Advertisement

ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ; ಮೂವರ ಬಂಧನ

04:10 PM Nov 27, 2022 | Team Udayavani |

ಮಂಗಳೂರು : ಹಿಂದೂ ಯುವತಿಯೊಂದಿಗೆ ಬಸ್ ನಲ್ಲಿ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಸೈಯದ್‌ ರಶೀಮ್‌ ಉಮರ್‌ ಗೆ (20) ಹಲ್ಲೆ ಗೈದಿರುವ ಆರೋಪದಲ್ಲಿ ಕದ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸುರತ್ಕಲ್ ನ ಮುತ್ತು, ಪ್ರಕಾಶ್ ಮತ್ತು ಅಸೈಗೋಳಿಯ ರಾಕೇಶ್ ಎನ್ನುವವರಾಗಿದ್ದಾರೆ.

Advertisement

ಘಟನೆ ನ.24 ರಂದು ಸಂಜೆ ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ರಶೀಮ್‌ಗೆ ತಂಡವೊಂದು ನಂತೂರಿನಲ್ಲಿ ಬಸ್‌ ಒಳಗೆ ನುಗ್ಗಿ ಹಲ್ಲೆ ನಡೆಸಿತ್ತು. ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್‌ನಲ್ಲಿ ಸಹಪಾಠಿಯಾಗಿದ್ದ ಹಿಂದೂ ಯುವತಿ ಜತೆ ಸೈಯದ್‌ ರಶೀಮ್‌ ಉಮರ್‌ ಪ್ರತೀದಿನ ಪ್ರಯಾಣಿಸುತ್ತಿದ್ದ. ಈ ವಿಚಾರದಲ್ಲಿ 3-4 ಮಂದಿ ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಆತನನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದರು. ಅಷ್ಟರಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರು ಬಂದು ಹೆಚ್ಚಿನ ಹಲ್ಲೆಯಾಗುವುದನ್ನು ತಪ್ಪಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್‌ ರಶೀಮ್‌ ಉಮರ್‌ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next