Advertisement

Yakshagana; ಪ್ರಸಿದ್ಧ ವೇಷಧಾರಿ ಮಹಾದೇವ ಹೆಗಡೆ ಕೆಪ್ಪೆಕೆರೆ ವಿಧಿವಶ

10:11 AM Jul 10, 2024 | Team Udayavani |

ಹೊನ್ನಾವರ: ಯಕ್ಷಗಾನದ ರಂಗದ ಬಡಗು ತಿಟ್ಟಿನ ಮೇರು ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ(74) ಮಂಗಳವಾರ ರಾತ್ರಿ (ಜುಲೈ 9) ನಿಧನ ಹೊಂದಿದ್ದಾರೆ.

Advertisement

ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ‌ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಪುತ್ರನಾಗಿ ಜನಿಸಿದ ಮಹಾದೇವ ಹೆಗಡೆಯವರು ತನ್ನ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಹೆಗಡೆಯವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿತ್ತು. ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ  ಹೆಸರಾಂತ ಭಾಗವತರು.

ಯಕ್ಷ ದಿಗ್ಗಜ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿ ಇಡಗುಂಜಿ,ಮಂದಾರ್ತಿ,  ಶಿರಸಿ, ಕಮಲಶಿಲೆ, ಮುಂತಾದ ಮೇಳಗಳಲ್ಲಿ ದೀರ್ಘ ಕಾಲ ತಿರುಗಾಟ ಮಾಡಿದ್ದರು.

ಭೀಷ್ಮ, ಅಶ್ವತ್ಥಾಮ, ವಲಲ ಮುಂತಾದ ಇವರ ಪಾತ್ರಗಳು ಮಹಾಬಲ ಹೆಗಡೆಯವರಂತೆಯೇ ರಂಗದಲ್ಲಿ ತೋರಿಸಿದ್ದರು. ನಾಯಕ ಪ್ರತಿನಾಯಕ ಎರಡೂ ಪಾತ್ರಗಳನ್ನು ಸಮಾನವಾಗಿ ನಿರ್ವಹಿಸುವ ಸಾಮರ್ಥ್ಯವಿತ್ತು. ಭೀಮ, ವಲಲ, ಸುಗ್ರೀವ, ವಾಲಿ. ರಾಮ, ಮಹೋಗ್ರ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳ ಮೂಲಕ ಖ್ಯಾತರಾಗಿದ್ದರು.

Advertisement

ಹಂತ ಹಂತವಾಗಿ ಬೆಳೆದು ಬಂದ ಇವರು  ಸ್ತ್ರೀವೇಷ, ಬಣ್ಣದ ವೇಷಗಳನ್ನು ಸಹ ಮಾಡಿದ್ದರು. 40 ಕ್ಕೂ ಹೆಚ್ಚು ವರ್ಷ ವರ್ಷ ಕಲಾಸೇವೆ ಮಾಡಿದ್ದರು. ಮಂದಾರ್ತಿ ಮೇಳದ ಪ್ರಧಾನ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದರು. ಸದಾ ಹಸನ್ಮುಖಿಯಾಗಿ ಸರ್ವ ಕಲಾವಿದರ ನೆಚ್ಚಿನವರಾಗಿದ್ದರು. ಶಿರಸಿ ಮಾರಿಕಾಂಬ ಮೇಳವನ್ನು ಎರಡು ವರುಷ ಸಂಚಾಲಕರಾಗಿ ನಡೆಸಿದ್ದರು.

ಗುರುವಾಗಿಯೂ ನೂರಾರು ಕಲಾವಿದರನ್ನು ರಂಗಕ್ಕೆ ನೀಡಿದ್ದರು. ಹಲವಾರು ಸಂಘ ಸಂಸ್ಥೆಗಳ ಬಿರುದು ಮತ್ತು ಸಮ್ಮಾನಕ್ಕೆ ಭಾಜನರಾಗಿರಿದ್ದರು. ಪತ್ನಿ ಶಾರದೆ, ನಾಲ್ವರು ಪುತ್ರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next