Advertisement

ದೇವದಾರಿ ಸಂಪತ್ತು-ಸಂಘರ್ಷದ ನೋಟ!

09:45 PM Jun 26, 2024 | Team Udayavani |

ಸಂಡೂರಿನ ದೇವದಾರಿ ಅರಣ್ಯ ಪ್ರದೇಶ ದಲ್ಲಿ ಗಣಿಗಾರಿಕೆ ನಡೆಸಲು ಕುದುರೆ ಮುಖದ ಕೆಐಒಸಿಎಲ್‌ ಕಂಪೆನಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಬೆಳವಣಿಗೆ ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಗಣಿಗಾರಿಕೆಗೆ ಹೆಸರು ವಾಸಿಯಾಗಿರುವ ಈ ದೇವದಾರಿ ಅರಣ್ಯ ಪ್ರದೇಶದ ಇತಿಹಾಸ, ಪ್ರಕೃತಿ ಸಂಪತ್ತು, ಗಣಿಗಾರಿಕೆ ವಿವಾದದ ಮಾಹಿತಿ ಇಲ್ಲಿದೆ.

Advertisement

ಪಶ್ಚಿಮಘಟ್ಟ ಹೋಲುವ ಸಂಡೂರು ಬೆಟ್ಟಗಳು
ಪಶ್ಚಿಮ ಘಟ್ಟಗಳನ್ನೇ ಹೋಲುವ ಸಂಡೂರು ನೈಸರ್ಗಿಕ ಸಂಪತ್ತು ಹೊಂದಿರುವ ಬೆಟ್ಟದಲ್ಲಿ “ಕುಮಾರಸ್ವಾಮಿ’ ದೇವಸ್ಥಾನ ಇರುವುದರಿಂದ ಸ್ವಾತಂತ್ರÂ ಪೂರ್ವದಲ್ಲಿ ಇಡೀ ಬೆಟ್ಟವನ್ನು “ಸ್ವಾಮಿಮಲೈ’ ಎಂದು ಕರೆಯಲಾಗುತ್ತಿತ್ತು. 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ವ್ಯಾಪ್ತಿ, 50-60 ಕಿ.ಮೀ. ವಿಸ್ತೀರ್ಣವನ್ನು ಹೊಂದಿತ್ತು. ಸ್ವಾತಂತ್ರÂ ಬಳಿಕ ಸರಕಾರಗಳು ರಚನೆಯಾದ ಬಳಿಕ ಅರಣ್ಯ ಇಲಾಖೆ ಸಂಡೂರಿನ ಬೆಟ್ಟಗಳನ್ನು ಪೂರ್ವ ಭಾಗದ ಅರಣ್ಯ ಪ್ರದೇಶವನ್ನು ದೋಣಿಮಲೈ, ಪಶ್ಚಿಮ ಭಾಗವನ್ನು ರಾಮನಮಲೈ, ಉತ್ತರ ಭಾಗವನ್ನು ತಿಮ್ಮನಗುಡಿ ಅರಣ್ಯ, ಕುಮಾರಸ್ವಾಮಿ ದೇವಸ್ಥಾನವುಳ್ಳ ದಕ್ಷಿಣ ಭಾಗವನ್ನು ಸ್ವಾಮಿಮಲೈ ಅರಣ್ಯ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿತು.

ಸ್ವಾತಂತ್ರ್ಯದ ಬಳಿಕ ಸರಕಾರಕ್ಕೆ ಗಣಿ ನೀಡಿದ ರಾಜಮನೆತನ
ದೇವದಾರಿ ಗಣಿ ಪ್ರದೇಶವು ಸುಮಾರು 9 ಸಾವಿರ ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ. ಸ್ವಾತಂತ್ರÂ ಅನಂತರ ಗಣಿಪ್ರದೇಶವೆಲ್ಲ ಸಂಡೂರು ರಾಜಮನೆತನದ ಘೋರ್ಪಡೆ ಕುಟುಂಬದವರ ಸುಪರ್ದಿಯಲ್ಲಿತ್ತು. ಆದರೆ ಎಲ್ಲದಕ್ಕೂ ತೆರಿಗೆ ಪಾವತಿಸಲಾಗಲ್ಲ ಎಂದು ಮ್ಯಾಂಗನೀಸ್‌ನ್ನು ಉಳಿಸಿಕೊಂಡು ಉಳಿದ ಸ್ವಾಮಿಮಲೈ, ರಾಮಗಢ ಗಣಿಪ್ರದೇಶವನ್ನು ಸರಕಾರಕ್ಕೆ ಮರಳಿಸಿದರು. ದೇವದಾರಿಯ ಒಂದಷ್ಟು ಗಣಿಪ್ರದೇಶವನ್ನು ತಮ್ಮ ಆಡಳಿತ ಮಂಡಳಿಯ ಲಾಡ್‌ ಕುಟುಂಬಕ್ಕೆ ನೀಡಿದರು. ವಿಎಸ್‌ ಲಾಡ್‌ ಹೆಸರಿನ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಸಿ ಕೆಟಗರಿಗೆ ಸೇರಿಸಲಾಗಿದ್ದು, ಹರಾಜಿನಲ್ಲಿ ಜಿಂದಾಲ್‌ ಸಂಸ್ಥೆ ಪಾಲಾಗಿದೆ. ಇದೇ ಪ್ರದೇಶದಲ್ಲಿ ದೇವದಾರಿ ಐರನ್‌ ಓರ್‌, ಜಿಂದಾಲ್‌ಗೆ ಸೇರಿದ್ದ ಮತ್ತೂಂದು ಗಣಿ ಪ್ರದೇಶವೂ ಬರಲಿದೆ.

ದೇವದಾರಿ ಹೆಸರು ಬಂದಿದ್ದು ಹೇಗೆ?
ಸಂಡೂರು ಬೆಟ್ಟಗಳ ದಕ್ಷಿಣ ಭಾಗದಲ್ಲಿರುವ “ಕುಮಾರಸ್ವಾಮಿ’ ದೇವಸ್ಥಾನಕ್ಕೆ ಕರ್ನಾಟಕ ಸೇರಿ ನೆರೆಯ ಆಂಧ್ರ, ಮಹಾರಾಷ್ಟ್ರದಲ್ಲೂ ಭಕ್ತರಿದ್ದಾರೆ. ಸ್ವಾತಂತ್ರÂ ಪೂರ್ವದಲ್ಲಿ ಕುಮಾರಸ್ವಾಮಿ ದೇವಸ್ಥಾನಕ್ಕೆ ವರ್ಷಕ್ಕೊಮ್ಮೆ ಯಾತ್ರೆ ಬರುತ್ತಿದ್ದ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ಭಕ್ತರಿಗೆ ದಾರಿ ತಪ್ಪಬಾರದು, ಕೂಡ್ಲಿಗಿ ಮತ್ತು ತೋರಣಗಲ್ಲು ಯಾವ ಕಡೆಯಿಂದ ಬಂದರೂ ಬೆಟ್ಟದ ದಾರಿ ಕಾಣಬೇಕು ಎಂದು ಕುಮಾರಸ್ವಾಮಿ ದೇಗುಲಕ್ಕೆ ತೆರಳುವ ದಾರಿಯಲ್ಲಿ ಆರಂಭದಿಂದ ದೇವಸ್ಥಾನದವರೆಗೆ 4 ಪಾದುಕೆ ಇಟ್ಟು ಗುಡಿ ನಿರ್ಮಿಸಿದ್ದಾರೆ. 4ನೇ ಪಾದಗಟ್ಟೆಗೆ ಕುಮಾರಸ್ವಾಮಿ ದೇವಸ್ಥಾನ ತಲುಪಲಾಗುತ್ತದೆ. ಕ್ರೂರ ಪ್ರಾಣಿಗಳ ಭಯಕ್ಕೆ ಭಕ್ತರು ಗುಂಪುಗುಂಪಾಗಿ ಇಲ್ಲಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದಾರಿಯನ್ನು “ದೇವದಾರಿ’ ಎಂದು ಕರೆಯಲಾಗುತ್ತದೆ.

ಹುಲಿ ಸಂತತಿ ನಾಶ!
ಪಶ್ಚಿಮಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಂತೆ ಕಂಗೊಳಿಸುವ ಈ ದೇವದಾರಿ ಅರಣ್ಯ ಪ್ರದೇಶದಲ್ಲಿ ಅಪರೂಪದ ದಿಂಡಿಗ, ಬೋಸ್‌ವೆಲಿಯಾ, ಅಲ್‌ಬಿಜಿಯಾ ತಳಿಯ ಮರಗಳು, 12 ವರ್ಷಕ್ಕೊಮ್ಮೆ ಹೂವು ಬಿಡುವ “ನೀಲಿಕುರಿಂಜೆ’ ಗಿಡಗಳು, ಧೂಪದ (ಲೋಭಾನ) ಗಿಡಗಳು ಸೇರಿ ಇನ್ನಿತರ ಔಷ ಧೀಯ ಸಸ್ಯಸಂಕುಲವಿದೆ. ಈಗ ಗಣಿಗಾರಿಕೆ ಆರಂಭವಾದರೆ ಇಲ್ಲಿನ 99,330 ಮರಗಳನ್ನು ಕಡಿಯಬೇಕಿದೆ. ತೋಳ, ಚಿರತೆ, ಕರಡಿ, ಕೊಂಡಮುರಿ, ನರಿ, ನವಿಲು ಸೇರಿ ಜೀವ ಸಂಕುಲವಿದೆ. ಈ ಪೈಕಿ ಜಿಂಕೆ ಜಾತಿಯ ಕಡಗ 1996ರಲ್ಲಿ ನಾಶವಾಗಿದೆ. ಕಾಡುಹಂದಿ, ಹೆಬ್ಬಂದಿ, ಕ್ವಾರೆಹಂದಿಗಳು ಇಲ್ಲಿವೆ. ಇಲ್ಲಿ ಸಂಡೂರು ರಾಜ ಮನೆತನದವರು ಬೇಟೆಯಾಡುತ್ತಿದ್ದ ಹಿನ್ನೆಲೆಯಲ್ಲಿ 1972ರಲ್ಲಿ ಹುಲಿಗಳ ಸಂತತಿ ನಾಶವಾಯಿತು.

Advertisement

ಪರಿಸರವಾದಿಗಳ ವಿರೋಧ
“ಸಿ’ ಕೆಟಗರಿ ಗಣಿಪ್ರದೇಶ ಸಾಕಷ್ಟಿದೆ. ಅದನ್ನೇ ಗಣಿಗಾರಿಕೆಗೆ ಕೊಡಬೇಕು. ಸಂಡೂರಲ್ಲಿ ಗಣಿಗಾರಿಕೆಯಿಂದ ಉದ್ಯೋಗ ಸೃಷ್ಟಿಸಬೇಕಿಲ್ಲ. ವನಸಿರಿಯನ್ನು ಬಳಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿಯೂ ಸ್ಥಳೀಯರಿಗೆ ಉದ್ಯೋಗ ನೀಡಬಹುದು. ಜತೆಗೆ ಹಳ್ಳಕೊಳ್ಳಗಳು, ಐತಿಹಾಸಿಕ ಧಾರ್ಮಿಕ ಕ್ಷೇತ್ರ-ಸ್ಮಾರಕಗಳು, ಅಪರೂಪದ ಧ್ವಜಸ್ತಂಭಗಳ ನಾಶಕ್ಕೆ ಅವಕಾಶ ಕೊಡಬಾರದು ಎಂಬುದು ಪರಿಸರವಾದಿಗಳ ವಾದವಾಗಿದೆ. ಇಲ್ಲಿನ ಸಸ್ಯ, ಜೀವ ಸಂಕುಲಗಳ ಸಂರಕ್ಷಣೆಗಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿವೆ. ದಶಕದ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದ್ದ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌.ಹಿರೇಮಠ ಮತ್ತೂಂದು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ವಿರೋಧ
ದೇವದಾರಿ ಗಣಿಗಾರಿಕೆಯ ಆರಂಭದ ಬಗ್ಗೆ ದಶಕಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ 2017-18ರಲ್ಲಿ ಅಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದ ದೇವದಾರಿ ಬ್ಲಾಕ್‌ನ 482 ಹೆಕ್ಟೇರ್‌ ಗಣಿ ಪ್ರದೇಶವನ್ನು ಕುದುರೆಮುಖ (ಕೆಐಒಸಿಎಲ್‌) ಕಂಪೆನಿಗೆ ನೀಡುವ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಇದಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಈ ಗಣಿಗಾರಿಕೆ ಮಾಡಲು ಬಿಡುವುದಿಲ್ಲ. ಇದರಿಂದ ಅರಣ್ಯ ಹಾಗೂ ಜೀವಸಂಕುಲಗಳ ನಾಶವಾಗುತ್ತವೆ ಎಂದು ಆ ವಿಚಾರವನ್ನು ಅಲ್ಲಿಯೇ ಮೊಟಕುಗೊಳಿಸಿದ್ದರು.

ಕೇಂದ್ರ ಸಚಿವ ಎಚ್‌ಡಿಕೆ ಅನುಮತಿ
ಈಗ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅ ಧಿಕಾರಕ್ಕೆ ಬರುತ್ತಿದ್ದಂತೆ ಉಕ್ಕು, ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೆಐಒಸಿಎಲ್‌ ಕಂಪೆನಿಗೆ ಗಣಿ ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇಲ್ಲಿ ದೇವದಾರಿ ಗಣಿಗಾರಿಕೆ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಗಣಿಗಾರಿಕೆ ಆರಂಭಿಸುವುದಕ್ಕೂ ಮೊದಲೇ 808 ಹೆಕ್ಟೇರ್‌ನಲ್ಲಿ ಪರ್ಯಾಯ ಅರಣ್ಯೀಕರಣಕ್ಕಾಗಿ 194 ಕೋಟಿ ರೂ.ಗಳನ್ನೂ ರಾಜ್ಯ ಅರಣ್ಯ ಇಲಾಖೆಗೆ ಕಂಪೆನಿಗೆ ಕೊಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಗಣಿಗಾರಿಕೆ ಆರಂಭಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ನಿಲುವೂ ಬದಲಾಯಿತು!
ಈ ಮೊದಲು ದೇವದಾರಿ ಗಣಿಗಾರಿಕೆ ಬಗ್ಗೆ ಉತ್ಸುಕತೆ ತೋರಿದ್ದ ಕಾಂಗ್ರೆಸ್‌ ಈಗ ಕುಮಾರಸ್ವಾಮಿ ಅವರು ಈ ಕೆಐಒಸಿಎಲ್‌ ಕಂಪೆನಿಗೆ ಒಪ್ಪಿಗೆ ನೀಡುತ್ತಿದ್ದಂತೆ ವಿರೋಧ ಮಾಡಲು ಪ್ರಾರಂಭಿಸಿದೆ. ಸದರಿ ಕಂಪೆನಿಯವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಯಲ್ಲಿ ಈ ಹಿಂದೆ ನಡೆಸಿದ್ದ ಗಣಿಗಾರಿಕೆಯ ಲೋಪದೋಷ/ಅರಣ್ಯ ಕಾಯ್ದೆ ಉಲ್ಲಂಘನೆಗಳಿಗಾಗಿ ಸಿಇಸಿಯು ನೀಡಿದ್ದ ನಿರ್ದೇಶನಗಳನ್ನು ಜಾರಿ ಮಾಡಿಲ್ಲ. ಹೀಗಾಗಿ ಈ ಸಂಸ್ಥೆಗೆ ದೇವದಾರಿಯಲ್ಲಿ ಗಣಿಗಾರಿಕೆ ನಡೆಸಲು ನೀಡಲಾಗಿರುವ ಅರಣ್ಯ ತಿರುವಳಿಯನ್ನು ಅನುಷ್ಠಾನಗೊಳಿಸ ದಂತೆ, ಅರಣ್ಯ ಭೂಮಿಯನ್ನು ಹಸ್ತಾಂತರಿಸದಂತೆ ಸಚಿವ ಈಶ್ವರ ಖಂಡ್ರೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದಾರೆ. ಹೀಗಾಗಿ “ದೇವದಾರಿ’ ಗಣಿಯು ಈಗ ತ್ರಿಶಂಕು ಸ್ಥಿತಿಯಲ್ಲಿದೆ.

ವಿವಾದದ ಹಿನ್ನಲೆ
– ಸಂಡೂರಿನ ಸ್ವಾಮಿಮಲೈ ಅರಣ್ಯದ 482.36 ಹೆಕ್ಟೇರ್‌ ದೇವದಾರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೆಐಒಸಿಎಲ್‌ಗೆ ಮೀಸಲಿಟ್ಟು 2017-18ರಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ.

– ಕೆಐಒಸಿಎಲ್‌ ಕಂಪೆನಿಯು 2018, ಮಾ.16ರಂದು ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.

– 2019ರ ಜೂ.9ರಂದು ಸ್ಥಳ ಪರಿಶೀಲನೆ ನಡೆಸಿದ್ದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳು, ಅರಣ್ಯ ಸಂರಕ್ಷಣ ಕಾಯ್ದೆ 1980ರಡಿ ಅನುಮತಿ ನೀಡಲು ಪರಿಗಣಿಸಬಾರದು ಎಂದು ವರದಿ ನೀಡಿದ್ದರು.
– ಮುಖ್ಯ ಅರಣ್ಯ ಸಂರಕ್ಷ ಣಾ ಧಿಕಾರಿಗಳು 2019ರ ಡಿ.6ರಂದು ಮತ್ತು 2020, ಜ.16ರಂದು ಎಪಿಸಿಸಿಎಫ್‌ ಸ್ಥಳ ಪರಿಶೀಲಿಸಿ ಅರಣ್ಯ, ವನ್ಯಜೀವಿಗಳ‌ ಹಿತದೃಷ್ಟಿ ಯಿಂದ ಅನುಮತಿ ನೀಡಬಾರದು ಎಂದು ಶಿಫಾರಸು ಮಾಡಿದ್ದರು.
– ಅರಣ್ಯಾಧಿ ಕಾರಿಗಳ ವರದಿಯನ್ನು ಮೀರಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2021, ಆ.13ರಂದು ಪರಿಸರ ಅನು ಮತಿ (ಸ್ಟೇಜ್‌-1) ಮಂಜೂರು, 2022, ಡಿ.16 ರಂದು ಅಂತಿಮ ಅನುಮತಿ (ಸ್ಟೇಜ್‌-2) ನೀಡಿತ್ತು. ಈಗ ಕೇಂದ್ರ ಅನುಮತಿ ಕೊಟ್ಟಿದೆ. ಆದರೆ ರಾಜ್ಯ ತಡೆಯೊಡ್ಡಿದೆ.

ಮಾಹಿತಿ: ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next