Advertisement

ಡಿಡಿಪಿಐ ಕಚೇರಿಗೆ ವರ್ಲಿ ಕಲೆ ರಂಗು

03:49 PM Sep 07, 2020 | Suhan S |

ಹಾವೇರಿ: ಸ್ಥಳೀಯ ಜಿಲ್ಲಾಡಳಿತಭವನದಲ್ಲಿರುವ ಸಾರ್ವಜನಿಕ ಶಿಕ್ಷಣಇಲಾಖೆಯ ಕಟ್ಟಡಕ್ಕೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ  ಶಿಕ್ಷಕರು ಸಾಂಪ್ರದಾಯಿಕ ವರ್ಲಿ ಕಲೆಯ ಟಚ್‌ ನೀಡಿದ್ದು, ಕಚೇರಿಯ ಗೋಡೆಗಳು ಎಲ್ಲರ ಗಮನ ಸೆಳೆಯುತ್ತಿವೆ.

Advertisement

ಸ್ಥಳೀಯ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಹೊರ ಆವರಣದ ಗೋಡೆಗಳಿಗೆ ಕಳೆದ ಒಂದು ತಿಂಗಳಿನಿಂದ 25 ಜನ ಕಲಾ ಶಿಕ್ಷಕರ ಕೈಚಳಕದಿಂದ ಮೂಡಿಬಂದ ವರ್ಲಿ ಕಲೆಯ ಪೇಂಟಿಂಗ್‌ ಕಚೇರಿಗೆ ಆಗಮಿಸುವವರನ್ನು ಆಕರ್ಷಿಸುತ್ತಿದೆ.

ಕಲಾ ಶಿಕ್ಷಕರ ಕೈ ಚಳಕದಿಂದ ಕಚೇರಿಯ ಗೋಡೆಗಳು ವರ್ಲಿಕೆಯ ರಂಗು ಪಡೆದುಕೊಂಡಿವೆ. ಶೈಕ್ಷಣಿಕ ಯೋಜನೆಗಳ ಮಾಹಿತಿಯ ಪ್ಲಾಸ್ಟಿಕ್‌ ಫ್ಲೆಕ್ಸ್‌, ಫಲಕಗಳ ಬದಲಿಗೆ ಪರಿಸರ ಸ್ನೇಹಿ ಗೋಡೆ ಬರಹಗಳಲ್ಲಿ ಮಾಹಿತಿ, ಆಕರ್ಷಣೀಯ ಗೋಡೆ ಬರಹಗಳ ಚಿತ್ತಾರಗಳು ಕಚೇರಿಗೆ ಆಗಮಿಸುವ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮನಸೂರೆಗೊಳ್ಳುತ್ತಿವೆ.

ಕಲಾ ಶಿಕ್ಷಕರ ಆಸಕ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬೆನ್ನೆಲುಬಾಗಿ ನಿಂತು ಸುಣ್ಣದಿಂದ ಮಾಸಿ ಹೋದಂತೆ ಕಾಣುತ್ತಿದ್ದ ಗೋಡೆಗಳಿಗೆ ಅಲಂಕಾರದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾ ಮಾಧ್ಯಮದಲ್ಲಿ ಮಾಹಿತಿಯ ಹೂರಣವನ್ನು ಆಕರ್ಷಕವಾಗಿ ಜನರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ. ಕಲಾ ಶಿಕ್ಷಕರ ಕೈಚಳಕದಿಂದ ಗೋಡೆಯ ಕೆಳಭಾಗದಲ್ಲಿ ವರ್ಲಿ ಕಲೆಯ ಚಿತ್ರಗಳು, ಮೇಲ್ಭಾಗದಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳಾದ ಉಚಿತ ಪಠ್ಯಪುಸ್ತಕ ವಿತರಣೆ, ಉಚಿತ ಸೈಕಲ್‌ ವಿತರಣೆ, ಶೂ, ಸಾಕ್ಸ್‌ ವಿತರಣೆ, ಸಮವಸ್ತ್ರ ವಿತರಣೆ, ಅಕ್ಷರ ದಾಸೋಹ, ಕ್ಷೀರಭಾಗ್ಯ, ವಿಕಲಚೇತನ ಮಕ್ಕಳಿಗೆ ವ್ಯಾಯಾಮ, ವಿಟಮಿನ್‌ ಮಾತ್ರೆಗಳ ವಿತರಣೆ, ಪರಿಸರಜಾಗೃತಿ, ವಿಜ್ಞಾನದ ವಿವಿಧ ಮಾದರಿಗಳ ಪ್ರದರ್ಶನ ಹಾಗೂ ಅಟಲ್‌ ಟೆಂಕರಿಂಗ್‌ ಪ್ರಯೋಗಾಲಯ, ಮಕ್ಕಳ ಗುಂಪು ಅಧ್ಯಯನ, ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್‌ ಕೊಡುಗೆ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಳಗೊಂಡಂತೆ ಹಲವು ಶೈಕ್ಷಣಿಕ ಯೋಜನೆಗಳು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಫೂ ರ್ತಿದಾಯಕ ಚಿತ್ರಗಳು ವರ್ಣಗಳಲ್ಲಿ ಕಂಗೊಳಿಸುತ್ತಿವೆ. ಈ ಚಿತ್ರಗಳಿಗೆ ವರ್ಲಿಯ ಚಿತ್ರಗಳು ಇಂಬು ನೀಡಿ ಆಕರ್ಷಣೆಗೊಳಿಸಿವೆ.

ಜಿಲ್ಲೆಯ ಶಾಲೆಗಳಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಹಲವು ಶಾಲೆಗಳಲ್ಲಿ ಪೇಂಟಿಂಗ್‌ ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಈ ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಹೊರಗಡೆ ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸುವುದರ ಮೂಲಕ ಕಚೇರಿಗೆ ಸುಂದರ ವಾತಾವರಣ ಕಲ್ಪಿಸಿದ್ದಾರೆ. ಇದರಿಂದ ಕಚೇರಿಗೆ ಭೇಟಿ ನೀಡುವವರಿಗೆ ಖುಷಿ ನೀಡಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾಹಿತಿ ನೀಡಿದರು.

Advertisement

ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವರ್ಲಿ ಕಲೆಯ ಮೂಲಕ ಶೈಕ್ಷಣಿಕ ಜಾಗೃತಿ ಸಂದೇಶಗಳ ಜೊತೆಗೆ ಶಾಲಾ ಗೋಡೆಗಳಿಗೂ ಚಿತ್ತಾರ ಬಿಡಿಸುವ ಮೂಲಕ ಮಕ್ಕಳಲ್ಲಿ ಪಾರಂಪರಿಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಉದ್ದೇಶಿಸಲಾಗಿದೆ. ಆಸಕ್ತಿ ತೋರುವ ಸರ್ಕಾರಿ ಕಚೇರಿ ಕಟ್ಟಡಗಳಿಗೂ ವರ್ಲಿ ಕಲೆಯ ಚಿತ್ತಾರಕ್ಕೆ ಚಿತ್ರಕಲಾ ಶಿಕ್ಷಕರ ತಂಡ ಸಿದ್ಧವಿದೆ. ಫ್ಲೆಕ್ಸ್‌, ಪ್ಲಾಸ್ಟಿಕ್‌ ಫಲಕಗಳ ಬದಲಿಗೆ ವರ್ಲಿ ಕಲೆಯ ಚಿತ್ರಗಳಿಗೆ ಅವಕಾಶ ಕಲ್ಪಿಸಿದರೆ ಪರಿಸರ ರಕ್ಷಣೆಯ ಜೊತೆಗೆ ಪಾರಂಪರಿಕ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತದೆ ಎಂದು ವೀಕ್ಷಕರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮತ್ತಷ್ಟು ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಚೇರಿಯ ಹೊರಗಡೆ ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸಲು ಸೂಚಿಸಲಾಗಿತ್ತು. ವರ್ಲಿ ಕಲೆಯ ಮೂಲಕ ಕಚೇರಿಗೆ ಸುಂದರ ವಾತಾವರಣ ಕಲ್ಪಿಸಿದ್ದಾರೆ. ಇದು ಕಚೇರಿಗೆ ಭೇಟಿ ನೀಡುವವರಿಗೆ ಖುಷಿ ನೀಡುತ್ತಿದೆ. -ಅಂದಾನಪ್ಪ ವಡಗೇರಿ, ಡಿಡಿಪಿಐ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next