Advertisement

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘

01:14 PM Jul 27, 2024 | Team Udayavani |

ಜುಲೈ 28 ರವಿವಾರ “ವಿಶ್ವ ಪ್ರಕೃತಿ ಸಂರಕ್ಷಣ ದಿನ’ ಅಥವಾ World Conservation Day. ಪ್ರಕೃತಿ ಮಾತೆಯ ಮಕ್ಕಳೆಲ್ಲರೂ ಪರಿಸರದ ಅವಿಭಾಜ್ಯ ಅಂಗ. ಪರಿಸರ ಎಂದರೆ ಗಿಡ-ಮರಗಳು, ಪ್ರಾಣಿ-ಪಕ್ಷಿಗಳು ಇತ್ಯಾದಿಗಳು. ಪರಿಸರವೆಂದರೆ ಇವು, ಇವೆಂದರೆ ಪರಿಸರ. ದೇವನೊಬ್ಬ ನಾಮ ಹಲವು ಎಂದರೂ ಉತ್ಪ್ರೇಕ್ಷೆಯೇನಲ್ಲ. ಇಂಥಾ ನೈಸರ್ಗಿಕ ಸಂಪನ್ಮೂಲಗಳು, ವನ್ಯಜೀವಿಗಳ ಮತ್ತು ಪ್ರಕೃತಿಯ ಆವಶ್ಯಕತೆಗಳ ಮತ್ತು ಪಾತ್ರಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಪ್ರತೀ ವರ್ಷ ಜುಲೈ 28ರಂದು ಆಚರಿಸುವ ದಿನವೇ “ವಿಶ್ವ ಪ್ರಕೃತಿ ಸಂರಕ್ಷಣ ದಿನ.’

Advertisement

ಕಾಲವೊಂದಿತ್ತು. ಬೇಟೆಯಾಡುವುದು ಒಂದು ಮೋಜು ಆಗಿತ್ತು. ಪೌರುಷದ ಸಂಕೇತವಾಗಿತ್ತು. ಕೆಲವೊಮ್ಮೆ ಗ್ರಾಮಸ್ಥರನ್ನು ಪೀಡಿಸುತ್ತಿದ್ದ ಕ್ರೂರಮೃಗಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಡೆಯುತ್ತಿದ್ದ ಮಾರಣ ಹೋಮವೂ ಆಗುತ್ತಿತ್ತು. ಹೊಡೆದು ಉರುಳಿಸಿ ಕೊಂದವನೂ ಮಾನವನೇ, ಸಂತತಿ ನಶಿಸುತ್ತಿದೆ ಎಂದು ಗುಲ್ಲೆಬ್ಬಿಸುತ್ತಿರುವವನೂ ಮಾನವನೇ. ಈವರೆಗೂ ಇತರ ಪ್ರಾಣಿ ಸಂಕುಲಗಳು ಈ ಸೊಲ್ಲನ್ನು ಎತ್ತಿಲ್ಲ. ಅಂದರೆ ಅರ್ಥೈಸಿಕೊಳ್ಳಬೇಕಾದುದು ಏನಪ್ಪಾ ಎಂದರೆ, ಪ್ರಕೃತಿ ಸಂರಕ್ಷಣೆ ಆಗಬೇಕಿರುವುದು ಮಾನವರ ಹಾವಳಿಯಿಂದ. ಮಾನವನ ದುರಾಸೆ ಎಂಬ ಶಸ್ತ್ರಾಸ್ತ್ರವನ್ನು ಹತ್ತಿಕ್ಕಿದರೆ ಸಂರಕ್ಷಣೆಯಾದಂತೆಯೇ ಸರಿ.

ಇಂದಿನ ದಿನಪತ್ರಿಕೆಯ ಸುದ್ದಿಗಳನ್ನು ಓದುತ್ತಿದ್ದರೆ, ಜಗತ್ತಿನಾದ್ಯಂತ ಆಗುತ್ತಿರುವ ನರಮೇಧಗಳನ್ನು ನೋಡುತ್ತಿದ್ದರೆ, ಬಹುಶ: ಮುಂದೊಂದು ಅಳಿದುಳಿದ ಮಾನವರು “ಮಾನವರನ್ನು ಸಂರಕ್ಷಿಸಿ’ ಎಂಬ ಅಭಿಯಾನವನ್ನು ಆರಂಭಿಸಿದರೆ ಅಚ್ಚರಿಯಿಲ್ಲ. ಟೆಕ್ನಾಲಜಿ ಬೆಳೆಯುತ್ತಿರುವ ವೇಗವನ್ನು ನೋಡುತ್ತಿವೆ, ಒಂದರ್ಥದಲ್ಲಿ “ಮಾನವರನ್ನು ರಕ್ಷಿಸಿ’ ಎಂಬ ಕೂಗು ಬಲು ಬೇಗ ಬರಲಿದೆ.

ಬರೆಯುವ ಕೈಗಳು ಕೃತಕ ಬುದ್ಧಿಗೆ ತಮ್ಮ ಜುಟ್ಟು ನೀಡಿದಾಗ, ಆವಿಷ್ಕಾರದ ಮನಗಳು ತಂತ್ರಜ್ಞಾನಕ್ಕೆ ತಲೆಬಾಗಿದಾಗ, ದಿನನಿತ್ಯದ ಕೆಲಸಗಳಿಗೆ ರೋಬೋ’ಗಳು ಮನೆಯ ತುಂಬಾ ಅಡ್ಡಾಡುವಾಗ, ತಲೆಗೆ ಕೆಲಸವಿಲ್ಲದೇ, ಹೊಟ್ಟೆಗೆ ಹಿಟ್ಟಿಲ್ಲದೇ ಮಾನವ ಪ್ಲಾಪ್‌ ಆಗಲು ಶುರುವಾದಾಗ ಮಾನವ ಸಂತತಿಯೇ ಅಳಿಯಲು ತೊಡಗಬಹುದು. ನಾ ಹೇಳಿದ ಸನ್ನಿವೇಶವು ನಾಳೆಯೇ ಆಗದಿದ್ದರೂ, ಇನ್ನೈವತ್ತು ವರ್ಷಗಳಲ್ಲಿ ಏನಾಗುವುದೋ ಬಲ್ಲವರಾರು?

Advertisement

ಹಿಟ್ಟು ಎಂದರೆ ಅಕ್ಕಿಹಿಟ್ಟು, ಗೋಧಿಹಿಟ್ಟು, ರಾಗಿಹಿಟ್ಟು ಎಂದೇ ಅರ್ಥವಲ್ಲ. ಹಿಟ್ಟು ಎಂದರೆ ಆಹಾರ. ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಆಹಾರ ಒದಗಿಸುವ ಪರಿಸರದ ಒಂದು ಅಂಗ ಎಂದರೆ ನೀರು. ಇದನ್ನು ಬರೀ ನೀರು ಎನ್ನುವ ಬದಲು ಮಹಾ ಸಮುದ್ರ ಮತ್ತು ಸಮುದ್ರಗಳು. ಜಲಚರಗಳಲ್ಲಿ ಎರಡೂವರೆ ಲಕ್ಷ ಬಗೆ ಇದೆಯಂತೆ. ಅಷ್ಟೆಲ್ಲ ಬಗೆಯನ್ನು ಬದಿಗಿರಿಸಿ ಕೇವಲ ಮೀನು ಎಂಬುದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ 30 ಸಾವಿರಕ್ಕೂ ಹೆಚ್ಚಿನ ಬಗೆಯ ಮೀನುಗಳಿವೆ. ಎಷ್ಟೋ ಸಹಸ್ರ ಸಮುದ್ರಾವಾಸಿಗಳಿಗೆ ಈ ಮೀನು ಪ್ರಮುಖ ಆಹಾರ.

ನೆಲನಿವಾಸಿ ಬಿಲಿಯನ್‌ ಗಟ್ಟಲೇ ಮಾನವರಿಗೂ ಮೀನು ಪ್ರಮುಖ ಆಹಾರ. ಜಗತ್ತಿನಾದ್ಯಂತ ಹೆಚ್ಚು ಮೀನು ಕಬಳಿಸುವ ದೇಶ ಎಂದರೆ ಚೀನ. ಮತ್ತೂಂದು ಸಮೀಕ್ಷೆಯ ಪ್ರಕಾರ ಎಷ್ಟೋ ಟನ್‌ಗಟ್ಟಲೇ ಮೀನುಗಳ ಖಾದ್ಯ ಯೋಗ್ಯವಲ್ಲದೇ ಕೊಳೆಯುತ್ತದೆ ಅಂತ.

ಇಷ್ಟೆಲ್ಲ ಆದರೂ ಮೀನುಗಳ ಸಂತತಿ ನಶಿಸುತ್ತಿದೆ ಎಂಬ ಉದ್ಘೋಷಗಳು ಎಲ್ಲಿಯೂ ಕೇಳಿಲ್ಲ ಅಲ್ಲವೇ? ಅಂದರೆ ಜಗತ್ತಿನಾದ್ಯಂತ ಇರುವ ನೆಲದ ಮೇಲಿನ ವಾಸಿಸುವ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಮತ್ತು ಮಾನವನು ದಿನನಿತ್ಯದಲ್ಲಿ ಇಷ್ಟರ ಮಟ್ಟಿಗೆ ಕಬಳಿಸಿದರೂ ಸಾಗರದ ಗರ್ಭದಲ್ಲಿ ಮೀನುಗಳು ಇನ್ನೂ ಇವೆ ಎಂದರೆ ಎಂದರೆ ಹುಟ್ಟುವಿಕೆಗೂ, ಕೊಲ್ಲುವಿಕೆಗೂ ಇರುವ ಅನುಪಾತ ಗಮನಿಸಬೇಕಾಗುತ್ತದೆ.

ಸಂತತಿ ಹೆಚ್ಚಿ ಮೀನುಗಳದ್ದೇ ಕಾರುಬಾರು ಎಂದಾದರೂ ಕಷ್ಟ, ಮೀನುಗಳೇ ಇಲ್ಲವಾಗಿ ಹೋದರೆ ಅದನ್ನೇ ನಂಬಿರುವ ಜಲಚರಗಳಿಗೆ, ಇತರೆ ಪ್ರಾಣಿ ಪಕ್ಷಿಗಳಿಗೆ ಆಹಾರವಾದರೂ ಏನು? ಸಂರಕ್ಷಣೆ ಮಾಡಬೇಕೆಂದಿರುವ ಗುಲ್ಲು ಇಲ್ಲೂ ಇದೆಯೇ? ಮಾತುಬಾರದ ಪ್ರಾಣಿ-ಪಕ್ಷಿಗಳಿಗೆ ಆಹಾರ ಉಳಿಯಬೇಕು ಎಂದರೆ ಮಾತುಬಲ್ಲ ಪ್ರಾಣಿ ಬೇರೆ ಆಹಾರ ನೋಡಿಕೊಳ್ಳಬೇಕಿದೆ.
ಕಾಲವೊಂದಿತ್ತು, ಪರಿಸರದ ಸಂಪನ್ಮೂಲಗಳು ಅಧಿಕವಾಗಿತ್ತು. ಆಸೆ-ದುರಾಸೆಗಳು ಅಂದೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತದೆ. ಆದರೆ ಮೂರೂ ವಿಷಯದಲ್ಲಿ ಒಂದೇ ಭಿನ್ನತೆ ಎಂದರೆ ಅಂದಿಗಿಂತ ಇಂದು, ಇಂದಿಗಿಂತ ನಾಳೆ ಈ ಆಸೆಗಳು ದುರಾಸೆಗಳಾಗಿ ಸಾಗುತ್ತಿದೆ.

ಇಂದಿಗೂ ಯಾವ ಕಾರಣಕ್ಕೂ ಕಡಿಮೆಯಾಗುವುದೇ ಇಲ್ಲ. ಪರಿಸರ ಸಂಪತ್ತುಗಳು ಅಧಿಕವಾಗಿದ್ದಾಗ ಪಡೆವ ಅಥವಾ ಹೊಡೆವ ಆಶಯಗಳು ಕಡಿಮೆ. ಸಂಪನ್ಮೂಲಗಳು ವಿರಳವಾಗುತ್ತಾ ಸಾಗಿದಂತೆ ಅದನ್ನು ಪಡೆಕೊಳ್ಳುವ ಕಾತುರತೆ ಹೆಚ್ಚುತ್ತದೆ. ಪಡೆದು ಇಟ್ಟುಕೊಂಡಾಗ ಅದರ ಬೆಲೆಯೂ ಹೆಚ್ಚುತ್ತದೆ, ಮುಂದೊಂದು ಅದನ್ನು ಮಾರಿ ಹಣಮಾಡಬಹುದು ಎಂಬ ಆಶಯವೂ ಇರುತ್ತದೆ. ಭೂಮಿ ಇದಕ್ಕೆ ಒಂದು ಉದಾಹರಣೆ. ಅಂದು ಪುಣ್ಯಾತ್ಮರು ಭೂಮಿಯನ್ನು ದಾನ ಮಾಡುತ್ತಿದ್ದರು. ಇಂದು ಮೂರು ಹೆಜ್ಜೆ ಭೂಮಿಯನ್ನು ಪಕ್ಕದ ಸೈಟಿನವನು ತೆಗೆದುಕೊಂಡು ಬೇಲಿ ಹಾಕಿದ ಎಂಬ ವ್ಯಾಜ್ಯವನ್ನು ಮೂವತ್ತು ವರ್ಷ ಬೇಕಾದರೂ ಎಳೆಯುವಷ್ಟಾಗಿದೆ. ನಾಳೆ?

ಆಹಾರ ಸರಪಳಿ ಎಂಬುದು ಇಂದು ನೆನ್ನೆಯದಲ್ಲ. ತಲತಲಾಂತರದ್ದು. ಒಂದನ್ನು ಕೊಂದು-ತಿಂದು ಮತ್ತೊಂದು ಪ್ರಾಣಿ ಬದುಕೋದು. ಇದು ನಿರ್ದಿಷ್ಟವಾಗಿ ಇರುವಾ ತನಕ ಎಲ್ಲವೂ ಸಮತೋಲನದಲ್ಲಿ ಇರುತ್ತದೆ. ಒಂದು ಹೆಚ್ಚು ಒಂದು ಕಮ್ಮಿಯಾದಾಗಲೇ ಪ್ರಾಣಿ-ಪಕ್ಷಿಗಳು ನಶಿಸಿ ಹೋಗೋದು. ಈ ಜಗತ್ತಿನ ಅತೀ ದೊಡ್ಡ ಪ್ರಾಣಿಗಳು ಒಂದು ಕಾಲಕ್ಕೆ ಇದ್ದವು. ಆಹಾರ ಸಿಗದೇ ಹೋದಾಗ, ಜಾಗ ಸಾಲದೇ ಹೋದಾಗ ಕ್ರಮೇಣ ನಶಿಸುವುದು ಸಹಜ. ಅಂಥಾ ಹಿರಿದಾದ ಪ್ರಾಣಿಗಳು ಇಂದಿಗೆ ಇದ್ದಿದ್ದರೆ ಬಹುಶ: ಟ್ರಾಫಿಕ್‌ ದೀಪದಲ್ಲಿ ನಿಂತಿರುವ ವಾಹನಗಳ ಸಮೇತ ಮನುಜರನ್ನು ಸ್ವಾಹಾ ಮಾಡಿ ಮುಂದಿನ ನಿಲ್ದಾಣಕ್ಕೆ ಹೋಗಿರುತ್ತಿತ್ತು.

ಸಂರಕ್ಷಣೆ ಮಾಡಬೇಕು ಎಂದರೆ ಪಾಲಿಸಬೇಕು, ಪೋಷಿಸಬೇಕು. ಅವಕ್ಕೆ ಬೇಕಾದ ಸರಿಯಾದ ವಾತಾವರಣ ಸೃಷ್ಟಿಯಾಗಬೇಕು. ಸಂರಕ್ಷಣೆ ನೀಡಬೇಕು ಎಂದು ಅಳಿದುಳಿದ ಪ್ರಾಣಿ- ಪಕ್ಷಿಗಳನ್ನು ಬೋನಿನಲ್ಲಿ ಕೂಡಿ ಹಾಕಿದಾಗ ಸಂತತಿ ತಂತಾನೇ ನಶಿಸುತ್ತದೆ. ಹಾಗಂತ ಅವನ್ನು ಸ್ವೇಚ್ಛೆಯಾಗಿರಲು ಕಾಡಿನ ಬಿಡುವಾ ಎಂದರೆ ಕಾಡು ಎಲ್ಲಿದೆ? ಇವೆಲ್ಲವೂ ಆಗಬೇಕು ಪರಿಸರದ ಸಂಪನ್ಮೂಲಗಳ ಸಂರಕ್ಷಣೆಯಾಗಬೇಕು, ಅವಕ್ಕೆ ಸೂಕ್ತ ವಾತಾವರಣ ಕಲ್ಪಿಸಬೇಕು ಎಂದರೆ ಜಾಗಬೇಕು. ಇಂದು ಆ ಜಾಗವನ್ನು ಆಕ್ರಮಿಸಿರುವುದು ಯಾರು? ಹೌದು, ಕಟ್ಟಡಗಳು. ಆದರೆ ಈ ಕಟ್ಟಡಗಳು, ಮನೆಗಳು ತಂತಾನೇ ಉದ್ಭವವಾದುದಲ್ಲ. ಆ ಸಿಮೆಂಟ್‌ ಸಾಮ್ರಾಜ್ಯದಲ್ಲೂ ಇರುವವರಾರು? ಮನುಷ್ಯರೇ ತಾನೇ? ಅರ್ಥಾತ್‌ ಪರಿಸರದ ಸಂಪನ್ಮೂಲಗಳು ನಶಿಸುತ್ತಿರುವುದಕ್ಕೆ ಅವುಗಳ ಬಳಕೆ ಹೆಚ್ಚಾಗಿರುವುದೇ ಕಾರಣ.

ಬಳಕೆಯಾದಂತೆ ಬೆಳೆಸುವ ಕ್ರಿಯೆ ಕುಂಠಿತವಾಗಿರುವುದರಿಂದಲೇ ಇಂದು “ಸಂರಕ್ಷಣೆ’ ಮಾಡಿ ಎಂಬ ಕೂಗು ಎದ್ದಿರುವುದು. ಸಂಪನ್ಮೂಲಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ಸೋಲಾಗಿರುವುದು ಮನುಜ ಸಂತತಿ ಏರುತ್ತಿರುವುದರಿಂದ ಎಂಬ ಈಗ ವೇದ್ಯವಾಗಿರಬೇಕು ಅಲ್ಲವೇ? ಜನಸಂಖ್ಯೆ ನಿಯಂತ್ರಿಸಬೇಕು ಮೊದಲು.

ನೀ ನನಗಿದ್ದರೆ ನಾ ನಿನಗೆ ಎಂಬುದೇ ಪ್ರಕೃತಿ ಕಲಿಸುವ ಮೊದಲ ಪಾಠ. ಒಂದು ಪುಟ್ಟ ಬೀಜ ಬಿತ್ತಿ, ಅದಕ್ಕೆ ನೀರೆರುದು ಪೋಷಿಸಿದರೆ ಒಂದು ಕೆಲಸವಾದಂತೆ ಅನಂತರ ಪ್ರಕೃತಿಯ ಮತ್ತೂಂದು ಜೀವವೇ ಈ ನಿಂತ ಜೀವವನ್ನು ಮೆಲ್ಲದಂತೆ ಸಂರಕ್ಷಿಸಿ ಬೆಳೆಸಿದ ಮೇಲೆ ಹೆಚ್ಚು ಕಮ್ಮಿ ನಮ್ಮ ಕೆಲಸವಾದಂತೆ. ನಾವಾಗಿಯೇ ಕಡಿದು ಉರುಳಿಸದಿದ್ದರೆ ಸಾಕು, ಆ ಗಿಡವು ತಾ ಮರವಾಗಿ, ವೃಕ್ಷವಾಗಿ, ತಾ ಹಿರಿದಾಗಿ ಮಹಾವೃಕ್ಷವಾಗಿ ನಿಂತು ಮಳೆಗೆ ಸಹಕಾರಿಯಾಗಿ, ನೆರಳಿಗೆ ಮೂಲವಾಗಿ, ಪ್ರಾಣಿ-ಪಕ್ಷಿಗಳಿಗೆ ಆಶ್ರಯಾಗಿ ನೂರಾರು ವರ್ಷಗಳು ನೆಲೆಯಾಗಬಲ್ಲದು. ಏನಂತೀರಾ?

*ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next