Advertisement

ವಿಶ್ವ ದಾಖಲೆ ನಿರ್ಮಿಸಲು ಯೋಗ ತಾಲೀಮು

06:28 AM May 13, 2019 | Team Udayavani |

ಮೈಸೂರು: ಮೈಸೂರು ಯೋಗ ಫೌಂಡೇಷನ್‌ ವತಿಯಿಂದ 2019 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಬೃಹತ್‌ ಸಾಮೂಹಿಕ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ ಭಾನುವಾರ ಯೋಗ ತಾಲೀಮು ನಡೆಯಿತು. ನಗರದ ಕುವೆಂಪುನಗರದಲ್ಲಿರುವ ಸೌಗಂಧಿಕ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

Advertisement

ವಿವಿಧ ಆಸನಗಳ ಪ್ರದರ್ಶನ: ಮೊದಲಿಗೆ 4 ನಿಮಿಷ ಚಲನ ಕ್ರಿಯೆ ಮತ್ತು ಭುಜದ ವ್ಯಾಯಾಮ ಮಾಡಿದ ಯೋಗಪಟುಗಳು, ಬಳಿಕ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ ಸೇರಿದಂತೆ 19 ಬಗೆಯ ಆಸನಗಳನ್ನು ಪ್ರದರ್ಶಿಸಿದರು. ನಂತರ 14 ನಿಮಿಷಗಳ ವರೆಗೆ ಕಪಾಲಭಾತಿ, ನಾಡಿ ಶೋಧನ, ಶೀತಲೀ, ಬ್ರಾಮರೀ, ಧ್ಯಾನವನ್ನು ಒಳಗೊಂಡಂತೆ ಪ್ರಾಣಾಯಾಮ ಮಾಡಿದರು.

ದಾಖಲೆಗೆ ತಯಾರಿ: ಇದೇ ವೇಳೆ ಯೋಗ ಫೆಡರೇಷನ್‌ ಆಫ್ ಮೈಸೂರು ಸಂಸ್ಥೆಯ ಶ್ರೀಹರಿ ಮಾತನಾಡಿ, ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಆ ದಿನದಂದು ಯೋಗ ದಾಖಲೆ ನಿರ್ಮಿಸುವ ಉದ್ದೇಶದಿಂದ ದೇಶಾದ್ಯಂತ ನಾನಾ ಸಂಘಟನೆಗಳು ದಾಖಲೆ ನಿರ್ಮಿಸಲು ತಯಾರಿ ನಡೆಸುತ್ತಿವೆ.

2018 ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಬಾಬಾ ರಾಮ್‌ದೇವ್‌ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಒಂದೇ ವೇದಿಕೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬೃಹತ್‌ ಯೋಗಾಭ್ಯಾಸ ನಡೆಸುವ ಮುಖಾಂತರ 2017 ರಲ್ಲಿ ಮೈಸೂರಿನ ಜನತೆ ನಿರ್ಮಿಸಿದ್ದ 56 ಸಾವಿರ ಜನರನ್ನು ಒಳಗೊಂಡ ಯೋಗ ಪ್ರದರ್ಶನದ ವಿಶ್ವ ದಾಖಲೆಯನ್ನು ಅಳಿಸಿಹಾಕಿದ್ದಾರೆ ಎಂದು ಹೇಳಿದರು.

56,000 ಮಂದಿ ಸಂಪರ್ಕ: ಈ ಹಿನ್ನೆಲೆಯಲ್ಲಿ ಮೈಸೂರಿನ ಯೋಗ ಸಂಘ ಸಂಸ್ಥೆಗಳೆಲ್ಲ ಒಗ್ಗೂಡಿ 2019ರ ಜೂ.21 ರಂದು ಜರುಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಒಂದೂವರೆ ಲಕ್ಷ ಜನರನ್ನು ಸೇರಿಸಿ ಬೃಹತ್‌ ಯೋಗ ಪ್ರದರ್ಶಿಸಿ ದೇಶಕ್ಕೆ ಸಾಮರಸ್ಯದ ಸಂದೇಶ ಸಾರುವ ಉದ್ದೇಶ ಹೊಂದಿವೆ. ಅದಕ್ಕಾಗಿ ಕಳೆದ 6 ತಿಂಗಳಿಂದ ಅಭ್ಯಾಸ ನಡೆಸಲಾಗುತ್ತಿದೆ. ಈಗಾಗಲೆ ಈ ಹಿಂದೆ ದಾಖಲೆ ನಿರ್ಮಿಸಿದ್ದ 56,000 ಮಂದಿ ಸಂಪರ್ಕದಲ್ಲಿದ್ದಾರೆ.

Advertisement

ಇದಲ್ಲದೆ 111 ತರಬೇತುದಾರರು ಪ್ರತೀ ಭಾನುವಾರಗಳಂದು ನಾನಾ ಬಡಾವಣೆಗಳಿಗೆ ತೆರಳಿ ಯೋಗ ತರಬೇತಿ ನೀಡುವ ಮುಖಾಂತರ ಈ ವರೆಗೆ 40,000 ಯೋಗಾಸಕ್ತರನ್ನು ಸಂಘಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಸೇರಿಸಿ ಒಂದೂವರೆ ಲಕ್ಷ ಜನರನ್ನು ಒಳಗೊಂಡ ಬೃಹತ್‌ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸುವುದಾಗಿ ತಿಳಿಸಿದರು.

ಗಣ್ಯರು ಅಂಬಾಸಿಡರ್‌: ಮುಂದಿನ ದಿನಗಳಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಶ್ರೀನಾಥ್‌ ಸೇರಿದಂತೆ 10 ಮಂದಿ ಗಣ್ಯರನ್ನು ಬ್ರಾಂಡ್‌ ಅಂಬಾಸಿಡರ್‌ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಯೋಗ ವಿವಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಯೋಗ ವಿವಿ ಸ್ಥಾಪಿಸುವ ಉದ್ದೇಶದಿಂದ 200 ಎಕರೆ ಜಾಗ ಗುರುತಿಸಿದ್ದೇವೆ. ಭವಿಷ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ವಿವಿ ಸ್ಥಾಪನೆಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next