Advertisement

ಭರ್ತಿಯಾಗದ ಹತ್ತಿ ಕುಣಿ ಜಲಾಶಯ

06:40 PM Nov 11, 2019 | Naveen |

„ಅನೀಲ ಬಸೂದೆ
ಯಾದಗಿರಿ:
ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ ಬರಿದಾಗಿದ್ದು, ಹಲವಾರು ಗ್ರಾಮಗಳ ರೈತರು ಆತಂಕ ಎದುರಿಸುವಂತಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಅಕ್ಟೋಬರ್‌ ಎರಡನೇ ವಾರದವರೆಗೆ 739 ಮಿಮೀ ಕನಿಷ್ಠ ಮಳೆಯಲ್ಲಿ 520 ಮಿಮೀ ಮಳೆ ಸುರಿದು ಶೇ. 30ರಷ್ಟು ಕೊರತೆಯಾಗಿದೆ. ಮುಂಗಾರಿನಲ್ಲಿ ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಶೇ.34 ಮಳೆ ಕೊರತೆಯಾಗಿದ್ದು , ಅಕ್ಟೋಬರ್‌ ಎರಡನೇ ವಾರದವರೆಗೆ 805 ಕನಿಷ್ಠ ಮಳೆ ಪ್ರಮಾಣದಲ್ಲಿ 560 ಮಿಮೀ ಮಳೆ ಸುರಿದಿದೆ.

Advertisement

ತಾಲೂಕಿನ ಪ್ರಮುಖ ಜಲಾಶಯ 0.352 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಕಳೆದ ಮೂರು ವರ್ಷಗಳಿಂದಲೂ ಸಕಾಲಕ್ಕೆ ಮಳೆ ಬಾರದೆ ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ. ಜಲಾಶಯದ ನೀರನ್ನೇ ನಂಬಿರುವ ಹತ್ತಿಕುಣಿ, ಕಟಗಿ ಶಹಾಪುರ, ಯಡ್ಡಳ್ಳಿ, ಹೊನಗೇರಾ ಹಾಗೂ ದಸರಾಬಾದ್‌ ಗ್ರಾಮಗಳ ಒಟ್ಟು 5,300 ಎಕರೆ ಜಮೀನು ನೀರಾವರಿ ಮಾಡಿಕೊಂಡು ಭತ್ತ, ಜೋಳ, ಶೇಂಗಾ ಬೆಳೆ ಬೆಳೆಯುತ್ತಿದ್ದು, ಮಳೆ ಬಂದರೆ ಮಾತ್ರ ನಿಸರ್ಗದ ನೀರು ಜಲಾಶಯಕ್ಕೆ ಹರಿದು ಬರುತ್ತದೆ. ಪರ್ಯಾಯವಾಗಿ ನೀರು ಪೂರೈಕೆಯಿಲ್ಲದೇ ಇರುವುದು ಕಂಗಾಲಾಗಿಸಿದೆ. ಜಿಲ್ಲೆಯಲ್ಲಿ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿರುವ ಹತ್ತಿಕುಣಿ ಜಲಾಶಯ, ಹಚ್ಚ ಹಸಿರಿನಿಂದ ಕೂಡಿದೆ.

ರಮಣೀಯ ಸೊಬಗನ್ನು ಕಣ್ಣು ತುಂಬಿಸಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸಿ ಪ್ರಕೃತಿ ಸೌಂದರ್ಯ ಸವಿದು ಇಲ್ಲಿಯೇ ಕಾಲ ಕಳೆಯಲು ಹಾತೊರೆಯುತ್ತಾರೆ. ಕಳೆದ 3 ವರ್ಷಗಳಿಂದ ಜಲಾಶಯ ಭರ್ತಿಯಾಗದ ಪರಿಣಾಮ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ತೀರಾ ಕುಂಠಿತ ಕಂಡಿದೆ. ಪ್ರವಾಸೋದ್ಯಮ ಇಲಾಖೆ ಜಲಾಶಯದ ಪಕ್ಕದಲ್ಲಿರುವ ಪ್ರವಾಸಿ ಮಂದಿರ ಅಭಿವೃದ್ಧಿ ಪಡಿಸಿ ವಿಶಾಲವಾದ ಸ್ಥಳದಲ್ಲಿ ಉದ್ಯಾನವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ವೇದಿಕೆ ನಿರ್ಮಾಣ ಮಾಡಿದೆ.

ಜಿಲ್ಲಾಡಳಿತ ಕೆರೆಯಲ್ಲಿ ಬೋಟ್‌ ಸಂಚಾರ ವ್ಯವಸ್ಥೆ ಕಲ್ಪಿಸಿದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಆನಂದದಿಂದ ಬೋಟಿಂಗ್‌ ಮಾಡಿ ಪ್ರಕೃತಿ ಸೌಂದರ್ಯ ವೀಕ್ಷಿಸಬಹುದು, ಜತೆಗೆ ಆರ್ಥಿಕ ಲಾಭ ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next