Advertisement

ಪ್ರತಿಭಾ ಸಂಪನ್ನ ಕಲಾವಿದ ಅಡೂರು ಮರೆಯಾದರು

04:40 PM Dec 16, 2018 | |

ಅವರೊಬ್ಬರು ದೈತ್ಯ ಪ್ರತಿಭೆ, ತನ್ನ ನುಡಿತಗಳಿಂದ ಲಕ್ಷಾಂತರ ಜನರಿಗೆ ರಂಜನೆ ನೀಡಿದವರು,ನಿದ್ದೆಯಿಂದ ಬಡಿದೆಬ್ಬಿಸಿದವರು, ಅವರೇ ಅಡೂರು ಗಣೇಶ್‌ ರಾವ್‌. ನಡುವಯಸ್ಸಿನಲ್ಲೇ  ಯಕ್ಷಲೋಕವನ್ನು ಅಗಲಿ ಹೋಗಿದ್ದಾರೆ. 

Advertisement

ಡಿಸೆಂಬರ್‌ 11 ರಂದು ಯಕ್ಷಗಾಭಿಮಾನಿಗಳಿಗೆ, ನೂರಾರು ಕಲಾವಿದರಿಗೆ ನೋವಿನ ಸುದ್ದಿಯಾಗಿ ಕೇಳಿ ಬಂದಿದ್ದು ಅಡೂರು ಗಣೇಶ್‌ ರಾವ್‌ ಅವರ ನಿಧನದ ವಾರ್ತೆ. ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ  50 ರ ಹರೆಯದ ಗಣೇಶ್‌ ರಾವ್‌ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಯಾರಿಗೂ ನಂಬಲೂ ಸಾಧ್ಯವಾಗಲಿಲ್ಲ.

1968 ರ ಮಾರ್ಚ್‌ 23 ರಂದು ಕೆ.ಕೃಷ್ಣರಾವ್‌ ಮತ್ತು ಪಾರ್ವತಿ ದಂಪತಿಯ ಪುತ್ರನಾಗಿ ಜನಿಸಿದ ಅಡೂರು ಗಣೇಶ್‌ ರಾವ್‌ ಮನೆಯಲ್ಲೇ ಯಕ್ಷಗಾನದ ಪ್ರಾಥಮಿಕ ಪಾಠವನ್ನು ಕಲಿತು ಪರಿಪೂರ್ಣ ಕಲಾವಿದನಾಗಿ ಮೂಡಿ ಬಂದವರು.

ಪ್ರಖ್ಯಾತ ಗುರು, ಶ್ರೇಷ್ಠ ಕಲಾವಿದ ನಿಡ್ಲೆ  ದಿವಂಗತ ನರಸಿಂಹ ಭಟ್ಟರಲ್ಲಿ ಅಭ್ಯಾಸ ನಡೆಸಿ ಗಣೇಶ್‌ ರಾವ್‌ ಆರಂಭದಲ್ಲಿ  ವೇಷಗಾರಿಕೆಯತ್ತ ಗಮನ ಹರಿಸಿದ್ದರು. ದಿವಂಗತ ಇರಾ ಗೋಪಾಲಕೃಷ್ಣ ಭಾಗವತರು ಮತ್ತು ಕುಕ್ಕಿಲ ಶಂಕರ್‌ ಭಟ್‌ ಅವರ ಬಳಿ ಮದ್ದಳೆ ಅಭ್ಯಾಸ ಮಾಡಿದರು. 

Advertisement

ಪುಂಡುವೇಷಧಾರಿಯಾಗಿಯೂ ಗಮನ ಸೆಳೆದಿದ್ದ ಅವರು  ಆ ಬಳಿಕ ಮದ್ದಳೆ ಮತ್ತು ಚಂಡೆವಾದಕರಾಗಿ ಖ್ಯಾತಿ ಪಡೆದಿದ್ದು ವಿಶೇಷ ಮಾತ್ರವಲ್ಲದೆ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿ.

ಸವ್ಯಸಾಚಿ ಎನಿಸಿಕೊಂಡಿದ್ದ ಅವರು ಹಲವು ಪ್ರಮುಖ ಕಲಾವಿದರೊಂದಿಗೆ ತಿರುಗಾಟ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. 

ಧರ್ಮಸ್ಥಳ ಮೇಳದಲ್ಲಿ ಸುದೀರ್ಘ‌ ತಿರುಗಾಟ ಮಾಡಿದ್ದ ಅವರು ಖ್ಯಾತ ಭಾಗವತ ಕಂಚಿನ ಕಂಠದ ರಘುರಾಮ ಹೊಳ್ಳರೊಂದಿಗೆ ಸಹವಾದಕನಾಗಿ ಕಾಣಿಸಿಕೊಂಡು ನಾಡಿನಾದ್ಯಂತ ರಂಗದ ರಂಗು ಹೆಚ್ಚಿಸಿದ್ದರು. 

ಚಂಡೆಯ  ಪ್ರಾಧಾನ್ಯತೆ ಇರುವ ರಾಕ್ಷಸ ವೇಷ , ಪುಂಡು ವೇಷ ಗಳಿಗೆ ಬಾರಿಸುವಿಕೆಯ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಶಕ್ತಿ ಗಣೇಶ್‌ ರಾವ್‌ ಅವರಲ್ಲಿತ್ತು. 

ತೆಂಕಿನ ಮೇಳಗಳಾದ ಸುರತ್ಕಲ್‌ , ಕಟೀಲು, ಕದ್ರಿ , ಪುತ್ತೂರು ಮೇಳಗಳಲ್ಲಿಯೂ ತಿರುಗಾಟ ಮಾಡಿದ್ದ ಅವರು ತೆಂಕು ತಿಟ್ಟು ಯಕ್ಷಗಾನದಲ್ಲಿ ಅಪಾರ ಅನುಭವ ಸಂಪಾದಿಸಿದ್ದ ಕಲಾವಿದ ಎನಿಸಿಕೊಂಡಿದ್ದರು. 

ಕರಾವಳಿ,ದೇಶದ ವಿವಿಧೆಡೆ ಮತ್ತು ವಿದೇಶದಲ್ಲೂ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಗಣೇಶ್‌ ರಾವ್‌ ಅವರು ಬಹುಬೇಡಿಕೆಯ ಕಲಾವಿದರಾಗಿದ್ದರು. 

ಕಲಾವಿದರು ನೋವಿಗೆ ಸಿಲುಕುವುದು ಹೆಚ್ಚು ಅನ್ನುವ ಹಾಗೆ  ಗಣೇಶ್‌ ರಾವ್‌ ಅವರು ಲಿವರ್ ಸಮಸ್ಯೆಯಿಂದ ಬಳಲಿ ಯಕ್ಷರಂಗದಿಂದ ಮರೆಯಾಗಿದ್ದಾರೆ. ಶ್ರೀಮಂತ ತೆಂಕು ತಿಟ್ಟು ಯಕ್ಷರಂಗದಿಂದ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಪತ್ನಿ , ಪುತ್ರ ಮತ್ತು ಪುತ್ರಿಯನ್ನು ಅಗಲಿಹೋಗಿದ್ದಾರೆ. 

ಧರ್ಮಸ್ಥಳ ಮೇಳದ ರಂಗಸ್ಥಳಲ್ಲಿ ಅಜಾನುಬಾಹುವಾಗಿ ಕಾಣಿಸಿಕೊಳ್ಳುತ್ತಿದ್ದ ಅವರ ಅನುಪಸ್ಥಿತಿ ಯಕ್ಷಾಭಿಮಾನಿಗಳಿಗೆ ಎದ್ದು ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next