Advertisement

ಹಾವೇರಿ ಜಿಲ್ಲಾದ್ಯಂತ ಯುಗಾದಿ ಸಂಭ್ರಮ

07:58 PM Apr 15, 2021 | Team Udayavani |

ಹಾವೇರಿ: ಕೋವಿಡ್ ಭೀತಿಯ ನಡುವೆಯೂ ಜಿಲ್ಲಾದ್ಯಂತ ಹಿಂದೂಗಳ ಹೊಸ ವರ್ಷ ಚಂದ್ರಮಾನ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಹಬ್ಬದ ನಿಮಿತ್ತ ಮನೆಯನ್ನು ಸ್ವತ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಮೆರಗುಗೊಳಿಸಿದ್ದರು.

Advertisement

ಹಬ್ಬದ ನಿಮಿತ್ತ ಮನೆಯ ಎದುರಿನ ಬಾಗಿಲು, ದೇವರ ಮನೆಯ ಬಾಗಿಲಿಗೆ ಮಾವಿನ ಎಲೆಗಳ ಹಾರ, ತಳಿರು ತೋರಣ ಹಾಕಿ ಹೂವಿನ ಅಲಂಕಾರ ಮಾಡಲಾಗಿತ್ತು. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದ ಸೇವಿಸಿದರು. ಹೊಸ ವರ್ಷದ ಮೊದಲ ದಿನ ತಮ್ಮ ಹೊಲಗಳಲ್ಲಿ ಉಳುಮೆ ಕಾರ್ಯ ಮಾಡಿದರೆ ವರ್ಷಪೂರ್ತಿ ಉತ್ತಮವಾದ ಮಳೆ ಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ರೈತರು ಹೊಸ ಬಟ್ಟೆ ಧರಿಸಿ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಆಶೀರ್ವಾದ ಪಡೆದು ಬಳಿಕ ಹೊಲಗಳಿಗೆ ಹೋಗಿ ಹಣ್ಣು-ಕಾಯಿ ಒಡೆದು, ಪೂಜೆ ಸಲ್ಲಿಸಿ ನೇಗಿಲು ಹೊಡೆದರು.

ರೈತರು ತಮ್ಮ ಸಂಗಾತಿ ಎತ್ತುಗಳನ್ನು ಶೃಂಗರಿಸಿ ಅವುಗಳೊಂದಿಗೆ ಹೊಲಗಳಿಗೆ ತೆರಳಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಮನೆಗಳಲ್ಲಿ ಎಲ್ಲರೂ ಇಡೀ ದೇಹಕ್ಕೆ ಎಣ್ಣೆ ಹಚ್ಚಿಕೊಂಡು, ಬೇವಿನಸೊಪ್ಪು ಹಾಕಿ ಕುದಿಸಿದ ನೀರಿನಲ್ಲಿ ಸ್ನಾನ ಮಾಡಿದ ನಂತರ ಬೇವು-ಬೆಲ್ಲ ಸೇವಿಸಿದರು. ಹೋಳಿಗೆ ಮುಂತಾದ ಮೃಷ್ಟಾನ್ನ ಭೋಜನ ತಯಾರಿಸಿ ಸಾಮೂಹಿಕವಾಗಿ ಮನೆಗಳಲ್ಲಿ ಕುಳಿತು ಸವೆದರು. ಚಂದ್ರ ದರ್ಶನ: ಹೊಸ ಬಟ್ಟೆಗಳನ್ನು ಧರಿಸಿ ಸಂಜೆ ಚಂದ್ರದರ್ಶನ ಮಾಡಿ ಪುನೀತ ಭಾವದಿಂದ ನಮನ ಸಲ್ಲಿಸಿದರು.

ಚಂದ್ರ ದರ್ಶನವಾಗುತ್ತಲೇ ಮಹಿಳೆಯರು ಮನೆಯ ಅಂಗಳದಲ್ಲಿ ದೀಪ ಹಚ್ಚಿ ಚಂದ್ರನಿಗೆ ಪೂಜೆ ಸಲ್ಲಿಸಿ, ಹಣ್ಣು, ಕಾಯಿ ಹಾಗೂ ನೈವೇದ್ಯ ಸಲ್ಲಿಸಿದರು. ಬಳಿಕ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಬಾಳು ಸಿಹಿಯಾಗಿರಲಿ ಎಂದು ಬೇವು-ಬೆಲ್ಲ ಹಂಚಿ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನಗಳಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ರಸ್ತೆಯಲ್ಲಿ ಎದುರಾದ ಗೆಳೆಯರಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಹಿರಿಯರಿಗೆ ನಮಸ್ಕರಿಸುವುದು ಸಾಮಾನ್ಯವಾಗಿ ಕಂಡುಬಂದಿತು.

ಒಟ್ಟಾರೆ, ಜಿಲ್ಲಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ತೀವ್ರ ಬಿಸಿಲಿನ ತಾಪದ ನಡುವೆಯೂ ಅತ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಪುರಸಿ¨

Advertisement

ಪುರಸಿದ್ದೇಶ್ವರ ರಥೋತ್ಸವ: ಪ್ರಸಕ್ತ ವರ್ಷ ಕೋವಿಡ್‌-19ರ ಹಿನ್ನೆಲೆಯಲ್ಲಿ ನಗರದ ಪುರಸಿದ್ದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಸರಳವಾಗಿ ಜರುಗಿತು. ಸಂಜೆ ನಡೆದ ರಥೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ಧನ್ಯತಾ ಭಾವ ಮೆರೆದರು. ವಿವಿಧ ಹೂವಿನ ಮಾಲೆ, ವಿದ್ಯುತ್‌ ದೀಪಗಳಿಂದ ಅಲಂಕರಿಸಿದ ರಥದಲ್ಲಿ ಪುರಸಿದ್ದೇಶ್ವರ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಜಯಘೋಷಗಳೊಂದಿಗೆ ರಥೋತ್ಸವ ಎಳೆಯಲಾಯಿತು. ಪುರಸಿದ್ದೇಶ್ವರ ದೇವಸ್ಥಾನದ ಬಳಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಶಿವಬಸಪ್ಪ ಜಾಬಿನ್‌, ಪ್ರಭು ಹಿಟ್ನಳ್ಳಿ, ಮಲ್ಲಿಕಾರ್ಜುನ್‌ ಸಾತೇನಹಳ್ಳಿ, ಶಿವಲಿಂಗಪ್ಪ ಕಲ್ಯಾಣಿ, ಗಿರೀಶ ಗುಮ್ಮಕಾರ, ಗುರಣ್ಣ ಸೀಮಿಕೇರಿ, ವಿರುಪಾಕ್ಷಪ್ಪ ಹತ್ತಿಮತ್ತೂರ, ಶಂಭಣ್ಣ ಖೌದಿ, ಅಶೋಕ ಕಂಡೆವಾಲ್‌ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next