Advertisement

ಖಾತ್ರಿ ಕಾಮಗಾರಿ ಸ್ಥಳಕ್ಕೆ ಸಿಇಒ ಭೇಟಿ

12:17 PM Apr 30, 2020 | Naveen |

ಯಾದಗಿರಿ: ಕೋವಿಡ್‌-19 ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಶಿಲ್ಪಾ ಶರ್ಮಾ ಸೂಚಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸುರಪುರ ತಾಲೂಕು ಖಾನಾಪುರ (ಎಸ್‌ಎಚ್‌) ಗ್ರಾಪಂ ಗುಡ್ಡದಲ್ಲಿ ಮಳೆ ನೀರು ಇಂಗಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಅನುಷ್ಠಾನಗೊಳ್ಳುತ್ತಿರುವ ಕಂದಕಗಳ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಸೂಚಿಸಿದರು.  ಬಳಿಕ ಕೂಲಿಕಾರರ ಜಾಬ್‌ ಕಾರ್ಡ್‌ಗಳನ್ನು ಪರಿಶೀಲಿಸಿದರು.

Advertisement

ಸುರಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮಾತನಾಡಿ, 52 ಜನ ಕೂಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಕಿಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಎಲ್ಲ ಕೂಲಿಕಾರರಿಗೆ ಗ್ರಾಪಂ ವತಿಯಿಂದ ಸಾನಿಟೈಸರ್‌ ಮತ್ತು ಮಾಸ್ಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ 275 ರೂ. ಕೂಲಿ ಸಿಗುತ್ತಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಪತಿಯೊಂದಿಗೆ ನನಗೂ ಕೂಡ ಕೆಲಸ ಸಿಕ್ಕಿರುವುದರಿಂದ ಜೀವನಕ್ಕೆ ನೆರವಾಗಿದೆ ಎಂಬುದಾಗಿ ಕೂಲಿ ಮಹಿಳೆ ದುರಗಮ್ಮ ಸಂತಸ ವ್ಯಕ್ತಪಡಿಸಿದರು. ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದುರಗಮ್ಮ ಮಕಾಶಿ, ಸುರಪುರ ತಾಂತ್ರಿಕ ಸಹಾಯಕ ವೆಂಕಟರೆಡ್ಡಿ, ಸಿಬ್ಬಂದಿ ಆಶಣ್ಣ, ಸಿದ್ದಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next