Advertisement

ಮಹಿಳೆಯರೇ ನೆರವೇರಿಸಿದ ರುಕ್ಮಿಣೀ ಸ್ವಯಂವರ

06:40 PM Sep 12, 2019 | mahesh |

ಯಕ್ಷಗಾನ ಕಲಾಕೂಟ ಆತ್ರಾಡಿ ಇದರ 23ನೆಯ ಸ್ಥಾಪನಾ ದಿನಾಚರಣೆ ಅಂಗವಾಗಿ ಜರಗಿದ ತಾಳಮದ್ದಳೆ, ಉತ್ತಮ ಪ್ರದರ್ಶನವಾಗಿ ಗಮನ ಸೆಳೆದಿದೆ. ರುಕ್ಮಿಣೀ ಸ್ವಯಂವರ ಪ್ರಸಂಗವನ್ನು ಪ್ರಸ್ತುತ ಪಡಿಸಿದವರು ಯಕ್ಷ ಮಂಜುಳಾ ಕದ್ರಿ, ಮಂಗಳೂರು ಇಲ್ಲಿಯ ಮಹಿಳಾ ಕಲಾವಿದೆಯರು.

Advertisement

ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ರುಕ್ಮಿಣೀ ಸ್ವಯಂವರದ ಪೀಠಿಕೆಯ ಪಾತ್ರದಲ್ಲಿ ಭೀಷ್ಮಕನಾಗಿ ಕಾಣಿಸಿಕೊಂಡವರು ಎಚ್‌. ಟಿ. ರೂಪಾ ರಾಧಾಕೃಷ್ಣ. ಮಗಳಿಗೆ ಯೋಗ್ಯ ವರನನ್ನು ನಿರ್ಣಯಿಸುವ ಚಿಂತನ-ಮಂಥನ ಹಾವಭಾವಗಳ ಪ್ರಸ್ತುತಿ ಚೇತೋಹಾರಿಯಾಗಿತ್ತು. ಹಿತಮಿತವಾದ ಮಾತುಗಾರಿಕೆಯಿಂದ ವಿಷಯ ಪ್ರಸ್ತಾವಿಸಿ, ಮುಂದಿನ ಭಾಗಕ್ಕೆ ಸಂದರ್ಭ ನಿರ್ಮಿಸುವ ರೀತಿ ಅನುಸರಣೀಯವಾಗಿದೆ. ತಂದೆಯ ಆಯ್ಕೆಯನ್ನು ವಿರೋಧಿಸುವ ಮಗ ರುಕ್ಮ – ರುಕ್ಮಿಯ ಪಾತ್ರ ಪೂರ್ಣಿಮಾ ಪ್ರಶಾಂತ್‌ ಶಾಸ್ತ್ರಿಯವರದ್ದು. ನಿರರ್ಗಳ, ಹರಿತವಾದ ಮಾತುಗಾರಿಕೆ ಕ್ರಮದಿಂದ ಆವರಣ ನಿರ್ಮಿಸಿ ಪಾತ್ರ ಕಟ್ಟಿಕೊಡುವ ಜಾಣ್ಮೆ ಇವರಿಗಿದೆ. ಉತ್ತಮವಾದ ಕಂಠತ್ರಾಣದಿಂದ ಕೇಳುಗರನ್ನು ತಲುಪುವ ಗುಣ ಮಾತಿನಲ್ಲಿ ಇದೆ. ಶ್ರೀ ಕೃಷ್ಣನ ಕುಲ, ಶೀಲ, ರೂಪ, ವೃತ್ತಿ, ಆಚಾರ, ವಿಚಾರಗಳನ್ನು ವಕ್ರಗತಿಯಲ್ಲಿ ವ್ಯಂಗ್ಯಭರಿತ ಧ್ವನಿಯಿಂದ ನಿಂದಿಸಿ ಹೀಗಳೆಯುವ ಅವಕಾಶ ಧಾರಾಳವಿತ್ತು. ಆದರೂ ವೀರರಸದಿಂದಲೇ ಪಾತ್ರ ನಿರ್ವಹಿಸಿ ಕೇಳುಗರನ್ನು ತಲುಪಿದ್ದು ಕಡಿಮೆಯೇನಲ್ಲ.

ರುಕ್ಮಿಣಿಯನ್ನು ವರಿಸುವ ಹುಮ್ಮಸ್ಸಿನ ಶಿಶುಪಾಲನಾಗಿ ಶೈಲಜಾ ಶ್ರೀಕಾಂತ್‌ ರಾವ್‌, ಅವರು ಸರಳ – ಸುಂದರ ವಾಚಿಕಗಳ ಮತ್ತು ಮದುಮಗನ ಹಾವಭಾವಗಳ ನೋಟದಿಂದ ಪಾತ್ರ ಅಭಿವ್ಯಕ್ತಿಗೊಳಿಸಿದ್ದಾರೆ. ಇವರ ಜತೆಗೆ ದೂತನ ಪಾತ್ರದಲ್ಲಿ ಅನುಪಮಾ ಪ್ರಭಾಕರ್‌ ಅಡಿಗರು ಸಂಭಾಷಣೆಯಲ್ಲಿ ಭಾಗಿಯಾಗಿ ಉತ್ತಮ ರೀತಿಯಲ್ಲಿ ಸಂವಾದ ಬೆಳೆಸಿದ ಕ್ರಮವು ಮೆಚ್ಚುಗೆಯ ಅಂಶವಾಗಿದೆ. ಈ ಬಗೆಯ ಸಂವಾದಗಳಲ್ಲಿ ಪರಸ್ಪರ ಹೊಂದಾಣಿಕೆ, ಸಮನ್ವಯ ಕಂಡು ಬಂದಿರುವುದು ಮೆಚ್ಚುಗೆಯ ವಿಚಾರ.

ರುಕ್ಮಿಣಿ ಪಾತ್ರವನ್ನು ಅಂದವಾಗಿ ಅಭಿವ್ಯಕ್ತಿ ಪಡಿಸಿದವರು ವನಿತಾ ರಾಮಚಂದ್ರ ಭಟ್‌, ಶ್ರೀಕೃಷ್ಣನಿಗಾಗಿ ಹಂಬಲಿಸುವ ಅಂತರಂಗದ ತುಡಿತವನ್ನು ಭಾವಪೂರ್ಣವಾಗಿ ನಿರೂಪಿಸಿ, ಕೇಳುಗರನ್ನು ಭಾವತಲ್ಲೀನತೆಯಲ್ಲಿ ತೊಡಗಿಸಿದ ವಿಧಾನ ಅನನ್ಯವಾಗಿದೆ. ಇವರ ಜತೆಯಾಗಿ ಸಂವಾದ ನಡೆಸಿದ ಅಗ್ನಿಹೋತ ಬ್ರಾಹ್ಮಣ ಪಾತ್ರಧಾರಿ ಸುಧಾ ವಿ. ರಾವ್‌ ಅವರು ಸೃಜನಶೀಲ ಕಲಾವಿದೆಯಾಗಿ ಅಭಿವ್ಯಕ್ತಿಸಿಗೊಳಿದ್ದಾರೆ.
ಶ್ರೀ ಕೃಷ್ಣನ ಪಾತ್ರ ವಹಿಸಿದವರು ಕೂಟದ ಸಂಚಾಲಕಿಯಾಗಿರುವ ಪೂರ್ಣಿಮಾ ಪ್ರಭಾಕರ್‌ ರಾವ್‌ ಪೇಜಾವರ.

ಪ್ರಸಂಗದ ಐದು ಪಾತ್ರಗಳ ಜತೆಯಲ್ಲಿ ಸಂಭಾಷಣೆಯ ಅವಕಾಶವನ್ನು ಬಳಸಿ ಬೆಳೆಸಿ ಶ್ರೀ ಕೃಷ್ಣನ ದಿವ್ಯತೆ – ಭವ್ಯತೆಗಳನ್ನು ಬೆಳಗಿಸಿದ್ದಾರೆ. ಈ ಸಂದರ್ಭದಲ್ಲಿ ಹಾಸ್ಯಕ್ಕೆ ವಿಷಯವಿಲ್ಲ. ಆದ್ದರಿಂದ ರಜಕನ ಪಾತ್ರ ಅವಶ್ಯವಲ್ಲ ಅನಿಸುತ್ತದೆ. ರುಕ್ಮಿಣಿ ತನ್ನ ಒಡಹುಟ್ಟಿದವನ ಸಾವಿನ ಜತೆಗೆ ಶ್ರೀ ಕೃಷ್ಣನ ಕರಗ್ರಹಣ ಮಾಡಿದ ಅಪವಾದಕ್ಕೆ ಹೆದರಿ, ಅಣ್ಣನ ಜೀವ ಉಳಿಸೆಂದು ಬೇಡುತ್ತಾಳೆ. ಈ ನೆಲೆಯಲ್ಲಿ ಜುಟ್ಟನ್ನು ಕೊಯ್ದು, ಭಾಗಶಃ ಕೊಂದು ರುಕ್ಕನನ್ನು ಜೀವ ಮಾತ್ರವಾಗಿ ಉಳಿಸುತ್ತಾನೆ ಶ್ರೀಕೃಷ್ಣ. ರುಕ್ಮಿಣಿಯ ಅಂತರಂಗದ ದನಿಗೆ ಮನ್ನಣೆ ನೀಡದೆ ಬಲವಂತದಿಂದ ಸ್ತ್ರೀಯರನ್ನು ಕೊಂಡುಕೊಳ್ಳುವ ವಸ್ತುವಿನಂತೆ ಪರಿಭಾವಿಸುವ, ದರ್ಪ ಅರ್ಹಕಾರದಿಂದ ಮೆರೆಯುವ ರುಕ್ಮ, ಶಿಶುಪಾಲ, ಮಗಧಾದಿಗಳು ವಧಾರ್ಹರೆ. ಮಾನಿನಿಯರ, ಅಬಲೆಯರ ಅಂತರಂಗದ ಪ್ರಾರ್ಥನೆಗೆ ಓಗೊಡುವ ಕಾರಣಿಕನು ಶ್ರೀಕೃಷ್ಣ.

Advertisement

ಈ ಸನ್ನಿವೇಶದಲ್ಲಿ ಕ್ಷೌರಿಕನ ಪಾತ್ರ ಒಂದು, ಪ್ರಸಂಗ ಆಶಯ ಇನ್ನೊಂದು ಆಯಾಮ ಪಡೆಯಿತು. ಪ್ರಸಂಗದಲ್ಲಿ ಬಲದೇವನನ್ನು ಮರೆಯಲಾಗದು. ಅಚ್ಚುಕಟ್ಟಾದ ನಿರ್ವಹಣೆ ನೀಡಿದವರು ನಿವೇದಿತಾ ಎನ್‌. ಶೆಟ್ಟಿ. ಯಕ್ಷಗಾನೀಯವಾದ ಗತ್ತುಗಾರಿಕೆಯಿಂದ ಪಾತ್ರವನ್ನು ಕಟ್ಟಿ ಅರ್ಥ ಹೇಳಿರುವುದು ಶ್ಲಾಘನೀಯ. ಹಾಡುಗಾರಿಕೆಯಲ್ಲಿ ಅಮೃತಾ ಅಡಿಗ ಪಾಣಾಜೆ ಅವರು, ಮೃದಂಗದಲ್ಲಿ ಸತ್ಯನಾರಾಯಣ ಅಡಿಗ ಪಾಣಾಜೆ , ಚಕ್ರತಾಳದಲ್ಲಿ ಸಂಜೀವ ಕಜೆಪದವು ಮತ್ತು ಚೆಂಡೆಯಲ್ಲಿ ಅಪೂರ್ವಾ ಆರ್‌. ಸುರತ್ಕಲ್‌ ಉತ್ತಮ ಪ್ರದರ್ಶನ ನೀಡಿದ್ದಾರೆ.

ಅಪ್ಪು ನಾಯಕ್‌ ಆತ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next