Advertisement

ಯುವಕರಿಗೆ ಆದ್ಯತೆ,ಅಭಿವೃದ್ಧಿಗೆ ಒತ್ತು ಕೊಡಿ

11:43 AM Apr 16, 2017 | |

ಬೆಂಗಳೂರು: “ರಾಜ್ಯದ ಜನರಲ್ಲಿ ವಿಶ್ವಾಸ ಮೂಡಿಸುವ ಯೋಜನೆಗಳ ಸ್ಪಷ್ಟ ಚಿತ್ರಣದೊಂದಿಗೆ ಯುವಸಮೂಹಕ್ಕೆ ಆದ್ಯತೆ ನೀಡಿ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿಯಾಗಿ ಬಳಸಿಕೊಂಡು ಚುನಾವಣೆ ಎದುರಿಸಿ’ ಇದು ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಯುವ ಬೆಂಬಲಿಗರ ಸಲಹೆ.

Advertisement

ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೆಡಿಎಸ್‌ನ ಐಟಿ ವಿಂಗ್‌ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ಜತೆಗಿನ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಎರಡೂವರೆ ಸಾವಿರ ಮಂದಿ ಪಾಲ್ಗೊಂಡು, ಮುಂದಿನ ವಿಧಾನಸಭೆ ಚುನಾವಣೆ, ರಾಜ್ಯದ ಸ್ಥಿತಿಗತಿ, ಅಭಿವೃದ್ಧಿ, ಪ್ರಣಾಳಿಕೆ ವಿಚಾರಗಳ ಬಗ್ಗೆ ಪ್ರಶ್ನಿಸುವುದರ ಜತೆಗೆ ಕುಮಾರಸ್ವಾಮಿಯವರಿಗೆ ಸಲಹೆ-ಸೂಚನೆ ನೀಡಿದರು.

ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಆದ್ಯತಾ ವಲಯಗಳಿಗೆ ಹೆಚ್ಚು ಒತ್ತು ನೀಡಬೇಕು. ಕೆರೆಗಳ ಅಭಿವೃದ್ಧಿ, ರೈತರ ಸಾಲಮನ್ನಾ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆಗಳ ಪ್ರಗತಿ, ವಸತಿ, ಶಿಕ್ಷಣ, ಆರೋಗ್ಯ ವಿಚಾರಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.

ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಸಂವಾದ ಸಂಜೆವರೆಗೂ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾಮಾಜಿಕ ಜಾಲತಾಣದ ಬೆಂಬಲಿಗರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂವಾದದ ಒಂದು ಸಂದರ್ಭದಲ್ಲಿ ನಾನು ಶಾಲೆಯಲ್ಲಿ ಅತ್ಯಂತ ದಡ್ಡ ವಿದ್ಯಾರ್ಥಿಯಾಗಿದ್ದೆ, ಆದರೆ ಇಂದು ಯಾವ ವಿಷಯದ ಬಗ್ಗೆ ಬೇಕಾದರೂ ಎರಡೆರಡು ಗಂಟೆ ಮಾತನಾಡಬಲ್ಲೆ ಎಂದು ಕುಮಾರಸ್ವಾಮಿ ಹೇಳಿದರು.

ಫೇಸ್‌ಬುಕ್‌ ಲೈವ್‌ ನೋಡಿ ನ್ಯೂಜೆರ್ಸಿಯಿಂದ ಮಧು ಎನ್ನುವವರು ದೂರವಾಣಿ ಕರೆ ಮಾಡಿ ಮಾತನಾಡಿದ್ದು ವಿಶೇಷ. ಬೆಂಗಳೂರಿನ ಮೂಲಸೌಕರ್ಯ ಕೊರತೆ ಕುರಿತು ಅವರು ಪ್ರಶ್ನೆ ಕೇಳಿದರು. ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಈ ಸಮಸ್ಯೆಗೆ ಕಾರಣ, ಒಮ್ಮೆ ನನಗೆ ಅಧಿಕಾರ ಕೊಟ್ಟು ಪರೀಕ್ಷೆ ಮಾಡಿ, ಒಂದು ಅವಕಾಶ ನೋಡಿ, ಒಂದೇ ಒಂದು ಕ್ಷಣ ವ್ಯರ್ಥ ಮಾಡದೆ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಉತ್ತರಿಸಿದರು.

Advertisement

ಸಾಲಮನ್ನಾ ಖಚಿತ: ಸಂವಾದ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದು ಖಚಿತ. ಚುನಾವಣೆ ಪ್ರಣಾಳಿಕೆಯಲ್ಲೇ ಅದನ್ನು ಸೇರಿಸಲಾಗುವುದು ಎಂದು ಹೇಳಿದರು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಕೆಯನ್ನೂ ಆರಂಭಿಸಲಾಗುವುದು ಎಂದರು.

ಕಾಂಗ್ರೆಸ್‌ ಶಾಸಕರೊಬ್ಬರು ಮುಂದಿನ ಚುನಾವಣೆಗೆ 10 ಕೋಟಿ ರೂ. ಹಣ ಸಿದ್ಧ ಮಾಡಿಕೊಂಡಿದ್ದೇನೆಂದು ಬಹಿರಂಗವಾಗಿ ಹೇಳ್ತಾರೆ. ಆಡಳಿತಾರೂಢ ಪಕ್ಷ ರಾಜ್ಯದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದೆ ಎಂಬುದಕ್ಕೆ ಇದು ಸಾಕ್ಷಿ. ಹತ್ತು ಕೋಟಿ ರೂ. ಹಂಚಿ ಶಾಸಕರಾಗುವ ಬದಲು ಒಂದೆರಡು ಕೆರೆ ದತ್ತು ತೆಗೆದು ಅಭಿವೃದ್ಧಿ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸರ್ಕಾರಿ ಭೂ ಒತ್ತುವರಿ ಪತ್ತೆ ಹಚ್ಚಲು ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ರಚಿಸಿದ್ದೇ ನಾನು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಒತ್ತುವರಿಯಾಗಿರುವ ಎಲ್ಲ ಸರ್ಕಾರಿ ಭೂಮಿ ವಶಕ್ಕೆ ಪಡೆಯುತ್ತೇನೆ. ವಸತಿ ಬಡಾವಣೆ ನಿರ್ಮಾಣದ ಹೆಸರಲ್ಲಿ ರೈತರ ಭೂಮಿಯನ್ನು ಪಡೆಯಲ್ಲ. ಸರ್ಕಾರಿ ಒತ್ತುವರಿ ಭೂಮಿ ವಶಕ್ಕೆ ಪಡೆದು ಬೆಂಗಳೂರಿನಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುತ್ತೇನೆ ಎಂದು ಘೋಷಿಸಿದರು.

ಪ್ರಧಾನಿ ವಿರುದ್ಧ ವಾಗ್ಧಾಳಿ: ಕಾರ್ಯಕ್ರಮದಲ್ಲಿ ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದ ಶಾಸಕ ವೈ. ಎಸ್‌.ವಿ.ದತ್ತಾ, ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹಿಂದೆ ಕಾಂಗ್ರೆಸ್‌ ಸಹ ಇದೇ ದಾರಿಯಲ್ಲಿ ಇತ್ತು. ಇಂದಿರಾ ಇಂಡಿಯಾ, ಇಂಡಿಯಾ ಇಂದಿರಾ ಅನ್ನೋ ಹೊಗಳುಭಟರು ಸೃಷ್ಟಿಯಾದ್ರು, ದೇಶಕ್ಕೆ ತುರ್ತುಪರಿಸ್ಥಿತಿ ಜಾರಿಯಾಯ್ತು, ಇದೇ ಹಾದಿಯಲ್ಲಿ ಈಗ ದೇಶವಿದೆ. ಮೋದಿ ಅನ್ನೋ ಬಂಡೆ ನಿಮ್ಮ ಬದುಕಿನ ಮೇಲೆ ಅಪ್ಪಳಿಸಲಿದೆ ಎಂದು ಹೇಳಿದರು.

20 ತಿಂಗಳಲ್ಲಿ ಜನಪರ
ಆಡಳಿತ ಕೊಡಲಿಲ್ಲವಾ?

ರಾಜ್ಯದಲ್ಲಿ ಕಾಂಗ್ರೆಸ್‌ಗೂ ಅಧಿಕಾರ ಕೊಟ್ಟಿದ್ದೀರಿ, ಬಿಜೆಪಿಗೂ ಅಧಿಕಾರ ಕೊಟ್ಟಿದ್ದೀರಿ, ಯಾರ ಮನೆ ಬಾಗಿಲಿಗೂ ಹೋಗಿ ಬೆಂಬಲ ಕೋರದೆ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸುವ ಶಕ್ತಿ ಜೆಡಿಎಸ್‌ ಗೆ ಈ ಬಾರಿ ಕೊಡಿ. ಐದು ವರ್ಷ ಉತ್ತಮ ಆಡಳಿತ ಕೊಟ್ಟು ತೋರಿಸುತ್ತೇನೆ. ನನ್ನ ಅಭಿವೃದ್ಧಿ ಕಲ್ಪನೆ ರಾಜ್ಯದ ಮನೆ ಮನೆಗೆ ತಲುಪಿಸಿ ಎಂದು ಸಾಮಾಜಿಕ ಜಾಲತಾಣ ಬೆಂಬಲಿಗರಿಗೆ ಕರೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ, ನಾನು ಕಾಂಗ್ರೆಸ್‌,
ಬಿಜೆಪಿಗಿಂತ ಖಂಡೆಮ್ಮಾ…? 20 ತಿಂಗಳಲ್ಲಿ ಜನಪರ ಆಡಳಿತ ಕೊಡಲಿಲ್ಲವಾ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಾರದಲ್ಲಿ ಒಂದು ದಿನ ಬೆಳಗಾವಿಯ ಸುವರ್ಣಸೌಧದಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಕೋಟ್ಯಂತರ ರೂ. ವೆಚ್ಚ ಮಾಡಿರುವ ಸುವರ್ಣಸೌಧ ನಿರ್ಮಾಣದ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ಕೈಗೊಳ್ಳುತ್ತೇನೆ. ರಾಜ್ಯ ವಿಭಜನೆ ಕೂಗು ದೂರ ಮಾಡಿ ಆ ಭಾಗದ ಜನರಲ್ಲಿ ವಿಶ್ವಾಸಮೂಡಿಸುವ ಕೆಲಸ ಮಾಡುತ್ತೇನೆ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next