Advertisement
‘The measure of a man is what he does with power’ ಗ್ರೀಸ್ನ ಖ್ಯಾತ ಫಿಲಾಸಫರ್ ಪ್ಲೆಟೊ ಹೇಳಿದ ಮಾತಿದು. ಸಾರ್ವಕಾಲಿಕ ಸತ್ಯ ಕೂಡ. ಹೇಗೇ ತೂಗಿ ಅಳೆದರೂ ಯಾವುದೋ ವ್ಯಾಪ್ತಿಗೆ ಒಳಪಡುವ ಮಾತು ಅನಿಸುವುದೇ ಇಲ್ಲ. ಅಷ್ಟು ವಿಶಾಲವಾಗಿದೆ ಅದರ ವ್ಯಾಪ್ತಿ ಮತ್ತು ಅರ್ಥ. ಪ್ರತಿಯೊಬ್ಬನ ನಿಜವಾದ ಬಣ್ಣ ಬಯಲಾಗುವುದೇ ಆತ ಅಧಿಕಾರದಲ್ಲಿದ್ದಾಗ. ಅಧಿಕಾರವೆನ್ನುವ ಶಕ್ತಿ ಕೈಗೆ ಸಿಕ್ಕಾಗ ಅವನೇನು ಮಾಡುತ್ತಾನೆ? ಅಧಿಕಾರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ? ಎನ್ನುವುದು ಅನಾವರಣಗೊಳ್ಳುತ್ತಲೇ ವ್ಯಕ್ತಿಯ ವ್ಯಕ್ತಿತ್ವವೂ ತೆರೆದುಕೊಳ್ಳುತ್ತದೆ.
Related Articles
Advertisement
ಉತ್ತರಪ್ರದೇಶ ಮತ್ತು ಬಿಹಾರ ಗಡಿಯಲ್ಲಿನ ಗೋರಖನಾಥ ಮಠದ ಮುಖ್ಯಸ್ಥರಾಗಿದ್ದುಕೊಂಡು (2014ರಿಂದ), 2002ರಿಂದ ಹಿಂದೂ ಯುವವಾಹಿನಿ ಸಂಘಟನೆ ಆರಂಭಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆ ನಡೆಸಿದ ಪರಿಣಾಮ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಆಗಾಗ ಅವರು ನೀಡುತ್ತಿದ್ದ ನಿರ್ದಾಕ್ಷಿಣ್ಯ, ನಿಷ್ಠುರ, ಪ್ರಖರವಾದ ಹೇಳಿಕೆಗಳು ಹಿಂದು ಯುವ ಕಾರ್ಯಕರ್ತರನ್ನು ಪ್ರಚೋದಿಸಿದ್ದು ಸುಳ್ಳಲ್ಲ. ಇಂಥ ನಾಯಕತ್ವವನ್ನೇ ಎದುರು ನೋಡುತ್ತಿದ್ದ ಬಿಜೆಪಿ ಉತ್ತರಪ್ರದೇಶದಂಥ ದೊಡ್ಡ ರಾಜ್ಯವನ್ನು ನಿರ್ಲಕ್ಷಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಷ್ಟವಾದೀತು ಎನ್ನುವ ಲೆಕ್ಕಾಚಾರಕ್ಕೆ ಪಂಚರಾಜ್ಯ ಚುನಾವಣೆ ಪ್ರಕಟಗೊಳ್ಳುವುದಕ್ಕೂ ಮೊದಲೇ ಬಂದಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉತ್ತರಪ್ರದೇಶದ ಜಯಕ್ಕಾಗಿ ಪಣ ತೊಟ್ಟಿದ್ದರು. ‘ಕೋಲು ಮುರಿಯಬಾರದು, ಹಾವೂ ಸಾಯಬಾರದು’ ಎನ್ನುವಂತೆ ಸೂಕ್ಷ್ಮ, ಜಾಣತನದಲ್ಲಿ ಹೆಜ್ಜೆ ಇಟ್ಟಿದ್ದರು. ಅದೇ ಕಾರಣಕ್ಕಾಗಿ ಎಷ್ಟೇ ಒತ್ತಡವಿದ್ದರೂ ಯುಪಿಗೆ ಸಿಎಂ ಅಭ್ಯರ್ಥಿ ಪ್ರಕಟಿಸಿರಲಿಲ್ಲ. ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ರಾಮಮಂದಿರ ನಿರ್ಮಾಣವನ್ನೇ ಅಜೆಂಡಾ ಮಾಡಿಕೊಂಡು ಬಂದಿದ್ದ ಬಿಜೆಪಿ, ರಾಜ್ಯದ ಅಲ್ಪಸಂಖ್ಯಾತರಲ್ಲಿ ಮೂಡಿದ್ದ ಆಡಳಿತ ವಿರೋಧಿ ಅಭಿಪ್ರಾಯದ ಲಾಭವನ್ನೂ ಪಡೆದುಕೊಳ್ಳುವ ಉದ್ದೇಶ ಹೊಂದಿತ್ತು. ಹೀಗಾಗಿ ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಿಯೂ ರಾಮಮಂದಿರದ ಬಗ್ಗೆ ಉಸಿರೆತ್ತಲಿಲ್ಲ. ರಾಮರಥವೂ ಹೊರಟಿರಲಿಲ್ಲ. ಬಿಜೆಪಿ ನಡೆಸಿದ ಬಹುತೇಕ ರ್ಯಾಲಿಗಳಲ್ಲಿ ರಾಮ ಕಾಣಿಸಿಕೊಳ್ಳಲೇ ಇಲ್ಲ. ರಾಮ ಭಕ್ತರು ಇದರಿಂದ ವಿಚಲಿತರಾಗಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಆದಿತ್ಯನಾಥ್ ಅವರ ಬಾಯಲ್ಲಿ ಒಮ್ಮೆ ರಾಮಮಂದಿರ ಶತಸಿದ್ಧ ಎಂದು ಹೇಳಿಸಿ ಸುಮ್ಮನಾಯಿತು. ಆದಿತ್ಯನಾಥ್ ಕೂಡ ಈ ಹೇಳಿಕೆಯನ್ನು ಸಾಕಷ್ಟು ಮಾರ್ಮಿಕವಾಗಿಯೇ ನೀಡಿ ಸುಮ್ಮನಾಗಿದ್ದರು. ಇವೆಲ್ಲದರ ಜತೆಗೆ ಅನ್ಯ ಧರ್ಮೀಯ ಮತದಾರ ಕೂಡ ಮೋದಿ ಅಲೆಯಿಂದ ಜಾರಿಕೊಳ್ಳದಂತೆ ನೋಡಿಕೊಂಡಿದ್ದೂ ಅಕ್ಷರಶಃ ಸತ್ಯ. ಮೋದಿಯಿಂದ ಯುಪಿ ಅಭಿವೃದ್ಧಿ ಸಾಧ್ಯ ಎನ್ನುವ ಭಾವನೆ ಮೂಡಿಸುತ್ತಿದ್ದ ಬಿಜೆಪಿ ನಾಯಕರ ಅಬ್ಬರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಆಗಿನ ಸಿಎಂ ಅಖೀಲೇಶ್ ಯಾದವ್ ನೇತೃತ್ವದ ಎಸ್ಪಿ, ಮಾಯಾವತಿ ನೇತೃತ್ವದ ಬಿಎಸ್ಪಿ ಯಾವುದೇ ತಂತ್ರ ಕೆಲಸ ಮಾಡಲಿಲ್ಲ. ಯಾದವ ಕಲಹವೂ ಬಿಜೆಪಿಯ ಪ್ರಚಂಡ ಗೆಲುವಿಗೆ ಇನ್ನೊಂದು ಕಾರಣವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಬಿಜೆಪಿ ಇದೀಗ ಹಿಂದುತ್ವ ಇಲ್ಲದೇ ಪಕ್ಷ ಇಲ್ಲ ಎನ್ನುವುದನ್ನು ಮತ್ತೂಮ್ಮೆ ಸಾರಿ ಹೇಳಿದೆ. 2019ರ ಲೋಕಸಭಾ ಚುನಾವಣೆಗೆ ತಯಾರಿಯ ಮುನ್ಸೂಚನೆ ನೀಡಿದೆ. ಆದಿತ್ಯನಾಥ್ರನ್ನು ಸಿಎಂ ಮಾಡುವ ಬಿಜೆಪಿ ವರಿಷ್ಠರ ನಿರ್ಧಾರದಲ್ಲಿ ತಕ್ಷಣಕ್ಕೆ ಕಾಣುವ ಲೆಕ್ಕಾಚಾರ ಇಷ್ಟೆ.
– ಬಿಜೆಪಿ ಹಿಂದುತ್ವವನ್ನು ಬಿಟ್ಟಿಲ್ಲ. ಹಿಂದುತ್ವವೇ ನಮ್ಮ ಮೂಲ ಮಂತ್ರ ಎನ್ನುವುದನ್ನು ಉಳಿದೆಲ್ಲಾ ಯೋಜನೆಗಳ ನಡುವೆಯೂ ತಿಳಿಸಬೇಕಿತ್ತು. ಅದನ್ನು ಈ ಮೂಲಕ ಜಾಹೀರುಪಡಿಸಿದೆ. (ಪರಿಣಾಮ ಬೇರೆ)
– ಅಖಂಡ ಭಾರತವನ್ನು ಕೇಸರಿಯಾಗಿಸುವ ಕನಸು ಕಾಣುತ್ತಿರುವ ಬಿಜೆಪಿ ಒಂದೊಮ್ಮೆ ಈಗಾಗಲೇ ಕೇಂದ್ರದಲ್ಲಿ ಘೋಷಿಸಲಾಗಿರುವ ಜನಪ್ರಿಯ ಯೋಜನೆಗಳಾದ ಸ್ವಚ್ಛ ಭಾರತ, ಅಪನಗದೀಕರಣದ ಭಾಗವಾಗಿ ಪರಿಚಯಿಸಲಾದ ಕ್ಯಾಶ್ಲೆಸ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇರಿ ಉಳಿದ ಅಭಿವೃದ್ಧಿ ಯೋಜನೆಗಳು ಒಂದೊಮ್ಮೆ ಯಶಸ್ವಿ ಆಗದೇ ಇದ್ದಲ್ಲಿ ಅಥವಾ ನಿರೀಕ್ಷಿತ ಜನಪ್ರಿಯತೆ ಕಂಡುಕೊಳ್ಳದೇ ಇದ್ದಲ್ಲಿ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಬೇಕಾಗುತ್ತದೆ ಎನ್ನುವ ದೂರಾಲೋಚನೆ ಮಾಡಿದೆ.
– ಉತ್ತರಪ್ರದೇಶದಂಥ ಸೂಕ್ಷ್ಮರಾಜ್ಯದಲ್ಲಿ ರಾಮಮಂದಿರ ವಿಚಾರವಾಗಿ ನೀಡಲಾದ ಮಾತು ಉಳಿಸಿಕೊಳ್ಳುವ ಅಗತ್ಯ ಬಿಜೆಪಿಗಿದೆ. ಇದಕ್ಕೆ ಈಗಲೇ ಅಡಿಪಾಯ ಹಾಕಿಕೊಳ್ಳುವುದಕ್ಕೆ ಮಹತ್ವ ನೀಡಬೇಕಾದ ಅನಿವಾರ್ಯತೆಯೂ ಇದೆ. ಹಾಗಿರುವಾಗ ಅದಕ್ಕೆ ಸೂಕ್ತ ಅಭ್ಯರ್ಥಿ ಆದಿತ್ಯನಾಥ್ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.
– ಆದಿತ್ಯನಾಥ್ ಕೇವಲ ಫಯರ್ಬ್ರಾಂಡ್ ಹಿಂದುತ್ವವಾದಿ ಅಲ್ಲ. ತಮ್ಮದೇ ಆದ ಸಂಘಟನೆಗಳ ಹೋರಾಟದ ಮೂಲಕ ಭ್ರಷ್ಟಾಚಾರ, ಮಾಫಿಯಾಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಒಲವು ಹೊಂದಿದ್ದಾರೆ ಎನ್ನುವುದನ್ನು ಪ್ರತಿಬಿಂಬಿಸುವ ಉದ್ದೇಶ ಮೋದಿ – ಅಮಿತ್ ಶಾ ಅವರದ್ದಾಗಿರಲಿಕ್ಕೆ ಸಾಕು. ಈಗಾಗಲೇ ಯುಪಿ ವಿಚಾರದಲ್ಲಿ ಮೋದಿ ಪ್ರಕಟಿಸಿರುವ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಅಭಿವೃದ್ಧಿ ಯೋಜನೆ ಆದಿತ್ಯನಾಥ್ರಿಂದ ಸಾಧ್ಯ ಎನ್ನುವ ಲೆಕ್ಕಾಚಾರವೂ ಇರಬಹುದು.
– 403 ವಿಧಾನಸಭಾ ಕ್ಷೇತ್ರಗಳ ಪೈಕಿ ಜೀರ್ಣಿಸಿಕೊಳ್ಳಲಾಗದ ರೀತಿ 312ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಲಿದೆ. 80 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲೂ ಪ್ರಚಂಡ ಗೆಲುವಿಗೆ ಈಗಲೇ ಅಣಿಯಾಗಲು ಹೆಜ್ಜೆ ಇಟ್ಟಿದೆ.
– ಆರ್ಎಸ್ಎಸ್ ಮನೋಜ್ ಸಿನ್ಹಾ ಅವರನ್ನು ಸಿಎಂ ಮಾಡುವ ಒಲವು ಹೊಂದಿದ್ದರೂ, ಅಂತಿಮ ವೇಳೆಯಲ್ಲಿ ಯೋಗಿ ಆದಿತ್ಯನಾಥ್ ಬೆಂಬಲಿಗರ ಒಲವು ನೋಡಿ ಸುಮ್ಮನಾಗಿರಬೇಕು ಅಥವಾ ಯೋಗಿ ಯೋಗದ ಕಡೆಯೇ ಒಲವು ತೋರಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಿನ್ಹಾಗಿಂತ ಯೋಗಿ ಜನಪ್ರಿಯರಾಗಿ ಗುರುತಿಸಿಕೊಂಡಿದ್ದು ಗೊತ್ತಿರುವ ವಿಚಾರವೇ ಆಗಿದೆ.
ಇಷ್ಟಾಗಿಯೂ ಬಿಜೆಪಿಗೆ ಆದಿತ್ಯನಾಥ್ ಅವರ ಮೇಲೆ ಒಂದು ಭಯ ಇದ್ದೇ ಇದೆ. ಎಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಮುಜುಗರಕ್ಕೆ ಕಾರಣವಾಗಬಹುದೋ ಎನ್ನುವುದು. ಹೀಗಾಗಿಯೇ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವಂತೆ ಕಾಣಿಸುತ್ತಿದೆ. ಒಟ್ಟಾರೆ ಬಾಬ್ರಿ ಮಸೀದಿ ವಿವಾದ, ಅಯೋಧ್ಯಾ ರಾಮಜನ್ಮಭೂಮಿ/ಮಂದಿರ ವಿವಾದಗಳ ಹಿಂದಿರುವ ಬಿಜೆಪಿಯ ಅನೇಕ ನಾಯಕರಿಗೆ ಉತ್ತರಪ್ರದೇಶ ಎಷ್ಟು ಪ್ರತಿಷ್ಠೆಯ ಕಣವಾಗಿತ್ತೋ ಅದೇ ರೀತಿ ಅಲ್ಪಸಂಖ್ಯಾತ ವರ್ಗದ ಬೆಂಬಲ ಪಡೆದು ಇದೀಗ ಐತಿಹಾಸಿಕ ಜಯವೊಂದಕ್ಕೆ ಕಾರಣವಾಗಿರುವ ಅಲ್ಲಿಯ ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಕೆಲಸಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಹಿಂದುತ್ವವನ್ನೂ ಮೀರಿ ಜನಹಿತಕ್ಕಾಗಿ ಪ್ರಧಾನಿ ಮೋದಿ ಆಶಯದಂತೆ ಸೇವಕನಾಗಿ ಕಾರ್ಯನಿರ್ವಹಿಸಬೇಕಿದೆ. ಸ್ವಲ್ಪ ಎಡವಿದರೂ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷದ ನಾಯಕರಂತೆ ಜನಮನ್ನಣೆ ಕಳೆದುಕೊಂಡು ಧೂಳಿಪಟ ಆಗುವುದರಲ್ಲಿ ಅನುಮಾನವಿಲ್ಲ.
– ಜಿಎಸ್ಬಿ ಅಗ್ನಿಹೋತ್ರಿ