Advertisement

ಕಾರ್ಮಿಕರು-ನಿರ್ಗತಿಕರಿಗೀಗ ವಸ್ತ್ರದ ಚಿಂತೆ

03:48 PM Apr 01, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಪರಿಣಾಮದಿಂದ ತುತ್ತು ಅನ್ನಕ್ಕೂ ಪರಿತಪಿಸಿ ಜಿಲ್ಲಾಡಳಿತ ಆರಂಭಿಸಿರುವ ಕೇಂದ್ರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು-ನಿರ್ಗತಿಕರಿಗೆ ನಿತ್ಯ ತೊಡುವ ಬಟ್ಟೆಗಳ ಸಮಸ್ಯೆ ಎದುರಾಗಿದೆ.

Advertisement

ಹರಿದ ಚಿಂದಿಯಾಗಿರುವ ತೊಟ್ಟ ಬಟ್ಟೆಯಲ್ಲೇ ದಿನ ದೂಡುವಂತಾಗಿದೆ. ಲೌಕ್‌ಡೌನ್‌ ಕಾರ್ಮಿಕರು ಹಾಗೂ ನಿರ್ಗತಿಕರ ಮೇಲೆ ನೇರ ಪರಿಣಾಮ ಬೀರಿದ್ದು, ಅಂದು ದುಡಿದ ಹಣದಲ್ಲೇ ಜೀವನ ಸಾಗಿಸುತ್ತಿದ್ದವರ ಬದುಕು ಸಂಪೂರ್ಣ ಬೀದಿಗೆ ಬಂದಿತ್ತು. ಒಪ್ಪೊತ್ತಿನ ಊಟಕ್ಕೂ ಪರಿತಪಿಸಬೇಕಾಗಿತ್ತು. ಇದೀಗ ಜಿಲ್ಲಾಡಳಿತ ಏಳು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಆರಂಭಿಸಿ ವರೆಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಿದೆ. ಉಪಹಾರ, ಎರಡೊತ್ತು ಆಹಾರ ಕಲ್ಪಿಸಲಾಗುತ್ತಿದೆ.

ಕಳೆದ ಮಾ.25ರಂದು ಆರಂಭವಾದ ಈ ಕೇಂದ್ರದಲ್ಲಿ ಸುಮಾರು 23 ನಿರ್ಗತಿಕರಿಗೆ ಆಶ್ರಯ ನೀಡಲಾಗಿದ್ದು, ಸ್ಥಳೀಯ ಸಂಘ-ಸಂಸ್ಥೆಗಳು ನಿತ್ಯವೂ ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಮಾ.29ರಿಂದ ವಲಸೆ ಹಾಗೂ ಕೂಲಿ ಕಾರ್ಮಿಕರಿಗೂ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಏಳು ಕೇಂದ್ರಗಳಲ್ಲಿ 280 ಕಾರ್ಮಿಕರು, 23 ನಿರ್ಗತಿಕರು ಆಶ್ರಯ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ಕಾನ್‌ನ ಅಕ್ಷಯಪಾತ್ರೆಯಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಆಶ್ರಯ ಮತ್ತು ಆಹಾರದೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಒಂದು ಟಾವೆಲ್‌, ಬಟ್ಟೆ ಹಾಗೂ ಮೈ ಸಾಬೂನು, ಟೂತ್‌ ಪೇಸ್ಟ್‌, ಬ್ರಶ್‌ ಇರುವ ಕಿಟ್‌ ನೀಡುತ್ತಿದೆ. ಆದರೆ ಆಶ್ರಯ ಪಡೆದ ಕಾರ್ಮಿಕರಿಗೆ ದಿನನಿತ್ಯ ಧರಿಸುವ ಬಟ್ಟೆಗಳದ್ದೇ ಸಮಸ್ಯೆಯಾಗಿ ಪರಿಣಮಿಸಿದ್ದು, ದಿನ ಕಳೆದಂತೆ ಇದು ಮತ್ತಷ್ಟು ಹೆಚ್ಚಲಿದೆ.

ದಾನಿಗಳಿಂದ ನಿರೀಕ್ಷೆ: ತೊಟ್ಟ ಬಟ್ಟೆಯಲ್ಲಿ ಬಂದು ಕೇಂದ್ರಗಳಲ್ಲಿ ಆಶ್ರಯ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬೆಳಗ್ಗೆ ತೊಟ್ಟ ಬಟ್ಟೆಯನ್ನು ತೊಳೆದು ಹಾಕಿ ಒಣಗಿದ ಮೇಲೆ ಪುನಃ ಅವುಗಳನ್ನು ಧರಿಸಿ ದಿನ ಕಳೆಯುತ್ತಿದ್ದಾರೆ. ಮಹಿಳೆಯರ ಪಾಡಂತೂ ಹೇಳತೀರದು. ಮಕ್ಕಳಂತೂ ಮಾಸಿದ ಒಂದೇ ಬಟ್ಟೆಯಲ್ಲಿ ಇದ್ದಾರೆ. ಕೇಂದ್ರಗಳಿಗೆ ಸೇರುವ ಮುನ್ನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಿ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಲಾಗಿದೆ.

Advertisement

ಒಂದು ಕೇಂದ್ರದಲ್ಲಿ ಸುಮಾರು 50 ಜನರು ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಬೇಕಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯ ತಂಡ ರಚಿಸಿ ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಪ್ರತಿಯೊಂದು ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವ ಕಡೆಗೆ ಗಮನ ಹರಿಸಬೇಕಾಗಿದೆ.

ಅಗತ್ಯ ಸೌಲಭ್ಯ: ಆಶ್ರಯ ಕೇಂದ್ರಗಳಲ್ಲಿ ಪ್ರಮುಖವಾಗಿ ಅಂತರ ಕಾಯ್ದುಕೊಳ್ಳುವುದಕ್ಕೆ ಪ್ರಮುಖ ಒತ್ತು ನೀಡಲಾಗಿದೆ. ಕಾಲ ಕಾಲಕ್ಕೆ ಉಪಹಾರ, ಊಟವನ್ನು ಪ್ಯಾಕೆಟ್‌ ಮೂಲಕ ವಿತರಿಸಲಾಗುತ್ತಿದೆ. ಒಂದೇ ಕಡೆಯಿದ್ದು ಬೇಜಾರು ಕಳೆಯುವುದಕ್ಕಾಗಿ ಕೇಂದ್ರಗಳ ಅವರಣದಲ್ಲಿಯೇ ವಾಕಿಂಗ್‌, ಓದುವ ಹವ್ಯಾಸ ಇರುವವರಿಗೆ ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ಕೇಂದ್ರಗಳಲ್ಲಿರುವವರು ಹೊರ ಹೋಗಬಾರದು ಎನ್ನುವ ಕಾರಣಕ್ಕೆ ಭದ್ರತೆ ಗಮನಹರಿಸಲಾಗಿದೆ. ಹಾಸ್ಟೆಲ್‌ ಗಳೇ ಆಶ್ರಯ ಕೇಂದ್ರಗಳಾಗಿರುವುದರಿಂದ ಸುಲಭವಾಗಿ ತಪ್ಪಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

ಇನ್ನೊಂದೆಡೆ ಜಿಲ್ಲೆಯಲ್ಲಿ 3,919 ವಲಸೆ ಕಾರ್ಮಿಕರು ವಿವಿಧೆಡೆ ಕೆಲಸ ಮಾಡುತ್ತಿರುವುದಾಗಿ ಕಾರ್ಮಿಕ ಇಲಾಖೆಯ ಅಂಕಿ-ಸಂಖ್ಯೆ ಹೇಳುತ್ತವೆ. ಆಹಾರ ಮತ್ತು ಆಶ್ರಯ ಇಲ್ಲದೆ ಕಾರ್ಮಿಕರು ಪರಿತಪಿಸಬಾರದು ಎನ್ನುವ ಕಾರಣಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಮಸ್ಯೆಯಲ್ಲಿರುವ ಕಾರ್ಮಿಕರು ಆಶ್ರಯ ಕೇಂದ್ರಗಳಿಗೆ ಬಂದು ಆಶ್ರಯ ಪಡೆಯಬಹುದಾಗಿದೆ. ಸಾಧ್ಯವಾಗದಿದ್ದಲ್ಲಿ ಅವರಿದ್ದಲ್ಲಿಗೇ ಆಹಾರದ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಇದಕ್ಕಾಗಿ ಸಹಾಯವಾಣಿ 155214ಗೆ ಕರೆ ಮಾಡಬಹುದಾಗಿದೆ.

ಎಷ್ಟೇ ಜನ ಕಾರ್ಮಿಕರು ಬಂದರೂ ವಸತಿ ನೀಡುವಷ್ಟು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ 19 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಏಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1,200ಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಆಹಾರ, ಆರೋಗ್ಯ, ಆಶ್ರಯಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಕೆಲಸ ಮಾಡುತ್ತಿದೆ. –ಆರ್‌.ಎನ್‌.ಪುರಷೋತ್ತಮ, ನೋಡಲ್‌ ಅಧಿಕಾರಿ, ಆಶ್ರಯ ಮತ್ತು ಆಹಾರ

ಅನ್ನಕ್ಕಾಗಿ ಪರದಾಡುವ, ನಮ್ಮ ಊರಿಗೂ ಹೋಗ ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಮೂರೊತ್ತು ಊಟ, ಇರಲಿಕ್ಕೆ ಆಶ್ರಯ ಕೊಟ್ಟು ಇಡೀ ಕುಟುಂಬಕ್ಕೆ ಅನ್ನ ಹಾಕುತ್ತಿದ್ದಾರೆ. ಊರು ಸೇರಿದರೆ ಸಾಕು ಎನ್ನುವ ಕಾರಣಕ್ಕೆ ತೊಟ್ಟ ಬಟ್ಟೆಯಲ್ಲಿ ಬಂದಿದ್ದೇವೆ. ನನ್ನಂತೆಯೇ ಬಹಳಷ್ಟು ಜನ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಭಯದಿಂದ ಬಂದಿದ್ದಾರೆ. ಅಣ್ಣಪ್ಪ ಬಿಜಾಪುರ, ಕಾರ್ಮಿಕ

 

­ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next