ದರ್ಶನ್ ನಾಯಕರಾಗಿರುವ “ಯಜಮಾನ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಅನೇಕ ಪ್ರಶ್ನೆ, ಕುತೂಹಲಗಳು ಎದ್ದಿದ್ದವು. ಚಿತ್ರದ ಟೈಟಲ್, ಹರಿಕೃಷ್ಣಗೆ ನಿರ್ದೇಶನದ ಕ್ರೆಡಿಟ್, ಟೈಟಲ್ ಕಾಂಟ್ರವರ್ಸಿ …. ಹೀಗೆ ಹತ್ತು ಹಲವು ಪ್ರಶ್ನೆಗಳಿದ್ದವು. ಮೊದಲ ಬಾರಿಗೆ ದರ್ಶನ್ ಆ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ
ಉತ್ತರಿಸಿದ್ದಾರೆ. ಅದು ಅವರ ಮಾತುಗಳಲ್ಲೇ …
* “ಯಜಮಾನ’ ಟೈಟಲ್ ಕುರಿತು ಒಂದಷ್ಟು ಕಾಂಟ್ರವರ್ಸಿ ಕೇಳಿಬಂತು. ಇಲ್ಲಿ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ನಮ್ಮ ಚಿತ್ರರಂಗಕ್ಕೆ ಯಾವತ್ತಿದ್ದರೂ ವಿಷ್ಣುಸಾರ್ ಅವರೇ ಯಜಮಾನ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಟ್ರೇಲರ್ ನೋಡಿದಾಗ ಸಿನಿಮಾದ ಕಥೆಯ ಬಗ್ಗೆ ಗೊತ್ತಾಗಿರಬಹುದು. ಅದಕ್ಕಿಂತ ಹೆಚ್ಚಾಗಿ ನಾನು ಇಲ್ಲಿ ಯಜಮಾನನಾಗಿ ಕಾಣಿಸಿಕೊಂಡಿಲ್ಲ. ಅದು ಸಿನಿಮಾ ನೋಡಿದಾಗ ನಿಮಗೆ ಗೊತ್ತಾಗುತ್ತದೆ. ಕಥೆಗೆ “ಯಜಮಾನ’ ಟೈಟಲ್ ಸೂಕ್ತ ಎಂಬ ಕಾರಣಕ್ಕೆ ಇಟ್ಟಿದ್ದೇವೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ.
*ಯಜಮಾನ’ ಚಿತ್ರದ ನಾಲ್ಕು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. “ಹರಿಕೃಷ್ಣ, ಅವರದ್ದೇ ನಿರ್ದೇಶನದ ಸಿನಿಮಾದ ಎಲ್ಲಾ ಹಾಡುಗಳನ್ನು ಹಿಟ್ ಮಾಡಿದರು. ಅದೇ ಬೇರೆ ನಿರ್ದೇಶಕರ ಸಿನಿಮಾದ ಒಂದೆರಡು ಹಾಡುಗಳಷ್ಟೇ ಹಿಟ್ ಆಗುತ್ತವೆ’ ಎಂದು. ಇದೇ ಪ್ರಶ್ನೆಯನ್ನು ನಾನು ಹರಿಗೆ ಕೇಳಿದೆ. ಹರಿ ತುಂಬಾ ಸೊಗಸಾಗಿ ಉತ್ತರಿಸಿದರು. “ಈ ಸಿನಿಮಾದ ಸಂಪೂರ್ಣ ವಿಚಾರ ನನಗೆ ಗೊತ್ತು. ಕಥೆಯಿಂದ ಹಿಡಿದು, ಸಿಚುವೇಶನ್ ಎಲ್ಲವೂ ನನಗೆ ಗೊತ್ತು. ಹಾಗಾಗಿ, ಅದಕ್ಕೆ ತಕ್ಕಂತೆ ಹಾಡು ಮಾಡಿದೆ. ಅದೇ ಬೇರೆ ಸಿನಿಮಾದ ನಿರ್ದೇಶಕರು ಚಿತ್ರದ ಸಂಪೂರ್ಣ ಕಥೆ ಹೇಳಲ್ಲ. ಸಿಚುವೇಶನ್ ಹೇಳಿ ಹೋಗುತ್ತಾರೆ. ಆ ಸಿಚುವೇಶನ್ನ ಅರ್ಥಮಾಡಿಕೊಂಡು ಹಾಡು ಕೊಡಬೇಕಾಗುತ್ತದೆ’ ಎಂದರು. ಅದು ನನಗೂ ಸರಿ ಎನಿಸಿತು. ಎಷ್ಟೋ ನಿರ್ದೇಶಕರು ಕಥೆಯನ್ನು ಕನ್ವಿನ್ಸ್ ಮಾಡುವಲ್ಲಿ ಎಡವುತ್ತಾರೆ.
*”ಯಜಮಾನ’ ಒಂದು ಅದ್ಭುತವಾದ ಕಥೆ. ಇವತ್ತಿನ ಸಂದರ್ಭಕ್ಕೆ ತುಂಬಾ ಹೊಂದಿಕೆಯಾಗುತ್ತದೆ. ಅಭಿಮಾನಿಗಳು ಈ ಚಿತ್ರದ ಮೇಲೆ ಏನು ನಿರೀಕ್ಷೆ ಇಟ್ಟಿದ್ದಾರೋ ಆ ನಿರೀಕ್ಷೆ ಸುಳ್ಳಾಗಲ್ಲ.
* ಇವತ್ತು “ಯಜಮಾನ’ ಚಿತ್ರದ ಹಾಡುಗಳು, ಟ್ರೇಲರ್ ಈ ಮಟ್ಟದಲ್ಲಿ ಹಿಟ್ ಆಗಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕಿ ಶೈಲಜಾ ನಾಗ್. ಕೆಲವು ಸಿನಿಮಾಗಳಲ್ಲಿ ಹೋಗಿ ನಟಿಸಿ ಬರುತ್ತೇವೆ. ಆದರೆ, ಶೈಲಜಾ ಮೇಡಂ ಮಾತ್ರ ಚಿತ್ರದ ಪ್ರತಿಯೊಂದು ಅಪ್ಡೇಟ್ಸ್ ಕೊಡುತ್ತಿದ್ದರು. ಏನೇ ಇದ್ದರೂ, ಹೇಳುವ ಜೊತೆಗೆ ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಕೇಳುತ್ತಿದ್ದರು. ಚಿತ್ರದ ಹಾಡು, ಟ್ರೇಲರ್ ಬಿಡುಗಡೆಗೆ ಮುಂಚೆ ಅವರು ಆಡಿಯನ್ಸ್ಗೆ ಅದರ ಬಗ್ಗೆ ತಿಳಿಸಿ, ಅವರ ಮೈಂಡ್ಸೆಟ್ ಮಾಡುತ್ತಿದ್ದ ರೀತಿ ನನಗೆ ಇಷ್ಟವಾಯಿತು.
*ಸಿನಿಮಾದ ಬಹುತೇಕ ದೃಶ್ಯಗಳು ಸೆಟ್ನಲ್ಲಿ ನಡೆಯುತ್ತವೆ. ಕಲಾ ನಿರ್ದೇಶಕ ಶಶಿಧರ ಅಡಪ ಅವರ ಸೆಟ್ ನೋಡಿ ನಾನು ಫಿದಾ ಆಗಿ ಬಿಟ್ಟೆ. ಅಷ್ಟೊಂದು ಚೆನ್ನಾಗಿ ಸೆಟ್ ಹಾಕಿದ್ದಾರೆ.
“ಯಜಮಾನ’ ಚಿತ್ರದ ನಿರ್ದೇಶನದಲ್ಲಿ ಹರಿಕೃಷ್ಣ ಅವರ ಹೆಸರು ಸೇರುತ್ತಿದ್ದಂತೆ ಅನೇಕರಲ್ಲಿ ಯಾಕೆ ಎಂಬ ಪ್ರಶ್ನೆ ಇದೆ. ಈ ಸಿನಿಮಾಕ್ಕೆ ಓಂಕಾರ ಹಾಕಿದ ದಿನದಿಂದಲೂ ಹರಿಕೃಷ್ಣ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಬೇರೆ ಕೆಲಸಗಳನ್ನು ಬದಿಗಿಟ್ಟು, ರಾತ್ರಿ ಹಗಲು ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಈ ಚಿತ್ರಕ್ಕೆ ಅವರ ಪ್ರಯತ್ನ ಅಗಾಧವಾದುದು, ಅಮೋಘವಾದುದು ಮತ್ತು ತುಂಬಾ ದೊಡ್ಡದು. ಹಾಗಾಗಿ, ಇಡೀ ತಂಡ ಸೇರಿ ಚರ್ಚಿಸಿ, ಅವರಿಗೆ ಕ್ರೆಡಿಟ್ ಕೊಟ್ಟೆವು.