Advertisement

YSR Congress ಅಭ್ಯರ್ಥಿ ಜೆ.ಶಾಂತಾ ಮಾತು; ಆಂಧ್ರದಲ್ಲಿ ಜಗನ್‌ ಗಾಡ್‌ಫಾದರ್‌

01:10 AM May 11, 2024 | Team Udayavani |

ಹುಬ್ಬಳ್ಳಿ: ಹಿಂದುಪುರಕ್ಕೆ ನಾನು ಹೇಗೆ ಹೊರಗಿನವಳಾಗುತ್ತೇನೆ. ನನ್ನ ತವರು ಮನೆ ಕರ್ನಾಟಕದ ಬಳ್ಳಾರಿ ನಿಜ. ಆದರೆ, ನನ್ನ ಗಂಡನ ಮನೆ ಅನಂತಪುರ ಜಿಲ್ಲೆ ಗುಂತಕಲ್ಲ. ಇಲ್ಲಿಗೆ ಸೊಸೆಯಾಗಿ ಬಂದಿದ್ದೇನೆ. ಕರ್ನಾಟಕದಲ್ಲಿ ನನ್ನಣ್ಣ ಶ್ರೀರಾಮುಲು ನನಗೆ ಗಾಡ್‌ಫಾದರ್‌ ಆಗಿದ್ದರು. ಇದೀಗ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್‌ ಅಣ್ಣ ನನಗೆ ಗಾಡ್‌ಫಾದರ್‌ ಆಗಿದ್ದಾರೆ’.ಇದು ಬಳ್ಳಾರಿಯ ಮಾಜಿ ಸಂಸದೆ, ಮಾಜಿ ಸಚಿವ ಶ್ರೀರಾಮಲು ಅವರ ಸಹೋದರಿ, ಆಂಧ್ರಪ್ರದೇಶದ ಹಿಂದುಪುರ ಲೋಕಸಭಾ ಕ್ಷೇತ್ರದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಜೆ.ಶಾಂತಾ ಅನಿಸಿಕೆ.

Advertisement

ಬಳ್ಳಾರಿ ಸಂಸದರಾಗಿದ್ದ ತಾವು ಆಂಧ್ರದ ಹಿಂದುಪುರದಲ್ಲಿ ಸ್ಪರ್ಧಿಸಿದ್ದೀರಿ ಏನು ಅನ್ನಿಸುತ್ತಿದೆ?
ನಾನು ಬಳ್ಳಾರಿ ಸಂಸದೆಯಾಗಿದ್ದೆ. ಆದರೆ, ಆಂಧ್ರಪದೇಶಕ್ಕಾಗಲಿ, ಹಿಂದುಪುರಕ್ಕಾಗಲಿ ನಾನು ಹೊಸಬಳು ಇಲ್ಲವೇ ಹೊರಗಿನವಳು ಅಲ್ಲ. ನನ್ನ ಕರುಳುಬಳ್ಳಿಯ ಸಂಬಂಧ ಎರಡು ರಾಜ್ಯದಲ್ಲೂ ಇದೆ. ಹಿಂದುಪುರ ಗಡಿಭಾಗವೂ ಆಗಿದೆ. ಬದಲಾದ ರಾಜಕೀಯ ಸ್ಥಿತಿಯಲ್ಲಿ ನಾನು ಹಿಂದುಪುರದಿಂದ ಸ್ಪರ್ಧೆ ಮಾಡಬೇಕಾಗಿ ಬಂದಿದೆ. ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಅತ್ಯುತ್ತಮ ವಾತಾವರಣ ಇದೆ.

ಬಳ್ಳಾರಿಯಲ್ಲಿ ಶ್ರೀರಾಮುಲು ನಿಮಗೆ ಗಾಡ್‌ಫಾದರ್‌ ಆಗಿದ್ದರು, ಅಲ್ಲಿ ಹೇಗೆ?
ನಿಜ, ಶ್ರೀರಾಮುಲು ಅಣ್ಣ ನನ್ನ ಪಾಲಿನ ದೇವರು, ರಕ್ತ ಹಂಚಿಕೊಂಡು ಜನಿಸಿದ ಅಣ್ಣ, ರಾಜಕೀಯ ಗುರು, ಮಾರ್ಗದರ್ಶಕ, ಹಿತಚಿಂತಕ ಎಲ್ಲವೂ ಆಗಿದ್ದಾರೆ. ಆಂಧ್ರದಲ್ಲಿ ಆ ಜಾಗವನ್ನು ಸಿಎಂ ಜಗನ್‌ ಅಣ್ಣ ತುಂಬಿದ್ದಾರೆ. ಗಾಡ್‌ ಫಾದರ್‌ ಆಗಿ ಜಗನ್‌ ಅಣ್ಣ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದು, ಅವರ ಆಶೀರ್ವಾದ ಇದೆ. ವೈಎಸ್‌ಆರ್‌ ಕಾಂಗ್ರೆಸ್‌ ಪರಿವಾರದಲ್ಲಿ ನಾನೂ ಒಬ್ಬಳಾಗಿದ್ದೇನೆ. ಶ್ರೀರಾಮುಲು ಅಣ್ಣನ ಆಶೀರ್ವಾದವಂತೂ ಈ ತಂಗಿಯ ಮೇಲೆ ಇದ್ದೇ ಇರುತ್ತದೆ.

ದಿಢೀರ್‌ ಅಭ್ಯರ್ಥಿಯಾದ ನಿಮ್ಮನ್ನು ವೈಎಸ್‌ಆರ್‌ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆಯೇ?
ಹಿಂದುಪುರಂ ಅಭ್ಯರ್ಥಿ ಮನ ಶಾಂತಮ್ಮ(ನಮ್ಮ ಶಾಂತಮ್ಮ) ಎಂದು ಜಗನ್‌ ಅಣ್ಣ ಘೋಷಣೆ ಮಾಡಿದ ನಂತರದಲ್ಲಿ ಪಕ್ಷದ ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರು ಅತ್ಯಂತ ಸಂತೋಷದಿಂದ ಸ್ವಾಗತಿಸಿದ್ದಾರೆ, ಒಪ್ಪಿಕೊಂಡಿದ್ದಾರೆ. ಪ್ರತಿಯೊಬ್ಬರೂ ನಿಷ್ಠೆ-ಬದ್ಧತೆಯಿಂದ ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಜಗನ್‌ ಅಣ್ಣ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದಾರೆ.

ನಿಮ್ಮ ಗೆಲುವಿಗೆ ಪ್ರಧಾನ ಅಂಶಗಳು ಯಾವುವು?
ಹಿಂದುಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು, ಆರು ಕ್ಷೇತ್ರಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದಾರೆ. 2019ರಲ್ಲಿ ವೈಎಸ್‌ಆರ್‌ ಸಂಸದರು ಆಯ್ಕೆಯಾಗಿದ್ದರು. ಸಿಎಂ ಜಗನ್‌ ಅಣ್ಣ ಅವರ ಅಭಿವೃದ್ಧಿ ಕಾರ್ಯಗಳು, ಬಡವರ ಪರ ಕಾಳಜಿ, ಅಭಿವೃದ್ಧಿಯ ಶ್ರದ್ಧೆ, ಪ್ರತಿ ಮನೆಗೂ ಒಂದಲ್ಲಾ ಒಂದು ಸರ್ಕಾರಿ ಯೋಜನೆ ಸೌಲಭ್ಯ ತಲುಪಿರುವುದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಈ ಎಲ್ಲ ಅಂಶಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ.

Advertisement

ನಿಮ್ಮ ಪ್ರತಿಸ್ಪರ್ಧಿಗಳು ಒಂದಾಗಿ ಬಂದಿದ್ದಾರೆ, ಆ ಬಗ್ಗೆ ಏನು ಹೇಳುತ್ತೀರಿ?
ಹೌದು, ಆಂಧ್ರದಲ್ಲಿ ತೆಲುಗುದೇಶಂ ಹಾಗೂ ಬಿಜೆಪಿ ಮೈತ್ರಿ ಯಾಗಿ ಸ್ಪರ್ಧಿಸುತ್ತಿವೆ. ತೆಲುಗು ದೇಶಂ ಬಡವರ ಅನುಕೂಲಕ್ಕಾಗಿ ಯಾವ ಯೋಜನೆಗಳನ್ನು ಕೈಗೊಂಡಿದೆ ಎಂಬುದನ್ನು ತೋರಿಸಲಿ. ಯಾವ ಮುಖ ಇರಿಸಿಕೊಂಡು ಮತ ಕೇಳುತ್ತಾರೋ ತಿಳಿಯದು. ಮಹಿಳೆಯರಿಗೆ ರಾಜಕೀಯ ಅವಕಾಶ ನೀಡುವ ಧಮ್ಮು-ತಾಕತ್ತು ಟಿಡಿಪಿಗೆ ಇಲ್ಲ. ಆದರೆ, ಜಗನ್‌ ಅಣ್ಣ ಮಹಿಳೆಯರ ಪರವಾಗಿದ್ದಾರೆ. 28 ವರ್ಷಗಳಿಂದ ನಮ್ಮ ಸಮಾಜಕ್ಕೆ ದೊರೆಯದ ಪ್ರಾತಿನಿಧ್ಯವನ್ನು ನನ್ನ ರೂಪದಲ್ಲಿ ಹಿಂದುಪುರದಲ್ಲಿ ಅವಕಾಶ ನೀಡಿದ್ದಾರೆ. ಹಲವು ಕಡೆ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದಾರೆ. ಪ್ರತಿಸ್ಪರ್ಧಿಗಳು ಎಷ್ಟೇ ಒಂದಾಗಿ ಸೈನ್ಯ ಕಟ್ಟಿಕೊಂಡು ಬಂದರೂ ಅವರನ್ನು ಎದುರಿಸಲು ನಮ್ಮ ಸೈನ್ಯ ಸನ್ನದ್ಧವಾಗಿದೆ ಮತ್ತು ನಮ್ಮ ಸೈನ್ಯ ದೊಡ್ಡದಾಗಿಯೂ ಇದೆ.

ಹಿಂದುಪುರ ಸಂಸದರಾದರೆ ಕ್ಷೇತ್ರ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
ಮತದಾರರ ಆಶೀರ್ವಾದದಿಂದ ನಾನು ಸಂಸದೆಯಾದರೆ ಜನರು ಇರಿಸಿದ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಅಭಿವೃದ್ದಿ
ವಿಚಾರ ದಲ್ಲಿ 1ನೇ ತರಗತಿ ವಿದ್ಯಾರ್ಥಿ ಶಿಸ್ತಿನಿಂದ ಶಾಲೆಗೆ ಹೋಗುವಂತೆ ಸರ್ಕಾರ-ಕ್ಷೇತ್ರಕ್ಕೆ ಸಂಪರ್ಕ ಸೇತುವೆಯಾಗುವೆ. ನಗರ-ಗ್ರಾಮ ಸ್ವತ್ಛತೆ, ಕುಡಿಯುವ ನೀರಿನ ಸೌಲಭ್ಯ, ಒಳಚ ರಂಡಿ ವ್ಯವಸ್ಥೆ, ಸರ್ಕಾರಿ ಕಾಲೇಜುಗಳ ಆರಂಭ, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉರ್ದು ಕಾಲೇಜು ಆರಂಭಕ್ಕೆ ಯತ್ನ, ಉದ್ಯೋಗ ಸೃಷ್ಟಿಗೆ ಉದ್ಯಮ ಆಕ ರ್ಷಣೆ-ಬೆಳವಣಿಗೆ, ಕೇಂದ್ರದಿಂದ ಸಮರ್ಪಕ ಅನುದಾನ ತಂದು ಕ್ಷೇತ್ರದ ಋಣ ತೀರಿಸುವ ಕೆಲಸ ಮಾಡುವೆ. ಸೊಸೆ ಯಾದರೂ ಮನೆ ಮಗಳ ರೀತಿ ಎಲ್ಲರ ಹೃದಯದಲ್ಲಿ ಪ್ರೀತಿ ಗಳಿಸುವೆ.

ಹಿಂದುಪುರ ಕ್ಷೇತ್ರ ಎಲ್ಲಿದೆ?
ಆಂಧ್ರಪ್ರದೇಶದ ಹಿಂದುಪುರ ಐತಿಹಾಸಿ ಸೇರಿದಂತೆ ಹಲವು ದೇಸ್ಥಾನಗಳನ್ನು ಹೊಂದಿದ ನಗರ. ಹಿಂದುಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಂತಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ, ಶ್ರೀ ಸತ್ಯ ಸಾಯಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಒಟ್ಟು ಮತದಾರರು 14.46 ಲಕ್ಷ. ಕ್ಷೇತ್ರದಲ್ಲಿ 1957ರಿಂದ 2019ರವರೆಗೆ ನಡೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ 10 ಬಾರಿ, ಟಿಡಿಪಿ 5 ಬಾರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಒಂದು ಬಾರಿ ಗೆಲುವು ಸಾಧಿಸಿದೆ. ಪ್ರಸ್ತುತ ವೈಎಸ್‌ಆರ್‌ ಕಾಂಗ್ರೆಸ್‌ನ ಕೆ.ಜೆ.ಮಾಧವ ಸಂಸದರಾಗಿದ್ದಾರೆ. 2024ರ ಹಿಂದುಪುರ ಲೋಕಸಭಾ ಚುನಾವಣೆಗೆ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಜೆ.ಶಾಂತಾ, ಟಿಡಿಪಿ-ಬಿಜೆಪಿಯಿಂದ ಬಿ.ಕೆ.ಪಾರ್ಥಸಾರಥಿ, ಕಾಂಗ್ರೆಸ್‌ನಿಂದ ಮಾಜಿ ಸಂಸದ ಜಿ.ನಿಜಾಮುದ್ದೀನ್‌, ಪಕ್ಷೇತರರಾಗಿ ಸ್ವಾಮಿ ಪರಿಪೂರ್ಣಾನಂದ ಸ್ಪರ್ಧೆಯಲ್ಲಿದ್ದಾರೆ.

5 ವರ್ಷದಲ್ಲಿ 50 ವರ್ಷದ ಅನುಭವ ಸಿಕ್ಕಿದೆ
ನಾನು ಬಳ್ಳಾರಿ ಸಂಸದೆಯಾಗಿ 5 ವರ್ಷ ಸೇವೆ ಸಲ್ಲಿಸಿದರೂ ನನಗೆ 50 ವರ್ಷದ ರಾಜಕೀಯ ಅನುಭವ ಸಿಕ್ಕಿದೆ. ವಿಧಾನಸಭೆಯ ಅಂದಿನ ವಿಪಕ್ಷ ನಾಯಕರ ಕೃಪೆಯಿಂದಾಗಿ ಏನೆಲ್ಲ ಕಾರಣಗಳಿಗೆ ಕೋರ್ಟ್‌-ಕಚೇರಿ ಅಲೆದಿದ್ದೇನೆ. ಇಲ್ಲಸಲ್ಲದ ಆರೋಪಗಳೊಂದಿಗೆ ನನ್ನ ಸಂಸತ್‌ ಸ್ಥಾನದ ಅವಧಿ ಕುಗ್ಗಿಸಿದರು. ಹೀಗಾಗಿ ಕರ್ನಾಟಕದಲ್ಲಿ ನನಗೆ ಐದು ವರ್ಷದ ರಾಜಕೀಯ 50 ವರ್ಷಗಳ ಅನುಭವ ನೀಡಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ. ಅದರಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಎಂಬುದು ಜೆ.ಶಾಂತಾ ಅನಿಸಿಕೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next