Advertisement

ಯಕ್ಷಗಾನಾಸಕ್ತ ಮಕ್ಕಳಲ್ಲಿ ಸ್ಫೂರ್ತಿ ತುಂಬಿದ ಮುಖವರ್ಣಿಕೆ ಶಿಬಿರ

06:50 PM Aug 08, 2019 | mahesh |

ಯಕ್ಷಗಾನದ ಪಾತ್ರವೊಂದು ನೋಡುಗರನ್ನು ಆಕರ್ಷಿಸುವುದೇ ಅದರ ಹೊರ ನೋಟದಿಂದ. ಅಂಗಸೌಷ್ಠವ, ಮುಖದ ಬರವಣಿಗೆ, ಪೋಷಾಕಿನ ಅಚ್ಚುಕಟ್ಟುತನದಿಂದ. ಇದಕ್ಕೆ ಪ್ರತಿಭೆ, ನಿರಂತರ ಪರಿಶ್ರಮ, ಹಿರಿಯರ ಮಾರ್ಗದರ್ಶನ ಬೇಕು, ಗಮನಿಸುವ – ಸ್ಮರಣೆಯಲ್ಲಿರಿಸಿಕೊಳ್ಳುವ ಸಾಮರ್ಥ್ಯ ಬೇಕು.

Advertisement

ಹಿಂದೆ ಮೇಳಕ್ಕೆ ಬಂದೇ ಇದನ್ನೆಲ್ಲ ಕಲಿಯುತ್ತಿದ್ದರು. ಈಗ ಕಲಿತೇ ಮೇಳಕ್ಕೆ ಬರುತ್ತಿದ್ದಾರೆ. ಇಂಥ ಕಲಿಕೆಗೆ ಪೂರಕವಾದ ತರಬೇತಿ ಶಿಬಿರವೊಂದು ಕಲಾವಿದ ಲಕ್ಷ್ಮಣ ಕುಮಾರ್‌ ಮರಕಡ ಅವರ ಸಾರಥ್ಯದಲ್ಲಿ ಮಂಗಳೂರಿನ ಕರಂಬಾರುವಿನಲ್ಲಿ ಜು. 14ರಂದು ನಡೆಯಿತು.

ಈ ಶಿಬಿರದಲ್ಲಿ ಮರಕಡ, ಕರಂಬಾರು, ಕುತ್ತೆತ್ತೂರು ಪರಿಸರದ ಅವರ 95 ಶಿಷ್ಯರು ಪಾಲ್ಗೊಂಡಿದ್ದರು. ಈ ಶಿಬಿರವನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿತ್ತು.

ಮೊದಲ ಹಂತದಲ್ಲಿ ಯಕ್ಷಗಾನ ಮುಖವರ್ಣಿಕೆ ಕುರಿತು ಉಪನ್ಯಾಸ ನಡೆಯಿತು. ಪ್ರೇಕ್ಷಕನ ನಿರೀಕ್ಷೆಯಲ್ಲಿ ಮುಖವರ್ಣಿಕೆ ಕುರಿತು ಹವ್ಯಾಸಿ ಭಾಗವತ ಸುಧಾಕರ್‌ ಸಾಲ್ಯಾನ್‌ ಮಾತನಾಡಿದರು. ಮುಖವರ್ಣಿಕೆಯ ವೈವಿಧ್ಯಗಳು ಕುರಿತು ಕಲಾವಿದ ಶಂಭಯ್ಯ ಭಟ್‌ ಮಾತನಾಡಿ, ಬಣ್ಣಗಾರಿಕೆಯ ಮೂಲ ಅಂಶವಾಗಿರುವ ಜೀವ ರೇಖೆ, ಆಧಾರ ರೇಖೆ, ಅಲಂಕಾರ ರೇಖೆಗಳ ಮಹತ್ವವನ್ನು ವಿವರಿಸಿದರು. ಮುಖವರ್ಣಿಕೆ ಮತ್ತು ಪಾತ್ರ ಪ್ರಸ್ತುತಿ ಕುರಿತು ಕಲಾವಿದ ಮಧೂರು ರಾಧಾಕೃಷ್ಣ ನಾವಡರು ಮನ ಮನಟ್ಟುವಂತೆ ಮಾತನಾಡಿದರು. ತನ್ನ ಮುಖಕ್ಕೆ ತಾನೇ ಬಣ್ಣ ಬರೆದುಕೊಂಡರೆ ಮಾತ್ರ ಅದು ಪಾತ್ರವಾಗುತ್ತದೆ, ಪರಿಣಾಮಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅನಂತರ ಪ್ರಾಯೋಗಿಕವಾದ ಬಣ್ಣಗಾರಿಕೆ ಶಿಬಿರ ಅಚ್ಚುಕಟ್ಟಾಗಿ ನಡೆಯಿತು. ವ್ಯವಸಾಯಿ ಮೇಳದ ಚೌಕಿಯ ವ್ಯವಸ್ಥೆಯನ್ನೆ ಇಲ್ಲಿ ಮಾಡಲಾಗಿತ್ತು. ದೊಡ್ಡ ಸಭಾಂಗಣದ ಉದ್ದಕ್ಕೂ ಬೆಳಕಿನ ವ್ಯವಸ್ಥೆ, ಅದರ ಇಕ್ಕೆಲಗಳಲ್ಲಿ ಶಿಬಿರಾರ್ಥಿಗಳು ಕುಳಿತುಕೊಂಡ ದೃಶ್ಯ ಆಕರ್ಷಣೀಯವಾಗಿತ್ತು. ಚಿಟ್ಟೆಪಟ್ಟಿ ಕಟ್ಟುವ ವಿಧಾನ, ಬಣ್ಣ ಕಲಸುವ ರೀತಿ, ಅದಕ್ಕೆ ಬಿಳಿ – ಹಳದಿ – ಕೆಂಪುಗಳ ಪ್ರಮಾಣ, ಮುಖಕ್ಕೆ ಬಳಿದುಕೊಳ್ಳುವುದು, ಪೌಡರ್‌ ಹಾಕಿಕೊಳ್ಳುವುದು, ಎಣ್ಣೆಮಸಿಯನ್ನು ಬಳಸಿ ಕಣ್ಣು – ಹುಬ್ಬು ಬರೆಯುವುದು, ಹಣೆಗೆ ತಿಲಕ, ಬಿಳಿ ಬಣ್ಣ ಬರೆಯುವುದು, ಮುದ್ರೆ ಹಾಕಿಕೊಳ್ಳುವುದು ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು. ಈ ಪ್ರಕ್ರಿಯೆಯ ಉದ್ದಕ್ಕೂ ಶಂಭಯ್ಯ ಭಟ್ಟರು ಮಾರ್ಗದರ್ಶನ, ವಿವರಣೆ ನೀಡುತ್ತಿದ್ದರು.

Advertisement

ಬೇರೆ ಬೇರೆ ಪಾತ್ರಗಳ ಮುಖವರ್ಣಿಕೆಯನ್ನು ಸಂಪನ್ಮೂಲ ವ್ಯಕ್ತಿಗಳು ಬಿಡಿಸಿದರು. ತೆಂಕುತಿಟ್ಟಿನಲ್ಲಿ ಪ್ರಚಲಿತದಲ್ಲಿರುವ ಎಲ್ಲ ವೇಷಗಳನ್ನೂ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವೂ ಒದಗಿತು.

ಭೋಜನ ವಿರಾಮದ ಬಳಿಕ ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಆನಂತರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ತಾವು ಕಲಿತ ಯಕ್ಷಗಾನದ ಪ್ರಸ್ತುತಿಗಳು – ಕೃಷ್ಣನ ಒಡ್ಡೋಲಗ, ಅಷ್ಟ ದಿಕಾ³ಲಕರ ಒಡ್ಡೋಲಗ ಮುಂತಾದವುಗಳನ್ನು ವೃತ್ತಿಪರ ಹಿಮ್ಮೇಳದ ಬೆಂಬಲದೊಂದಿಗೆ ಪ್ರದರ್ಶಿಸಿದರು. ಇದರೊಂದಿಗೆ ತಾವು ಈ ವರೆಗೆ ಮಾಡದ ಪಾತ್ರವನ್ನು ನಿರ್ವಹಿಸುವ ಸವಾಲವನ್ನೂ ವಿದ್ಯಾರ್ಥಿಗಳು ಸ್ವೀಕರಿಸಿ, ರಂಗಕ್ಕೆ ತಂದರು. ಯಾವ ಅಭಿನಯಕ್ಕೂ ಹಿಮ್ಮೇಳದೊಂದಿಗೆ ಪೂರ್ವಾಭ್ಯಾಸ ಇರಲಿಲ್ಲ. ನೇರವಾಗಿಯೇ ರಂಗದಲ್ಲಿ ಮಾಡಿದ್ದರೂ ವಿದ್ಯಾರ್ಥಿಗಳ ಪ್ರತಿಭಾ ಸಂಪನ್ನತೆಗೆ ಇದು ಸಾಕ್ಷಿಯಾಯಿತು. ಪದ್ಯಾಭಿನಯ, ನಾಟ್ಯ, ಪದ್ಯದ ಅರ್ಥ ಎಲ್ಲದರಲ್ಲೂ ಅಚ್ಚುಕಟ್ಟುತನ ಮೆರೆದರು.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮ ಯಕ್ಷಗಾನಕ್ಕೆ ಉಜ್ವಲ ಭವಿಷ್ಯ ಇರುವುದನ್ನು ಸಾರಿ ಹೇಳಿತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಶ್ರುತಕೀರ್ತಿರಾಜ, ಮಾಧವ ಪಾಟಾಳಿ, ಜನಾರ್ದನ ಬದಿಯಡ್ಕ, ಕೃಷ್ಣ ಭಟ್‌ ದೇವಕಾನ, ಗಣೇಶ ಪಾಲೆಚ್ಚಾರು, ಅಂಡಾಲ ದೇವಿಪ್ರಸಾದ ಶೆಟ್ಟಿ, ದಯಾನಂದ ಕೋಡಿಕಲ್‌ ಭಾಗವಹಿಸಿದ್ದರು.

ಡಾ| ಶ್ರುತಕೀರ್ತಿರಾಜ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next