Advertisement

ವರ್ಷಾರಂಭ: ದೇವಾಲಯಗಳಲ್ಲಿ ಭಕ್ತರ ದಂಡು

10:54 PM Jan 01, 2020 | Lakshmi GovindaRaj |

ಬೆಂಗಳೂರು: ನೂತನ ವರ್ಷಾರಂಭದ ಹಿನ್ನೆಲೆಯಲ್ಲಿ ರಾಜ್ಯದ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬಂತು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ಶ್ರೀ ನಿಮಿಷಾಂಬ, ಕೋಟೆ ಆಂಜನೇಯ, ಶ್ರೀ ಲಕ್ಷ್ಮಿ ದೇವಿ, ಗಂಗಾಧರೇಶ್ವರಸ್ವಾಮಿ ದೇವಾಲಯ, ಮೈಸೂರಿನ ಚಾಮುಂಡಿ ಬೆಟ್ಟ, ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ದೇವಾಲಯಗಳಿಗೆ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ವರ್ಷಾಚರಣೆ ಆಚರಿಸಿದರು.

Advertisement

ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯ, ಬಾದಾಮಿ ಬನಶಂಕರಿ ದೇವಿ, ಸವದತ್ತಿ ಎಲ್ಲಮ್ಮ ದೇವಾಲಯಗಳಲ್ಲೂ ಭಕ್ತರ ದಂಡು ಕಂಡು ಬಂತು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಬುಧವಾರ ಮುಂಜಾನೆಯಿಂದ ರಾತ್ರಿ 9ಗಂಟೆವರೆಗೆ ಸಾವಿರಾರು ಭಕ್ತಾದಿಗಳು 1 ಕಿ.ಮಿ. ದೂರ ಸರದಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು. ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ ಬುಧವಾರ ಭಕ್ತರಿಗೆ ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳನ್ನು ವಿತರಣೆ ಮಾಡಲಾಯಿತು.

ಸಂಭಾವ್ಯ ದುರ್ಘ‌ಟನೆ ತಪ್ಪಿಸಲು ವಿವಿಧ ಪ್ರವಾಸಿ ತಾಣಗಳ ಭೇಟಿಗೆ ನಿಷೇಧಾಜ್ಞೆ ಹೇರಿ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಹಲವು ಪ್ರವಾಸಿಗರು ದೇವಾಲಯಗಳಿಗೆ ಭೇಟಿ ನೀಡಿ, ದರ್ಶನ ಪಡೆಯುತ್ತಿರುವುದು ಕಂಡು ಬಂತು. ಉತ್ತಮ ಕಾರ್ಯಗಳ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಬೇಕೆಂಬುದು ಹಲವರ ನಂಬಿಕೆ. ಹೀಗಾಗಿ, ಸಾಕಷ್ಟು ಜನರು ದೇವಸ್ಥಾನ, ಚರ್ಚ್‌ಗಳಿಗೆ ತೆರಳಿ ಪ್ರಾರ್ಥಿಸಿ, ನಂತರ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದು ಕಂಡು ಬಂತು.

ಪ್ರವಾಸಿತಾಣಗಳಲ್ಲೂ ಜನಸಂದಣಿ: ಮಂಡ್ಯ ಜಿಲ್ಲೆ ಕೆಆರ್‌ಎಸ್‌, ಕಾವೇರಿ ಸಂಗಮ, ಟಿಪ್ಪು ಬೇಸಿಗೆ ಅರಮನೆ, ಟಿಪ್ಪು ಸಮಾದಿ ಗುಂಬಸ್‌, ರಂಗನತಿಟ್ಟು ಪಕ್ಷಿಧಾಮ, ಮೈಸೂರು ಅರಮನೆ, ಮೃಗಾಲಯಗಳಲ್ಲೂ ಪ್ರವಾಸಿಗರ ದಟ್ಟಣೆ ಕಂಡು ಬಂತು. ಇದರಿಂದಾಗಿ ಕೆಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿ, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹೊಸ ವರ್ಷದ ಅಂಗವಾಗಿ ಹಲವೆಡೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಕೋಟೆ ನಾಡಲ್ಲಿ ಜನಜಾತ್ರೆ
ಚಿತ್ರದುರ್ಗ: ಹೊಸ ವರ್ಷ 2020ರ ಆರಂಭದ ದಿನದಂದು ಕೋಟೆ ನಾಡು, ಚಿತ್ರದುರ್ಗದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಬಹು ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಅದರಲ್ಲೂ ಒಂದೇ ದಿನ ಅತಿ ಹೆಚ್ಚು ಪ್ರವಾಸಿಗರು ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಭೇಟಿ ನೀಡಿದ್ದು ವಿಶೇಷ. ಇಲ್ಲಿನ ಕಿರು ಮೃಗಾಲಯ ಸ್ಥಾಪನೆಯಾದ ದಿನದಿಂದ ಇದುವರೆಗೆ ಆಡುಮಲ್ಲೇಶ್ವರದ ಟಿಕೆಟ್‌ ಕೌಂಟರ್‌ ಕಲೆಕ್ಷನ್‌ 1 ಲಕ್ಷ ರೂ.ದಾಟಿರಲಿಲ್ಲ.

Advertisement

ಆದರೆ, ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ 1.40 ಲಕ್ಷ ರೂ. ಸಂಗ್ರಹವಾಗಿದ್ದು, 3700 ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ಹೊಸ ವರ್ಷದ ಮೊದಲ ದಿನದಂದು ದಾಖಲೆ ಪ್ರಮಾಣದಲ್ಲೆ ಪ್ರವಾಸಿಗರು ಆಗಮಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸುಮಾರು ಒಂದೂವರೆ ಸಾವಿರ ಪ್ರವಾಸಿಗರು ಬಂದು ಹೋಗುವ ಕೋಟೆಗೆ ಬುಧವಾರ 6,134 ಪ್ರವಾಸಿಗರು ಬಂದಿದ್ದಾರೆ.

ಮಕ್ಕಳಿಂದ ಹೆತ್ತವರ ಪಾದ ಪೂಜೆ
ಕುಣಿಗಲ್‌: ತುಮಕೂರು ಜಿಲ್ಲೆ ಕುಣಿಗಲ್‌ನ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಸ ವರ್ಷದ ಅಂಗವಾಗಿ ತಂದೆ, ತಾಯಿ ಹಾಗೂ ರೈತರ ಮಹತ್ವ ಪರಿಚಯಿಸಲು ಮಕ್ಕಳಿಂದ ಹೆತ್ತವರಿಗೆ ಪಾದಪೂಜೆ ಮತ್ತು ತಂದೆ-ತಾಯಿಯರಿಂದ ಕೈ ತುತ್ತು ತಿನ್ನಿಸುವ ಕಾರ್ಯಕ್ರಮ ನಡೆಯಿತು. ತಂದೆ, ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪಾದಪೂಜೆ ಮತ್ತು ಕೈ ತುತ್ತು ತಿನ್ನಿಸುವ ಕಾರ್ಯಕ್ರಮ ಆಯೋಜಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಾದ ಪೂಜೆ ಮಾಡು ವುದು ಹಿಂದೂ ಸಂಪ್ರದಾಯವಾದರೂ ಮುಸ್ಲಿಂ ಪೋಷಕರು ಭಾಗವಹಿಸಿದ್ದು ವಿಶೇಷವಾಗಿತ್ತು.

ಮದ್ಯ ಮಾರಾಟ: 597 ಕೋಟಿ ರೂ.ಆದಾಯ
ಬೆಂಗಳೂರು: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಶೇ.10 ರಿಂದ 15ರಷ್ಟು ಹೆಚ್ಚು ಮದ್ಯ ಮಾರಾಟವಾಗಿದ್ದು, 597 ಕೋಟಿ ರೂ.ಅಬಕಾರಿ ಇಲಾಖೆಗೆ ಆದಾಯ ಬಂದಿದೆ. 2018ರ ವರ್ಷದ ಡಿ.21 ರಿಂದ 31ರವರೆಗಿನ ಮದ್ಯ ಮಾರಾಟ ಹಾಗೂ 2019ರ ವರ್ಷದ ಡಿ.21 ರಿಂದ 31ರವರೆಗಿನ ಮಾರಾಟದ ಅಂಕಿ-ಅಂಶಗಳ ಪ್ರಕಾರ ಶೇ.10 ರಿಂದ 15ರಷ್ಟು ಮದ್ಯ ಮಾರಾಟ ಹೆಚ್ಚಳವಾಗಿದೆ. 2018ರಲ್ಲಿ ಇದೇ ಅವಧಿಯಲ್ಲಿ ಇಲಾಖೆಯ ಆದಾಯ 481 ಕೋಟಿ ರೂ.ಆಗಿದ್ದರೆ, 2019ರಲ್ಲಿ ಆದಾಯ 597 ಕೋಟಿ ರೂ.ಎಂದು ಹೇಳಲಾಗಿದೆ.

ಹೊಸ ವರ್ಷಾಚರಣೆ ವೇಳೆ ದುರ್ಘ‌ಟನೆ; ಇಬ್ಬರ ಸಾವು
ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭ ರಾಜ್ಯದ ವಿವಿಧೆಡೆ ನಡೆದ ದುರ್ಘ‌ಟನೆಗಳಲ್ಲಿ ಇಬ್ಬರು ಮೃತಪಟಿದ್ದಾರೆ. ಹೊಸಕೋಟೆ ತಾಲೂಕಿನ ರಾ.ಹೆ.75ರ ಅತ್ತಿವಟ್ಟ ಗೇಟ್‌ ಬಳಿ ನೂತನ ವರ್ಷಾಚರಣೆಯ ಪ್ರಯುಕ್ತ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಮಾಲೂರಿನ ವಾಸಿ ಸಲ್ಮಾನ್‌ ಖಾನ್‌ (19) ಮೃತಪಟ್ಟಿದ್ದಾನೆ. ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋಲಾರದಿಂದ ಹೊಸಕೋಟೆಗೆ ಬರುತ್ತಿದ್ದಾಗ ಅತ್ತಿವಟ್ಟ ಗೇಟ್‌ ಬಳಿ ಹಿಂಬದಿಯಿಂದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಮೃತಪಟ್ಟಿದ್ದಾನೆ.

ಹಿಂಬದಿ ಸವಾರ ಗೋಪಿ (20) ಸಹ ತೀವ್ರವಾಗಿ ಗಾಯ ಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಕಲ್ಲು ಕೋರೆ ಯಲ್ಲಿ ಹೊಸವರ್ಷದ ಸಂಭ್ರಮಾಚರಣೆ ಮಾಡುವಾಗ ಆಕಸ್ಮಿಕವಾಗಿ ಹೊಂಡದೊಳಗೆ ಬಿದ್ದು, ಜಮ್ಮನಹಳ್ಳಿ ಗ್ರಾಮದ ಅರುಣ್‌ ಕುಮಾರ್‌ (28) ಎಂಬ ಯುವಕ ಅಸುನೀಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next