Advertisement

ಬಿಸಗೋಡ ಶಾಲೆಗೆ 75ರ ಸಂಭ್ರಮ

05:33 PM Dec 26, 2019 | Naveen |

ನರಸಿಂಹ ಸಾತೊಡ್ಡಿ

Advertisement

ಯಲ್ಲಾಪುರ: ಗ್ರಾಮದ ಒಬ್ಬರ ಮನೆ ಜಗುಲಿಯಿಂದ 1944 ರಲ್ಲಿ ಆರಂಭವಾದ ಶಾಲೆ ನಂತರ ಸೋಗೆ ಜೋಪಡಿ ಮಣ್ಣಿನ ಗೋಡೆ ಹೊಂದಿ, ಕಾಲಕ್ರಮೇಣ ಕಟ್ಟಡ ಹೊಂದಿ ಈಗ ಅದೇ ಶಾಲೆ 75 ವಸಂತಗಳನ್ನು ಪೂರೈಸಿ ಹಳಬರನ್ನು ಸ್ಮರಿಸುವ ಹೊಸಬರಿಗೆ ಹೊಸತನ ಕೊಡುವತ್ತ ದಾಪುಗಾಲಿಟ್ಟ ಬಿಸಗೋಡಿನ ಸಹಿಪ್ರಾ ಶಾಲೆ ಅಮೃತಹೋತ್ಸವಕ್ಕೆ ಕಾಲಿಟ್ಟಿದೆ.

ಮನೆಯೊಂದರಲ್ಲಿದ್ದ ಶಾಲೆ ಸುತ್ತಲ ಗ್ರಾಮದವರಿಗೆ ಅನುಕೂಲವಾಗುವ ಬಿಸಗೋಡಿಗೆ ಸ್ಥಳಾಂತರಗೊಂಡಿತು. 1946 ರ ಸುಮಾರಿಗೆ ಮಣ್ಣಿನ ಗೋಡೆ ಹಾಕಿ, ಸೋಗೆ ಮುಚ್ಚಿಗೆಯೊಂದಿಗೆ ಶಾಲಾ ನಿರ್ಮಾಣವಾಯಿತು. ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಅಕ್ಷರದ ಬೀಜ ಬಿತ್ತುವ ಕಾರ್ಯಕ್ಕೆ ವೇಗ ಬಂದಿತು. ಹಲವು ವರ್ಷಗಳ ಕಾಲ ಹೀಗೇಯೇ ಶಾಲೆ ಮುಂದುವರಿಯಿತು. 10-15
ಮಕ್ಕಳು ಶಾಲೆಗೆ ಬರತೊಡಗಿದರು. ಊರವರ ಆಶ್ರಯದಲ್ಲಿ ಮಾಸ್ತರರು ಇದ್ದು ಶಾಲೆಗೆ ಬಂದು ಮಕ್ಕಳಿಗೆ ಕಲಿಸುತ್ತಿದ್ದರು.

ನಾಲ್ಕನೇ ತರಗತಿವರೆಗೆ ಶಿಕ್ಷಣದ ವ್ಯವಸ್ಥೆ ಇತ್ತು. ಕುಳಕುಂಡೆ ಮಾಸ್ತರರು, ನಂತರ ರಾಮಚಂದ್ರ ನಾರಾಯಣ ಭಟ್ಟ ಬೆತ್ತಗೇರಿ ಎಂಬ ಮಾಸ್ತರರು, ಕೊಟ್ಟೆ ಚಿದಂಬರ ಭಟ್ಟ, ಬಾರೆ ಮಾಸ್ತರರು ಹೀಗೆ ಶಿಕ್ಷಕರಾಗಿ ಶಾಲೆ ನಡೆಸುತ್ತಾ ಬಂದರು. 1946ರಲ್ಲಿ ಸ್ಕೂಲ್‌ ಬೋರ್ಡ್‌ ವ್ಯವಸ್ಥೆಗೆ ಶಾಲೆ ಸೇರಿ ಊರವರೆಲ್ಲ ಸೇರಿ ಕಟ್ಟಡ ಸಾಮಗ್ರಿ ಸಂಗ್ರಹಿಸಿ ಶಾಲೆಗೊಂದು ಗಟ್ಟಿಯಾದ ಕಟ್ಟಡವೊಂದು ದೊರಕುವಲ್ಲಿ ಶ್ರಮಿಸಿದರು.

ಜೂನ್‌ 1, 1946ರಲ್ಲಿ ಸರಕಾರದಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು. 1948 ರಿಂದ 1976ರ ವರೆಗೆ ಊರವರು ಶ್ರಮದಾನದ ಮೂಲಕ ಕಟ್ಟಿದ್ದ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತ ಬಂದಿತು. ಮಕ್ಕಳ ಸಂಖ್ಯೆ ಹೆಚ್ಚಾಗಿ ಕಟ್ಟಡ ಸಾಲುತ್ತಿರಲಿಲ್ಲ.

Advertisement

1962ರಲ್ಲಿ ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮ್ಯಾಂಗನೀಸ್‌ ಅದಿರು ತೆಗೆಯಲು ಬಿಸಗೋಡಿಗೆ ಪ್ರವೇಶಮಾಡಿತು. ಕಾರ್ಮಿಕರ ಮಕ್ಕಳೆಲ್ಲ ಇದೇ ಶಾಲೆಗೆ ಸೇರತೊಡಗಿದರು. 1977-78 ರಲ್ಲಿ ಆರು ಏಳನೇ ತರಗತಿ
ಆರಂಭಗೊಂಡಿದ್ದು ಈ ಭಾಗದ ಮಕ್ಕಳಿಗೆ ಅನುಕೂಲವಾಯಿತು. ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಕಂಪೆನಿಗೆ ಶಾಲೆಗೆ ಕೊಠಡಿ ಅವಶ್ಯಕತೆ ತೀವ್ರವಾಗಿ ಕಂಡು ಬಂದು ಮೂರು ಕೊಠಡಿಗಳನ್ನು ತಾನೇ ನಿರ್ಮಿಸಿಕೊಟ್ಟಿತು. ದಿನೇ ದಿನೇ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಕಾಯಕ ಈ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತ ಸಾಗಿತು.

ಈ ಹಿನ್ನೆಲೆಯಲ್ಲಿ ಎಂಎಂಎಲ್‌ ಸಂಸ್ಥೆ ಹಿರಿಯ ಅಧಿಕಾರಿಗಳಾಗಿದ್ದ ದಿ| ಎ.ಎಸ್‌. ಗಿರಿರಾವ್‌ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಗಳನ್ನು ಈ ಭಾಗದ ಜನ ಮರೆಯುವಂತಿಲ್ಲ. ಈವರೆಗೆ ಈ ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಉದ್ಯೋಗಗಳಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಸಾಗಿದ್ದಾರೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರನ್ನು, ಮಕ್ಕಳನ್ನು, ಶಾಲೆಗಾಗಿ ಹೆಗಲುಕೊಟ್ಟು ದುಡಿದವರನ್ನು ಸ್ಮರಿಸಲು ಅಮೃತಮಹೋತ್ಸವ ಹಮ್ಮಿಕೊಂಡಿದೆ.

ಅಮೃತ ಮಹೋತ್ಸವದಲ್ಲಿ ಹತ್ತಾರು ದಾನಿಗಳ ಕೊಡುಗೆ ಪಡೆದು ಸ್ಮಾರ್‌r ಕೊಠಡಿ, ಪ್ರವೇಶದ್ವಾರ, ಶಾಲೆಗೆ ಸುಣ್ಣಬಣ್ಣ ಅಲಂಕಾರ, ಆವರಣಗೋಡೆ, ಶೌಚಾಲಯ, ನೂತನ ಕಟ್ಟಡ, ಕಟ್ಟಡದ ಜೀಣೋದ್ಧಾರ ಹೀಗೆ ಒಂದಿಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಂಡಿದೆ.

ಡಿ.27 ಮತ್ತು 28ರಂದು ವಿವಿಧ ಕಾರ್ಯಕ್ರಮದ ಮೂಲಕ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಸುರೇಶಕುಮಾರ್‌,
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಶಾಸಕರು ವಿವಿಧ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಮಹೋತ್ಸವ ವಿಶೇಷ ಮೆರಗನ್ನು ಪಡೆದುಕೊಳ್ಳುತ್ತಿದೆ.

ಯಕ್ಷಗಾನ ಪ್ರದರ್ಶನ, ಕುಂಚ ನರ್ತನ, ಯಕ್ಷದೃಶ್ಯ ಮಕ್ಕಳ ಮನರಂಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಎರಡು ದಿನ ಹಬ್ಬವನ್ನು ಬಿಸಗೋಡ ಭಾಗದ ಜನತೆಗೆ ಈ ಅಮೃತ ಮಹೋತ್ಸವ ಉಣಬಡಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next