Advertisement

19 ಲಕ್ಷ ರೂ. ವಿವೇಚನಾ ನಿಧಿ ಬಳಕೆಗೆ ಒಪ್ಪಿಗೆ

04:11 PM Feb 13, 2021 | Team Udayavani |

ಚಿಕ್ಕಮಗಳೂರು: ಜಿಪಂಗೆ ಸರ್ಕಾರ ಬಿಡುಗಡೆ ಮಾಡಿರುವ 19 ಲಕ್ಷ ರೂ. ಹಣ ಜಿಪಂ ಉಪಾಧ್ಯಕ್ಷರ ವಿವೇಚನಾ ನಿಧಿ ಬಳಕೆಗೆ ಜಿಪಂ ಸರ್ವಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

Advertisement

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಪ್ರಾರಂಭದಲ್ಲಿ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಜಿಪಂಗೆ ಸರ್ಕಾರ 19 ಲಕ್ಷ ರೂ. ನೀಡಿದ್ದು ಸರ್ಕಾರ ಯಾವುದೇ ಮಾರ್ಗಸೂಚಿ ನೀಡಿಲ್ಲವೆಂದು ತಿಳಿಸಿದರು.

19ಲಕ್ಷ ರೂ. ಹಣ ಕೆ-2ರಡಿಯಲ್ಲಿ ಬಿಡುಗಡೆಯಾಗಿದ್ದು, ಹಣ ಬಳಕೆಯ ಬಗ್ಗೆ ಸರ್ಕಾರ ಯಾವುದೇ  ಮಾರ್ಗಸೂಚಿ ನೀಡಿಲ್ಲವೆಂದು ಜಿಪಂ ಸಿಇಒ ಎಸ್‌.ಪೂವಿತಾ ಹೇಳಿದರು.

ಜಿಪಂ ಉಪಾಧ್ಯಕ್ಷ ಸೋಮಶೇಖರ್‌ ಮಾತನಾಡಿ, ಜಿಪಂ ಉಪಾಧ್ಯಕ್ಷರಿಗೆ ಅವರ ವಿವೇಚನೆಗೆ ಇದುವರೆಗೂ  ಹಣ ನೀಡಲಾಗಿದೆ. ನನ್ನ ಅವ ಧಿಯಲ್ಲಿ ಯಾವುದೇ ಹಣ ನೀಡಿಲ್ಲ. ಈಗಾಗಲೇ ಕ್ರಿಯಾಯೋಜನೆ ನೀಡಿದ್ದು ಹಣಬಳಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಜಿಪಂ ಸದಸ್ಯ ಸದಾಶಿವ ಪಿ.ರಾಘವನ್‌ ಮಾತನಾಡಿ, ಹಣವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷರ ವಿವೇಚನೆಗೆ ನೀಡಲು ಜಿಪಂ ಸದಸ್ಯರಾದ ಆನಂದಪ್ಪ, ಮಹೇಶ್‌ ಒಡೆಯರ್‌ ಸಮ್ಮತಿ ಸೂಚಿಸಿದರು.

Advertisement

ಜಿಪಂ ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿ, ಎಲ್ಲಾ ತಾಲೂಕುಗಳಿಗೆ ಹಣ ಹಂಚಿಕೆ ಮಾಡಿದರೆ 50 ಸಾವಿರ ಬರುತ್ತದೆ. ಈ ಹಣದಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ಹಣದ ವಿನಿಯೋಗ ಅಧ್ಯಕ್ಷರ ವಿವೇಚನೆಗೆ ನೀಡಬೇಕು ಒತ್ತಾಯಿಸಿದರು.

ಹಣ ಬಳಕೆ ಉಪಾಧ್ಯಕ್ಷರ ವಿವೇಚನೆಗೆ ಒಳಪಡಿಸಲು ಕೆಲವರು ಸಮ್ಮತಿಸಿದರೆ ಹಣಬಳಕೆ ವಿಷಯವನ್ನು ಮತಕ್ಕೆ ಹಾಕುವಂತೆ ತಿಳಿಸಿದರು. ತುರ್ತು ಕೆಲಸಗಳಿದ್ದಲ್ಲಿ ಅಂತಹ ಸದಸ್ಯರು ಮನವಿ ಮಾಡಿದರೆ ಹಣ ನೀಡುವುದಾಗಿ ಉಪಾಧ್ಯಕ್ಷ ಸೋಮಶೇಖರ್‌ ಭರವಸೆ ನೀಡಿದರು.

ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಲಕ್ಯಾ ಹೋಬಳಿ ಅನೇಕ ವರ್ಷಗಳಿಂದ ಬರಕ್ಕೆ ಸಿಲುಕಿದೆ. ಇದು ಹೋಬಳಿ ಕೇಂದ್ರವಾದರೂ ನಾಡಕಚೇರಿ ಇಲ್ಲ, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಖರಾಯಪಟ್ಟಣ, ಲಕ್ಯಾ ಕೆಲವು ಪ್ರದೇಶಗಳನ್ನು ಸೇರಿಸಿ ಹೊಸ ತಾಲೂಕು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಸಮಯಕ್ಕೆ ಸರಿಯಾಗಿ ಕಡತಗಳು ಜಿಲ್ಲಾ ಖಜಾನೆಗೆ ಹೋದರೂ ನಿಗದಿತ ಸಮಯಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಈ ಸಂಬಂಧ ಅಧಿ ಕಾರಿಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿ ಸುತ್ತಿಲ್ಲ. ಕಡತಗಳ ಹಣವನ್ನು ಜಿಲ್ಲಾ ಖಜಾನೆ ಇನ್ನೂ ಬಿಡುಗಡೆಗೊಳಿಸಿಲ್ಲವೆಂದು ಜಿಪಂ ಸಿಒಇ ಎಸ್‌. ಪೂವಿತಾ ಸಭೆಗೆ ತಿಳಿಸಿದರು. ಜಿಪಂ 30:54 ಯೋಜನೆಯಡಿಯ 4.86 ಕೋಟಿ ರೂ. ಮತ್ತು ಅಂಗವಿಕಲರಿಗೆ ಮೀಸಲಿಟ್ಟಿರುವ ಉಳಿಕೆ ಹಣ 11.80 ಲಕ್ಷ ರೂ.ಗಳನ್ನು ಆಶಾಕಿರಣ ಅಂಧಮಕ್ಕಳ ಶಾಲೆಗೆ ಕಾಂಪೌಂಡ್‌ ನಿರ್ಮಾಣಕ್ಕೆ ಉಪಯೋಗಿಸಲು ಸರ್ವಸದಸ್ಯರು ಸಭೆಯಲ್ಲಿ ಒಪ್ಪಿಗೆ ನೀಡಿದರು. ಹಡಗಲು ಗ್ರಾಮಕ್ಕೆ ಶುದ್ಧಗಂಗಾ ಘಟಕ ಮಂಜೂರು ಮಾಡಿಕೊಂಡುವಂತೆ ಅ ಧಿಕಾರಿಗಳಿಗೆ ಪತ್ರ ಬರೆದು ಇಂಕು ಖಾಲಿಯಾಯ್ತೆ ಹೊರತು ಸಮಸ್ಯೆ ಪರಿಹಾರವಾಗಿಲ್ಲ ಎಂದು ಚೌಳಿಹಿರಿಯೂರು ಕ್ಷೇತ್ರದ ಸದಸ್ಯೆ ವನಮಾಲಾ ದೇವರಾಜ್‌ ತಿಳಿಸಿದರು.

5 ಶುದ್ಧಗಂಗಾ ಘಟಕವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು, ಅದರಲ್ಲಿ 4 ಮಂಜೂರಾಯ್ತು, 1 ಬೇರೆ ಕಡೆ ಹೋಯ್ತು, ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ಶುದ್ಧಗಂಗಾ ಘಟಕ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ : ಚಿರತೆ ಸಾವು

ಸಿಇಒ ಎಸ್‌. ಪೂವಿತಾ ಮಾತನಾಡಿ, ಬೇರೆ ಊರುಗಳಿಗೆ ಅನವಶ್ಯಕವಾಗಿರುವ ಘಟಕವನ್ನು ಹಡಗಲು  ಗ್ರಾಮಕ್ಕೆ ವಾರದೊಳಗೆ ಸ್ಥಳಾಂತರಿಸಲಾಗುವುದು ಎಂದರು.

ವನಮಾಲಾ ದೇವರಾಜ್‌ ಮಾತನಾಡಿ, ಈ ತಿಂಗಳ ಅಂತ್ಯದವರೆಗೂ ಕಾಯುವೆ. ಸ್ಥಳಾಂತರವಾಗದಿದ್ದರೆ ಗ್ರಾಮಸ್ಥರೊಂದಿಗೆ ಆಗಮಿಸಿ ಜಿಪಂ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್‌. ಸುರೇಶ್‌, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ಅವಿನಾಶ್‌, ಸುಧಾ ಯೋಗೀಶ್‌, ಮಹೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next