Advertisement

ಯಯಾತಿ…ದೇವಯಾನಿಯ ಕರಾರು ಮತ್ತು ಶರ್ಮಿಷ್ಠೆಯ ಬುದ್ಧಿವಂತಿಕೆ!

01:25 PM Jul 03, 2018 | |

ಶುಕ್ರಾಚಾರ್ಯರ ಮಗಳು ದೇವಯಾನಿಯು ಶರ್ಮಿಷ್ಠೆಯ ಸ್ನೇಹವಾದ ಮೇಲೆ ಅವಳೊಂದಿಗೆ ಬಹಳ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಳು, ಕೆಲಕಾಲದ ನಂತರ ಒಂದು ದಿನ ದೇವಯಾನಿ ಮತ್ತು ಶರ್ಮಿಷ್ಠೆಯು ಅವರ ಪರಿವಾರದವರೊಂದಿಗೆ ವಿಹರಿಸುತ್ತ ಅರಣ್ಯ ಮಧ್ಯದ ಒಂದು ರಮಣೀಯವಾದ ಸ್ಥಳಕ್ಕೆ ಬಂದರು, ಆ ಸ್ಥಳವು ಹಚ್ಚಹಸಿರಿನಿಂದ ಕೂಡಿದ್ದು, ಸುಂದರವಾದ ಒಂದು ಸರೋವರವಿತ್ತು , ಕೋಗಿಲೆ ನವಿಲುಗಳು ಅಲ್ಲಿ ವಾಸಿಸುತ್ತಿದ್ದವು. ಆ ಸ್ಥಳವನ್ನು ಕಂಡ ದೇವಯಾನಿ ಶರ್ಮಿಷ್ಠೆಯರಿಗೆ ಬಹಳ ಸಂತೋಷವಾಯಿತು ಕೆಲ ಸಮಯ ಇಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದರು. 

Advertisement

ಹಾಡುತ್ತ, ಕುಣಿಯುತ್ತ, ಸರೋವರದಲ್ಲಿ ಮಿಂದು ಜಲವಿಹಾರ ಮಾಡುತ್ತ ಮೈಮರೆತರು, ಅದೇ ಸಮಯದಲ್ಲಿ ಪಾರ್ವತಿ ಪರಮೇಶ್ವರರು ನಂದಿಯನ್ನೇರಿ ಆಕಾಶಮಾರ್ಗದಿಂದ ಹೋಗುತ್ತಿದ್ದರು, ಅದನ್ನು ಕಂಡು ಲಜ್ಜಾಭರಿತರಾಗಿ ಸರೋವರದ ಸ್ತ್ರೀಯರೆಲ್ಲರೂ ಗಡಬಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದು ತಮ್ಮ ಸೀರೆಗಳನ್ನು ಉಡತೊಡಗಿದರು, ಈ ಗದ್ದಲದಲ್ಲಿ ದುರ್ದೈವವೆಂಬಂತೆ ಶರ್ಮಿಷ್ಠೆಯು ದೇವಯಾನಿಯ ಸೀರೆಯನ್ನು ತೆಗೆದುಕೊಂಡು ಉಟ್ಟಳು, ಅದನ್ನು ಕಂಡ ದೇವಯಾನಿಯು ಬಹಳ ಸಿಟ್ಟಿಗೆದ್ದಳು, ತಾನು ಅಲೌಕಿಕ ಸುಂದರಿ, ದಾನವ ಗುರುಗಳಾದ ಶುಕ್ರಾಚಾರ್ಯರ ಮುದ್ದಿನ ಮಗಳು ಎಂದು ನಖಶಿಖಾಂತ ಅಹಂಕಾರ   ಆಕ್ರೋಶ ಭರಿತಳಾಗಿ ಅತ್ಯಂತ ಕ್ರೂರ ದೃಷ್ಟಿಯಿಂದ ಶರ್ಮಿಷ್ಠೆಯನ್ನು ನೋಡುತ್ತಾ, ” ನೋಡಿದಿರಾ ಸಖಿಯರೇ ಈ ಶರ್ಮಿಷ್ಠೆಯ ಸೊಕ್ಕನ್ನು, ನನ್ನ ಸೀರೆಯನ್ನು ಉಡುವ ಧೈರ್ಯವಾದರೂ ಹೇಗಾಯಿತು ಇವಳಿಗೆ. ಗುರುಪುತ್ರಿ ಎಂಬುದನ್ನು ಮರೆತು ಸ್ವಲ್ಪವೂ ನಮ್ಮನು ಲಕ್ಷಿಸದೆ ಎಷು ಉದ್ದಟಳಾಗಿದ್ದಾಳೆ ನೋಡಿರಿ ” ಎಂದು ಹೇಳಲು.

ಅದಕ್ಕೆ ಶರ್ಮಿಷ್ಠೆಯು ಗುರುಪುತ್ರಿಯ ಕ್ರೋಧವನ್ನು ಅರಿತು ಸಮಾಧಾನದಿಂದಲೇ ಉತ್ತರವಿತ್ತಳು, “ಇದರಲ್ಲಿ ಉದ್ಧಟತನವೇನು ಇಲ್ಲ ದೇವಯಾನಿ, ಪರಪುರುಷನು ನಮ್ಮ ನೆತ್ತಿಯ ಮೇಲೆ ಹಾದುಹೋಗುವಾಗ ಅವನೆದಿರು ವಿವಸ್ತ್ರಳಾಗಿ ನಿಲ್ಲಬಾರದೆಂದು ಗಡಬಡಿಸಿ ನಿನ್ನ ಸೀರೆಯೆಂದು ತಿಳಿಯದೆ ಅದನ್ನು ನಾನು ಉಟ್ಟುಕೊಂಡೇ” ಎಂದು ಉತ್ತರಿಸಿದಳು.

ಇಷ್ಟಕ್ಕೆ ಸುಮ್ಮನಾಗದ ದೇವಯಾನಿಯು ಸೊಕ್ಕಿನಿಂದಲೇ ಮಾತನಾಡಲು ಶರ್ಮಿಷ್ಠೆಯ ತಾಳ್ಮೆಯ ಕಟ್ಟೆ ಒಡೆದು ಅವರ ಮಧ್ಯೆ ಜಗಳವು ಹೆಚ್ಚಾಗಲು, ಶರ್ಮಿಷ್ಠೆಯು ” ಎಲೈ ದೇವಯಾನಿ, ನೀನೂ ನಿಮ್ಮಪ್ಪನೂ ನಮ್ಮಿಂದಲೇ ಪೋಷಿಸಲ್ಪಟ್ಟವರಾಗಿದ್ದು, ನಮ್ಮಂಥವರ ಸತ್ ಸಮಾರಂಭಗಳಿಗೆ ಬಂದು ಕೈಯೊಡ್ಡಿ ಭಿಕ್ಷೆಬೇಡುವವರು, ನಾವು ಭಿಕ್ಷೆ ನೀಡುವವರು ”  ಎಂದು ಸಿಟ್ಟಿನ ಬರದಲ್ಲಿ ಬಡಬಡಾಯಿಸಿ ಉಟ್ಟಿದ್ದ ಸೀರೆಯನ್ನು ಅವಳ ಮುಖಕ್ಕೆ ಎಸೆದಳು. ಇಷ್ಟಕ್ಕೆ ಸಮಾಧಾನವಾಗದ ಶರ್ಮಿಷ್ಠೆಯು ಸಖಿಯರ ಸಹಾಯದಿಂದ ದೇವಯಾನಿಯನ್ನು ಎತ್ತಿ  ಅಲ್ಲಿಯೇ ಇದ್ದ ಹಾಳುಬಾವಿಯಲ್ಲಿ ಎಸೆದು ಎಲ್ಲರೂ ಅರಮನೆಗೆ ಹೊರಟುಹೋದರು.

ಬಾವಿಯಲ್ಲಿ ಬಿದ್ದ ದೇವಯಾನಿಯು ಮೇಲೆಬರಲು ಬಹಳ ಕಷ್ಟಪಟ್ಟರು ಅದು ಅವಳಿಗೆ ಸಾಧ್ಯವಾಗಲಿಲ್ಲ ಕೊನೆಗೆ “ಯಾರಿದ್ದೀರಾ ನನ್ನನ್ನು ಕಾಪಾಡಿ ಎಂದು ಕೂಗುತ್ತ ನಿರಾಶಳಾಗಿಬಿಟ್ಟಳು, ಸ್ವಲ್ಪ ಸಮಯದ ನಂತರ ನಹುಷ ರಾಜನ ಮಗನಾದ ಯಯಾತಿ ಮಹಾರಾಜನು ಬೇಟೆಯಾಡಲು ಬದಿದ್ದವನು ಅದೇ ಮಾರ್ಗವಾಗಿ  ಹಿಂತಿರುಗುವಾಗ ದೇವಯಾನಿಯ ಧ್ವನಿ ಕೇಳಿ ಬಾವಿಯ ಸಮೀಪ ಬಂದು ದೇವಯಾನಿಯನ್ನು ರಕ್ಷಿಸಿದನು. ವಿವಸ್ತ್ರಳಾಗಿದ್ದ ಯುವತಿಯನ್ನ ಕಂಡ ಕೊಡಲೇ ರಾಜನು ತನ್ನ ಮೇಲ್ವಸ್ತ್ರವನ್ನು ತೆಗೆದು ಕೊಟ್ಟನ್ನು , ಅದನ್ನು ಉಟ್ಟ ದೇವಯಾನಿಯು ” ರಾಜಾ, ನಗ್ನಳಾಗಿ ಬಾವಿಯಲ್ಲಿ ಬಿದ್ದ ನನ್ನನ್ನು ರಕ್ಷಿದ್ದೀರಿ ಆದ್ದರಿಂದ ನೀವೇ ನನ್ನನ್ನು ಲಗ್ನವಾಗಿ ನನ್ನನ್ನು ಉದ್ಧರಿಸಿರಿ ” ಎಂದು ಹೇಳಲು. 

Advertisement

ರಾಜನು ಅವಳ ಪೂರ್ವಾಪರವನ್ನು ವಿಚಾರಿಸಿ ತಿಳಿದು. “ನೀನು ಬ್ರಾಹ್ಮಣ ಕುಮಾರಿ, ನಾನು ಕ್ಷತ್ರಿಯ ನಿನ್ನನ್ನು ಮದುವೆಯಾಗುವುದು ಶಾಸ್ತ್ರ ಸಮ್ಮತವಲ್ಲ ಆದ್ದರಿಂದ ನೀನು ನಿನ್ನ ಮನೆಗೆ ಹೋಗು ” ಎಂದನು ಅದಕ್ಕೆ ದೇವಯಾನಿಯು ” ತನಗೆ ಯಾವುದೇ ಬ್ರಾಹ್ಮಣ ಕುಮಾರನೊಂದಿಗೆ ವಿವಾಹವು ಆಗಬಾರದೆಂದು ಕಚನು ನೀಡಿದ ಶಾಪದ ಸಂಗತಿಯನ್ನು ವಿವರಿಸಿ ಇದರಿಂದಾಗಿ ಶಾಸ್ತ್ರವು ಅಡ್ಡಿಯಾಗುವುದಿಲ್ಲವೆಂದು ಹಾಗೆ ನನ್ನ ತಂದೆಯ ಒಪ್ಪಿಗೆಯನ್ನು ಕೊಡಿಸುವೆನು ” ಎಂದು ಹೇಳಲು ಯಯಾತಿಯು ಒಪ್ಪಿದನು  ನಂತರ ಇಬ್ಬರು ಅವರ ಸ್ಥಳಕ್ಕೆ ಹಿಂದಿರುಗಿದರು.

ದೇವಯಾನಿಯು ತಂದೆಯಲ್ಲಿಗೆ ಬಂದು ನಡೆದದ್ದಕ್ಕೆ ಇನ್ನು ಸೇರಿಸಿ ಹೇಳಿದಳು.ಅದಕ್ಕೆ ಶುಕ್ರಾಚಾರ್ಯರು ಮನನೊಂದು “ನಿಜ ಮಗಳೇ ನೀನು ಹೇಳ್ಳಿದ್ದು ಸರಿ ಎಷ್ಟೆಂದರೂ ಈ ದಾನವರು ದೈತ್ಯರೆ ಸರಿ… ಇಲ್ಲಿ ನಾವು ಇರಬಾರದು ನಡೆ ನಾವು ಈ ದೈತ್ಯ ರಾಜ್ಯವನ್ನು ಬಿಟ್ಟು ದೂರ ಹೋಗೋಣವೆಂದು ಮಗಳೊಂದಿಗೆ ಹೊರಟುಬಿಟ್ಟರು” ಇದು ಶರ್ಮಿಷ್ಠೆಯ ತಂದೆ ವೃಷಪರ್ವನಿಗೆ ತಿಳಿಯಿತು. ಅವನಿಗೆ ಗಾಬರಿಯಾಯಿತು ಶುಕ್ರಾಚಾರ್ಯರಿದ್ದರೆ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಇಲ್ಲವಾದರೆ ದೇವತೆಗಳಿಂದ ನಮಗೆ ಉಳಿಗಾಲವಿಲ್ಲವೆಂದು ಕೊಡಲೇ ಅವರನ್ನು ಭೇಟಿಯಾಗಲು ಬಂದು ಬಹಳವಾಗಿ ಬೇಡಿದನು. 

ಶುಕ್ರಾಚಾರ್ಯರ ಮನಸ್ಸು ಕರಗಿತು , “ದಾನವೇಂದ್ರ ನಿನ್ನಲ್ಲಿಗೆ ಬರಲು ನನಗೇನು ಅಭ್ಯಂತರವಿಲ್ಲ ಆದರೆ ನನ್ನ ಮಗಳು ಇದ್ದಲ್ಲೇ ನಾನಿರುವೆನು ಅವಳನ್ನು ತಡೆಯುವಂತೆ ಹೇಳುತ್ತಾರೆ. ಆಗ  ದೇವಯಾನಿಯನ್ನು ವೃಷಪರ್ವ ವಿನಂತಿಸಿಕೊಳ್ಳಲು ಅವಳು ಒಂದು ಕರಾರನ್ನು ಮುಂದಿಟ್ಟಳು. ಅದೇನೆಂದರೆ ವೃಷಪರ್ವನ ಮಗಳು ಶರ್ಮಿಷ್ಠೆಯು ತನ್ನ ಎಲ್ಲ ಸಖಿಯರೊಂದಿಗೆ ತನ್ನ ದಾಸ್ಯತ್ವವನ್ನು ಸ್ವೀಕರಿಸಬೇಕು. ನಾನು ಲಗ್ನವಾಗಿ ಹೋದಲ್ಲಿ ಅವಳೂ ನನ್ನ ದಾಸಿಯಾಗಿಯೇ ಬರಬೇಕು ಎಂದಳು.
ಇದನ್ನು ಕೇಳಿದ ದಾನವೇಂದ್ರನಿಗೆ ಬಹಳ ಆಘಾತವಾಯಿತು, ಆದರೂ ಅದಕ್ಕೆ ಅವನು ಒಪ್ಪಿದನು, ಶರ್ಮಿಷ್ಠೆಯೂ ರಾಜಕಾರಣದಲ್ಲಿ ಚೆನ್ನಾಗಿ ಪಳಗಿದವಳೂ ಅತ್ಯಂತ ಜಾಣಳೂ, ಮಹಾಧೂರ್ತಳು ಆಗಿದ್ದಳು, ಇದಕ್ಕೆ ಅವಳೂ ಒಪ್ಪಿದಳು ದೇವಯಾನಿಯ ದಾಸಿಯಾಗಿ ಹೊರಟೆಬಿಟ್ಟಳು. 

ಕೆಲಕಾಲದ ನಂತರ ದೇವಯಾನಿಗೆ ಯಯಾತಿಯೊಂದಿಗೆ ವಿವಾಹವಾಯಿತು, ದೇವಯಾನಿಯೊಂದಿಗೆ ಶರ್ಮಿಷ್ಠೆಯು ತನ್ನ ಸಖಿಯರೊಂದಿಗೆ ಹೊರಡಲು ನಿಂತಳು. ಆಗ ಶುಕ್ರಾಚಾರ್ಯರು ” ಮಹಾರಾಜಾ, ಇವಳು ವೃಷಪರ್ವನ ಮಗಳಾದ ಶರ್ಮಿಷ್ಠೆ, ತನ್ನ ಸಖಿ ಸಮೂಹದೊಂದಿಗೆ ದೇವಯಾನಿಯ ದಾಸ್ಯತ್ವ ವಹಿಸಿದ್ದಾಳೆ. ನೀನು ಇವರೆಲ್ಲರನ್ನು ನಿನ್ನ ರಾಜಧಾನಿಗೆ ಕರೆದುಕೊಂಡು ಹೋಗು . ಆದರೆ ನೀನು ಈ ಶರ್ಮಿಷ್ಠೆಯನ್ನು ಕೇವಲ ನಿನ್ನ ಸೇವಾರ್ಥವಾಗಿ ಉಪಯೋಗಿಸಿಕೊಳ್ಳಬಹುದು ಎಚ್ಚರಿಕೆ” ಎಂದು ಹೇಳಿ ಯಯಾತಿ ಮಹಾರಾಜನನ್ನು ಬೀಳ್ಕೊಟ್ಟನು.

ಯಯಾತಿ ಮತ್ತು ದೇವಯಾನಿ ಬಹಳ ಸಂತೋಷದಿಂದಿದ್ದರು, ದೇವಯಾನಿಗೆ ಎರಡು ಗಂಡು  ಮಕ್ಕಲ್ಲಿದ್ದವು ಒಬ್ಬನು ‘ಯದು’ ಮತ್ತೊಬ್ಬನು ‘ತುರ್ವಸು’ ಎಂದು. ಕೆಲ ಸಮಯ ಕಳೆದ ನಂತರ ಯಯಾತಿ ಮತ್ತು ಶರ್ಮಿಷ್ಟೆಯರಲ್ಲಿ ಸ್ನೇಹಬೆಳೆಯಿತು, ಶರ್ಮಿಷ್ಠೆಗೆ ಮೂರೂ ಗಂಡು ಮಕ್ಕಳಾದರು. “ದೃಹ್ಯು , ಅನು ಮತ್ತು ಪುರು” ಎಂದು. 

ಒಂದು ದಿನ ಪುರು ತಾರುಣ್ಯಾವಸ್ಥೆಗೆ ಬಂದಾಗ, ಶರ್ಮಿಷ್ಠೆಯು ಯಯಾತಿಯಿಂದ ಗೌಪ್ಯವಾಗಿ ಮೂರೂ ಪುತ್ರರನ್ನು ಪಡೆದ್ದಿದ್ದಾಳೆಂದು ದೇವಯಾನಿಗೆ ತಿಳಿಯಿತು. ಮತ್ಸರ ದ್ವೇಷದಿಂದ ಉರಿದೆದ್ದಳು, ತಂದೆಯ ಆಶ್ರಮಕ್ಕೆ ಬಂದು ನಡೆದುದ್ದನ್ನು ಹೇಳಿ ಗೋಳೋ ಎಂದು ಅಳಹತ್ತಿದಳು, ಇದನ್ನು ಕೇಳಿ ಶುಕ್ರಾಚಾರ್ಯರಿಗೆ ಬಹಳ ಕೋಪ ಬಂದು ಯಯಾತಿಯಲ್ಲಿಗೆ ಬಂದು ನನ್ನ ಮಗಳನ್ನು ಕಡೆಗಣಿಸಿದೆಯಾ ಮೂರ್ಖಾ, ನಿನ್ನ ಯವ್ವನವು ಹಾಳಾಗಲಿ, ನಿನಗೆ ಮುಪ್ಪು ಬರಲಿ ಎಂದು ಶಪಿಸಿದರು. 

ಯಯಾತಿಯು ಕೊಡಲೇ ಮುದುಕನಾಗಿಬಿಟ್ಟನು. ಶುಕ್ರಾಚಾರ್ಯರ ಪಾದಕ್ಕೆ ಬಿದ್ದು ಕ್ಷಮೆ ಬೇಡುತ್ತ ಅಳಹತ್ತಿದನು. ” ಗುರುವರ್ಯ ನಾನಾಗಿಯೇ ಶರ್ಮಿಷ್ಠೆಯನ್ನು ಸ್ವೀಕರಿಸಿಲ್ಲ. ಅವಳೂ ಸಂತಾನಕ್ಕಾಗಿ ನನ್ನ ಬೇಡಿಕೊಂಡಳು, ಮೇಲಾಗಿ ನಿಮ್ಮ ಪುತ್ರಿ ಇನ್ನು ತರುಣಿ ಈಗ ನನಗೆ ಮುಪ್ಪು ಆವರಿಸಿದೆ, ನಿಮ್ಮ ಮಗಳಿಗಾಗಿಯಾದರು ನನಗೆ ತಾರುಣ್ಯ ಬರುವಂತೆ ಮಾಡಿ ಎಂದು ಬೇಡಿಕೊಂಡನು.

ಶುಕ್ರಾಚಾರ್ಯರ ಮನಸ್ಸು ಕರಗಿತು, ರಾಜಾ ಕೊಟ್ಟ ಶಾಪ ಹಿಂತೆಗೆದುಕೊಳ್ಳಲು ಆಗುವುದಿಲ್ಲ, ನೀನು ನಿನಗೊದಗಿದ ಮುಪ್ಪನ್ನು ಯಾವ ತರುಣನಿಗಾದರು ಕೊಟ್ಟು ಅವನ ತಾರುಣ್ಯವನ್ನು ನೀನು ಪಡೆಯಬಹುದು, ಈ ಸಾಮರ್ಥ್ಯವನ್ನು ನಾನು ನಿನಗೆ ಅನುಗ್ರಹಿಸುವೆನು ಎಂದು ಹೇಳಿ ಹೋದರು.
ಯಯಾತಿಯು ಇಷ್ಟಕ್ಕೆ ಸಮಾಧಾನ ಹೊಂದಿ ಅರಮನೆಗೆ ಬಂದನು. ಮೊದಲು ತನ್ನ ಜೇಷ್ಠಪುತ್ರನಾದ ದೇವಯಾನಿಯ ಮಗ ಯದು ಮತ್ತು ತುರ್ಮಸು ವನ್ನು ಕೇಳಲು ಅವರು ಇದಕ್ಕೆ ಒಪ್ಪಲಿಲ್ಲ ಆಗ ಯದುವಿಗೆ ನಿನ್ನ ವಂಶದವರು ಅಸಮಾನ ಸಮರ್ಥರಾದರು ಅವರು ರಾಜರಾಗಬಾರದೆಂದು ಹಾಗೂ ತುರ್ವಸುವಿಗೆ ನೀನು ಮ್ಲೇಚ್ಛರಿಗೆ ರಾಜನಾಗೆಂದು ಶಾಪಕೊಟ್ಟನು.

ಆಮೇಲೆ ಶರ್ಮಿಷ್ಠೆಯ ಮಕ್ಕಳಾದ ದೃಹ್ಯು ಮತ್ತು ಅನು ಎಂಬುವರನ್ನು ಕರೆಸಿ ಅವರಲ್ಲಿ ಕೇಳಲು ಅವರು ಒಪ್ಪಲಿಲ್ಲ ಅದಕ್ಕೆ ದೃಹ್ಯುಗೆ ಋಕ್ಷು ಪ್ರದೇಶಕ್ಕೆ ಒಡೆಯನಾಗೆಂದು ಅನುವಿಗೋ ಈಗಲೇ ಮುಪ್ಪು ಬರಲಿ ನಿನ್ನ ಮಕ್ಕಳು ತಾರುಣ್ಯಕ್ಕೆ ಬಂದೊಡನೆ ಸತ್ತುಹೋಗಲಿ. ನೀನು ಮಾಡುವ ಯಾವ ಯಜ್ಞಯಾಗಾದಿಗಳಿಗೂ ಫಲ ದೊರಕದಿರಲಿ ಎಂದು ಶಾಪವಿತ್ತನು. 

ಯಯಾತಿಯು ನಿರಾಶೆಗೊಂಡು ಕೊನೆಯ ಮಗನಾದ ಪುರುವನ್ನು ಕೇಳಿದನು , ಪುರುವು ಇದಕ್ಕೆ ಒಪ್ಪಿದನು ಯಯಾತಿಗೆ ತುಂಬಾ ಸಂತೋಷವಾಯಿತು ಅವನಿಗೆ ನಿನ್ನ ಪ್ರಜೆಗಳು ನಿನ್ನ ವಂಶದವರು ಅತ್ಯಂತ ಧರ್ಮಿಷ್ಟರಾಗಲಿ, ನಿನ್ನ ಸಂತತಿ ವೃದ್ಧಿ ಹೊಂದಲಿ, ನೀನು ಅಖಂಡ ಕೀರ್ತಿಯುತನಾಗೆಂದು ಆಶೀರ್ವದಿಸಿ ಮುಪ್ಪನ್ನು ಮಗನಿಗೆ ಕೊಟ್ಟು ತಾರುಣ್ಯವನ್ನು ಸ್ವೀಕರಿಸಿದನು.

ತಾರುಣ್ಯ ಪಡೆದ ಯಯಾತಿಯು ಶರ್ಮಿಷ್ಠೆಯನ್ನು ಅರಮನೆಗೆ ಕರೆಯಿಸಿಕೊಂಡನು ಅವಳಿಗೂ ದೇವಯಾನಿಯಷ್ಟೇ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟನು, ಆಗ ಶುಕ್ರಾಚಾರ್ಯರಾಗಲಿ ದೇವಯಾನಿಯಾಗಲಿ ಯಾರು ಅಡ್ಡಿಯೊಡ್ಡಲಿಲ್ಲ. ಯಯಾತಿಯು ಧರ್ಮದಿಂದ ರಾಜ್ಯ ಪರಿಪಾಲನೆ ಮಾಡುತ್ತಾ ಯಜ್ಞ ಯಾಗಾದಿಗಳನ್ನು ಮಾಡಿದನು. ಪ್ರಜೆಗಳನ್ನು ರಕ್ಷಿಸುತ್ತಾ ರಾಜ್ಯ ಭಾರಮಾಡಿ ಸಂತೋಷಪಟ್ಟನು. 

ನಂತರ ಬಂದು ಪುರುವನ್ನು ಕರೆದು ಅವನಿಗೆ ಅವನ ತಾರುಣ್ಯವನ್ನು ಕೊಟ್ಟು ತನ್ನ ಮುಪ್ಪನ್ನು ಸ್ವೀಕರಿಸಿದನು ಅವನನ್ನು ಆಶೀರ್ವದಿಸಿ ಇಡೀ ರಾಜ್ಯವನ್ನು ಅವನ ಸ್ವಾಧೀನಕ್ಕೊಪ್ಪಿಸಿ ತಾನು ಅಡವಿಗೆ ಹೋಗಿ, ಅಲ್ಲಿ ಸಾಧನೆ ಮಾಡಿ ಮುಕ್ತಿ ಪಡೆದನು.
 

Advertisement

Udayavani is now on Telegram. Click here to join our channel and stay updated with the latest news.

Next