Advertisement

ಬಜೆಟ್‌ ಅನುಷ್ಠಾನಕ್ಕೆ ಏ.30ರೊಳಗೆ ಕಾರ್ಯಾದೇಶ: ಬೊಮ್ಮಾಯಿ

11:02 PM Mar 27, 2022 | Team Udayavani |

ಹುಬ್ಬಳ್ಳಿ: ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಇರುವ ಎಲ್ಲ ಕಾರ್ಯಾದೇಶ ವನ್ನು ಎ. 30ರೊಳಗೆ ನೀಡುತ್ತೇನೆ. ಅನುಷ್ಠಾನಕ್ಕೆ ರಚಿಸಿರುವ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮಾ. 28ರಂದು ಆದೇಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾದ ಕೆಲಸಗಳ ಪೈಕಿ ಅಂತಾರಾಜ್ಯ ಜಲ ವಿವಾದಗಳನ್ನು ಶೀಘ್ರ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ. ಕಾನೂನಾತ್ಮಕ ವಿಚಾರಗಳನ್ನು ಜಲವಿವಾದ ನೇತೃತ್ವ ವಹಿಸಿರುವ ನ್ಯಾಯವಾದಿಗಳ ಜತೆ ಚರ್ಚಿಸಲಾಗುವುದು. ಅನುಷ್ಠಾನಕ್ಕೆ ಅಗತ್ಯವಿರುವ ಅನುಮತಿಗಳನ್ನು ಕೇಂದ್ರ ಸರಕಾರದಿಂದ ಪಡೆಯಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದೇನೆ. ಎಪ್ರಿಲ್‌ ಮೊದಲ ವಾರದಲ್ಲೇ ಕೇಂದ್ರ ಜಲ ಶಕ್ತಿ ಹಾಗೂ ಇತರ ಸಚಿವರನ್ನು ಭೇಟಿಯಾಗಿ ಈ ಕೆಲಸವನ್ನು ಮುಂದುವರಿಸುತ್ತೇನೆ ಎಂದರು.

ಯೋಜನಬದ್ಧ ಅಭಿವೃದ್ಧಿಗೆ ಚಾಲನೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3,000 ಕೋಟಿ ರೂ. ನೀಡಿದ್ದೇನೆ. ಆದರೆ ಪ್ರತೀ ಬಾರಿಯೂ ಯೋಜನ ಮಂಜೂರಾತಿಗೆ ವಿಳಂಬವಾಗುತ್ತಿದೆ. ಈ ವರ್ಷದ 1,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನನೆಗುದಿಗೆ ಬಿದ್ದಿರುವ ರೈಲ್ವೇ ಯೋಜನೆಗಳ ಸಮಸ್ಯೆಗಳನ್ನರಿತು ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು. ಕೋವಿಡ್‌ನಿಂದ ಹೊರ ಬಂದಿದ್ದೇವೆ.

ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಿತ್ತು. ಇದೀಗ ಅಭಿವೃದ್ಧಿ ಕಾಲ ಕೂಡಿಬಂದಿದೆ. ಯೋಜನಬದ್ಧವಾದ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.

ಇದನ್ನೂ ಓದಿ:ಹಿಜಾಬ್‌ ತೆಗೆದಿಟ್ಟು ಪರೀಕ್ಷೆ ಬರೆಯಲಿ: ಪ್ರಮೋದ ಮುತಾಲಿಕ್‌

Advertisement

ಹಿಜಾಬ್‌: ಕೋರ್ಟ್‌ ತೀರ್ಮಾನವೇ ಅಂತಿಮ
ಅಂತಾರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿ ಮೊದಲು ನಾನು ಕೇಂದ್ರ ಸಚಿವರ ಜತೆಗೆ ಚರ್ಚಿಸುತ್ತೇನೆ. ಅವಶ್ಯ ಬಿದ್ದರೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು. ಹಿಜಾಬ್‌ಗ ಸಂಬಂಧಿ ಸಿದಂತೆ ಈಗಾಗಲೇ ಕೋರ್ಟ್‌ನಲ್ಲಿ ಏನು ತೀರ್ಮಾನವಾಗಿದೆಯೋ ಅದೇ ಅಂತಿಮ. ಅದರ ಅನಂತರದ ಯಾವುದೇ ಮಾತುಗಳು ಆವಶ್ಯಕತೆಯಿಲ್ಲ. ಎಸೆಸೆಲ್ಸಿ ಪರೀಕ್ಷೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಶಿಕ್ಷಣ, ಗೃಹ ಇಲಾಖೆಯಿಂದ ಮಾಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸರಳ ಪರೀಕ್ಷೆ ಮಾಡಬೇಕು ಎಂದುಕೊಂಡಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆಯನ್ನು ಧೈರ್ಯವಾಗಿ ಬರೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next