Advertisement

ವಿಶ್ವಕಪ್‌ ಕ್ರಿಕೆಟ್‌ ನಾಯಕಿಯರ “ಮೀಡಿಯಾ ಡೇ’

11:12 AM Feb 19, 2020 | sudhir |

ಸಿಡ್ನಿ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ಷಣಗಣನೆ ಆರಂಭವಾಗಿದೆ. ಶುಕ್ರ ವಾರದಿಂದ ಆಸ್ಟ್ರೇಲಿಯದಲ್ಲಿ ಈ ಮುಖಾಮುಖೀ ಆರಂಭ ವಾಗಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಿಡ್ನಿಯ ವಿಶ್ವವಿಖ್ಯಾತ “ಟರೋಂಗ ಝೂ’ನಲ್ಲಿ ಎಲ್ಲ ನಾಯಕಿಯರು “ಮೀಡಿಯಾ ಡೇ’ ಆಚರಿಸಿ ಮಾಧ್ಯಮದವರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಇದಕ್ಕೆ ಮೃಗಾಲ ಯದ ಪ್ರಾಣಿ ಪಕ್ಷಿಗಳೂ ಸಾಕ್ಷಿಯಾದವು!

Advertisement

ಫೆ. 21ರಿಂದ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಮುಖಾಮುಖೀಯ ಫೈನಲ್‌ “ಅಂತಾರಾಷ್ಟ್ರೀಯ ವನಿತಾ ದಿನ’ವಾದ ಮಾ. 8ರಂದು ನಡೆಯುವುದು ವಿಶೇಷ. ಮೆಲ್ಬರ್ನ್ನಲ್ಲಿ ನಡೆಯುವ ಫೈನಲ್‌ನಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರು ನೆರೆಯುವ ಸಂಭವವಿದೆ.

ಮಾಧ್ಯಮದವರೊಂದಿಗಿನ ಮುಖಾಮುಖೀ ವೇಳೆ ಎಲ್ಲ ನಾಯಕಿಯರು ತಮ್ಮ ಅಭಿಪ್ರಾಯವನ್ನು ಹಂಚಿ ಕೊಂಡರು. ಈ ಸಂದರ್ಭದಲ್ಲಿ ಮಾತಾಡಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌, “ನಮ್ಮ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಆಡುವುದು ಹೆಮ್ಮೆಯ ಸಂಗತಿ. ಇದು ಜೀವಮಾನದಲ್ಲಿ ಒಮ್ಮೆ ಸಿಗುವ ಅವಕಾಶ. ಸಹಜವಾಗಿಯೇ ಒತ್ತಡ, ನಿರೀಕ್ಷೆ ಎರಡೂ ಇದೆ. ನಮ್ಮಂತೆ ಎಲ್ಲ ತಂಡಗಳೂ ಗೆಲುವಿಗೆ ಹೋರಾಡುತ್ತವೆ. ಸಹಜವಾಗಿಯೇ ಪೈಪೋಟಿ ಇರಲಿದೆ…’ ಎಂದರು.

ಫೆ. 21ರ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯ-ಭಾರತ ಮುಖಾಮುಖೀಯಾಗಲಿವೆ.

ಗೆದ್ದರೆ ಮಹಾನ್‌ ಸಾಧನೆ
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಭರವಸೆಯ ಮಾತಾಡಿದರು. “ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ. ನಮ್ಮ ತಂಡ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. 2018ರ ನಮ್ಮ ಸಾಧನೆ, ಇದಕ್ಕೆ ಲಭಿಸಿದ ಪ್ರತಿಕ್ರಿಯೆಯನ್ನೆಲ್ಲ ಕಂಡು ಆಶ್ಚರ್ಯವಾಗಿದೆ. ಕಪ್‌ ಎತ್ತಿದರೆ ಅದೊಂದು ಮಹಾನ್‌ ಸಾಧನೆಯಾಗಲಿದೆ’ ಎಂದು ಕೌರ್‌ ಹೇಳಿದರು.

Advertisement

ಈವರೆಗಿನ 6 ಟಿ20 ವಿಶ್ವಕಪ್‌ ಕೂಟಗಳಲ್ಲಿ ಭಾರತ ಒಮ್ಮೆಯೂ ಫೈನಲ್‌ ಪ್ರವೇಶಿಸಿಲ್ಲ. 3 ಸಲ ಸೆಮಿಫೈನಲ್‌ ಪ್ರವೇಶಿಸಿ ಸೋಲನುಭವಿಸಿದೆ. 2016ರ ತವರಿನ ಪಂದ್ಯಾವಳಿಯಲ್ಲೂ ಭಾರತಕ್ಕೆ ಅದೃಷ್ಟ ಕೈ ಹಿಡಿದಿರಲಿಲ್ಲ.

7ನೇ ವಿಶ್ವಕಪ್‌ ಪಂದ್ಯಾವಳಿ
ಇದು ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ 7ನೇ ಆವೃತ್ತಿ. ಆಸ್ಟ್ರೇಲಿಯ ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿದೆ. ಇಂಗ್ಲೆಂಡ್‌ ಮತ್ತು ವಿಂಡೀಸ್‌ ಒಮ್ಮೆ ಪ್ರಶಸ್ತಿ ಎತ್ತಿವೆ.

ಹಾಗೆಯೇ ಫೈನಲ್‌ನಲ್ಲಿ ಇಂಗ್ಲೆಂಡ್‌ 3 ಸಲ, ನ್ಯೂಜಿಲ್ಯಾಂಡ್‌ 2 ಸಲ ಸೋಲನುಭವಿಸಿವೆ. ಆಸ್ಟ್ರೇಲಿಯ ಒಮ್ಮೆ ರನ್ನರ್ ಅಪ್‌ ಆಗಿದೆ.

ಹಿರಿಯರ ಅನುಪಸ್ಥಿತಿ ಕಾಡಲಿದೆ
“ಅನುಭವಿಗಳಾದ ಮಿಥಾಲಿ ರಾಜ್‌ ಮತ್ತು ಜೂಲನ್‌ ಗೋಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಆಡುತ್ತಿರುವ ಕಾರಣ ನಮಗೆ ಕೊಂಚ ಹಿನ್ನಡೆಯಾಗಲಿದೆ’ ಎಂಬುದು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಭಿಪ್ರಾಯ.

“ಯುವ ಆಟಗಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ನಮ್ಮ ತಂಡ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿದೆ. ಆದರೆ ಎಲ್ಲೋ ಒಂದು ಕಡೆ ಹಿರಿಯ ಆಟಗಾರರ ಮಾರ್ಗದರ್ಶನ, ಸಲಹೆ ಲಭಿಸದ ಕಾರಣ ಬೇಸರವೂ ಆಗುತ್ತಿದೆ’ ಎಂದು ಕೌರ್‌ ಅಭಿಪ್ರಾಯಪಟ್ಟರು. ಮಿಥಾಲಿ ರಾಜ್‌ ಕಳೆದ ವರ್ಷ ಟಿ20 ಕ್ರಿಕೆಟಿಗೆ ವಿದಾಯ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next