Advertisement

ಚಪ್ಪಲಿ ಹಾರ ಹಾಕಿಸಿದ್ದನ್ನು ಮರೆಯಲಾರೆ’

07:53 AM Nov 08, 2017 | |

ಮೈಸೂರು: “ಯಕಶ್ಚಿತ್‌ ಮುಖ್ಯಮಂತ್ರಿ ಸ್ಥಾನಕ್ಕಾಗಿ, ನೀವು ನಾಯಕರಾಗಿ ಹೊರಹೊಮ್ಮಲು ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆದ ಎಚ್‌.ಡಿ.ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿ ಮೈಸೂರಿನಲ್ಲಿ ಮೆರವಣಿಗೆ ಮಾಡಿಸಿದ ದಿನವನ್ನು ನನ್ನಿಂದ ಮರೆಯಲಾಗಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜನತಾದಳದಲ್ಲಿ ದೊಡ್ಡ ದೊಡ್ಡ ನಾಯಕರಿದ್ದರೂ ಸಿದ್ದರಾಮಯ್ಯ ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ಎಚ್‌.ಡಿ. ದೇವೇಗೌಡರು, ಹಣಕಾಸು ಖಾತೆ ನೀಡಿ ನಾಯಕರಾಗಿ  ಬೆಳೆಸಿದರು. ಅಬಕಾರಿ ಖಾತೆ ಕೊಡಲಿಲ್ಲ ಎಂದು ಮುನಿಸಿಕೊಂಡಿದ್ದವರನ್ನು ಉಪ ಮುಖ್ಯಮಂತ್ರಿ ಮಾಡಿದರು. 2004ರಲ್ಲಿ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪಕ್ಷವನ್ನೇ ಬಲಿ ಕೊಡಲು ಹೊರಟ ಪುಣ್ಯಾತ್ಮ ಅವರು ಎಂದು ಟೀಕಿಸಿದರು. ತನ್ನನ್ನು ಬೆಳೆಸಿದವರನ್ನು ತುಳಿಯುವುದರಲ್ಲಿ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್‌ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌.ಎಂ.ಕೃಷ್ಣ ಅವರನ್ನು ಬಿಜೆಪಿಗೆ, ಎಚ್‌.ವಿಶ್ವನಾಥ್‌ರನ್ನು ಜೆಡಿಎಸ್‌ಗೆ ಹೋಗುವಷ್ಟು ನೋವು ಕೊಟ್ಟಿದ್ದಾರೆ ಎಂದರು.

113ರ ಗುರಿ ತಲುಪಿಸಲು ಹೋರಾಟ: ಎಚ್‌ಡಿಕೆ
ಮೈಸೂರು: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಕುಟುಂಬ ಸಮೇತರಾಗಿ ವಿಶೇಷಪೂಜೆ ಸಲ್ಲಿಸಿದ ನಂತರ ಬಲೂನ್‌ ಗಳನ್ನು ಹಾರಿ ಬಿಡುವ ಮೂಲಕ ರಾಜ್ಯ ಪ್ರವಾಸಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಿರುವ “ಕರ್ನಾಟಕ ವಿಕಾಸ ವಾಹಿನಿ’ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೆಡಿಎಸ್‌ಗೆ ಯಾವುದೇ ಮಿಷನ್‌ ಇಲ್ಲ. ಈ ಬಾರಿ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ. ಯಾತ್ರೆಯ ಮೂಲಕ ನಾವು ಯಾವುದೇ ಪಕ್ಷಗಳಿಗೆ ಸಂದೇಶ ನೀಡಬೇಕಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ರೈತರ ಆತ್ಮಹತ್ಯೆ ತಡೆಗಟ್ಟಬೇಕಿದೆ. ಈ ಸಮಾವೇಶದ ಮೂಲಕ ನಾವು ರಾಜ್ಯದ ಜನತೆಗೆ ಸಂದೇಶ ನೀಡಬೇಕಿದೆ ಎಂದರು.

ಈ ಮೊದಲು ಜೆಡಿಎಸ್‌ನ್ನು ಇತರ ಪಕ್ಷಗಳ ಸಾಲಿನಲ್ಲಿ ಗುರುತಿಸಲಾಗಿತ್ತು. ಆದರೆ, ಕೆಲ ಸಮೀಕ್ಷೆಗಳು ಜೆಡಿಎಸ್‌ 60 ಸ್ಥಾನಗಳನ್ನು ಗಳಿಸಬಹುದು ಎಂದಿರುವ ಹಿನ್ನೆಲೆಯಲ್ಲಿ ಆ ಸಂಖ್ಯೆಯನ್ನು 113ಕ್ಕೆ ಮುಟ್ಟಿಸುವುದು ತಮ್ಮ ಗುರಿಯಾಗಿದೆ. ಇದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು.

ರೆಬಲ್‌ ಶಾಸಕರು ಸವಾಲಲ್ಲ: ಜೆಡಿಎಸ್‌ನ ಭಿನ್ನಮತೀಯ ಶಾಸಕರು ನಮಗೆ ಸವಾಲಲ್ಲ. ಆ ಕ್ಷೇತ್ರಗಳಲ್ಲಿ ಜನರೇ ನನಗೆ ದೊಡ್ಡ ಗೆಲುವು ತಂದು ಕೊಡುತ್ತಾರೆ. ಕೊನೇ ಕ್ಷಣದಲ್ಲಿ ಪಕ್ಷಕ್ಕೆ ಬರುವವರಿಗೆ ರೆಡ್‌ ಕಾಪೆìಟ್‌ ಹಾಸುವುದಿಲ್ಲ. ಅವಕಾಶವಾದಿ
ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ
ಮಾಡುತ್ತೇವೆ ಎಂದು ಅವರು ತಿಳಿಸಿದರು.

Advertisement

ವಿಕಾಸ ವಾಹಿನಿ ಸಂಖ್ಯೆ 3366
ಮೈಸೂರು: ಎಚ್‌.ಡಿ.ಕುಮಾರಸ್ವಾಮಿ ಅವರು ಅದೃಷ್ಟ ಸಂಖ್ಯೆಯ ಮೊರೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಬಳಸುವ ಫಾರ್ಚೂನರ್‌ ಕಾರಿನ ಸಂಖ್ಯೆ ಕೆಎ42-ಪಿ 3366 ಆಗಿದ್ದರೆ, ವಿಕಾಸ ವಾಹಿನಿ ವಿಶೇಷ ಬಸ್‌ನ ಸಂಖ್ಯೆ ಕೂಡ ಕೆ.ಎ-59- ಎಂ.3366 ಆಗಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next