Advertisement

140 ಅಡಿ ಕಂದಕಕ್ಕೆ ಬಿದ್ದರೂ ಬದುಕುಳಿದ ಯುವಕ | 

07:30 PM Oct 04, 2021 | Team Udayavani |

ಬೆಳಗಾವಿ/ಗೋಕಾಕ: ಪ್ರವಾಸಿ ತಾಣ ನೋಡಲು ಬಂದಿದ್ದ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುವಾಗ 140 ಅಡಿ ಕಂದಕಕ್ಕೆ ಬಿದ್ದು “ಯುವಕ ಬದುಕುಳಿದಿಲ್ಲ’ ಎಂದು ರಕ್ಷಣಾ ಸಿಬ್ಬಂದಿ ವಾಪಸ್‌ ತೆರಳಿದ ಬಳಿಕ ತನ್ನ ಗೆಳೆಯರಿಗೆ ಕರೆ ಮಾಡಿ ಲೋಕೇಷನ್‌ ಶೇರ್‌ ಮಾಡಿ ರಕ್ಷಿಸುವಂತೆ ಕೋರಿದ ಘಟನೆ ಗೋಕಾಕ ಫಾಲ್ಸ್‌ನಲ್ಲಿ ನಡೆದಿದೆ.

Advertisement

ಬೆಳಗಾವಿಯ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿ ಜಿಲ್ಲೆ ಜೇವರ್ಗಿ ಮೂಲದ ಪ್ರದೀಪ ಸಾಗರ್‌ ಎಂಬಾತ ಶನಿವಾರ ಸಂಜೆ ಸ್ನೇಹಿತರೊಂದಿಗೆ ಫಾಲ್ಸ್‌ ನೋಡಲು ಬಂದಿದ್ದ. ಬಂಡೆ ಮೇಲೆ ನಿಂತು ಸೆಲ್ಫಿ  ಕ್ಲಿಕ್ಕಿಸುವ ವೇಳೆ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾನೆ. ಈ ಬಗ್ಗೆ ಸ್ನೇಹಿತರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಮೊಟಕುಗೊಳಿಸಿದ್ದರು. ಯುವಕ ಮೃತಪಟ್ಟಿದ್ದಾನೆ. ಮೃತದೇಹ ಹೊರ ತೆಗೆಯಬೇಕೆಂದು ಭಾವಿಸಿ ಭಾನುವಾರ ಬೆಳಗ್ಗೆ ಬಂದರಾಯಿತು ಎಂದು ಅಲ್ಲಿಂದ ತೆರಳಿದ್ದರು.

ಕರೆ ಮಾಡಿ ಲೋಕೇಷನ್‌ ಶೇರ್‌ ಮಾಡಿದ: ಸುಮಾರು 10 ಗಂಟೆಗಳ ಬಳಿಕ ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರದೀಪನ ಮೊಬೈಲ್‌ಗೆ ನೆಟ್‌ವರ್ಕ್‌ ಸಿಕ್ಕಿದೆ. ಕೂಡಲೇ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ತನ್ನ ಲೊಕೇಷನ್‌ ಶೇರ್‌ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಗೋಕಾಕನ ಸಾಮಾಜಿಕ ಕಾರ್ಯಕರ್ತ ಆಯೂಬ್‌ ಖಾನ್‌ಗೆ ಮಾಹಿತಿ ನೀಡಿದ್ದಾರೆ. ಕಂದಕಕ್ಕೆ ಬಿದ್ದ ಯುವಕನ ರಕ್ಷಣಾ ಕಾರ್ಯಾಚರಣೆಗೆ ಅಯೂಬ್‌ ಸಿದ್ಧತೆ ಮಾಡಿಕೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

140 ಅಡಿ ಆಳದ ಕಂದಕಕ್ಕೆ ತೆರಳಿದ ಆಯೂಬ್‌ ಖಾನ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಪ್ರದೀಪ ಸಾಗರ್‌ನನ್ನು ರಕ್ಷಿಸಿ ಹೊರ ಕರೆದುಕೊಂಡು ಬಂದಿದ್ದಾರೆ. ಸದ್ಯ ಪ್ರದೀಪ ಸಾಗರ್‌ನನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next