Advertisement

ಇನ್ನಾದರೂ ಸಂಕಲ್ಪ ಬದ್ಧರಾಗಬೇಕು

12:30 AM Apr 07, 2018 | |

ರೋಗಗಳನ್ನು ವಿರೋಧಿಸುವುದಕ್ಕಿಂತ ನಿರೋಧಿಸುವುದು ಹೆಚ್ಚು ಉಪಯುಕ್ತ ಎನ್ನುವುದು ಸಾಮಾನ್ಯರೂ ತಿಳಿದಿರುವ ಆರೋಗ್ಯ ಮಂತ್ರ. ಆದರೆ ದುರ್ದೈವದ ವಿಚಾರವೆಂದರೆ ಮೇಲಿನ ಮಾತು ಕೇವಲ ಘೋಷಣೆಯಾಗಿಯೇ ಉಳಿದಿದೆಯೇ ಹೊರತು ಅದು ಜನ ಪರವಾದ ಅರ್ಥಾತ್‌ ಆರೋಗ್ಯ ಪರವಾದ ಆಂದೋಲನವಾಗಿ ರೂಪುಗೊಂಡಿಲ್ಲ.

Advertisement

ಜಾಗತೀಕರಣ ಎನ್ನುವುದು ಇಂದಿನ ಸಂದರ್ಭದಲ್ಲಿ ತುಂಬ ಜನಪ್ರಿಯವೂ ಜನೋಪಯುಕ್ತವೂ ಆದ ಒಂದು ವಿಶಿಷ್ಟ ಪರಿಕಲ್ಪನೆ. ಅನೇಕ ವಿಷಯಗಳಲ್ಲಿ, ಅನೇಕ ಆಯಾಮಗಳಲ್ಲಿ ಇದು ನಮ್ಮ ಬದುಕನ್ನು ಇಡಿಯಾಗಿ ಆವರಿಸುತ್ತದೆ. ಆರೋಗ್ಯದ ಕುರಿತಾದ ಚಿಂತನದಲ್ಲಂತೂ ಇದು ಅತ್ಯಂತ ಪ್ರಶಸ್ತವೂ ಪ್ರಸ್ತುತವೂ ಆದ ಒಂದು ಜಾಗತಿಕ ವಿದ್ಯಮಾನ. ಆರೋಗ್ಯಕ್ಕೆ ಸಂಬಂಧಿಸಿ “ವಸುದೈವ ಕುಟುಂಬಕಂ’ ಎಂಬಂತೆ ವಿಶ್ವವನ್ನೇ ಒಂದು ಘಟಕವಾಗಿಸಿಕೊಳ್ಳುವುದು ತುಂಬ ರೋಮಾಂಚನಕಾರಿ ಮತ್ತು ಅಷ್ಟೇ ಪ್ರಯೋಜನಕಾರಿ ಕೂಡ.

ಏಪ್ರಿಲ್‌ ತಿಂಗಳ ಏಳರಂದು ವಿಶ್ವ ಆರೋಗ್ಯದಿನವನ್ನು ಆಚರಿಸಲಾಗುತ್ತದೆ. ಇದು ಪ್ರಾರಂಭವಾದುದು 1950ರಲ್ಲಿ. UNOದ ಅಂಗ 194 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆ (WHA) 1948ರಲ್ಲಿ ವಿಶ್ವ ಆರೋಗ್ಯ ಸಮಾವೇಶವೊಂದರ ಮೂಲಕ (WHA) ಈ ಪ್ರಕ್ರಿಯೆಗೆ ಯೋಜನೆಯೊಂದನ್ನು ನಿರೂಪಿಸಿತು. ಇದರನ್ವಯ ಪ್ರತಿ ವರ್ಷವೂ ಆರೋಗ್ಯಕ್ಕೆ ಸಂಬಂಧಿಸಿದ ಒಂದು ವಿಷಯವನ್ನು ಎತ್ತಿ ಹಿಡಿದು ವಿಶೇಷ ಘೋಷಣೆಯೊಂದಿಗೆ ಅದರ ಅನುಷ್ಠಾನಕ್ಕಾಗಿ ಪ್ರಪಂಚಮಟ್ಟದಲ್ಲಿ ಸೂಚನೆ ನೀಡಲಾಗುತ್ತದೆ. ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಾವಳಿಗಳನ್ನೂ ಮಾರ್ಗದರ್ಶಿ ಸೂತ್ರಗಳನ್ನೂ ನೀಡಲಾಗುತ್ತದೆ. “ಜೀವವನ್ನು ರಕ್ಷಿಸಿ ಆಸ್ಪತ್ರೆಗಳನ್ನು ತುರ್ತು ಅಗತ್ಯಗಳಿಗೆ ಸುರಕ್ಷಿತವಾಗಿಸಿ’, “ಆರೋಗ್ಯಕರ ರಕ್ತದ ಏರೊತ್ತಡ’, “ರೋಗವಾಹಕ ಕೀಟ ಮತ್ತು ಜಂತುಗಳ ಕಡಿತ’ (ಮುಖ್ಯವಾಗಿ ಸೊಳ್ಳೆಗಳಿಗೆ ಸಂಬಂಧಿಸಿ) “ಆರೋಗ್ಯಕರ ಆಹಾರ’, “ರೋಗ ನಿರೋಧಕ ಜೀವ ವಿರೋಧಿ ಔಷಧಿಗಳ (ಆ್ಯಂಟಿ ಬಯೋಟಿಕ್ಸ್‌)ವಿರುದ್ಧ ಬೆಳೆಯುವ resistance (ನಿರೋಧಕ ಶಕ್ತಿ)’ ಮೊದಲಾದ ಅನೇಕ ವೈವಿಧ್ಯಮಯ ಸಮಸ್ಯೆಗಳ ಕುರಿತಾದ ಕ್ರಮಗಳನ್ನು ಈಗಾಗಲೇ ಅಳವಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ಕ್ಷಯ, ಮಲೇರಿಯಾ, ಏಡ್ಸ್‌, ಬಿ-ಹೆಪಟೈಟಿಸ್‌ ಮೊದಲಾದ ಕಾಯಿಲೆಗಳ ಬಗ್ಗೆ ಪ್ರತ್ಯೇಕ ಆರೋಗ್ಯ ದಿನಗಳನ್ನು ಆಚರಿಸ ಲಾಗುತ್ತದೆ. ಹಾಗೆಯೇ ರೋಗನಿರೋಧಕ ಲಸಿಕೆಗಳ ಬಗ್ಗೆ, ರಕ್ತ ಪೂರಣದ ಬಗ್ಗೆ ಮತ್ತು ತಂಬಾಕು ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ದಿನಗಳನ್ನು ಕೂಡ. ವಿಶ್ವ ಆರೋಗ್ಯ ದಿನವನ್ನು ಆಚರಿಸುವಾಗ ಆರೋಗ್ಯದ ಕುರಿತಾದ ಗಂಭೀರವಾದ ಮನನಕ್ಕೆ ನಾವು ಮನ ಮಾಡಬೇಕು. 

“ಆರೋಗ್ಯ ಆರೋಗ್ಯ ನಿತ್ಯ ಎಚ್ಚರವಿರಲಿ, ಆರೋಗ್ಯವೇ ಭಾಗ್ಯ ನಮಗೆ!’ ಎನ್ನುವ ಕವನದ ಸಂದೇಶವನ್ನು ಸಾರುವುದಕ್ಕೂ ಈ ಉದ್ದೇಶವನ್ನು ಸಾಧಿಸುವುದಕ್ಕೂ ನಾವು ಪ್ರಯತ್ನಿಸಬೇಕು. ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆ ಈ ನಿಟ್ಟಿನಲ್ಲಿ ಜಾಗೃತವಾಗಬೇಕು. ಸರಕಾರ ಕಟ್ಟುನಿಟ್ಟಾದ ಕಟ್ಟಳೆಗಳಿಂದ ಇದನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧವಾಗಬೇಕು. ವಿಶ್ವದ ಆರೋಗ್ಯದ ಕುರಿತಾದ ನೀತಿ ಸಂಹಿತೆಗಳನ್ನು ರೂಪೀಕರಿ ಸುವ ಮತ್ತು ಅವುಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನು ಹೊತ್ತು ಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ವಿಭಿನ್ನ ಧೋರಣೆಗಳ ಮೂಲಕ ತನ್ನ ಉದ್ದೇಶಿತ ಧ್ಯೇಯವನ್ನು ಸಾಧಿಸುತ್ತದೆ. ಹೆಚ್ಚಿನ ಕಾಯಿಲೆಗಳ ಚಿಕಿತ್ಸೆಯ ಬಗ್ಗೆ ಮತ್ತು ಔಷಧಗಳ ಪ್ರಮಾಣದ ಬಗ್ಗೆ ಶಿಫಾರಸುಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು (Recommendation and guidance) ನೀಡುತ್ತಿದ್ದು ಇವುಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಶಾಸ್ತ್ರೀಯ ಸ್ಥಾನಮಾನಗಳ ದೊಡ್ಡ ಗೌರವವಿದೆ.

ರೋಗಗಳನ್ನು ವಿರೋಧಿಸುವುದಕ್ಕಿಂತ ನಿರೋಧಿಸುವುದು ಹೆಚ್ಚು ಉಪಯುಕ್ತ ಎನ್ನುವುದು ಸಾಮಾನ್ಯರೂ ತಿಳಿದಿರುವ ಆರೋಗ್ಯ ಮಂತ್ರ. ಆದರೆ ದುರ್ದೈವವೆಂದರೆ ಇದೊಂದು ಘೋಷಣೆಯಾಗಿಯೇ ಉಳಿದಿದೆಯೇ ಹೊರತು ಜನ ಪರವಾದ ಅರ್ಥಾತ್‌ ಆರೋಗ್ಯ ಪರವಾದ ಆಂದೋಲನವಾಗಿ ರೂಪುಗೊಂಡಿಲ್ಲ. ವಾಸ್ತವವಾಗಿ ನಿರೋಧಕ ಸೂತ್ರವನ್ನು ಆರೋಗ್ಯ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿ ಏಕಕಾಲಕ್ಕೆ ಅನುಷ್ಠಾನಕ್ಕೆ ತಂದರೆ ಪ್ರತಿಶತ 70 ಕಾಯಿ ಲೆಗಳನ್ನು, ಅವಘಡಗಳನ್ನು ಮತ್ತು ಆಕಸ್ಮಿಕಗಳನ್ನು ತಡೆಹಿಡಿಯ ಬಹುದು. ಪೂರ್ಣವಾಗಿ ಅಲ್ಲವಾದರೂ ಗರಿಷ್ಠ ಪ್ರಮಾಣದಲ್ಲಿ. ವಿಶ್ವ ಆರೋಗ್ಯ ಸಂಸ್ಥೆ ಈ ತತ್ವಕ್ಕೆ ಬಹಳ ವಿಶೇಷವಾದ ಒತ್ತು ನೀಡುತ್ತದೆ. ಮುಖ್ಯವಾಗಿ ಸಾಂಕ್ರಾಮಿಕ ರೋಗಗಳ ಹಬ್ಬುವಿಕೆಯ ಬಗ್ಗೆ ಕಾಲದ ತುರ್ತು ಎಂಬಂತೆ ಎಚ್ಚರಿಸುತ್ತಲೇ ಇರುತ್ತದೆ. ಹುಟ್ಟುವ ಹೊಸ ಹೊಸ ಕಾಯಿಲೆಗಳಲ್ಲಿ ಹೆಚ್ಚಿನವು ಸೂಕ್ಷ್ಮಾತಿ ಸೂಕ್ಷ್ಮಾಣುಗಳಿಂದ (ವೈರಸ್‌) ತಲೆದೋರುವ ರೋಗಗಳಾಗಿದ್ದು ಇವುಗಳು “ಮಾರುತ ತುಲ್ಯ ವೇಗಂ’ ಎಂಬಂತೆ ಕ್ಷಿಪ್ರ ಸಾರಿಗೆ ಸಂಪರ್ಕವೇ ಕಾರಣವಾಗಿ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಾರಿ ಬರಬಲ್ಲುದು. ಅವುಗಳಲ್ಲಿ ಹೆಚ್ಚಿನವುಗಳೂ ಗಂಭೀರ ಸ್ವರೂಪದವುಗಳಾಗಿದ್ದು ತತ್‌ಕ್ಷಣ ಸಮರ್ಪಕ ಚಿಕಿತ್ಸೆ ದುರ್ಲಭ ವಾಗಿರುವುದರಿಂದ ವಿಶ್ವಸಂಸ್ಥೆ ಎಲ್ಲ ರಾಷ್ಟ್ರಗಳನ್ನೂ ಉದ್ದೇಶಿಸಿ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತದೆ. ನಿರ್ದಿಷ್ಟ ಔಷಧಿಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಸಂಭಾವ್ಯ ಹರಡುವಿಕೆಯನ್ನು ತಪ್ಪಿಸಲು ರೋಗ ನಿಯಂತ್ರಣದಲ್ಲಿ ನಾವು ವಹಿಸಬೇಕಾದ ಮುಂಜಾಗ್ರತೆಗಳ ಕುರಿತು ವಿಶ್ವಮಟ್ಟದಲ್ಲಿ ಪ್ರಬಲವಾದ ಪ್ರಚಾರವನ್ನು ನಡೆಸುತ್ತದೆ.  ವಿಶ್ವ ಆರೋಗ್ಯ ದಿನದಂದು ಪ್ರತಿಯೊಂದು ರಾಷ್ಟ್ರದ ಸರಕಾರ ಮತ್ತು ಪ್ರಜೆಗಳು ತಮ್ಮ ತಮ್ಮ ಆರೋಗ್ಯ ಸಂವಿಧಾನವನ್ನು ಭದ್ರಗೊಳಿಸುವುದಕ್ಕೆ ಬದ್ಧರಾಗಬೇಕು. ರೋಗ ಬಂದ ಮೇಲೆ, ಅಪಘಾತಗಳು ನಡೆದ ಮೇಲೆ, ಆಕಸ್ಮಿಕಗಳು ಸಂಭವಿಸಿದ ಮೇಲೆ ಕುಂಭಕರ್ಣನ ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದರಿಂದ ಪ್ರಯೋಜನ ಆಗುವುದಿಲ್ಲ, “ಅಟ್ಟ ಮೇಲೆ ಒಲೆ ಉರಿಯಿತು’ ಎಂಬಂತೆ.  A Stitch in time saves nine ಎನ್ನುವ ಹಿತೋಕ್ತಿಯನ್ನು ನಾವು ಮರೆಯ ಬಾರದು. ದೇಶ ರಕ್ಷಣೆಗೆ ಇರುವಷ್ಟೇ ಮಹತ್ವ ಆರೋಗ್ಯ ರಕ್ಷಣೆಗೂ ಸಿಗಬೇಕು. ರಕ್ಷಣಾ ವ್ಯೂಹದ ಅನೇಕ ತಂತ್ರಗಳ ರೋಗಗಳನ್ನು ಬಗ್ಗು ಬಡಿಯುವಲ್ಲಿ ನಾವು ಪ್ರಯೋಗಕ್ಕೆ ತರಬೇಕು.

Advertisement

2017ರಲ್ಲಿ ಖನ್ನತೆಯ ಕುರಿತು (ಡಿಪ್ರಶನ್‌) ಧನಾತ್ಮಕ ಚಿಂತನದ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಅನೇಕ ವರ್ಷಗಳಿಂದ ಕೇಳಿಬರುತ್ತಿರುವ “ಎಲ್ಲರಿಗೂ ಆರೋಗ್ಯ’ ಎನ್ನುವ ಆದರ್ಶ ಘೋಷಣೆಗೆ ಈ ವರ್ಷ ಪ್ರತ್ಯೇಕವಾದ ರಭಸವನ್ನು ನೀಡಲಾಗಿದೆ. ಯುನಿವರ್ಸಲ್‌ ಹೆಲ್ತ್‌ ಕವರೇಜ್‌ (ಸಾರ್ವತ್ರಿಕ ಆರೋಗ್ಯ ರಕ್ಷಣಾ ಕವಚ) ಎಂಬ ಧ್ಯೇಯ ವಾಕ್ಯಕ್ಕೆ ಮಹತ್ವ ನೀಡಲಾಗಿದೆ. ಇದರ ಅನುಷ್ಠಾನಕ್ಕೆ ಸರ್ವ ಸಹಕಾರವನ್ನು ನೀಡಬೇಕಾದ್ದು ಸರಕಾರದ ಮತ್ತು ಸಮಾಜದ ಆದ್ಯ ಕರ್ತವ್ಯವಾಗಿದೆ. 

ನಮ್ಮ ದೇಶಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ದಿನದಂದು ನಾವು ಗಂಭೀರವಾಗಿ ಪರಿಗಣಿಸಿ ಕರ್ತವ್ಯೋನ್ಮುಖರಾಗಬೇಕಾದ ಕೆಲವು ಆದ್ಯತೆಗಳನ್ನು ಹೀಗೆ ಪಟ್ಟಿ ಮಾಡಬಹುದು.
ನಕಲಿ ವೈದ್ಯಕೀಯವನ್ನು ಶತಾಯಗತಾಯ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು.
ಕಲಬೆರಕೆಯನ್ನು ನಿಷೇಧಿಸಬೇಕು.
ಒಂದು ಪದ್ಧತಿಯಲ್ಲಿ ಕಲಿತು ಇನ್ನೊಂದು ಪದ್ಧತಿಯನ್ನು ಅವಲಂಬಿಸುವ ವೈದ್ಯರನ್ನು ನಿಯಂತ್ರಿಸಬೇಕು. 
ಶಾಸ್ತ್ರೀಯ ಸಮನ್ವಯ ಸಾಮರಸ್ಯವನ್ನು ಪ್ರೋತ್ಸಾಹಿಸಬೇಕು. 
ಕರ್ತವ್ಯ ನಿರ್ವಹಣೆಯಲ್ಲಿ ವೈದ್ಯರು ನಿರ್ಭಯವಾಗಿ ವ್ಯವ ಹರಿಸಬಹುದಾದ ವಾತಾವರಣವನ್ನು ಸೃಷ್ಟಿಸಬೇಕು. ಆದರೆ ಅವರಿಗೂ ಕೂಡ ಉತ್ತರದಾಯಿತ್ವದ ಕಡಿವಾಣ ತೊಡಿಸಬೇಕು. 
ಸರಕಾರಿ ಆಸ್ಪತ್ರೆಗಳ ಗುಣಮಟ್ಟವನ್ನೂ ವಿಶ್ವಾಸಾರ್ಹತೆಯನ್ನೂ ಸುಧಾರಿಸಿಕೊಳ್ಳಬೇಕು
ಎಲ್ಲಾ ಸಮಯದಲ್ಲೂ ತುರ್ತು ಚಿಕಿತ್ಸೆ ಅಲ್ಲಿ ಲಭ್ಯವಿರಬೇಕು.
ಖಾಸಗಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಹಣಮಟ್ಟಗಳನ್ನು ಸೂಕ್ಷ್ಮವಾಗಿ ನಿಯಂತ್ರಣಕ್ಕೆ ಒಳಗಾಗಿಸಬೇಕು

“ವಿಶ್ವ ಆರೋಗ್ಯಕ್ಕೆ ಜಯವಾಗಲಿ’ 

ಡಾ| ಕೆ. ರಮಾನಂದ ಬನಾರಿ

Advertisement

Udayavani is now on Telegram. Click here to join our channel and stay updated with the latest news.

Next