Advertisement

ಧ್ವನಿವರ್ಧಕದ ಸದ್ದು ಆವರಣಕ್ಕೆ ಸೀಮಿತ; ಉ.ಪ್ರ. ಸರ್ಕಾರದ ಹೊಸ ನಿರ್ಧಾರ

09:32 AM Apr 20, 2022 | Team Udayavani |

ಲಕ್ನೋ/ನವದೆಹಲಿ: ಉತ್ತರ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಲು ಮುಂದಾಗುವ ಸಂಘಟನೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಲೇಬೇಕು. ಜತೆಗೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲಾಗುವ ಧ್ವನಿವರ್ದಕಗಳನ್ನುಮತ್ತೊಬ್ಬರಿಗೆ ತೊಂದರೆಯಾಗದಂತೆ ಬಳಸಬೇಕು. ಸ್ಪೀಕರ್‌ಗಳಿಂದ ಹೊರಹೊಮ್ಮುವ ಧ್ವನಿ ಸಮಾರಂಭ ನಡೆಯುವ ಸ್ಥಳವನ್ನು ದಾಟಕೂಡದು ಎಂದು ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ.

Advertisement

ದೇಶದ ಹಲವೆಡೆ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌ ಸೋಮವಾರ ತಡರಾತ್ರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಹೊಸ ನಿಯಮಗಳನ್ನು ಪ್ರಕಟಿಸಲಾಗಿದೆ.

ಮೆರವಣಿಗೆ ನಡೆಸಲು ಅನುಮತಿ ಕೋರುವ ಯಾವುದೇ ಸಂಘಟನೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂಬ ಬಗ್ಗೆ ಪ್ರಮಾಣಪತ್ರವನ್ನೂ ಸ್ಥಳೀಯ ಆಡಳಿತಕ್ಕೆ ನೀಡಬೇಕಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್‌ ಎಲ್ಲರಿಗೂ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶವಿದೆ. ಆದರೆ, ಆಚರಣೆಗಳು ಇತರರಿಗೆ ತೊಂದರೆಯಾಗಬಾರದಷ್ಟೇ ಎಂದಿದ್ದಾರೆ.

ಮುಂದಿನ ತಿಂಗಳು ರಂಜಾನ್‌, ಅಕ್ಷಯ ತೃತೀಯ ಒಂದೇ ದಿನ ಬರಲಿದ್ದು, ಅದರ ಬೆನ್ನಿಗೇ ಹಲವಾರು ಹಬ್ಬಗಳು ಸಾಲುಗಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.

Advertisement

ಇದನ್ನೂ ಓದಿ:ಕಾಶಿಯಾತ್ರೆಗೆ ಸಹಾಯಧನ: ಸಚಿವೆ ಶಶಿಕಲಾ ಜೊಲ್ಲೆ

ಎಂಎನ್‌ಎಸ್‌ ಪ್ರತಿಭಟನೆ ಹತ್ತಿಕ್ಕಲು ಸಜ್ಜು
ಮಹಾರಾಷ್ಟ್ರದಲ್ಲಿರುವ ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ದಕಗಳನ್ನು ಮೇ 3ರೊಳಗಾಗಿ ತೆರವುಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಗಡುವು ನೀಡಿರುವ ಮಹಾರಾಷ್ಟ್ರ ನವನಿರ್ಮಾಣ್‌ ಸೇನಾ (ಎಂಎನ್‌ಎಸ್‌) ವತಿಯಿಂದ ಕೈಗೊಳ್ಳಲಾಗುವ ಯಾವುದೇ ಚಟುವಟಿಕೆಗಳ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಹಾರಾಷ್ಟ್ರ ಪೊಲೀಸ್‌ ಇಲಾಖೆ ಸಜ್ಜಾಗಿದೆ ಎಂದು ರಾಜ್ಯದ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಹೇಳಿದ್ದಾರೆ. ಮತ್ತೊಂದೆಡೆ, ಎಂಎನ್‌ಎಸ್‌ ಆಗ್ರಹಕ್ಕೆ ತನ್ನ ಬೆಂಬಲವಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಹೇಳಿದೆ.

ಎನ್‌ಎಸ್‌ಎ ಅಡಿ ಕೇಸು
ನವದೆಹಲಿಯ ಜಹಾಂಗೀರ್‌ಪುರಿಯಲ್ಲಿನ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವವರ ಪೈಕಿ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ.

ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್‌ ಅಸ್ಥಾನರಿಗೆ ನೀಡಿದ ಸೂಚನೆಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಘಟನೆಗೆ ಸಂಬಂಧಿಸಿದ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸಲಾಗಿದೆ. ಇದೊಂದು ಪೂರ್ವ ನಿಯೋಜಿತವೇ ಹೊರತು, ಏ.16ರಂದು ಹಠಾತ್‌ ಆಗಿ ನಡೆದ ಬೆಳವಣಿಗೆಯಲ್ಲ ಎಂಬ ಅಂಶವನ್ನು ಪೊಲೀಸರು ವರದಿಯಲ್ಲಿ ಪ್ರಧಾನವಾಗಿ ಉಲ್ಲೇಖಿಸಿದ್ದಾರೆ

ಇದೇ ವೇಳೆ, ಸ್ಥಳದಲ್ಲಿ ನಿಧಾನವಾಗಿ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿದೆ. ಜಹಾಂಗೀರ್‌ ಪುರಿಯಲ್ಲಿ ಬಿಗಿ ಪಹರೆಯಲ್ಲಿ ನಿರತರಾಗಿರುವ ಪೊಲೀಸರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next