Advertisement

World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?

01:19 PM Sep 27, 2024 | Team Udayavani |

ಕರುನಾಡು ಸಾಹಿತ್ಯ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ವೈವಿಧ್ಯತೆಯ ನೆಲೆ ಬೀಡು. ತನ್ನ ಸೌಂದರ್ಯ ಸೊಬಗಿನಿಂದ, ಆತಿಥ್ಯದಿಂದ ಕೈ ಬೀಸಿ ಕರೆಯುವ ಮಲೆನಾಡು. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ವಿವಿಧ ಜನಾಂಗ, ಕಲೆ, ಕ್ರೀಡೆ ಸಾಹಿತ್ಯ ವನ್ನೊಳಗೊಂಡ ಸುಂದರ ತಾಣ ನಮ್ಮ ಕರ್ನಾಟಕ. ವಿಶ್ವ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಗೆ ಅದರಲ್ಲೂ ನಮ್ಮ ಮಧ್ಯ ಕರ್ನಾಟಕದ ಕೆಲವು ಪ್ರವಾಸಿ ತಾಣಗಳ  ಪರಿಚಯ ಇಲ್ಲಿದೆ…

Advertisement

ದಾವಣಗೆರೆ:
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಆಗಿದೆ. ಈ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ಹಚ್ಚ ಹಸಿರಿನ ವಾತಾವರಣ. ಭಾರಿ ಮಳೆಯಾಗಿರುವ ಕಾರಣ ಸೂಳೆಕೆರೆ ಸಂಪೂರ್ಣವಾಗಿ ತುಂಬಿದೆ. ಇದರ ಸುಂದರ ನೋಟವನ್ನು ಸವಿಯಲು ವಿವಿಧ ರಾಜ್ಯಗಳಿಂದ ಜನರು ಆಗಮಿಸುತ್ತಾರೆ.

ಹರಿಹರ ತಾಲೂಕಿನ ದೇವರಬೆಳಕೆರೆ ಡ್ಯಾಂ ಸಹ ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದ ದೇವರ ಬೆಳೆಕೆರೆ ಡ್ಯಾಂನ ಕ್ರಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗುತ್ತಿದ್ದು, ಈ ಸುಂದರ ವೈಭವವನ್ನು ಸವಿಯಲು ಪ್ರವಾಸಿಗರ ದಂಡೇ ಕಲೆಯುತ್ತದೆ. ಈ ಡ್ಯಾನಿಂದ ಹೊರಬರುತ್ತಿರುವ ನೀರಿನ ಸೊಬಗು ನೋಡುವುದೇ ಒಂದು ಚೆಂದ. ದಾವಣಗೆರೆಯಿಂದ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ದೇವರ ಬೆಳಕೆರೆ ಡ್ಯಾಂನಿಂದ ರಭಸವಾಗಿ ಹರಿಯುವ ನೀರು ನೋಡಲು ಜನರು, ಯುವಕರು, ವಿದ್ಯಾರ್ಥಿಗಳು ಕಿಕ್ಕಿರಿದು ಬರುತ್ತಾರೆ.

ಹಾವೇರಿ :
ಗಳಗನಾಥ ದೇವಸ್ಥಾನ ಎಂದು ಕರೆಯಲ್ಪಡುವ ಗಳಗೇಶ್ವರ ದೇವಸ್ಥಾನವು(Galageshwara) ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ. ಇದನ್ನು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ತುಂಬ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ದೇವಸ್ಥಾನದ ಗೋಪುರ ನೆಲದಿಂದಲೇ ಮೇಲಕ್ಕೆದ್ದಂತೆ ಕಾಣುವುದರಿಂದಾಗಿ ಇದು ಬೇರೆ ದೇಗುಲಗಳಿಗಿಂತ ವಿಭಿನ್ನವಾಗಿದೆ.

Advertisement

ಆಫ್ರಿಕಾದಲ್ಲಿ(Africa )ಹೆಚ್ಚಾಗಿ ಕಾಣಿಸಿಕೊಳ್ಳುವುದು ಬಾವೊಬಾಬ್‌(Baobab) ಮರಗಳು. ವಿಶೇಷವೆಂದರೆ ಈ ಬಾವೊಬಾಬ್‌ ಮರಗಳು ಹಾವೇರಿಯ ಸವಣೂರಿನಲ್ಲೂ ಇವೆ. ಮೂರು ಬಾವೊಬಾಬ್‌ ಮರಗಳನ್ನು ಹತ್ತಿರ ಹತ್ತಿರದಲ್ಲೇ ತ್ರಿಕೋನಾಕಾರದಲ್ಲಿ ನೆಡಲಾಗಿದೆ. ಈ ರೀತಿ ಹತ್ತಿರದಲ್ಲಿ ಮೂರು ಬಾವೊಬಾಬ್‌ ಮರಗಳನ್ನು ಹೊಂದಿರುವ ದೇಶದ ಏಕೈಕ ಸ್ಥಳ ಎನ್ನುವ ಖ್ಯಾತಿ ಸವಣೂರಿಗೆ ಸಿಕ್ಕಿದೆ. ಈ ಮರಗಳು ಸರಿಸುಮಾರು 2 ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗುತ್ತದೆ.

ಗದಗ:
ಲಕ್ಕುಂಡಿ ದೇವಾಲಯಗಳು:


ಗದಗದಿಂದ 11 ಕಿ.ಮೀ ದೂರದಲ್ಲಿರುವ ಲಕ್ಕುಂಡಿಯು “ದೇವಾಲಯಗಳ ಸ್ವರ್ಗ” ವೆಂದು ಪ್ರಸಿದ್ಧವಾಗಿದೆ. ಇದು ಶಾಸನಗಳಲ್ಲಿ “ಲೋಕಿ ಗುಂಡಿ” ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 50 ಕ್ಕೂ ಹೆಚ್ಚು ದೇವಾಲಯಗಳು, 101 ಮೆಟ್ಟಿಲುಗಳ ಬಾವಿ ಮತ್ತು ಚಾಲುಕ್ಯರು, ಕಲಚೂರಿಗಳು, ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯ, ನನ್ನೆಶ್ವರ ದೇವಾಲಯ ಲಕ್ಕುಂಡಿಯ ಪ್ರಸಿದ್ಧ ದೇವಾಲಯಗಳು. ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಕುಂಡಿಯಲ್ಲಿರುವ ಕಲಾಶಿಲ್ಪ ಗ್ಯಾಲರಿಯು ಭಾರತದ ಪುರಾತತ್ತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.

ಕಪ್ಪತ ಗುಡ್ಡ, ಮುಂಡರಗಿ:

ಉತ್ತರ ಕರ್ನಾಟಕದ ಸಹ್ಯಾದ್ರಿ” ವೆಂದು ಪ್ರಸಿದ್ಧವಾದ ಕಪ್ಪತಗುಡ್ಡವು ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಈ ಗುಡ್ಡವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಯೋಗ್ಯವಾದ ಸ್ಥಳ. ಈ ಗುಡ್ಡವು ಔಷಧೀಯ ಸಸ್ಯಗಳಿಗೆ ಹೆಸರು ಮಾಡಿದ್ದು, ಬೆಟ್ಟದ ಸಾಲುಗಳಲ್ಲಿ 340 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳಿವೆ ಎಂದು ತಿಳಿದು ಬಂದಿದೆ. ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಆರು ಪ್ರಮುಖ ಮಠ ಮತ್ತು ದೇವಸ್ಥಾನಗಳು ಇವೆ.

ಕೊಪ್ಪಳ :

ಬೆಂಗಳೂರಿನಿಂದ(Bangalore )ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ(Koppal) ಅನೇಕ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ.
ಪಂಪಾ ಸರೋವರ: 


ಐದು ಪವಿತ್ರ ಸರೋವರಗಳಲ್ಲಿ ಒಂದಾಗಿದೆ. ಹಿಂದೂ ಪುರಾಣದಲ್ಲಿ ಪಂಪಾ ಸರೋವರವನ್ನು ಶಿವನ(Shiva )ಪತ್ನಿ ಪಾರ್ವತಿಯ(Parvati )ಒಂದು ರೂಪವಾದ ಪಂಪಾ ಶಿವನಿಗೆ ಭಕ್ತಿ ತೋರಿಸುವುದಕ್ಕೆ ತಪಸ್ಸು ಮಾಡಿದ ಸ್ಥಳವಾಗಿದೆ.

ಕೊಪ್ಪಳ ಕೋಟೆ:

ಕೊಪ್ಪಳದಲ್ಲಿ ಐತಿಹಾಸಿಕ ಕೊಪ್ಪಳ ಕೋಟೆ ಇದೆ. ಇದು ದೇಶದಲ್ಲಿರುವ ಪ್ರಬಲವಾದ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸ್ಪಟ್ಟಿದೆ. ಈ ಭದ್ರವಾದ ಕೋಟೆ ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಇನ್ನು ಗೊಂದಲವಿದೆ. ಆದಾಗ್ಯೂ, 1786 ರ ಸಮಯದಲ್ಲಿ ಟಿಪ್ಪು ಸುಲ್ತಾನ್‌(Tippu Sultan) ಸ್ವಾಧೀನಪಡಿಸಿಕೊಂಡರು. ಅಷ್ಟೇ ಅಲ್ಲ, ಫ್ರೆಂಚ್‌ (French)ಇಂಜಿನಿಯರ್‌ಗಳ ಸಹಾಯದಿಂದ ಕೋಟೆಯನ್ನು ಪುನರ್ ನಿರ್ಮಿಸಿದರು ಎನ್ನಲಾಗಿದೆ.

ಯಾದಗಿರಿ:

ಯಾದಗಿರಿ ಕೋಟೆ ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಕೋಟೆಯನ್ನು 850 ಮೀಟರ್ ಉದ್ದ, 500 ಮೀಟರ್ ಅಗಲ ಮತ್ತು 100 ಮೀಟರ್ ಎತ್ತರ ಇರುವ ದೊಡ್ಡದಾದ ಏಕಶಿಲಾ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಕಾಲಾಂತರದಲ್ಲಿ ಯಾದಗಿರಿ ಕೋಟೆ ಬಹಮನಿ ಸುಲ್ತಾನರು, ಆದಿಲ್ ಶಾಹಿ, ಯಾದವ ರಾಜರು, ಕಲ್ಯಾಣ ಚಾಲುಕ್ಯರು, ಹೈದರಾಬಾದ್ ನಿಜಾಮರು (Hyderbadh Nijam)ಮತ್ತು ಚೋಳ ರಾಜವಂಶದ ಆಳ್ವಿಕೆಯಲ್ಲಿತ್ತು. ಯಾದಗಿರಿ ಕೋಟೆ ದೊಡ್ಡ ವಿಸ್ತಾರವನ್ನು ಹೊಂದಿದ್ದು ತುಪಾಕಿ, ನೀರಿನ ಮೂಲಗಳೊಂದಿಗೆ ಸ್ವಾವಲಂಬಿಯಾಗಿದೆ ಮತ್ತು ದೀರ್ಘ ಕಾಲ ಶತ್ರುಗಳನ್ನು ತಡೆಹಿಡಿಯಲು ಬೇಕಾದಷ್ಟು ಶಸ್ತ್ರಾಸ್ತ್ರ, ಆಹಾರ ಶೇಖರಣಾ ಸೌಲಭ್ಯಗಳನ್ನು ಹೊಂದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಯಾದಗಿರಿ ಕೋಟೆ ಶತ್ರುಗಳಿಗೆ ಅಭೇದ್ಯವಾಗಿತ್ತು.

ಶೋರಾಪುರ ಕೋಟೆ: ಶೋರಾಪುರದ ಕೊನೆಯ ಆಡಳಿತಗಾರ ರಾಜ ವೆಂಕಟಪ್ಪ ನಾಯಕನು(Venkatappa Fort)ತನ್ನ ಪ್ರದೇಶದ ಆಂತರಿಕ ವ್ಯವಹಾರಗಳಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ತಪ್ಪಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಸಮಯದಲ್ಲಿ ಕಟ್ಟಿಸಿದನು. ನಾಯಕರು ಶೋರಪುರ ನಗರದಲ್ಲಿ ಎರಡು ಅರಮನೆಗಳು ಮತ್ತು ವಾಗಿನಗರದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದರು.

ವನದುರ್ಗ ಕೋಟೆ: 

ಬೃಹತ್ ಪ್ರವೇಶ ದ್ವಾರಗಳು, ಅರ್ಧ ಚಂದ್ರನ ಆಕಾರದ ಗೋಡೆಗಳು, ದೇವನಾಗರಿ ಲಿಪಿಯಲ್ಲಿ(Devrnagari Lipi)ಸಂಸ್ಕೃತ ಶಾಸನಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ವನದುರ್ಗ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಶೋರಾಪುರದಿಂದ 24 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ವನದುರ್ಗ ಕೋಟೆಯನ್ನು ಪಿಡ್ಡ ನಾಯಕನು ತನ್ನ ರಾಣಿ ವೆಂಕಮ್ಮಾ೦ಬಳಿಗಾಗಿ ನಿರ್ಮಿಸಿದ್ದನು.

ಮಧುಗಿರಿ :

ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದ್ದು, ತನ್ನ ಅಪ್ರತಿಮ ಮಧುಗಿರಿಗೆ ಹೆಸರುವಾಸಿಯಾಗಿದೆ. ಮಧುಗಿರಿ ಬೆಟ್ಟದ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯು 3,930 ಅಡಿ ಎತ್ತರದಲ್ಲಿದೆ ಮತ್ತು ಏಷ್ಯಾದ ಅತಿದೊಡ್ಡ ಏಕಶಿಲೆಯ ಶಿಲಾ ರಚನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮೇಲಿನ ಎಲ್ಲಾ ವಿಶೇಷ ಪ್ರವಾಸಿ ತಾಣಗಳಿಗೆ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ಇನ್ನು ಹೆಚ್ಚು ಪ್ರವಾಸಿಗರು ಬರಲು ಅನುಕೂಲವಾಗುತ್ತದೆ. ರಾಜ್ಯದ ಬೊ್ಕ್ಕಸಕ್ಕೆ ಆದಾಯ ಹೆಚ್ಚಾಗಿ ಸ್ಥಳೀಯರಿಗೆ ಉದ್ಯೋಗ ಭದ್ರತೆ ದೊರಕಿದಂತಾಗುತ್ತದೆ.

 

ಘನಶ್ಯಾಮ್ ವೈ, ಇಂಜಿನಿಯರ್
ಹೂವಿನಹಡಗಲಿ

Advertisement

Udayavani is now on Telegram. Click here to join our channel and stay updated with the latest news.

Next