Advertisement

ನೆನೆಗುದಿಗೆ ಬಿದ್ದ ಸರ್ಕಟನ್‌ ನಾಲೆ ಕಾಮಗಾರಿ

10:07 PM Apr 21, 2019 | Team Udayavani |

ಕೊಳ್ಳೇಗಾಲ: ಕಾವೇರಿ ಮತ್ತು ಕಬಿನಿ ನೀರಾವರಿ ನಿಗಮಕ್ಕೆ ಸೇರಿದ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಸರ್ಕಟನ್‌ ನಾಲೆಯಲ್ಲಿ ಕೊಳಕಿನ ಪದಾರ್ಥಗಳು ಕೊಳೆತು ಗಬ್ಬು ನಾರುತ್ತಿದ್ದು, ನಾಲೆ ಪಕ್ಕದಲ್ಲೇ ಇರುವ ರಸ್ತೆಗಳಲ್ಲಿ ಒಡಾಡುವ ಸಾರ್ವಜನಿಕರು ಮೂಗು ಹಿಡಿದು ತಿರುಗಾಡುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರ ನೂತನ ಸರ್ಕಟನ್‌ ನಾಲೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಆರಂಭಿಸಿದ್ದ ಕಾಮಗಾರಿ ಸ್ಥಗಿತಗೊಂಡಿದೆ.

Advertisement

ಕಳೆದ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿದ್ದ ಶಾಸಕ ಎಸ್‌.ಜಯಣ್ಣ ನಾಲೆಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆ ಮಾಡಲು ಸುಮಾರು 23 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಸುಮಾರು ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸಿದ್ದ ಶಾಸಕರು ಎಲ್ಲಾ ಕಾಮಗಾರಿಗಳಿಗೆ ವಿಧಾನಸಭಾ ಚುನಾವಣಾ ಸಮೀಪದ ವೇಳೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಶೀಲಾನ್ಯಾಸ ನೆರವೇರಿಸಲಾಗಿತ್ತು.

ಕಾಮಗಾರಿ ಸಂಪೂರ್ಣ ಸ್ಥಗಿತ: ಕಾಮಗಾರಿಯು ನಗರದ ಹೃದಯ ಭಾಗದಿಂದ ಆರಂಭವಾಗಬೇಕಾಗಿದ್ದ ಕಾಮಗಾರಿ ನಗರದ ಹೊರ ವಲಯದಲ್ಲಿರುವ ಕುಪ್ಪಂ ಕಾಲುವೆ, ಶಂಕನಪುರ ಬಡಾವಣೆಗಳಲ್ಲಿ ನಾಲೆಯ ಕಾಮಗಾರಿ ಆರಂಭಗೊಂಡಿತ್ತು. ಆದರೆ ಹೊರ ವಲಯದಲ್ಲಿ ಕಾಮಗಾರಿ ಮುಗಿಯುತ್ತಿದ್ದು, ಹೃದಯಭಾಗದಲ್ಲಿರುವ ನಾಲೆಗೆ ಕೈ ಹಾಕದೆ ಗುತ್ತಿಗೆದಾರರು ಸಂಪೂರ್ಣ ನೆನೆಗುದಿಗೆ ಬಿದ್ದಿದೆ.

ಅಕ್ರಮ ಒತ್ತುವರಿ: ಕಬಿನಿ ನಾಲಾ ವಿಭಾಗಕ್ಕೆ ಸೇರಿದ ಕಾಮಗಾರಿಯ ನಾಲೆಯ ಮುಗ್ಗುಲಲ್ಲೇ ಹಲವಾರು ಸಾರ್ವಜನಿಕರು ಅಕ್ರಮ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ನಗರಸಭೆಯ ಅಧಿಕಾರಿಗಳು ಅಕ್ರಮ ಒತ್ತುವರಿ ಸ್ಥಳಗಳನ್ನು ತೆರವು ಮಾಡಿಕೊಟ್ಟ ಪಕ್ಷದಲ್ಲಿ ಕಾಮಗಾರಿ ಸುಸಲಿತವಾಗಿ ನಡೆಯಲು ಸಾದ್ಯವಾಗುತ್ತಿತ್ತು. ಆದರೆ ಇತ್ತ ತೆರವು ಕಾರ್ಯವು ಆಗಿಲ್ಲ, ಕಾಮಗಾರಿಯು ಆಗದೆ ಸಂಪೂರ್ಣ ನೆಲಕಚ್ಚಿದೆ.

ನಾಲೆ ಉದ್ದಕ್ಕೂ ಗಿಡ ಗಂಟಿಗಳು: ನಾಲೆಯು ಸುಮಾರು ಎರಡು ಕಿ.ಮೀ. ಉದ್ದದ ನಾಲೆಯಾಗಿದ್ದು, ನಾಲೆಯ ಉದ್ದಕ್ಕೂ ಗಿಡಗಂಟಿಗಳು ಅಣಬೆಯಂತೆ ಬೆಳೆದು ನಿಂತಿದ್ದು, ನಾಲೆಯಲ್ಲಿ ಹೂಳು ಅಪಾರವಾಗಿ ಶೇಖರಣೆಯಾಗಿದೆ. ಇದರಿಂದ ನಾಲೆಯ ನೀರು ಸರಾಗವಾಗಿ ಹರಿದು ಹೋಗದೆ ನಿಂತಲ್ಲಿ ನಿಲ್ಲುವುದರಿಂದ ಗಬ್ಬು ವಾಸನೆಯೊಂದಿಗೆ ಕ್ರಿಮಿಕೀಟಗಳ ಬಾಧೆ ಭರಾಟೆಯಾಗಿದೆ.

Advertisement

ಗಬ್ಬುನಾರುವ ನಾಲೆ: ನಾಲೆಯ ಆಜುಬಾಜಿನಲ್ಲಿ ಇರುವ ಮೀನು, ಮಾಂಸ, ಕೋಳಿಯ ಅಂಗಡಿಯ ಮಾಲೀಕರು ಪ್ರಾಣಿಗಳ ಕಸವನ್ನು ಇದೇ ನಾಲೆಗೆ ಬೀಸಾಡುತ್ತಾರೆ. ಮತ್ತೂಂದು ನಾಲೆಯ ಬದಿಯಲ್ಲಿರುವ ಬಾರಿನ ಮಾಲೀಕರು ಬಾರಿನಲ್ಲಿ ಸಂಗ್ರಹವಾದ ಎಲ್ಲಾ ತರಹದ ಕಸ ಮತ್ತು ಕೊಳಕನ್ನು ಇದೇ ನಾಲೆಗೆ ಬಿಸಾಡುವುದರಿಂದ ನಾಲೆಯಲ್ಲಿ ಗಬ್ಬು ನಾರುತ್ತಿದೆ. ಇದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ವಾಸನೆಗೆ ಮೂಗು ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಗೋಳು ಯಾವಾಗ ತಪ್ಪುತ್ತದೆ ಎಂದು ಜನರ ಪ್ರಶ್ನೆಯಾಗಿದೆ.

ಕಾಮಗಾರಿ: ನಾಲೆಯ ಕಾಮಗಾರಿಯನ್ನು ಹೃದಯಭಾಗದಿಂದ ಆರಂಭಿಸಬೇಕಾದ ಅಧಿಕಾರಿಗಳು ನಗರದ ಹೊರ ವಲಯದಲ್ಲಿ ಕಾಮಗಾರಿ ಆರಂಭಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಹೃದಯಭಾಗದಿಂದಲೇ ಆರಂಭಿಸಿದ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಗಬ್ಬುನಾರುತ್ತಿರುವ ವಾಸನೆಯಿಂದ ಮುಕ್ತಿ ಸಿಕ್ಕಿದಂತೆ ಆಗುತ್ತಿತ್ತು. ಆದರೆ ಹೊರ ವಲಯದಿಂದ ಕಾಮಗಾರಿ ಆರಂಭವಾಗಿರುವುದು ಗಬ್ಬು ವಾಸನೆಗೆ ಮುಕ್ತಿ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇಂದು ಮೈಸೂರಿನಲ್ಲಿ ಸಭೆ: ಏ.22ರಂದು ಮೈಸೂರಿನ ಕಬಿನಿ ನಾಲಾ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್‌ ಅವರು ಸಭೆಯೊಂದನ್ನು ಕರೆಯಲಾಗಿದ್ದು, ನಗರದ ಸರ್ಕಟನ್‌ ನಾಲೆಯ ಕಾಮಗಾರಿ ಮಿಷನ್‌ಗಳ ಕೊರತೆ ಯಿಂದಾಗಿ ನಿಲುಗಡೆಯಾಗಿರುವ ಬಗ್ಗೆ ಚರ್ಚೆಯಾಗಲಿದ್ದು, ಕಾಮಗಾರಿ ಪೂರ್ಣಗೊಳ್ಳಲು ಸಭೆಯಲ್ಲಿ ನಿರ್ಣಯ ವಾಗಲಿದೆ ಎಂದು ಕಾವೇರಿ ಮತ್ತು ಕಬಿನಿ ಉಪ ವಿಭಾಗದ ನಿಗಮದ ಕಾರ್ಯಪಾಲಕ ಅಭಿಯಂತರರಾದ ರಘು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಸರ್ಕಟನ್‌ ನಾಲಾ ಕಾಮಗಾರಿ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಅಧಿಕಾರಿಗಳ ಗಮನ ಸೆಳೆದು ಸ್ಥಗಿತಗೊಂಡಿರುವ ಕಾಮಗಾರಿಗೆ ಕೂಡಲೇ ಚಾಲನೆ ನೀಡಲಾಗುವುದು.
-ಎನ್‌.ಮಹೇಶ್‌, ಶಾಸಕ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next