Advertisement

ಪುಸ್ತಕಗಳೂ ಓದುವ ಅಭಿರುಚಿಯೂ..

12:09 AM Apr 23, 2021 | Team Udayavani |

ಪುಸ್ತಕಗಳನ್ನು ಓದುವ ಗೀಳನ್ನು ಹಚ್ಚಿಕೊಂಡವರಿಗೆ ಯಾವತ್ತೂ ಪುಸ್ತಕಗಳು ಜೀವಸಖರಂತೆ ಎಂಬ ಮಾತು ನಿಜಕ್ಕೂ ಸತ್ಯ. ಪುಸ್ತಕ ಜ್ಞಾನದ ಕಿಟಕಿ. ಬಂಧುಗಳು, ಸ್ನೇಹಿತರು, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಜೀವನದಲ್ಲಿ ಬರಬಹುದು, ಹೋಗಬಹುದು ಆದರೆ ಪುಸ್ತಕಗಳಿವೆಯಲ್ಲ ಯಾವತ್ತಿಗೂ ಜತೆಗಿರುವ ಸ್ನೇಹಿತರು. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನ ಪರಂಪರೆಯನ್ನು ಮುಂದುವರಿಸಿ ಕೊಂಡು ಬರುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಪ್ರಸ್ತುತ ಇಡೀ ಪ್ರಪಂಚವೇ ಕೋವಿಡ್‌-19 ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ.

Advertisement

ಸಂಸ್ಕೃತಿಯ ಪ್ರಸರಣೆಯಲ್ಲಿ ಮುಖ್ಯ ಪಾತ್ರ ಪುಸ್ತಕಗಳದ್ದು. ಕಾಲದಿಂದ ಕಾಲಕ್ಕೆ ಸಮಾಜ, ತಂತ್ರಜ್ಞಾನ ಬೆಳೆದಂತೆಲ್ಲ ಅದರ ಬಾಹ್ಯ ಸ್ವರೂಪ ಬದಲಾಗಿದ್ದರೂ ಅಂತರಂಗದ ಉದ್ದೇಶ ಒಂದೇ ಆಗಿದೆ. ಶಿಕ್ಷಣ ನಮ್ಮನ್ನು ಅಕ್ಷರಸ್ಥರನ್ನಾಗಿ ಮಾಡಬಹುದು. ಆದರೆ ಪುಸ್ತಕಗಳು ಮಾತ್ರ ಸಂಸ್ಕೃತಿಯ ವಕ್ತಾರರನ್ನಾಗಿ, ವಾರಸುದಾರರನ್ನಾಗಿ ಮಾಡುತ್ತವೆ. ಅದು ಶಾಸನಗಳಿಂದ, ತಾಳೆ ಓಲೆಗಳಿಂದ, ಈಗ ನಾವು ಓದುತ್ತಿರುವ ಪುಸ್ತಕಗಳು ಮತ್ತು ಇ-ಪುಸ್ತಕಗಳಿರಬಹುದು. ದಿನಪತ್ರಿಕೆಯಿಂದ ಆರಂಭವಾಗುವ ಓದು ಮುಂದೆ ಪ್ರಪಂಚದ ಅತ್ಯುತ್ತಮ ಕೃತಿಗಳನ್ನು ಓದುವ, ಗ್ರಹಿಸುವ, ವಿಶ್ಲೇಷಿಸುವ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು. ಮನುಷ್ಯ ಜೀವಿತದ ಬಹುಪಾಲು ಅವಧಿಯ ಅಂದರೆ 5 ವರ್ಷಕ್ಕೆ ಆರಂಭವಾಗುವ ಓದಿನ/ಕಲಿಕೆಯ ಪ್ರಕ್ರಿಯೆ ಸರಾಸರಿ 65-70 ವರ್ಷಗಳ ವರೆಗೂ ಸಾಗುತ್ತದೆ (ಕೆಲವರು ತಮ್ಮ ಜೀವನಪರ್ಯಂತ ಈ ಆಭ್ಯಾಸವನ್ನು ಮುಂದುವರಿಸುತ್ತಾರೆ). ಹೀಗಾಗಿ ಓದುವಿಕೆ ಎನ್ನುವುದು ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಭಾಗವಾಗಿದೆ.

ಓದಲು ಬಾರದ ನಿರಕ್ಷರರಿಗೂ, ಓದುವ ಹವ್ಯಾಸವೇ ಇರದ ಸಾಕ್ಷರರಿಗೂ ವಿಶೇಷ ವ್ಯತ್ಯಾಸವಿಲ್ಲ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ. ಓದದೇ ನಾವು ಬೆಳೆಯಲಾರೆವು. ಯಾವ ವೃತ್ತಿಯಲ್ಲಿದ್ದರೂ ಸರಿ, ದಿನ ದಿನವೂ ಬೆಳೆಯುತ್ತಿರಬೇಕು. ನಿನ್ನೆಗಿಂತ ಇಂದಿನ ನಮ್ಮ ಮೌಲ್ಯ ಹೆಚ್ಚಾಗುತ್ತಿರಬೇಕು. ಪ್ರತೀ ದಿನವೂ ನಾವು ಹೊಸ ವಿಷಯಗಳನ್ನು ತಿಳಿದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜ್ಞಾನ ಶ್ರೀಮಂತಿಕೆಯಲ್ಲಿ, ಔದಾರ್ಯದಲ್ಲಿ, ಮಾನವತೆಯಲ್ಲಿ ನಾವು ಏರುತ್ತಲೇ ಇರಬೇಕು. ಜಗತ್ತಿನ ಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇಂದಿನ ವಿಜ್ಞಾನ-ತಾಂತ್ರಿಕತೆಯಿಂದಾಗಿ, ಪ್ರತೀ ಐದು ವರ್ಷಗಳಿಗೆ ಜಗತ್ತಿನ ಜ್ಞಾನ ದ್ವಿಗುಣಗೊಳ್ಳುತ್ತಿದೆಯಂತೆ. ತಾಂತ್ರಿಕತೆಯಂತೂ ಪ್ರತೀ ಒಂದೂವರೆ ವರ್ಷಕ್ಕೆ ಹಳೆಯದಾಗುತ್ತಿದೆಯಂತೆ. ನಾವು ಓದಿ ತಿಳಿದುಕೊಳ್ಳದೇ ಹೋದರೆ, ಮುಂದೊಂದು ದಿನ ನಾವು ನಗಣ್ಯರೆನಿಸಿಬಿಡುತ್ತೇವೆ.

ಇಂದಿನ ದಿನಗಳಲ್ಲಿ ಆಧುನಿಕ ಬದುಕಿನ ಒತ್ತಡ, ವೇಗದ ಮತ್ತು ನಿರ್ದಿಷ್ಟ ಗುರಿಯ ಜೀವನ ಕ್ರಮಗಳಿಂದಾಗಿ ಹಾಗೂ ನಮ್ಮ ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಹಾಗೂ ಇತರ ಆಕರ್ಷಣೆಗಳಿಂದಾಗಿ ಪುಸ್ತಕೋದ್ಯಮ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಪ್ರಜ್ಞಾವಂತರಾದ ಎಲ್ಲರೂ ಮಕ್ಕಳಿರುವಾಗಲೇ ಓದುವ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ಮಾಡಬೇಕಿದೆ. ವಿಶೇಷವಾಗಿ ಪುಸ್ತಕ ಮುದ್ರಣ ನಿರ್ವಹಣೆ, ಪ್ರಸರಣದ ಹಲವು ಹಂತಗಳಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಸಾಧ್ಯವಾಗಿಲ್ಲ. ಆಧುನಿಕ ಉಪಕರಣಗಳಾದ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು, ಮೊಬೈಲ್‌ಗ‌ಳ ಮೂಲಕವೂ ಪುಸ್ತಕ ಪ್ರೀತಿಯನ್ನು ವಿಸ್ತರಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ.

ಕೆಲವು ವರ್ಷಗಳಿಂದ ವಿಶ್ವ ಪುಸ್ತಕ ದಿನವನ್ನು ಹಲವು ಬಗೆಗಳಲ್ಲಿ ಆಚರಿಸಲಾಗುತ್ತಿದ್ದು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪ್ರಕಾಶಕರ ಸಂಘ ಮುಂತಾದ ಸಂಸ್ಥೆಗಳು ನಿರಂತರವಾಗಿ ವಿಚಾರ ಸಂಕಿರಣ, ಹಿರಿಯ ಪ್ರಕಾಶಕರಿಗೆ ಗೌರವಾರ್ಪಣೆ, ಪುಸ್ತಕೋ ದ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯಶಿಬಿರಗಳು (ಕರಡು ತಿದ್ದುವಿಕೆ, ಕೃತಿ ಸ್ವಾಮ್ಯ ಇತ್ಯಾದಿ) ಉಚಿತ ಪುಸ್ತಕ ಹಂಚುವಿಕೆ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳ ಆಯೋಜನೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಪುಸ್ತಕಗಳ ಕಡೆಗೆ ಜನಸಮುದಾಯದ ಗಮನ ಸೆಳೆಯುವ ಪ್ರಯ ತ್ನವನ್ನು ಮಾಡುತ್ತಾ ಬಂದಿವೆ. ಓದುಗರನ್ನು ಆಕರ್ಷಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಓದುವ ಹವ್ಯಾಸವನ್ನು ಬಲಗೊಳಿಸಬೇಕಿದೆ.

Advertisement

ಇಂದು ವಿಶ್ವ ಪುಸ್ತಕ ದಿನ :

ಯುನೆಸ್ಕೊ 1995ರಲ್ಲಿ ಎಪ್ರಿಲ್‌ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಗ್ರಂಥಸ್ವಾಮ್ಯವನ್ನು ಬಲಪಡಿಸುವುದು ಈ ದಿನಾಚರಣೆಯ‌ ಮುಖ್ಯ ಉದ್ದೇಶವಾಗಿದೆ.

 

-ಸಂದೀಪ್‌ ಶರ್ಮಾ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next