ತುಮಕೂರು: ಹಲವು ವರ್ಷಗಳಿಂದ ಕಿರ್ಲೋಸ್ಕರ್ ಕಂಪನಿಯ ಬೆಳವಣಿಗೆಗೆ ಹಗಲಿರುಳು ದುಡಿದು ಕಂಪನಿಯ ಬೆಳವಣಿಗೆಗೆ ಕಾರಣಕರ್ತರಾದ ಕಾರ್ಮಿಕರ ಹಿತ ಕಾಯಬೇಕಾದ ಕಂಪನಿಯು ಹೊರಗುತ್ತಿಗೆಯ ಹೆಸರಿನಲ್ಲಿ ಕಾರ್ಮಿಕರನ್ನು ಕಡೆಗಣಿಸಿದೆ ಎಂದು ಕಿರ್ಲೋಸ್ಕರ್ ಎಂಪ್ಲಾಯಿಸ್ ಅಸೋಸಿಯೇಷನ್ ಘಟಕ 7ರ ಅಧ್ಯಕ್ಷ ಗಿರೀಶ್ ಪ್ರಧಾನ ಕಾರ್ಯದರ್ಶಿ ಕುಮಾರ್, ಖಜಾಂಚಿ ಪದ್ಮನಾಭಯ್ಯ ಹಾಗೂ ಆನಂದ್ ದೂರಿದ್ದಾರೆ.
ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿರ್ಲೋಸ್ಕರ್ ಕಂಪನಿಯು ಕಳೆದ 75 ವರ್ಷಗಳಿಂದ ಮೋಟಾರ್ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು ಕರ್ನಾಟಕ ರಾಜ್ಯದ ಮೈಸೂರು – ಹುಬ್ಬಳಿ – ಬೆಂಗಳೂರಲ್ಲಿ ಪ್ರಾರಂಭಗೊಂಡು, ಕಾರ್ಮಿಕರು ಶ್ರಮವಹಿಸಿ ದುಡಿದ ಪರಿಣಾಮವಾಗಿ ತನ್ನ ಕಂಪನಿಯ ಘಟಕಗಳನ್ನು ದೇಶ ವಿದೇಶಗಳಲ್ಲಿ ಪ್ರಾರಂಭಮಾಡಿ ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕಂಪನಿಯ ಈ ವಿಸ್ತರಣೆಗೆ ಕಾರ್ಮಿಕರ ಶ್ರಮವೇ ಇದಕ್ಕೆ ಕಾರಣ ವಾಗಿದೆ ಎಂಬುದು ಗಮನಾರ್ಹ ಎಂದಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಏಳನೇ ಘಟಕವನ್ನು ಪ್ರಾರಂಭಿಸಿ, ಅಂದಿನಿಂದ ಸುಮಾರು 150 ಕಾರ್ಮಿಕರ ದುಡಿಮೆಯ ಫಲವಾಗಿ ನೂರಾರು ಕೋಟಿ ರೂ. ಲಾಭಗಳಿಸಿದೆ. ಇತ್ತೀಚೆಗೆ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ತನಗೆ ಬಂದ ಕೆಲಸವನ್ನು ಹೊರಗುತ್ತಿಗೆನೀಡುತ್ತಾ, ಕಾರ್ಮಿಕರನ್ನು ಶೋಷಣೆ ಮಾಡುತ್ತಾ ಕಾರ್ಮಿಕರ ಸಂಖ್ಯೆಯನ್ನು 83ಕ್ಕೆ ಇಳಿಸಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಹೋರಾಟಗಳ ನಡುವೆ ಕಳೆದ 20 ದಿನಗಳ ಹಿಂದೆ ಕಂಪನಿ ಆಡಳಿತ ವರ್ಗಕ್ಕೆ ಮೇಲಿನ ಎಲ್ಲಾ ವಿಷಯಗಳನ್ನು ಗಮನಕ್ಕೆ ತಂದು ಸಂಘವು ಮುಷ್ಕರದ ನೋಟಿಸ್ ನೀಡಿತ್ತು. ಆ ಮುಷ್ಕರದ ನೋಟಿಸ್ಗೂ ಬೆಲೆಕೊಡದ ಆಡಳಿತವರ್ಗ ತನ್ನ ಹಠಮಾರಿ ಧೋರಣೆಯಿಂದ ಕೈಗಾರಿಕಾ ಶಾಂತಿಯನ್ನು ಕದಡುವ ಕೆಲಸಕ್ಕೆ ಆಡಳಿತ ಮಂಡಳಿಯೇ ಮುಂದಾಗುತ್ತಿದ್ದು, ಅಕ್ರಮವಾಗಿ ಕೈಗಾರಿಕೆಯಲ್ಲಿರುವ ಯಂತ್ರೋಪಕರಣ ಗಳನ್ನು ಕದ್ದು ಬೇರೆಡೆಗೆ ಸ್ಥಳಾಂತರಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕೆ ಆರಕ್ಷಕ ಇಲಾಖೆಯನ್ನು ಜನಪ್ರತಿ ನಿಧಿಗಳ ಮೂಲಕ ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.