Advertisement

ಪನ್ನೆಯ 2 ಕುಟುಂಬಗಳಿಗೆ ಸೌಕರ್ಯ ಸೊನ್ನೆ

12:05 AM Aug 03, 2019 | mahesh |

ಸುಬ್ರಹ್ಮಣ್ಯ: ಹರಕು ಮುರುಕಲು ಪ್ಲಾಸ್ಟಿಕ್‌ ಹೊದಿಕೆ. ಮಳೆ ಬಂದರೆ ಸೋರುವ ಬಿಡಾರ. ಕತ್ತಲಾಗುತ್ತಿದ್ದಂತೆ ಪಕ್ಕದ ಪೊದೆಗಳಿಂದ ಬರುವ ವಿಷ ಜಂತುಗಳ ಹಾವಳಿ, ಭಾರೀ ಗಾಳಿ – ಮಳೆ ಬಂದರಂತೂ ತಪ್ಪದ ಜಾಗರಣೆ. ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದ ಪುಟ್ಟ ಹಳ್ಳಿಯೊಂದರ ಎರಡು ಬಡ ಕುಟುಂಬಗಳ ಬವಣೆಯಿದು.

Advertisement

ದಶಕಗಳಿಂದ ವಾಸ್ತವ್ಯ
ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದ ಪನ್ನೆ ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಎರಡು ಕುಟುಂಬಗಳು ಹಲವು ದಶಕಗಳಿಂದ ವಾಸವಾಗಿವೆ. ಈ ಕುಟುಂಬಗಳು ಇಂದಿಗೂ ಮೂಲ ಸೌಕರ್ಯವಿಲ್ಲದೆ ದಿನ ದೂಡುತ್ತಿವೆ.

ಕಾಳಿ (80) ಎಂಬ ವೃದ್ಧೆ ತನ್ನ ಕುಟುಂಬದ ಜತೆ ವಾಸವಾಗಿದ್ದಾರೆ. ಪಕ್ಕದಲ್ಲೆ ಮಗ ಚಂದ್ರಶೇಖರ್‌ ಕುಟುಂಬದ ಮನೆಯಿದೆ. ಇವೆರಡೂ ಮನೆಗಳಿಗೆ ದಶಕಗಳಿಂದ ಮೂಲಸೌಕರ್ಯವಿಲ್ಲ.

ಈ ಕುಟುಂಬಗಳಲ್ಲಿ ಎಳೆಯ ವಯಸ್ಸಿನ ಮಕ್ಕಳು, ವೃದ್ಧೆ, ಪುರುಷರು, ಮಹಿಳೆಯರು ಸಹಿತ 10ಕ್ಕೂ ಅಧಿಕ ಜನರಿದ್ದಾರೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳೂ ಇದ್ದಾರೆ. ಮಳೆಗಾಲದಲ್ಲಿ ಒಳನುಗ್ಗುವ ಮಳೆ ನೀರು ಇವರ ನಿದ್ದೆಗೆಡಿಸುತ್ತಿದೆ.

ಬೆಳಕು ಕಂಡಿಲ್ಲ
ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸುತ್ತ ಬಂದಿ ದ್ದಾರೆ. ಚುನಾವಣೆ ಬಂದಾಗಳೆಲ್ಲ ಇವರ ಮನೆ ಬಾಗಿಲು ಬಡಿದಿದ್ದಾರೆ. ಆವಾಗೆಲ್ಲ ನಿವಾಸಿಗಳು ಸಮಸ್ಯೆಯನ್ನು ಅವರ ಬಳಿ ಹೇಳಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸುವ ಭರವಸೆಗಳು ದೊರೆತಿವೆ. ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಕುಟುಂಬಗಳಿಗೆ ಇನ್ನೂ ಬೆಳಕು ಹರಿದಿಲ್ಲ. ಸಮಸ್ಯೆ ಸುಧಾರಿಸಬಹುದೆಂಬ ಬಹುದಿನಗಳ ಕನಸು ಇನ್ನೂ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

Advertisement

ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರ ಸ್ಥಿತಿಗತಿ ಏನಾಗಿದೆ ಎನ್ನುವುದೇ ಇವರಿಗೆ ತಿಳಿದಿಲ್ಲ. ಪಡಿತರ ಚೀಟಿ ಹೊರತುಪಡಿಸಿದರೆ ಬೇರಾವ ಸೌಕರ್ಯವೂ ಈ ಕುಟುಂಬಕ್ಕೆ ಇಲ್ಲ. ಕುಡಿಯುವ ನೀರೇನೋ ಬರುತ್ತಿದೆ. ಆದರೆ ಬಟ್ಟೆ ಒಗೆಯಲು, ಸ್ನಾನಕ್ಕೆ ಸಮೀಪದ ಹೊಳೆಗೆ ಅಥವಾ ಇನ್ಯಾರದೋ ಮನೆಯನ್ನು ಅಶ್ರಯಿಸಬೇಕು.

ದಾಖಲೆಗಳು ಸರಿಯಿಲ್ಲ
ರಸ್ತೆಗೆ ಹೊಂದಿಕೊಂಡೇ ಮನೆಗಳಿವೆ. ನಿತ್ಯವೂ ಅಧಿಕಾರಿ ಸಹಿತ ಜನಪ್ರತಿನಿಧಿಗಳು ಇವರ ಮನೆ ಮುಂದೆಯೇ ತೆರಳುತ್ತಿರುತ್ತಾರೆ. ಮನೆಗಳಿಗೆ ಯಾವುದೇ ಸೌಕರ್ಯಗಳಿಲ್ಲ. ಕಾಲನಿಯಲ್ಲಿ ಶೌಚಾಲಯವಿದ್ದರೂ ಅದು ಸೂಕ್ತವಾಗಿಲ್ಲ.

ನೀರು, ವಿದ್ಯುತ್‌ ವ್ಯವಸ್ಥೆ ಆಗಿಲ್ಲ. ಈ ಮನೆಗಳಿಗೆ ಹಕ್ಕುಪತ್ರವೇ ದೊರಕಿಲ್ಲ. ಇದಕ್ಕೆಲ್ಲ ಕಾರಣ ಏನು ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ಬಳಿ ಕೇಳಿದರೆ, ಕುಟುಂಬದ ದಾಖಲೆಗಳು ಸರಿಯಿಲ್ಲ. ಮನೆ ತೆರಿಗೆ ಅವರ ಹೆಸರಲ್ಲಿಲ್ಲ. ಮನೆ ನಂಬ್ರ ಕೂಡ ಇಲ್ಲ ಎನ್ನುವ ಉತ್ತರ ಬರುತ್ತಿದೆ. ಹೀಗಾಗಿ ಈ ಎರಡು ಕುಟುಂಬಗಳು ಸರಕಾರದ ಎಲ್ಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸರಕಾರ, ಸ್ಥಳೀಯಾಡಳಿತ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಎಲ್ಲರಿಗೂ ಸೂರು ಎನ್ನುವ ಘೋಷಣೆ ಆಗುತ್ತದೆ. ಆದರೆ, ಈ ಕುಟುಂಬಗಳು ಜೋಪಡಿಯಲ್ಲೇ ಇರುಳು ಕಳೆಯುತ್ತಿವೆ.

ಸೂರು, ನೀರು, ವಿದ್ಯುತ್‌ ಸೌಲಭ್ಯ ಸಿಗಬೇಕು
ಸೌಲಭ್ಯ ದೊರೆಯುತ್ತದೆ ಎನ್ನುವ ಆಶಾಭಾವನೆ ಇತ್ತು. 94 ಸಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದೆವು. ಅದು ಆದಾರೂ ದೊರೆಯಬಹುದೆಂದು ನಂಬಿದ್ದೆವು. ಈಗ ಬದುಕಿನ ಭರವಸೆ ಕಳಕೊಂಡಿದ್ದೇವೆ ಎನ್ನುತ್ತಿದ್ದಾರೆ ಕುಟುಂಬದ ಸದಸ್ಯರು. ಎರಡೂ ಮನೆಗಳಲ್ಲಿ ಛಾವಣಿಗೆ ಟಾರ್ಪಲ್ ಹೊದೆಸಲಾಗಿದೆ. ಮಣ್ಣಿನಿಂದ ನಿರ್ಮಿಸಿದ ಗೋಡೆಗಳು ಬಿರುಕು ಬಿಟ್ಟಿವೆ. ಛಾವಣಿಯ ಮೂಲಕ ನೋಡಿದರೆ ನಕ್ಷತ್ರಗಳನ್ನು ಎಣಿಸಬಹುದು. ಇಂತಹ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸೂರು, ನೀರು ಹಾಗೂ ವಿದ್ಯುತ್‌ ಸೌಲಭ್ಯ ಸಿಗಬೇಕಿದೆ.

ಪರಿಶೀಲಿಸಿ ಕ್ರಮ
ತರಬೇತಿ ನಿಮಿತ್ತ ಹೊರಭಾಗದಲ್ಲಿ ಇದ್ದೇನೆ. ಸೌಕರ್ಯ ವಂಚಿತ ಆ ಎರಡು ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಲು ಇರುವ ತೊಡಕು ಮತ್ತು ಅವರಿಗೆ ಒದಗಿಸಬಹುದಾದ ಪರಿಹಾರ ಇತ್ಯಾದಿ ಕ್ರಮಗಳ ಬಗ್ಗೆ ಸೋಮವಾರ ಕಚೇರಿಗೆ ಬಂದು ಪರಿಶೀಲಿಸಿ, ಮುಂದಿನ ನಿರ್ಧಾರ ತಿಳಿಸುತ್ತೇನೆ.
– ಕುಂಞಿ ಅಹಮ್ಮದ್‌ ತಹಶೀಲ್ದಾರ್‌, ಸುಳ್ಯ

ದಾಖಲೆ ಪತ್ರಗಳಿಲ್ಲ
ಹಕ್ಕುಪತ್ರಕ್ಕಾಗಿ ಎರಡೂ ಕುಟುಂಬಗಳು ಅರ್ಜಿ ಸಲ್ಲಿಸಿದ್ದವು. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಅಡಿಸ್ಥಳ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹಕ್ಕುಪತ್ರ ನಿರಾಕರಿಸಿದರು. ಈ ಎಲ್ಲ ಸಮಸ್ಯೆಗಳಿಂದ ಅವರಿಗೆ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. –
ಯಶವಂತ ಬಾಳುಗೋಡು ವಾರ್ಡ್‌ ಸದಸ್ಯ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next