Advertisement

ಕರಾವಳಿಯಲ್ಲಿ ಮಳೆ ಮತ್ತೆ ಚುರುಕು ; 3 ದಿನ ಎಲ್ಲೋ ಅಲರ್ಟ್‌

08:58 AM Aug 22, 2022 | Team Udayavani |

ಮಂಗಳೂರು/ಉಡುಪಿ : ಹಲವು ದಿನಗಳ ವಿರಾಮದ ಬಳಿಕ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಶನಿವಾರ ರಾತ್ರಿಯಿಂದ ಮತ್ತೆ ಮಳೆ ಚುರುಕುಗೊಂಡಿದೆ.

Advertisement

ಕರಾವಳಿಯಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ದ.ಕ. ಜಿಲ್ಲೆಯ ವಿವಿಧೆಡೆ ಬೆಳಗ್ಗೆ ದಟ್ಟ ಮೋಡ ಆವರಿಸಿ ಉತ್ತಮ ಮಳೆಯ ಮುನ್ಸೂಚನೆ ನೀಡಿತು. ಬಳಿಕ ಮೋಡಗಳು ದುರ್ಬಲವಾಗಿ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಹೆಚ್ಚಿನ ಕಡೆ ಉತ್ತಮ ಮಳೆ ಸುರಿದಿದೆ.

ಉಡುಪಿ: ಬಿಟ್ಟು ಬಿಟ್ಟು ಮಳೆ
ಉಡುಪಿ: ಜಿಲ್ಲೆಯಲ್ಲಿ ಶನಿವಾರ ರಾತ್ರಿ, ರವಿವಾರ ಹಲವೆಡೆ ಬಿಟ್ಟುಬಿಟ್ಟು ಮಳೆಯಾಗಿದೆ. ಉಡುಪಿ ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಪೂರ್ತಿ ಉತ್ತಮ ಮಳೆಯಾಗಿದೆ. ಕುಂದಾಪುರ, ಕಾರ್ಕಳ ತಾಲೂಕಿನ ವಿವಿಧೆಡೆ ಕೂಡ ಉತ್ತಮ ಮಳೆಯಾಗಿದೆ.

ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬಿಸಿಲು, ಮೋಡ ಕವಿದ ವಾತಾವರಣ ನಡುವೆ ಆಗಾಗ್ಗೆ ಧಾರಕಾರ ಮಳೆ ಸುರಿದಿದೆ. ಸಂಜೆ ಬಳಿಕ ನಗರದ ಸುತ್ತಮುತ್ತ ಕೆಲಕಾಲ ಬಿಟ್ಟುಬಿಟ್ಟು ನಿರಂತರ ಮಳೆಯಾಗಿದೆ.

ಮಳೆ ಮತ್ತೆ ಚುರುಕು ಆಗಿದ್ದರಿಂದ ಮುಖ್ಯವಾಗಿ ಭತ್ತ ಕೃಷಿಕರ ಮೊಗದಲ್ಲಿ ಹರ್ಷ ಕಾಣಿಸಿದೆ. ಕೆಲವು ದಿನಗಳ ಬಿಸಿಲಿನಿಂದಾಗಿ ಗದ್ದೆಗಳಲ್ಲಿ ನೀರು ಕಡಿಮೆಯಾಗಿದ್ದು, ಇನ್ನೇನು ಒಣಗುವ ಹಂತಕ್ಕೆ ಹೋಗುವಷ್ಟರಲ್ಲಿ ಮತ್ತೆ ಮಳೆ ಸುರಿದಿದೆ.

Advertisement

ಮೂರು ದಿನ ಎಲ್ಲೋ ಅಲರ್ಟ್‌
ಮುಂದಿನ ಮೂರ್‍ನಾಲ್ಕು ದಿನ ಕರಾವಳಿಯಲ್ಲಿ ಮಳೆ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆಗಸ್ಟ್‌ 22, 24 ಮತ್ತು 25ಕ್ಕೆ ಅನ್ವಯ ವಾಗುವಂತೆ ಎಲ್ಲೋ ಅಲರ್ಟ್‌ ನೀಡಲಾಗಿದೆ. ಈ ಅವಧಿಯಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿಗೂ ಈ 3 ದಿನಗಳಿಗೆ ಎಲ್ಲೋ ಅಲರ್ಟ್‌ ನೀಡಲಾಗಿದೆ. ಕಾಸರಗೋಡು ಸಹಿತ ಕೇರಳದ ವಿವಿಧೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದೂ ತಿಳಿಸಲಾಗಿದೆ.

ಎಚ್ಚರಿಕೆ ವಹಿಸಲು ಸೂಚನೆ
ಸಮುದ್ರದಲ್ಲಿ ಆ. 23ರಿಂದ 25ರ ವರೆಗೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇದೆ. ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆ. ಆದುದರಿಂದ ಕೇರಳ ಮತ್ತು ಕರ್ನಾಟಕ ಕರಾವಳಿಯ ಮೀನುಗಾರರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next