Advertisement

ಹೃದಯವೇ ಆರೋಗ್ಯ ಧರ್ಮದ ಮೂಲವಯ್ಯಾ !

11:18 PM Sep 28, 2021 | Team Udayavani |

ನಿಮ್ಮ ಹೃದಯದ ಮಾತು ಕೇಳಿ… ಅದು ನಿಮ್ಮ ಶರೀರದ ಲೆಫ್ಟಲ್ಲೇ ಇರಬಹುದು; ಆದರೆ ಅದು ಸದಾ “ರೈಟ್‌’! ಹೌದು. ಕೇವಲ ಹೃದಯದ ಮಾತಿಗೆ ಕಿವಿಗೊಡುವುದಷ್ಟೇ ಅಲ್ಲ, ಅದರ ಆರೋಗ್ಯ ಕುರಿತ ಕಿವಿಮಾತು ಕೇಳುವುದೂ “ವಿಶ್ವ ಹೃದಯ ದಿನ’ದ ಈ ವೇಳೆ ಹೆಚ್ಚು ಪ್ರಸ್ತುತ.

Advertisement

ಇಂದು ಕೊರೊನಾ ಜಗದ ನಿದ್ದೆಗೆಡಿಸಿದೆ. ಸೋಂಕಿನ ಬಳಿಕ ಹೃದಯಾಘಾತ ಪ್ರಕರಣಗಳು ಇಮ್ಮಡಿಸುತ್ತಲೇ ಇವೆ. ಅದರಲ್ಲೂ 50 ಪ್ಲಸ್‌ ಆದವರ ಹೃದಯ ಆತಂಕದಿಂದ ಬಡಿದುಕೊಳ್ಳುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಕನಿಷ್ಠ 3 ತಿಂಗಳಿಗೊಮ್ಮೆ ಹೃದಯ ತಪಾಸಣೆ ಬಹಳ ಮುಖ್ಯ. ಹಠಾತ್‌ ಹೃದಯಾಘಾತದ ದಾಳಿಯಿಂದ ಬಚಾವಾಗಲು ಇದೇ ಅತ್ಯುತ್ತಮ ಸೂತ್ರ.

ಹೃದಯಕ್ಕೆ ಕನ್ನ ಹಾಕಿದ ಕೊರೊನಾ
ಇತ್ತೀಚೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ಒಂದು ಅಧ್ಯಯನ ನಡೆಸಿತ್ತು. ಕೊರೊನಾ ದಿಂದ ಚೇತರಿಸಿಕೊಂಡ 3-4 ವಾರಗಳಲ್ಲೇ ಕೆಲವರು ಹಠಾತ್‌ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ತಜ್ಞರ ಗಮನಕ್ಕೆ ಬಂತು. 1ನೇ ಅಲೆಗಿಂತಲೂ, 2ನೇ ಅಲೆಯಲ್ಲಿ ಕೊರೊನಾವು ಹೃದಯ ತಜ್ಞರ ಮುಂದೆ ಇಂಥ ಭಯಾನಕ ಸವಾಲಿನ ದಾಳ ಉರುಳಿ ಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೈಹಿಕವಾಗಿ ಸಂಪೂರ್ಣ ನಿಶ್ಶಕ್ತರಾದವರಿಗೆ ಈ ಆತಂಕ ಎದುರಾಗುತ್ತಿದೆ.

ಸೋಂಕಿನ ಬಳಿಕ ಹೃದಯ ಆರೈಕೆ ಹೇಗೆ?
ಕೋವಿಡ್‌ ಗುಣವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯ ಪ್ರೊಟೀನ್‌ಯುಕ್ತ ಆಹಾರ ನೀಡುವುದು, ವ್ಯಾಯಾಮ, ಯೋಗ, ಧ್ಯಾನ ಮಾಡುವುದು, ಧೂಮಪಾನ- ಮದ್ಯಪಾನ ತ್ಯಜಿಸುವುದು, ಜಂಕ್‌ಫ‌ುಡ್‌ ಸೇವನೆ ನಿಯಂತ್ರಣ- ಇಂಥ ಆರೋಗ್ಯಕರ ಆಹಾರ ದಿನಚರಿ ಪಾಲನೆ ಅತೀ ಮುಖ್ಯ. ಅಲ್ಲದೆ ಕೆಲಸದ ಒತ್ತಡವೂ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಆದಷ್ಟು ರಿಲ್ಯಾಕ್ಸ್‌ ಭಾವದಲ್ಲಿ ಕಾರ್ಯೋನ್ಮುಖರಾಗುವುದು ಅವಶ್ಯ.

ಲಸಿಕೆ ಹಾಕಿಸಿಕೊಂಡರೆ ಓಕೆ!
ಹೃದಯದ ಸಮಸ್ಯೆ ಇರುವವರು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೆ ಇದು ಅಧ್ಯಯನದಿಂದಲೂ ದೃಢಪಟ್ಟಿದೆ.ಕೋವಿಡ್‌ನಿಂದಾಗಬಹುದಾದ ಆರೋಗ್ಯ ಸಮಸ್ಯೆಯನ್ನು ಲಸಿಕೆ ತಡೆಯುವುದರಿಂದ ಹೃದಯದ ಸಮಸ್ಯೆ ಇರುವವರ ಆರೋಗ್ಯ ಕೂಡ ಸುಧಾರಣೆ ಕಾಣಲಿದೆ. ಈಗಾಗಲೇ ಹೃದಯ ಸಮಸ್ಯೆ ಇರುವ ಶೇ.70 ಮಂದಿ ಲಸಿಕೆ ಪಡೆದಿರುವ ಅಂಕಿ-ಅಂಶ ವರದಿಯಾಗುತ್ತಿದೆ. ಲಸಿಕೆ ಪಡೆಯದೇ ಇರುವವರು ಕೂಡಲೇ ಲಸಿಕೆ ಪಡೆದರೆ, 3ನೇ ಅಲೆಯಿಂದ ಹೃದಯದ ಮೇಲಿನ ಆಘಾತ ತಪ್ಪಿಸಬಹುದು.

Advertisement

ಯುವಕರಲ್ಲೇ ಹೃದಯಾಘಾತ ಹೆಚ್ಚಳ
ಹಿಂದೆಲ್ಲ ವಯಸ್ಸಾದ ಬಳಿಕ ಹೃದಯಾಘಾತ ಆಗುತ್ತಿದ್ದ ಸುದ್ದಿ ಕೇಳುತ್ತಿದ್ದೆವು. ಆದರೆ ಕೊರೊನಾ ಈ ವಸ್ತುಸ್ಥಿತಿಯನ್ನೂ ತಲೆಕೆಳಗು ಮಾಡಿದೆ. 45 ವರ್ಷದೊಳಗಿನ ಮಧ್ಯವಯಸ್ಕರಲ್ಲಿ ಹೃದಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಳವಾಗಿದೆ. 2017ರ ಅಧ್ಯಯನ ಪ್ರಕಾರ, ವರ್ಷಕ್ಕೆ 4 ಲಕ್ಷ ಮಧ್ಯವಯಸ್ಕರೇ ಹೃದಯಾಘಾತಕ್ಕೆ ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಯುವಕರು ಜೀವನಶೈಲಿಯಲ್ಲಿ ಶಿಸ್ತು ರೂಢಿ ಸಿಕೊಂಡರೇ ಅಪಾಯದ ಬಾಣದಿಂದ ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ:ಮತ್ತೆ ಗಡಿ ಅತಿಕ್ರಮಿಸಿದ ಚೀನಾ; ಉತ್ತರಾಖಂಡದ ಬಾರಾಹೋತಿಗೆ ಬಂದಿದ್ದ ಸೇನೆ

ಯುವಕರೇ, ನಿಮ್ಮ ಹೃದಯ ಜೋಪಾನ!
ಹೃದಯಾಘಾತ ಇಂದು ಯುವಕರನ್ನೂ ಬಿಟ್ಟಿಲ್ಲ. ಬದಲಾದ ಜೀವನ ಶೈಲಿ ಯಿಂದ ಯುವಕರ ಹೃದಯದ ಆರೋಗ್ಯ ಹಂತಹಂತವಾಗಿ ಕ್ಷೀಣಿಸುತ್ತಿದೆ. ಅದರಲ್ಲೂ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಜಂಕ್‌ಫ‌ುಡ್‌ ನೀಡುವುದರಿಂದ ಹೃದಯದ ರಕ್ತನಾಳಗಳಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಜತೆಗೆೆ ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆ, ರಕ್ತನಾಳದಲ್ಲಿ ಕೊಬ್ಬನ್ನು ಸೃಷ್ಟಿಸುತ್ತಿದೆ. ಇದರಿಂದ ರಕ್ತಸಂಚಲನ ನಿಧಾನಗೊಂಡು, ರಕ್ತ ಹೆಪ್ಪುಗಟ್ಟುತ್ತದೆ. 30ನೇ ವಯಸ್ಸಿನೊಳಗೆ ಇಂಥ ಆತಂಕಗಳು ಸದ್ದಿಲ್ಲದೆ ಘಟಿಸುತ್ತಿವೆ.

ಹೃದಯಾಘಾತ ಹೇಗೆ?
ಮನುಷ್ಯನ ಹೃದಯದಲ್ಲಿ ರಕ್ತನಾಳಗಳು ಅಥವಾ ಕೊರೋನರಿ ಅರ್ಟರೀಸ್‌ ಇರುತ್ತದೆ. ದೇಹದಲ್ಲಿ ಒಟ್ಟು 3 ಕೊರೋನರಿ ಆರ್ಟರೀಸ್‌ ಇರುತ್ತದೆ. ಲೆಫ್ಟ್ ಕೊರೋನರಿ ಆರ್ಟರಿ (ಎಲ್ಸಿಎ), ಸರ್ಕಮ್‌ ಫ್ಲೆಕ್ಸ್‌ ಆರ್ಟರಿ ಹಾಗೂ ರೈಟ್‌ ಕೊರೋನರಿ ಆರ್ಟರಿ (ಆರ್‌ಸಿಎ). ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ. ಈ ರಕ್ತನಾಳಗಳಲ್ಲಿ ರಕ್ತ ಸಂಚಲನೆ ಸರಾಗವಾಗಿರಬೇಕು. ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ, ವ್ಯಕ್ತಿ ಹೃದಯಾಘಾತಕ್ಕೆ ತುತ್ತಾಗುತ್ತಾನೆ. ಸಕ್ಕರೆ ಕಾಯಿಲೆ, ಬೊಜ್ಜು ಅಥವಾ ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಳ್ಳುತ್ತಾ ಹೋದಂತೆ ರಕ್ತನಾಳವು ಕುಗುತ್ತಾ ಹೋಗುತ್ತದೆ. ಇದರಿಂದ ರಕ್ತಚಲನೆಗೆ ಅಡ್ಡಿ ಉಂಟಾಗುತ್ತದೆ. ಈ ಅಡಚಣೆ ರಕ್ತ ಹೆಪ್ಪುಗಟ್ಟುವಿಕೆಗೆ ನಾಂದಿ ಹಾಡಬಹುದು.

ಹೃದಯಾಘಾತ ತಡೆ ಹೇಗೆ?
ಆರೋಗ್ಯಕರ ಜೀವನಶೈಲಿಗೆ ಸಮನಾದ ಪರಿಣಾಮಕಾರಿ ಮದ್ದು ಬೇರೊಂದಿಲ್ಲ. ವ್ಯಾಯಾಮ, ಜಂಕ್‌ಫ‌ುಡ್‌ ಸೇವನೆ ನಿಯಂತ್ರಣ, ಎಣ್ಣೆಯುಕ್ತ ಪದಾರ್ಥದಿಂದ ದೂರ ಇರುವುದು, ಪ್ರೊಟೀನ್‌ಯುಕ್ತ ತರಕಾರಿ ಹಣ್ಣುಗಳ ಸೇವನೆ- ಇಷ್ಟು ಮಾಡಿದರೆ, ನಿಮ್ಮ ಹೃದಯ ಸಂಪೂರ್ಣ ಫಿಟ್‌. ಹೃದಯಾಘಾತದ ಚಿಂತೆಯಿಲ್ಲದೆ, ನೆಮ್ಮದಿಯ ದಿನಗಳಿಂದ ಆಯುಸ್ಸು ಹೆಚ್ಚಿಸಿಕೊಳ್ಳಬಹುದು.

ಹೃದಯಾಘಾತಕ್ಕೆ ಪ್ರಾಥಮಿಕ ಚಿಕಿತ್ಸೆ ಏನು?
ಹಠಾತ್‌ ಹೃದಯಾಘಾತದಿಂದ ಕೆಲವರು ಕೂಡಲೇ ಪ್ರಜ್ಞೆ ಕಳೆದುಕೊಳ್ಳಬಹುದು. ಆ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಕರೆ ಮಾಡಬೇಕು. ಜತೆಗೆೆ ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯು ಕ್ರಮೇಣ ಉಸಿರಾಟ ನಿಲ್ಲಿಸಬಹುದು. ಹೀಗಾಗಿ ಬಾಯಿಗೆ ಬಾಯಿ ಇಟ್ಟು ಉಸಿರಾಟ ನೀಡುವುದು ಮುಖ್ಯ. ಜತೆಗೆೆ ಎದೆಯ ಮಧ್ಯಭಾಗದಲ್ಲಿ ಎರಡೂ ಕೈಗಳ ಅಂಗೈಗಳನ್ನು ಜೋಡಿಸಿಕೊಂಡು ಸ್ವಲ್ಪ ಪ್ರಮಾಣದ ಒತ್ತಡ ಹಾಕಿ ಪಂಪ್‌ ಮಾಡಬೇಕು. ಇದನ್ನು ಕಾರ್ಡಿಯೋಪಲ್ಮನರಿ (ಸಿಪಿಆರ್‌) ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಹೃದಯ ರಕ್ತನಾಳದಲ್ಲಿ ತುಂಬಿದ ಬ್ಲಾಕೇಜ್‌ ಸ್ವಲ್ಪ ಪ್ರಮಾಣ ದಲ್ಲಿ ತೆರವುಗೊಂಡು, ಹೃದಯ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯ. ಹೃದಯಾಘಾತದಿಂದ ಪ್ರಜ್ಞೆ ಕಳೆದುಕೊಂಡಾಗ ಈ ಕ್ರಿಯೆ ಮಾಡುವುದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳೂ ಖಾತ್ರಿಪಡಿಸಿವೆ.

ಕೈಗಳ ಮೇಲೆ ಹೆಚ್ಚು ಭಾರ ಬೇಡ
ಕೆಲವೊಮ್ಮೆ ಹೃದಯಾಘಾತಕ್ಕೀಡಾದ ವ್ಯಕ್ತಿಯನ್ನು ಬದುಕಿಸುವ ಭರದಲ್ಲಿ ಹೆಚ್ಚು ಒತ್ತಡ ಹಾಕಿ ಹೃದಯ ಒತ್ತುವುದರಿಂದಲೂ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಕೈಗಳ ಮೇಲೆ ಹೆಚ್ಚು ಭಾರ ಇಟ್ಟು ಒತ್ತಬಾರದು. ಇದರಿಂದ ಎದೆ ಮೂಳೆಗಳು ಮುರಿಯುವ ಅಪಾಯವೂ ಇರುತ್ತದೆ. ಜಾಗರೂಕತೆಯಿಂದ ಈ ಕ್ರಿಯೆ ನಡೆಸಬೇಕು. ಇನ್ನೂ ಕೆಲವರಿಗೆ ಸಣ್ಣ ಪ್ರಮಾಣದ ಹೃದಯಾಘಾತವಾಗಿ, ಪ್ರಜ್ಞೆ ಹೋಗಿರುವುದಿಲ್ಲ. ಇಂಥವರಿಗೆ ಯಾವುದೇ ಕಾರಣಕ್ಕೂ ಹೃದಯದ ಮೇಲೆ ಕೈ ಹಾಕಿ ಒತ್ತುವ ಅಥವಾ ಬಾಯಿಗೆ ಬಾಯಿ ಇಟ್ಟು ಉಸಿರು ನೀಡುವ ಕೆಲಸ ಮಾಡಬಾರದು. ಏಕೆಂದರೆ, ಇಂಥ ವೇಳೆ ಅವರ ಹೃದಯದ ನೋವು ಅವರಿಗೆ ಅನುಭವವಾಗುತ್ತಿರುತ್ತದೆ. ಹೃದಯದ ಮೇಲೆ ಮತ್ತಷ್ಟು ಒತ್ತಡ ಹಾಕುವುದು ಆ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಗಲೂಬಹುದು. ಹೀಗಾಗಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು.

ನಿಮ್ಮ ಆಪ್ತರ ಹೃದಯ ರಕ್ಷಿಸಲು ಈ ತರಬೇತಿ ಪಡೆಯಿರಿ
ಕಾರ್ಡಿಯೋಪಲ್ಮನರಿ ರೆಸಸಿಟೇಶನ್‌ (ಸಿಪಿಆರ್‌) ಬಗ್ಗೆ ಸಂಪೂರ್ಣ ಜ್ಞಾನವಿಲ್ಲದೇ ಹೋದರೆ ಹೃದಯಾಘಾತವಾದ ವ್ಯಕ್ತಿಯ ಸಾವಿಗೆ ನಾವೇ ಕಾರಣವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಅದರ ಬಗ್ಗೆ ಜ್ಞಾನ ಇಲ್ಲದೇ ಹೃದಯ ಪಂಪ್‌ ಮಾಡಬಾರದು. ಇದಕ್ಕಾಗಿ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಕಾರ್ಡಿಯೋಪಲ್ಮನರಿ ರೆಸಸಿಟೇಶನ್‌ (ಸಿಪಿಆರ್‌) ಬಗ್ಗೆ ತರಬೇತಿ ಇರಲಿದೆ. ಈ ತರಬೇತಿಯಲ್ಲಿ ಹೃದಯಾಘಾತವಾಗಿ, ಪ್ರಜ್ಞೆ ಕಳೆದುಕೊಂಡ ವ್ಯಕ್ತಿಗಳಿಗೆ ಹೇಗೆ ಹೃದಯ ಪಂಪ್‌ ಮಾಡಬಹುದು ಎಂಬುದರ ಬಗ್ಗೆ ಡೆಮೋ ಸಹಿತ ತರಬೇತಿ ನೀಡಲಾಗುವುದು. ಪ್ರತಿಯೊಬ್ಬರು ಈ ತರಬೇತಿಯನ್ನು ಪಡೆಯುವುದು ಅನಿವಾರ್ಯ. ವಿದೇಶಗಳಲ್ಲಿ ಶೇ.100 ರಷ್ಟು ಇದರ ತರಬೇತಿ ಪಡೆದಿದ್ದಾರೆ. ನಮ್ಮಲ್ಲಿಯೂ ಎಲ್ಲ ಆಸ್ಪತ್ರೆಗಳಲ್ಲಿ ಈ ತರಬೇತಿ ಲಭ್ಯವಿರಲಿದೆ.

-ಡಾ| ವಿವೇಕ್‌ ಜವಳಿ

Advertisement

Udayavani is now on Telegram. Click here to join our channel and stay updated with the latest news.

Next