Advertisement

World Environment Day : ಭೂಮಿ ಮತ್ತು ಪರಿಸರ ಒಂದೇ ಆದರೂ ಇವುಗಳು ಭಿನ್ನ

02:49 PM Jun 01, 2024 | Team Udayavani |

ಒಂದು ವರ್ಷದ ಮುನ್ನೂರು ಅರವತ್ತೈದೂ ದಿನಗಳು ಒಂದಲ್ಲ ಒಂದು ದಿನವೇ ಆಗಿರುತ್ತದೆ. ಹೆಚ್ಚಿನ ವೇಳೆ ನಮ್ಮ ಸುತ್ತಲಿನ ಸಂತಸಕ್ಕೋ, ವೈಭೋಗಕ್ಕೋ ಮೀಸಲಾಗಿಡುವ ದಿನಗಳಿಗೆ ಹೊರತಾಗಿರುವುದು ವಿಶ್ವ ಪರಿಸರ ದಿನ ಮತ್ತು ವಿಶ್ವ ಭೂಮಿ ದಿನ ಎನ್ನಬಹುದು. . World Earth Day ಎಂಬುದನ್ನು ವಿಶ್ವ ಭೂಮಿ ದಿನ ಎನ್ನುತ್ತೇವೆ. World Environment Day ಎಂಬುದನ್ನು ಅಚ್ಚ ಕನ್ನಡದಲ್ಲಿ ವಿಶ್ವ ಪರಿಸರ ದಿನ ಎನ್ನಬಹುದು. ಮೊದಲಿಗೆ ಅನುಮಾನ ಮೂಡುವುದು ಎರಡೂ ಒಂದೇ ಅಲ್ಲವೇ? ಭಿನ್ನತೆ ಏನು?

Advertisement

ವಿಶ್ವ ಭೂಮಿ ದಿನವನ್ನು ಏಪ್ರಿಲ್‌ 22ರಂದು ಆಚರಿಸಿದರೆ, ವಿಶ್ವ ಪರಿಸರ ದಿನವನ್ನು ಜೂನ್‌ 5ರಂದು ಆಚರಿಸುತ್ತೇವೆ. ಆಚರಿಸುವ ದಿನದಲ್ಲಿ ವ್ಯತ್ಯಾಸವಾದರೇನು, ಅದೆಂಥಾ ಭಿನ್ನತೆ. ಮಾರ್ಕ್ಸ್ ಕಾರ್ಡಿನಲ್ಲಿ ಇರುವುದು ಒಂದು ಹುಟ್ಟಿದ ದಿನವಾದರೆ ನಿಜಕ್ಕೂ ಭುವಿಗೆ ಬಂದಿರೋದು ಮಗದೊಂದು ದಿನ ಎಂಬಷ್ಟೇ ಸಲೀಸಾಗಿರುವ ಈ ಸಂಭ್ರಮವನ್ನು ವಿಶ್ವಾದ್ಯಂತ ಎರಡು ದಿನ ಆಚರಿಸುವುದೇ? ಇಲ್ಲ ಬಿಡಿ, ಈ ಎರಡು ದಿನಗಳು ಬೇರೆ ಬೇರೆ. ಬನ್ನಿ ನೋಡೋಣ ಏನೂ ಅಂತ.

ಭೂಮಿ ದಿನ ಎಂಬುದನ್ನು ಅಂತಾರಾಷ್ಟ್ರೀಯ ಮದರ್‌ ಅರ್ಥ್ ಡೇ ಎಂದೂ ಕರೆಯುತ್ತಾರೆ. ಭುವಿಯ ಬಗ್ಗೆಯೇ ಇರುವ ಈ ದಿನವನ್ನು ಅದಕ್ಕೆ ತಕ್ಕಂತೆ ಹೆಸರಿಸಲಾಗಿದೆ. ಭೂಮಿ ಎಂಬ ಗ್ರಹವು ಅಂದಿಗಿಂತ ಇಂದು ಬಲು ಭಿನ್ನ. ಇಂದಿನ ಈ ಗ್ರಹವನ್ನು ಅಂದಿನ ಸಿರಿಸಂಪತ್ತಿಗೆ ಒಯ್ಯಬೇಕು ಎಂಬ ತತ್ತ್ವವೇ ಈ ಭುವಿಯ ದಿನ. ಈ ಭುವಿಯ ದಿನವು ಪರಿಸರದ ಒಂದು ಭಾಗ ಎನ್ನಬಹುದು ಅಥವಾ ಭುವಿ ಮತ್ತು ಪರಿಸರ ಎಂಬುದು ಅವಿಭಾಜ್ಯ ಅಂಗಗಳು ಎನ್ನಬಹುದು. ಇಲ್ಲಿನ ಮುಖ್ಯವಾದ ವಿಷಯ ಎಂದರೆ ಪರಿಸರ ದಿನ ಎಂಬುದರ ಧ್ಯೇಯ ಆಯಾ ವರ್ಷಕ್ಕೆ ಏಕಮೇವ ಧ್ಯೇಯ. ಕೊಂಚ ಗೊಂದಲವಾಗುತ್ತದೆ ಅಲ್ಲವೇ? ನೀ ಮಾಯೆಯೋ? ನಿನ್ನೊಳು ಮಾಯೆಯೋ? ಎಂಬುದು ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟೇ ವೇಗದಲ್ಲಿ ಅರ್ಥವಾಗುವ ವಿಷಯ ಭುವಿ ಮತ್ತು ಪರಿಸರ.

ನಿಧಾನವಾಗಿ ನೋಡೋಣ ಬನ್ನಿ, ಏನು ಧಾವಂತ? ವಿಶ್ವ ಪರಿಸರ ದಿನ ಎಂಬುದು ಯುನೈಟೆಡ್‌ ಕಿಂಗ್ ಡಮ್‌ ಪೌರತ್ವ ಹೊಂದಿದೆ. ಅರ್ಥಾತ್‌ ಪರಿಸರ ದಿನದ ಹುಟ್ಟು ಯುನೈಟೆಡ್‌ ಕಿಂಗ್ ಡಮ್‌ನಲ್ಲಿ. ಪ್ರತೀ ವರ್ಷ ಈ ಆಚರಣೆಯನ್ನು ವಿವಿಧ ದೇಶಗಳ ನಗರಗಳಲ್ಲಿ ನಡೆದರೂ ಹುಟ್ಟಿದ ಹಬ್ಬ ಮಾತ್ರ ಯುಕೆಯಲ್ಲೇ ನಡೆಯುತ್ತದೆ ಎಂಬುದು ವಿಶೇಷ. ಮೇ ತಿಂಗಳ 27ರಂದು ಜಿನೀವಾ ನಗರದಲ್ಲಿ ವಿಶೇಷ ಸಂದರ್ಭದಲ್ಲಿ ಈ ದಿನವನ್ನು ಆಚರಣೆ ಮಾಡಲಾಯ್ತು.

Advertisement

ಜೂ.5ರಂದು ಈ ಸಾಲಿನ ವಿಶ್ವ ಪರಿಸರ ದಿನವನ್ನು ಆಚರಿಸಲು “ಸೌದಿ ಅರೇಬಿಯಾ’ ಸಜ್ಜಾಗುತ್ತಿದೆ. ಇಂಥಾ ವಿಶೇಷ ದಿನಗಳೆಲ್ಲವೂ ಒಂದು ಧ್ಯೇಯವನ್ನು ಹೊತ್ತು ಸಾಗುತ್ತದೆ. ಪ್ರಮುಖವಾಗಿ ವಿಶ್ವ ಪರಿಸರದ ಉದ್ದೇಶವು “ನಮ್ಮ ನೆಲ ನಮ್ಮ ಭವಿಷ್ಯ’ ಎಂಬುದು. ನಿಂತ ನೆಲವೇ ಗಟ್ಟಿಯಿಲ್ಲ ಎಂದರೆ ಇನ್ನು ಭವಿಷ್ಯ ಎಲ್ಲಿಯದು ಎಂಬ ತತ್ತ್ವ. ಇಂದು ಏನೆಲ್ಲ ಅವಿಷ್ಕಾರಗಳಿಂದಾಗಿ ಭುವಿಯು ಟೊಳ್ಳಾಗುತ್ತಿದೆ. ಇಳೆಯು ಮಳೆಯನ್ನೇ ಹೀರಿಕೊಂಡು ನಿಲ್ಲಲಾಗುತ್ತಿಲ್ಲ. ನಿಂತ ನೆಲೆದ ಮೇಲಿನ ಕಟ್ಟಡಗಳು ಉರುಳುತ್ತಿದೆ.

ಭುವಿಯು ನಮ್ಮ ರಕ್ಷಣೆಗೆ ಅಂತ ಭಗವಂತ ಸೃಷ್ಟಿಸಿಲ್ಲ. ಸಾಧು ಪ್ರಾಣಿಗಳಿಗೆ ಪಕ್ಷಿಗಳಿಗೆ ಹುಳು ಹುಪ್ಪಟೆಗಳಿಗೆ ಸೃಷ್ಟಿಯಾಗಿದ್ದ ಪರಿಸರವೇ ಮೊದಲಾಗಿದ್ದು. ಅಲ್ಲೊಂದು ಏಕಮೇವ ಅಧಿಪತ್ಯದ ಸ್ಥಾಪನೆಗೆ ಹೋರಾಟವು ಇದ್ದೇ ಇತ್ತು. ಮರಗಿಡಗಳು, ಬೆಟ್ಟಗುಡ್ಡಗಳು ಪರಿಸರದ ಭಾಗವಾಗಿ ಒಳಿತು ಕೆಡುಕುಗಳಿಗೆ ಸಾಕ್ಷಿಯಾಗಿತ್ತು. ಅಂದೂ ಕದನವಿತ್ತು ಇಂದೂ ಕದನವಿದೆ ಆದರೆ ಅಲ್ಲೊಂದು ದೊಡ್ಡ ವ್ಯತ್ಯಾಸವಿದೆ. ಏನದು? ಹೇಳುವಿರಾ?

ತನ್ನ ದೇಶವೇ ಹಿರಿದು, ತಾನೇ ಸರ್ವಾಧಿಕಾರಿ, ತನ್ನ ಖಾಂದಾನ್‌ ಬಿಟ್ಟರೆ ಮಿಕ್ಕವರಾರೂ ಇರಕೂಡದು ಎಂಬಂಥಾ ಸ್ವಾರ್ಥ, ಎಲ್ಲೆಲ್ಲೂ ತಾನೇ ಕಾಣಿಸಿಕೊಳ್ಳಬೇಕು ಎಂಬ ಭಾವ ಒಂದೆಡೆಯಾದರೆ, ತಾನು ಯಾರು ಎಂದೇ ಹೊರ ಜಗತ್ತಿಗೆ ಕಾಣಿಸಿಕೊಳ್ಳದಿದ್ದರೂ ಎಲ್ಲವೂ ತನ್ನಂತೆಯೇ ನಡೆಯಬೇಕು ಎಂಬ ನಡೆಯಿಂದ ಬದುಕು ಕಿತ್ತಿರುವವರೋ ಹೇರಳ. ಮುಖ್ಯವಾಗಿ ಹೇಳುವುದಾದರೆ ಮೇಲೆ ಹೇಳಿದ್ದೆಲ್ಲ ಒಂದು ರೀತಿ ಕ್ರೂರ ಜಂತುಗಳ ಸ್ವಭಾವವೇ ಆಗಿದ್ದಿರಬಹುದು, ಆದರೆ ಇದನ್ನು ಹೆಚ್ಚಾಗಿ ಸ್ವಾರ್ಥ ರೀತಿಯಲ್ಲಿ ಬೆಳೆಸಿಕೊಂಡು ಬೆಳೆದು ಬಂದವನೇ ಮಾನವ.

ಮೊದಲಲ್ಲಿ ಉಳುವಿಗಾಗಿ ಹೋರಾಡಿದ ಮಾನವ ಅನಂತರ ಸ್ಥಾಪನೆಯಾಗಲು ಹೋರಾಡಿದ. ಒಮ್ಮೆ ಸ್ಥಾಪನೆಯೂ ಆದ ಮೇಲೆ ಬೆಳೆಸಲೂ ಶುರು ಮಾಡಿದ. ಈ ಬೆಳೆಸುವಿಕೆಯು ತನ್ನ ಹೆಂಡತಿ ಮಕ್ಕಳಿಗೆ ಅಂತ ಶುರು ಮಾಡಿದ ಮೇಲೆ ಇಂದು ಅದಾವ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ಏಳೇಳು ತಲೆಮಾರಿನವರು ಕೂತುಂಡರೂ ಕರಗದಷ್ಟು ಆಸ್ತಿಪಾಸ್ತಿ ಮಾಡಿಕೊಳ್ಳುವ ಹಂತಕ್ಕೆ ಬೆಳೆಯುವಷ್ಟು.

ಮೇಲೆ ಹೇಳಿದ ಈ ಮಾತುಗಳನ್ನು ಹೇಳಿದ ಕಾರಣವೇನು? ಪ್ರಮುಖವಾಗಿ ಈ ಅತಿಯಾಸೆಯು ಭುವಿಯ ನಾಶಕ್ಕೆ, ಭುವಿಯು ಟೊಳ್ಳಾಗಿರುವುದಕ್ಕೆ ಕಾರಣವಾಗಿದೆ. ಪರಿಸರ ನಾಶಕ್ಕೆ ಮೂಲ ಕಾರಣವೇ ಮನುಜನ ದುರಾಸೆ. ಮುಂದಿನ ದಿನಗಳಲ್ಲೂ ಈ ದುರಾಸೆ ಹೆಚ್ಚಲಿದೆಯೇ ವಿನಃ ಇಂದಿಗೂ ಕಡಿಮೆಯಾಗದು. ಇಂಥಾ ಕಬಂಧ ಬಾಹುಗಳಿಂದ ಭುವಿಯನ್ನು ರಕ್ಷಿಸುವ, ಪರಿಸರ ನಾಶವನ್ನು ತಡೆಯುವ ಮತ್ತು ಪರಿಸರ ಉತ್ತಮಗೊಳಿಸುವ ಅಭಿಯಾನಗಳು ಹುಟ್ಟಿಕೊಂಡ ಮೇಲೆ ಜಾಗೃತಿ ಹೆಚ್ಚಿದೆ.

2024ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯು “ಭೂಸುಧಾರಣೆ ಹಾಗೂ ಮರುಭೂಮೀಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಹೀಗೆಂದರೆ ಏನು? ಭೂಸುಧಾರಣೆ ಎಂದರೆ Land Restoration. ಕೆಲವು ಭಾಗದ ನೆಲಕ್ಕೆ ಸತ್ವ ಇರೋದಿಲ್ಲ, ಬೀಜ ಬಿತ್ತಿದರೆ ಒಣಗುತ್ತದೆಯೇ ವಿನಃ ಮೊಳಕೆಯೇ ಅಸಂಭವ ಎಂಬುದನ್ನು ಹತ್ತಿಕ್ಕುವ ಯತ್ನವೇ ಆ ಭುವಿಯನ್ನು ಸಬಲ ಮಾಡುವುದು. ಒಂದು ನೆಲದಲ್ಲಿ ವರ್ಷವಿಡೀ ಒಂದೇ ಬೆಳೆಯನ್ನು ತೆಗೆಯುವ ಬದಲಿಗೆ ಕಾಲಮಾನಕ್ಕೆ ತಕ್ಕಂತೆ ನಾಲ್ಕಾರು ವಿವಿಧ ಬೆಳೆಯನ್ನು ತೆಗೆದಾಗ ಮಾತ್ರ ನೆಲದ ಸತ್ವ ಉಳಿಯೋದು. ಮರುಭೂಮೀಕರಣ ಎಂದರೆ ನಾಶವಾಗುತ್ತಿರುವ ಹಸುರನ್ನು ಮರುಸ್ಥಾಪನೆ ಮಾಡಬೇಕು.

ಗಿಡಗಳನ್ನು ನೆಡಬೇಕು, ಹಸುರನ್ನು ವೃದ್ಧಿಸಬೇಕು. ಕಾಡಿನ ನಾಶವನ್ನು ತಡೆಯಬೇಕು. ಕಾಡಿನ ನಾಶದ ಬಗೆಗಿನ ಕಾನೂನಿನ ಗಟ್ಟಿಯಾಗಬೇಕು. ಒಂದು ಮರವನ್ನು ಉರುಳಿಸಿದರೆ ಎರಡು ಗಿಡಗಳನ್ನು ನೆಡಬೇಕು ಎಂಬ ನೀತಿ-ನಿಯಮಗಳನ್ನು ಹಲವಾರು ದೇಶಗಳಲ್ಲಿ ಹೇರಲಾಗುತ್ತಿದೆ. ಮರಗಳೇ ಇಲ್ಲದ ಮೇಲೆ ಮಳೆಯಾದರೂ ಹೇಗಾದೀತು? ಇದುವೇ ಮರುಭೂಮೀಕರಣ.
ಭೂಸುಧಾರಣೆಯಿಂದಲೇ ಮರುಭೂಮೀಕರಣ. ಈ ಮರುಭೂಮೀಕರಣದಿಂದಲೇ ಬರ ಸ್ಥಿತಿ ಸ್ಥಾಪಕತ್ವ. ನೆಲಗಳು ಬಿರುಕು ಮೂಡಿಸಿಕೊಳ್ಳುವುದೇ ಬರ ಎಂಬುದು ನಾವು ಬುದ್ಧಿ ಬಂದಾಗಿನಿಂದ ಕಂಡ ದೃಶ್ಯ.

ತೇವಾಂಶ ನಶಿಸಿದ ಚರ್ಮವು ಬಿರುಕು ಮೂಡಿಸಿಕೊಂಡಾಗ ಹೇಗೆ ಅದಕ್ಕೆ moisturizer ಬಳಸಿ ಚರ್ಮವನ್ನು ಮರುಸ್ಥಾಪನೆ ಮಾಡುತ್ತೇವೆಯೋ ಹಾಗೆಯೇ ನೆಲಕ್ಕೂ ಅರ್ಥಾತ್‌ ಭುವಿಯಲ್ಲೂ moisture ಮೂಡಿಸಬೇಕು ಎಂದರೆ ನೀರುಣಿಸಬೇಕು. ನೀರು ಬೀಳಲು ಮಳೆ ಬರಬೇಕು. ಸುಮ್ಮನೆ ಮಳೆಯಾದೀತೇ? ಮರಗಳು ಬೇಕೇ ಬೇಕು. ಬಿತ್ತ ಬೀಜವೇ ಮೊಳಕೆಯಾಗದು ಎಂದರೆ ಮರವಾಗೋದು ಹೇಗೆ? ಅದೇ ಭೂಸುಧಾರಣೆ. ಒಂದರ್ಥದಲ್ಲಿ ಹೇಳುವುದಾದರೆ ಪರಿಸರದ ಬಗ್ಗೆ ಹೇಳುವಾಗ ಭುವಿಯ ಮಾತಿಲ್ಲದೇ ಹೇಳಲಾಗುವುದಿಲ್ಲ. ಭುವಿ ಎಂದರೆ ಪರಿಸರ, ಪರಿಸರವೆಂದರೆ ಭುವಿ. ಆದರೆ ಈ ಮಾತು ಪ್ರಕೃತಿಗೆ ಸಲ್ಲುತ್ತದೆ ಮಾತುಗಳೆಲ್ಲ ಪ್ರಕೃತಿಗೆ ಮಾತ್ರ ಸಲ್ಲುತ್ತದೆಯೇ? ಪುರುಷನ ಬಗ್ಗೆ ಮಾತೇ ಇಲ್ಲವೇ? ಹೌದು ಪರಿಸರದ ಅವಿಭಾಜ್ಯ ಅಂಗಗಳು ಎಂದರೆ ಪ್ರಕೃತಿ ಮತ್ತು ಪುರುಷ. ಪರಿಸರ ಎಂಬುದು ಹಸುರು ಮಾತ್ರವಲ್ಲ ಬದಲಿಗೆ ಉಸಿರಿಗೂ ಸಲ್ಲುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ ಒಂದು ಮಾತಂತೂ ಹೇಳಲೇಬೇಕು. ವಿಶ್ವ ಭೂಮಿಯ ದಿನ ಎಂದರೆ ಎಲ್ಲರಿಗೂ ಗೊತ್ತು ಆದರೆ ವಿಶ್ವ ಪರಿಸರ ದಿನ ಎಂಬುದು ಹೆಚ್ಚು ಚಾಲ್ತಿಯಲ್ಲಿಲ್ಲ. ಹಾಗಾಗಿ ಇದಕ್ಕೊಂದು ಕೊಂಚ ಭಿನ್ನ ಟಚ್‌ ಕೊಡೋಣ.
ಪರಿಸರ ಎಂದರೆ Environment ಆದರೆ ಪರಿಸರ ಎಂದರೆ ವಾತಾವರಣ ಎಂಬುದೂ ಹೌದು. ಎಲ್ಲೆಲ್ಲೂ ಕಟ್ಟಡಗಳೇ ಇರುವ ಪರಿಸರದಲ್ಲಿ ಬೆಳೆವ ಮನಕ್ಕೂ, ಹಸುರಿನ ಸಿರಿಯ ಮಧ್ಯೆ ಬೆಳೆದ ಮನಕ್ಕೂ ಬಹಳ ವ್ಯತ್ಯಾಸವಿದೆ. ಸ್ವಚ್ಛಂ ದ ವಾತಾವರಣದಲ್ಲಿ ಬೆಳೆದವರಿಗೂ, ನಾಲ್ಕು ಗೋಡೆಗಳ ಮಧ್ಯೆ ಬೆಳೆದವರಿಗೂ ಮನಸ್ಥಿತಿಯಲ್ಲಿ ಬಹಳ ವ್ಯತ್ಯಾಸವಿದೆ. ಸ್ವಾರ್ಥ ಗುಣಗಳು, ಉದಾರ ಗುಣಗಳು, ತಾನು-ತನ್ನದು ಎನ್ನುವ ಗುಣಕ್ಕೂ, ತನ್ನಂತೆ ಇತರರು ಎನ್ನುವ ಗುಣವನ್ನು ಬೆಳೆಸುವ ವಿಚಾರದಲ್ಲಿ Environment ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬೆಳೆವ ವಾತಾವರಣ ಕೂಡ. ಬಹುಶ: ಈಗ ಅರ್ಥವಾಗಿರಬಹುದು ಭುವಿಯ ದಿನಕ್ಕೂ, ಪರಿಸರ ದಿನಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸ. ಬನ್ನಿ ಈ ಜೂನ್‌ 5ರಿಂದ ಮುಂದಿನ ಪೀಳಿಗೆಗೆ ಒಂದು ಉತ್ತಮ ವಾತಾವರಣ ಸೃಷ್ಟಿಸುವತ್ತ ಕೆಲಸಗಳನ್ನು ಮಾಡೋಣ.

*ಶ್ರೀನಾಥ್‌ ಭಲ್ಲೇ

 

Advertisement

Udayavani is now on Telegram. Click here to join our channel and stay updated with the latest news.

Next