರು: ಖಾಸಗಿ ವಲಯದ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಂಪೂರ್ಣ ಮೀಸಲಾತಿ ಕಲ್ಪಿಸುವುದು ಹಾಗೂ ಅಂಗವಿಕಲರಿಗೆ ಶೇ. 5ರಷ್ಟು ಮೀಸಲು ಕಲ್ಪಿಸುವುದಕ್ಕೆ ಕಾರ್ಮಿಕ ಇಲಾಖೆ ಮತ್ತೊಮ್ಮೆ ಮುಂದಾಗಿದೆ.

Advertisement

ಈ ವಿಷಯಕ್ಕೆ ಸಂಬಂಧಿಸಿ “ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ನಿಯಮ -2024′ ರೂಪಿಸುವ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಗುರುವಾರ ಇಲಾಖಾಧಿಕಾರಿಗಳ ಜತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕೂಡ ಈ ದಿಶೆಯಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅನೇಕ ಕಾರಣಗಳಿಂದ ಅದು ಜಾರಿಯಾಗಿರಲಿಲ್ಲ. ಈಗ ಸರಕಾರ ಹಳೇ ಪ್ರಯತ್ನ ಜಾರಿಗೆ ಮತ್ತೆ ಕೈ ಹಾಕಿದೆ.

ಸರೋಜಿನಿ ಮಹಿಷಿ ವರದಿಯನ್ನು ಇಲ್ಲಿಯವರೆಗೆ ನೀತಿಯಾಗಿ ಪರಿಗಣಿಸಲಾಗಿದೆ. ಇದರ ಆಧಾರದ ಮೇಲೆಯೇ ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡುವ ಬಗ್ಗೆ ದಶಕಗಳಿಂದ ಚರ್ಚೆಯಲ್ಲಿದೆ. ಮೀಸಲಾತಿಯನ್ನು ಕಡ್ಡಾಯಗೊಳಿಸಬೇಕಿದ್ದರೆ ನಿಯಮ ತಿದ್ದುಪಡಿ ಮಾಡಬೇಕು. ಅದಕ್ಕೆ ಸಚಿವ ಸಂಪುಟದ ಒಪ್ಪಿಗೆಯೂ ಕಡ್ಡಾಯ. ಆದರೆ 50ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಖಾಸಗಿ ಸಂಸ್ಥೆಗಳಿಗೂ ಇದನ್ನು ಅನ್ವಯಿಸಲು ಕಾರ್ಮಿಕ ಇಲಾಖೆ ಮುಂದಾಗಿರುವುದರಿಂದ ಸಚಿವ ಸಂಪುಟದ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಇದರ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರಕಾರದ ಅಂತರ್‌ ಇಲಾಖಾ ಮಟ್ಟದಲ್ಲೇ ಅನುಮಾನಗಳು ಎದ್ದಿವೆ ಎನ್ನಲಾಗಿದೆ. ಆದರೆ ಸಿಎಂ ಕಾರ್ಯಾಲಯ, ಕಾನೂನು-ಸಂಸದೀಯ ವ್ಯವಹಾರಗಳ ಸಚಿವಾಲಯದ‌ ಮೂಲಗಳ ಪ್ರಕಾರ ಸದ್ಯಕ್ಕೆ ಸರಕಾರ ಅಂಥ ಯಾವುದೇ ಮಸೂದೆ ಜಾರಿಗೆ ತರುವ ತರಾ ತುರಿಯಲ್ಲಿ ಇಲ್ಲ ಎಂದು ತಿಳಿದು ಬಂದಿದೆ.

ಸರಕಾರದ ಉನ್ನತ ಮೂಲಗಳ ಪ್ರಕಾರ ಆದರ್ಶವಾಗಿ ಕಾರ್ಮಿಕ ಇಲಾಖೆ ಇಂಥ ನಿಯಮ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ವಾಸ್ತವವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ನಡಿಗರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನಿಯಮ ರೂಪಿಸಿದರೂ ಅಖೀಲ ಭಾರತ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಇದರಲ್ಲಿ ಸಂವಿಧಾನಾತ್ಮಕ ವಿಚಾರಗಳೂ ಅಡಕವಾಗಿರುವುದರಿಂದ ತರಾತುರಿಯಲ್ಲಿ ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ. ನಿಯಮ ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದರೂ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ.

ಸದ್ಯಕ್ಕೆ ನಮ್ಮ ಇಲಾಖೆ ವರೆಗೆ ಈ ಚರ್ಚೆ ಬಂದಿಲ್ಲ. ಸಿ ಮತ್ತು ಡಿ ದರ್ಜೆಯ ಹೊರಗುತ್ತಿಗೆ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲು ವ್ಯವಸ್ಥೆ ಕಲ್ಪಿಸುವ ಮಸೂದೆ ಮಾತ್ರ ನಮ್ಮ ಮುಂದಿದ್ದು, ಮುಂದಿನ ಅಧಿವೇಶನದಲ್ಲಿ ಅ ಮಂಡನೆಯಾಗಲಿದೆ ಎಂದು ಕಾನೂನು ಇಲಾಖೆ ಮೂಲಗಳು ಹೇಳಿವೆ.

Advertisement

ಸಚಿವ ಲಾಡ್‌ ವಾದವೇನು?
ಇಲಾಖಾ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಈ ವಿಷಯದಲ್ಲಿ ದೃಢ ನಿಲುವು ಪ್ರಕಟಿಸಿದ್ದಾರೆ. ಪ್ರತಿಯೊಂದು ಕೈಗಾರಿಕೆಗೂ ಸರಕಾರದಿಂದ ಒಂದಲ್ಲ ಒಂದು ರೀತಿಯ ಪ್ರಯೋಜನ ಸಿಗುತ್ತಿದೆ. ತೆರಿಗೆ ರಿಯಾಯಿತಿಗಳಲ್ಲದೆ ಭೂಮಿ ಖರೀದಿ, ನೀರು, ವಿದ್ಯುತ್‌ ಪೂರೈಕೆಯಲ್ಲಿ ರಿಯಾ ಯಿತಿ ನೀಡಲಾಗುತ್ತಿದೆ. ಕನ್ನಡಿಗರಿಗೆ ಶೇ. 100ರಷ್ಟು ಉದ್ಯೋಗ ಮೀಸಲಾತಿಗಾಗಿ ಹಿಂದಿನಿಂದಲೂ ಬೇಡಿಕೆ ಇದೆ. 2019ರಲ್ಲಿ ಸ್ಥಾಯೀ ಆದೇಶದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ಬಾರಿ ನಿಯಮ ರೂಪಿಸುವ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಕ್ಕೆ ಸಿದ್ಧತೆ ನಡೆಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next