Advertisement

ಹೊಸ ಚಿತ್ರದ ಗೊಂದಲದಲ್ಲಿ ಯೋಗರಾಜ್‌ ಭಟ್‌

01:14 PM Oct 26, 2017 | Team Udayavani |

ಯೋಗರಾಜ್‌ ಭಟ್‌ ಹೊಸ ಚಿತ್ರ ಯಾವುದು ಮತ್ತು ಯಾರಿಗೆ? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಇದೆ. ಕಾರಣ, ಭಟ್ಟರ ಅಂಗಳದಲ್ಲಿ ಇಬ್ಬಿಬ್ಬರು ನಿಂತಿದ್ದಾರೆ. ಒಬ್ಬರು “ರೋಗ್‌’ ಖ್ಯಾತಿಯ ಇಶಾನ್‌ ಆದರೆ, ಇನ್ನೊಬ್ಬರು “ಟೈಗರ್‌’ ಖ್ಯಾತಿಯ ಪ್ರದೀಪ್‌. ಇವರಿಬ್ಬರೂ ಭಟ್ಟರ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಹಾಗಾಗಿ ಭಟ್ಟರ ಹೊಸ ಚಿತ್ರ ಯಾವುದು ಮತ್ತು ಯಾರಿಗೆ ಎಂಬ ಪ್ರಶ್ನೆ ಸದ್ಯ ಕೇಳಿ ಬರುತ್ತಿದೆ.

Advertisement

“ಮುಗುಳು  ನಗೆ’ ನಂತರ ಭಟ್ಟರು ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದ ಸಂದರ್ಭದಲ್ಲೇ, ಇಶಾನ್‌ಗೊಂದು ರೊಮ್ಯಾಂಟಿಕ್‌ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ಸಿ.ಆರ್‌. ಮನೋಹರ್‌ ಮತ್ತು ಇಶಾನ್‌ ಇಬ್ಬರೂ ಹೋಗಿ ಮಾತಾಡಿ ಬಂದಿದ್ದರು. ಸರಿ, ಇಶಾನ್‌ ಅಭಿನಯದಲ್ಲಿ ಭಟ್ಟರು ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಯಿತು. ಇದಾದ ಕೆಲವೇ ದಿನಗಳಲ್ಲಿ ಪ್ರದೀಪ್‌ ಅಭಿನಯದಲ್ಲೊಂದು ಚಿತ್ರವನ್ನು ಭಟ್ಟರು ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಸುದ್ದಿಯಾಯಿತು. ಈ ಕುರಿತು ನೇರವಾಗಿ ಅವರನ್ನೇ ವಿಚಾರಿಸಿದರೆ, “ಸದ್ಯಕ್ಕೆ ಮಾತುಕತೆಯಾಗುತ್ತಿದೆ.

 ಯಾವುದೂ ಪಕ್ಕಾ ಆಗಿಲ್ಲ. ಯಾರೂ ಪಕ್ಕಾ ಆಗಿಲ್ಲ’ ಎಂಬ ಉತ್ತರ ಬರುತ್ತದೆ. ಅಲ್ಲಿಗೆ ಯೋಗರಾಜ್‌ ಭಟ್‌ ಎದುರು ಎರಡು ಆಯ್ಕೆಗಳಿದ್ದಂತಿವೆ. ಇವೆರಡರಲ್ಲಿ ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅಥವಾ ಇದೆರಡರ ಹೊರತಾಗಿ ಮತ್ತಿನ್ನೇನಾದರೂ ಮಾಡುತ್ತಾರಾ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ಮೂರೂ ಚೆಕ್‌ಗಳು ಬೌನ್ಸ್‌: ಇನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರು ಕೊಟ್ಟ ಮೂರೂ ಚೆಕ್‌ಗಳು ಬೌನ್ಸ್‌ ಆಗಿದೆಯಂತೆ. ಹಾಗಾಗಿ ಇನ್ನು ಅವರನ್ನು ಕೇಳಿ ಪ್ರಯೋಜನವಿಲ್ಲ, ಇದನ್ನು ಕಾನೂನು ರೀತಿಯಲ್ಲೇ ಬಗೆಹರಿಸಿಕೊಳ್ಳಬೇಕೆಂದು ಅವರು ಚಿಂತನೆ ನಡೆಸುತ್ತಿದ್ದು, ಬಹುಶಃ ಪರಿಹಾರ ಸಿಗದಿದ್ದರೆ, ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆ ಇದೆ.

ಕನಕಪುರ ಶ್ರೀನಿವಾಸ್‌ ನಿರ್ಮಾಣದ “ಧನ ಕಾಯೋನು’ ಚಿತ್ರವನ್ನು ಯೋಗರಾಜ್‌ ಭಟ್‌ ಈ ಹಿಂದೆ ನಿರ್ದೇಶಿಸಿದ್ದರು. ಆ ಚಿತ್ರಕ್ಕೆ ಕೆಲಸ ಮಾಡಿದಕ್ಕಾಗಿ ಶ್ರೀನಿವಾಸ್‌ ಒಂದಿಷ್ಟು ಹಣ ಉಳಿಸಿಕೊಂಡಿದ್ದರು. “ಭರ್ಜರಿ’ ಬಿಡುಗಡೆಯ ಸಂದರ್ಭದಲ್ಲಿ ಹಣ ಕೊಡುವುದಾಗಿ ಮಾತು ಕೊಟ್ಟಿದ್ದರು. ಯಾವಾಗ “ಭರ್ಜರಿ’ ಬಿಡುಗಡೆಯವರೆಗೂ ಬಂದರೂ, ದುಡ್ಡು ಬರಲಿಲ್ಲವೋ ಆಗ ನ್ಯಾಯಾಲಯಕ್ಕೆ ಹೋಗುವ ಬಗ್ಗೆ ಭಟ್ಟರು ಯೋಚಿಸಿದ್ದರು. ಅಷ್ಟರಲ್ಲಿ ಶ್ರೀನಿವಾಸ್‌ ಮೂರು ಚೆಕ್‌ಗಳನ್ನು ಕೊಟ್ಟು ತಡೆದಿದ್ದರು. ಆದರೆ, ಅವರು ಕೊಟ್ಟ ಮೂರಕ್ಕೆ ಮೂರು ಚೆಕ್‌ಗಳು ಸಹ ಬೌನ್ಸ್‌ ಆಗಿದೆ. ಹಾಗಾಗಿ ಆ ದುಡ್ಡನ್ನು ನ್ಯಾಯಾಲಯದ ಪ್ರಕಾರ ಪಡೆಯುವ ಕುರಿತು ಅವರು ಯೋಚಿಸುತ್ತಿದ್ದಾರಂತೆ. ಅಷ್ಟರಲ್ಲಿ ದುಡ್ಡು ಬಂದರೆ, ಪ್ರಕರಣ ಅಲ್ಲಿಗೇ ಬಗೆಹರಿಯಬಹುದು. ದುಡ್ಡು ಬರಲಿಲ್ಲ ಎಂದರೆ ಯೋಗರಾಜ್‌ ಭಟ್‌ ವರ್ಸಸ್‌ ಕನಕಪುರ ಶ್ರೀನಿವಾಸ್‌ ಕೇಸ್‌ ನಡೆಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next