Advertisement

Women’s Day Special: ಮನೆ ಮನೆಗೆ ಪತ್ರಿಕೆ ವಿತರಿಸುವ 4 ಛಲಗಾತಿ ಮಹಿಳೆಯರ ಬದುಕಿನ ಚಿತ್ರಣ

01:46 AM Mar 08, 2021 | Team Udayavani |

ಇಂದು ಮಹಿಳೆಯರು ಎಲ್ಲ ವಿಭಾಗಗಳಲ್ಲೂ ಪುರುಷರಿಗೆ ಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಪುರುಷರು ಮಾತ್ರ ನಿರ್ವಹಿಸುತ್ತಿದ್ದ ಪತ್ರಿಕೆಯನ್ನು ಮನೆ ಮನೆಗೆ ವಿತರಿಸುವ ಕೆಲಸದಲ್ಲಿಯೂ ಮಹಿಳೆಯರು ಇಂದು ಸೈ ಎನಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದು ಮನೆ ಮನೆಗೆ ಪತ್ರಿಕೆ ವಿತರಿಸುವ ನಾಲ್ವರು ಮಹಿಳಾ ಛಲಗಾತಿಯರ ಸಾಧಕ ಬದುಕಿನ ಚಿತ್ರಣವಿದು.

Advertisement

ಪತ್ರಿಕೆ ಹಾಕುವ ಜತೆಗೆ ವ್ಯಾಯಾಮವೂ ಆಗುತ್ತದೆ
ಕುಂದಾಪುರ: ಬೆಳ್ಳಂಬೆಳಗ್ಗೆ ಮನೆ-ಮನೆಗೆ ಪೇಪರ್‌ ಹಾಕುವವರು ಪುರುಷರು ಮಾತ್ರವಲ್ಲ, ಮಹಿಳೆಯರೂ ಈ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದಾರೆ ಅನ್ನುವುದೇ ಒಂದು ಸ್ಫೂರ್ತಿ ದಾಯಕ ವಿಚಾರ. ಇಂತಹ ಪ್ರೇರಣಾದಾಯಿ ಮಹಿಳೆಯರಲ್ಲಿ ಸಿದ್ದಾಪುರದ ಸುಮನಾ ಸದಾನಂದ ಭಟ್‌ ಅವರು ಸಹ ಒಬ್ಬರಾಗಿದ್ದಾರೆ.

ಸಿದ್ದಾಪುರದಲ್ಲಿ 10 ವರ್ಷಗಳಿಂದ “ಉದಯ ವಾಣಿ’ ಪತ್ರಿಕಾ ವಿತರಕರಾಗಿರುವ ಸದಾನಂದ ಭಟ್‌ ಅವರ ಪತ್ನಿಯಾಗಿರುವ ಸುಮನಾ ಅವರು ಪತಿಯ ಕಾಯಕದಲ್ಲಿ ತಾವು ಸಹ ಕೈಜೋಡಿಸಿದ್ದಾರೆ. ಕಳೆದ 5-6 ವರ್ಷಗಳಿಂದ ಇವರು ಬೆಳಗ್ಗೆ ಮನೆ- ಮನೆಗೆ ಪೇಪರ್‌ ಹಾಕುತ್ತಿದ್ದಾರೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ರಿಕೆಗಳ ಬಂಡಲ್‌ ಬರುತ್ತದೆ. ಬಂದ ತತ್‌ಕ್ಷಣ ಪತಿಯೊಂದಿಗೆ ಮುಖ್ಯ ಸಂಚಿಕೆಯ ಜತೆ ಸ್ಥಳೀಯ ಆವೃತ್ತಿಗಳನ್ನು ಒಟ್ಟು ಮಾಡಿ, ಬಳಿಕ ನಾನು ಸಿದ್ದಾಪುರ ಕೆಳ ಪೇಟೆ ಭಾಗದಲ್ಲಿ ಮನೆ-ಮನೆಗೆ ಪತ್ರಿಕೆ ಗಳನ್ನು ಹಾಕುತ್ತೇನೆ. ಬೆಳಗ್ಗೆ 6 ಗಂಟೆಯಿಂದ ಸುಮಾರು 7 ಗಂಟೆಯವರೆಗೆ ನಿತ್ಯವೂ ಇದು ನಡೆದುಕೊಂಡು ಬಂದಿದೆ. ಈ ಕೆಲಸದಲ್ಲಿ ಖುಷಿಯಿದೆ. ಪತಿಗೆ ಸಹಾಯ ಮಾಡು ತ್ತಿದ್ದೇನೆ ಅನ್ನುವ ತೃಪ್ತಿಯೂ ಇದೆ. ಸುಮನಾ ಅವರು ಪ್ರತೀ ದಿನ 30 ಮನೆಗಳಿಗೆ ನಡೆದು ಕೊಂಡೇ ಪೇಪರ್‌ ಹಾಕುತ್ತಿದ್ದಾರೆ. ಬಿ.ಕಾಂ. ಪದವೀಧರರಾಗಿರುವ ಸುಮನಾ ಅವರು ಪತ್ರಿಕೆ ಹಾಕುವ ಜತೆಗೆ ಬಿಡುವು ಸಿಕ್ಕಾಗ ಉದಯವಾಣಿ ಸಹಿತ ಎಲ್ಲ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಾರೆ ಅಂತೆ. ಇಬ್ಬರು ಮಕ್ಕಳ ತಾಯಿಯಾಗಿರುವ ಇವರು ಪತ್ರಿಕೆ ಹಾಕುವ ವೃತ್ತಿಯೊಂದಿಗೆ ಮನೆ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಎರಡೂ ಕೆಲಸಗಳು ಯಾವತ್ತೂ ಹೊರೆ ಅನ್ನಿಸಿಯೇ ಇಲ್ಲ. ಈಗೀಗ ಮನೆ- ಮನೆಗೆ ಪೇಪರ್‌ ಹಾಕುವ ಹುಡುಗರು ಸಿಗುತ್ತಿಲ್ಲ. ಅದಲ್ಲದೆ ಎಲ್ಲ ಮನೆಗಳಿಗೆ ಅವರೊಬ್ಬರೇ (ಪತಿ) ಹಾಕಲು ಕಷ್ಟ. ಕೆಲವರು ಬೇಗ ಪೇಪರ್‌ ಓದುವವರು ಇರುತ್ತಾರೆ. ಅಂತಹವರಿಗೆ ತಡವಾಗಿ ಮನೆಗೆ ಪೇಪರ್‌ ಹಾಕಿದರೆ ಓದುವುದಿಲ್ಲ. ಅದಕ್ಕಾಗಿ ನಾನು ಈ ಕಾಯಕದಲ್ಲಿ ತೊಡಗಿಸಿಕೊಂಡೆ. ಇದರಿಂದ ನನಗೆ ಬೆಳ್ಳಂಬೆಳಗ್ಗೆ ಉತ್ತಮ ವ್ಯಾಯಾಮವೂ ಆಗುತ್ತಿದೆ. ಉತ್ತಮ ಆರೋಗ್ಯಕ್ಕೂ ಇದು ಸಹಕಾರಿ. ದಿನಂಪ್ರತಿ ಮನೆ ಮನೆಗೆ ಪತ್ರಿಕೆ ವಿತರಿಸುವ ಈ ಕೆಲಸ ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ ಎನ್ನುತ್ತಾರೆ ಸುಮನಾ.
***
ಸ್ವಾವಲಂಬಿ ಬದುಕಿನ ಛಲಗಾರ್ತಿ

Advertisement

ಮಂಗಳೂರು: ಸಾಧಿಸುವ ಛಲವಿದ್ದರೆ ಯಾವುದು ಕೂಡ ಅಸಾಧ್ಯವಲ್ಲ. ಇಲ್ಲಿ ಪುರುಷರು, ಮಹಿಳೆಯರು, ಬಡವರು, ಬಲ್ಲಿದರು ಎಂಬ ಪ್ರಶ್ನೆ ಉದ್ಭವಿ ಸುವುದಿಲ್ಲ. ಅಲ್ಲಿ ಅಸಹಾಯಕ ಭಾವನೆಗೆ ಅವಕಾಶವಿರುವುದಿಲ್ಲ. ದಿನಪತ್ರಿಕೆ ವಿತರಣೆ ಕಾಯಕದಲ್ಲಿ ನಿರತರಾಗಿರುವ ಕುಳಾಯಿ ಹೊನ್ನೆಕಟ್ಟೆ ವಿದ್ಯಾನಗರದ ಲತಾ ವಿಜಯ್‌ ಅವರು ಇದಕ್ಕೊಂದು ನಿದರ್ಶನ.

ದಿನಪತ್ರಿಕೆಗಳ ವಿತರಣೆ ಕಾಯಕದಲ್ಲಿ ಪತಿಗೆ 15 ವರ್ಷಗಳಿಂದ ನೆರವಾಗುತ್ತಿದ್ದ ಲತಾ (34) ಅವರು ಈಗ ಪತ್ರಿಕೆಯ ವಿತರಣೆಯ ಪೂರ್ತಿ ಜವಾಬ್ದಾರಿ ಯನ್ನು ತಾನೇ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿ ದ್ದಾರೆ. ಈ ಮೂಲಕ ಸ್ವಾವಲಂಬಿ ಬದುಕಿಗೊಂದು ಹಾದಿಯನ್ನು ಕಂಡುಕೊಂಡಿದ್ದಾರೆ.

ವಿಜಯ್‌ ಅವರು ಹೊನ್ನೆಕಟ್ಟೆ ವಿದ್ಯಾನಗರದಲ್ಲಿ ಸುಮಾರು 20 ವರ್ಷಗಳಿಂದ ದಿನಪತ್ರಿಕೆ ವಿತರಣೆ ಕಾಯಕವನ್ನು ಮಾಡುತ್ತಿದ್ದಾರೆ. ಲತಾ ಅವರು 15 ವರ್ಷಗಳ ಹಿಂದೆ ವಿಜಯ್‌ ಅವರನ್ನು ವಿವಾಹವಾಗಿದ್ದು, ಮೂವರು ಪುತ್ರಿಯರಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆಗೆ ಪತ್ರಿಕೆ, ಅವೃತ್ತಿಗಳನ್ನು ಜೋಡಿಸಿ 4 ಗಂಟೆಯಿಂದ ವಿತರಣೆಗೆ ಸಿದ್ಧರಾಗಬೇಕು. ಮದುವೆಯ ಬಳಿಕ ಪತಿಯ ಕಾಯಕದಲ್ಲಿ ಕೈಜೋಡಿಸಿದ ಲತಾ ಅವರು ಬೆಳಗಿನ ಜಾವ 3 ಗಂಟೆಗೆ ಎದ್ದು ಆವೃತ್ತಿಗಳನ್ನು ಮುಖ್ಯಸಂಚಿಕೆಗೆ ಜೋಡಿಸುವ, ಮನೆಗೆ ಹಾಕಲು ದಿನಪತ್ರಿಕೆಯನ್ನು ಕಟ್ಟು ಮಾಡಿಕೊಡುವ ಕಾರ್ಯಮಾಡುತ್ತಿದ್ದರು. ಬಳಿಕ ಇದರ ಜತೆಗೆ ಹತ್ತಿರದ ಮನೆಗಳಿಗೆ ದಿನಪತ್ರಿಕೆ ಹಾಕುವ ಕಾರ್ಯವನ್ನು ಆರಂಭಿಸಿದರು. ಈಗ ದಿನಪತ್ರಿಕೆಗಳ ವಿತರಣೆಯ ಪೂರ್ಣ ಜವಾಬ್ದಾರಿಯನ್ನು ಲತಾ ಅವರೇ ವಹಿಸಿಕೊಂಡಿದ್ದಾರೆ. ಸ್ಕೂಟರ್‌ನಲ್ಲಿ ಬೆಳಗಿನ ಜಾವ ಪುತ್ರಿಯ ಜತೆ ಸೇರಿ ಮನೆಗಳಿಗೆ ದಿನಪತ್ರಿಕೆಗಳನ್ನು ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.

ದಿನಪತ್ರಿಕೆಗಳ ವಿತರಣೆ ಮಾಡುವ ಕಾರ್ಯಕ್ಕೆ ಪತಿ ಬೆಳಗಿನ ಜಾವ ಸುಮಾರು 3 ಗಂಟೆಗೆ ಹೋಗುತ್ತಿದ್ದರು. ಅವರಿಗೆ ಈ ಕೆಲಸದಲ್ಲಿ ನೆರವಾಗಬೇಕು ಎಂಬ ಇಚ್ಛೆ ಯಿಂದ ನಾನು ಕೂಡ ಅವರ ಜತೆ ಕೈಜೋಡಿಸಿದೆ ಎನ್ನುತ್ತಾರೆ ಲತಾ ಅವರು.
***
ಬದುಕು ರೂಪಿಸಿಕೊಂಡ ತಾಯಿ-ಮಗಳು


ಮಂಗಳೂರು: ನಾಲ್ಕು ಗಂಟೆಗೆ ಎದ್ದು ಸ್ಕೂಟಿಯಲ್ಲಿ ಹೊರಟರೆ ಮನೆ ಮನೆಗಳಿಗೆ ಪೇಪರ್‌ ತಲುಪಿ ವಾಪಸ್‌ ಬರುವಾಗ 9 ಗಂಟೆ. ಪತ್ರಿಕೆ ವಿತರಣೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ತಾಯಿ ಮತ್ತು ಮಗಳಿಗೆ ತಾವು ಪೇಪರ್‌ ಏಜೆಂಟ್‌ ಎಂಬ ಹೆಮ್ಮೆ. ಸ್ವಾಭಿಮಾನ, ಆತ್ಮಸ್ಥೈರ್ಯ ಇವರಲ್ಲಿ ಮೂಡಿದೆ. ಛಲದಿಂದ ಬದುಕುವ ಬಗೆ ಗೊತ್ತಾಗಿದೆ.

ಉದಯವಾಣಿ ಪತ್ರಿಕೆಯ ಪಾನೀರು ಏಜೆಂಟ್‌ ಆಗಿರುವ ಐರಿನ್‌ ಮೆಂಡೋನ್ಸ ಅವರು ಕಳೆದ 15 ವರ್ಷಗಳಿಂದ ಪತ್ರಿಕೆ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದರ ಜತೆಗೆ ಹಾಲು ಕೂಡ ವಿತರಿಸುತ್ತಾರೆ. ಅನಿವಾರ್ಯ ಸಂದರ್ಭದಲ್ಲಿ ಐರಿನ್‌ ಅವರಿಗೆ ಹೋಗಲು ಸಾಧ್ಯವಾಗದಿದ್ದರೆ ಆಕೆಯ ಮಗಳು ಮನೆ ಮನೆಗಳಿಗೆ ತೆರಳಿ ಪೇಪರ್‌ ವಿತರಿಸುತ್ತಾರೆ. ಆಕೆ 5ನೇ ತರಗತಿಯಲ್ಲಿರುವಾಗಲೇ ಪೇಪರ್‌ ಹಾಕಲು ಅಮ್ಮನಿಗೆ ನೆರವಾಗುತ್ತಿದ್ದರು. ಪತಿಯನ್ನು ಕಳೆದುಕೊಂಡರೂ ಐರಿನ್‌ ಅವರು ಎದೆಗುಂದದೇ ತಮ್ಮ ಪತ್ರಿಕೆ, ಹಾಲು ವಿತರಣೆಯ ವ್ಯವಹಾರವನ್ನೇ ನಂಬಿ ಅದರಲ್ಲೇ ಸ್ವಾವಲಂಬನೆ ಸಾಧಿಸತೊಡಗಿದರು. ಆರಂಭದಲ್ಲಿ ತಮ್ಮನ ಸಹಾಯ ಪಡೆದುಕೊಂಡಿದ್ದ ಐರಿನ್‌ ಅವರು ಈಗ ಸ್ವತಂತ್ರವಾಗಿ ವ್ಯವಹಾರ ನಿಭಾಯಿಸಬಲ್ಲರು. ಲಾಕ್‌ಡೌನ್‌ ಸಮಯದಲ್ಲಿಯೂ ಪತ್ರಿಕೆ ವಿತರಿಸಿದ್ದಾರೆ.

ನನಗೆ ಪತ್ರಿಕೆ ಬದುಕು ಕೊಟ್ಟಿದೆ. ಮಹಿಳೆಯರು ಕೇವಲ ನಾಲ್ಕು ಗೋಡೆಯ ನಡುವೆ ಇದ್ದು ಕೆಲಸ ಮಾಡಬೇಕೆಂದೇನಿಲ್ಲ. ಆಕೆಯೂ ಮನೆಯಿಂದ ಹೊರಗೆ ಬಂದು ಕೆಲಸ, ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಿದೆ. ಅನೇಕ ಮಂದಿ ಮಹಿಳೆಯರು ನಮಗಿಂತಲೂ ಕಷ್ಟದಲ್ಲಿರುವುದನ್ನು ನೋಡಿದ್ದೇನೆ. ಅವರೂ ಕೂಡ ಧೈರ್ಯ ತೆಗೆದುಕೊಂಡು ಸಾಧ್ಯವಾದ ಉದ್ಯೋಗ, ವ್ಯವಹಾರ ಮಾಡ ಬೇಕು. ಹಿಂಜರಿಕೆ ಬೇಡ. ನಾನು ಧೈರ್ಯ ಮಾಡಿದ್ದರಿಂದ ಇದೆಲ್ಲ ಸಾಧ್ಯ ವಾಗಿದೆ. ಪತಿ ಇಲ್ಲವೆಂಬ ನೋವು, ಆತಂಕ ನನ್ನಲ್ಲಿತ್ತು. ದೇವರು ನನಗೆ ದಾರಿ ತೋರಿಸಿದ್ದಾರೆ. ಇಂದು ಸ್ವಂತ ಕಾಲಲ್ಲಿ ನಿಂತು ಜೀವನ ನಡೆಸುತ್ತಿದ್ದೇನೆ. ಇಂದಿಗೂ 4 ಗಂಟೆಗೆ ಎದ್ದು ಪತ್ರಿಕೆ ವಿತರಿಸುತ್ತಿದ್ದೇನೆ ಎನ್ನುತ್ತಾರೆ ಐರಿನ್‌ ಅವರು.
***
4. ಪತ್ರಿಕೆ ಹೊರ ಜಗತ್ತಿಗೆ ಪರಿಚಯಿಸಿತು


ಉಡುಪಿ: ಕೆಲಸ ಯಾವುದಾದರೇನು ಶ್ರದ್ಧೆಯಿಂದ ದುಡಿಮೆ ಮಾಡಿದಾಗ ಮಾತ್ರ ಪ್ರತಿಫ‌ಲ ಕಾಣಲು ಸಾಧ್ಯ. ಅಂತಹ ಶ್ರಮ ಜೀವಿಯೇ ಉದಯವಾಣಿ ಪತ್ರಿಕೆ ವಿತರಕಿ ಹಾಗೂ ಏಜೆಂಟ್‌ ಸುಮಿತ್ರಾ ರಾಮನಾಥ್‌.

34 ವರ್ಷದ ಇವರು ಮಲ್ಪೆ ವಡಬಾಂಡೇಶ್ವರದ ನಿವಾಸಿ. ಪತಿ ರಾಮನಾಥ ಹಾಗೂ ಮಗಳು ಶ್ರೇಯಾ. ಕಳೆದ 5 ವರ್ಷಗಳಿಂದ ತೊಟ್ಟಂ ಪ್ರದೇಶದಲ್ಲಿ ಉದಯವಾಣಿ ಏಜೆಂಟ್‌ ಆಗಿ ದ್ದಾರೆ. ಮನೆ-ಮನೆಗೆ ತೆರಳಿ ಪತ್ರಿಕೆಯನ್ನು ತಲುಪಿಸುವ, ಬಿಲ್‌ ಸಂಗ್ರಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಎಸೆ ಸೆಲ್ಸಿ ಶಿಕ್ಷಣವನ್ನು ಪೂರ್ಣ ಗೊಳಿಸಿದ ಸುಮಿತ್ರಾ ಅವರು ಗೃಹಿಣಿಯಾಗಿದ್ದಾರೆ. ಮನೆ ಕೆಲಸದ ಜತೆಗೆ ಬದುಕಿನ ಬಂಡಿ ನಡೆಸಲು ಪತಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಕೇವಲ ಪೇಪರ್‌ ವಿತರಕಿ ಯಾಗಿದ್ದ ಸುಮಿತ್ರಾ 5 ವರ್ಷ ಗಳಿಂದ ಪತ್ರಿಕೆಯ ಏಜೆಂಟ್‌ ಹಾಗೂ ಬಿಲ್‌ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 5ರ ಹೊತ್ತಿಗೆ ಪೇಪರ್‌ ಹಾಕುವ ಹುಡುಗರಿಗೆ ಪೇಪರ್‌ ಕೊಡುತ್ತಾರೆ. ಅವರಲ್ಲಿ ಯಾರಾದರೂ ಬಾರದಿದ್ದರೆ ತಾವೇ ಹೋಗಿ ಮನೆಗಳಿಗೆ ಪೇಪರ್‌ ಹಾಕುತ್ತಾರೆ. ಬಳಿಕ ಮನೆ ಕೆಲಸವನ್ನು ಪೂರ್ಣಗೊಳಿಸಿ ಬೆಳಗ್ಗೆ 10ರಿಂದ 1ರ ವರೆಗೆ ಮತ್ತು ಮಧ್ಯಾಹ್ನ 2ರಿಂದ 5ರ ವರೆಗೆ ಮನೆ-ಮನೆಗೆ ತೆರಳಿ ಬಿಲ್‌ ಸಂಗ್ರಹಿಸುತ್ತಾರೆ.

ಉದಯವಾಣಿ ಪತ್ರಿಕೆ ಏಜೆಂಟ್‌ ಆದ ಬಳಿಕ ಜೀವನದಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಕೇವಲ ಮೂರು ಗೋಡೆಗೆ ಸೀಮಿತವಾಗಿದ್ದ ನಾನು ಹೊರ ಜಗತ್ತಿಗೆ ಪರಿಚಿತಗೊಂಡೆ. ಮನೆಯ ಕೆಲಸ ಮಾಡಿಕೊಂಡವಳಿಗೆ ದುಡಿಮೆಯ ಮಹತ್ವ ಅರಿವಾಗಿದೆ. ಮನೆಯಲ್ಲಿ ಪತಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಇತ್ತು. ಏಜೆಂಟ್‌ ಆದ ಬಳಿಕ ಆ ನೋವು ಕಡಿಮೆ ಆಗಿದೆ. ಇದರಿಂದಾಗಿ ಮನೆಯಿಂದ ಹೊರಗಡೆ ಹೋಗಿ ಕೆಲಸ ಮಾಡಬೇಕು ಎನ್ನುವ ಚಿಂತೆ ಇಲ್ಲ. ಬೆಳಗ್ಗೆ ಸರಿಯಾದ ಸಮಯಕ್ಕೆ ಪತ್ರಿಕೆ ಗ್ರಾಹಕರಿಗೆ ತಲುಪಿದರೆ ಜವಾಬ್ದಾರಿ ಮುಗಿಯುತ್ತದೆ ಎನ್ನುತ್ತಾರೆ ಸುಮಿತ್ರಾ.

Advertisement

Udayavani is now on Telegram. Click here to join our channel and stay updated with the latest news.

Next